Homeಮುಖಪುಟನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ... : ಮಿಸ್ರಿಯಾ ಐ. ಪಜೀರ್

ನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ… : ಮಿಸ್ರಿಯಾ ಐ. ಪಜೀರ್

- Advertisement -
- Advertisement -

ಭಿನ್ನ ಸಾಮಾಜಿಕ ಮತ್ತು ಪ್ರಾದೇಶಿಕ ಹಿನ್ನೆಲೆಗಳ ಬರಹಗಾರರು ನಮ್ಮಲ್ಲಿ ಬರೆಯಬೇಕೆಂಬುದು ಸಂಪಾದಕೀಯ ತಂಡದ ಎಲ್ಲರ ಅನಿಸಿಕೆ. ಅದರಲ್ಲೂ ಹೊಸತಲೆಮಾರಿನ ಹಲವಾರು ಬರಹಗಾರ್ತಿಯರ ಬರಹಗಳು ಇಲ್ಲಿರಬೇಕು. ಅದಕ್ಕಾಗಿ ಯಾರನ್ನು ಕೇಳಬೇಕೆಂದು ಪಟ್ಟಿ ಮಾಡಲು ಹೋದರೆ, ಪಟ್ಟಿ ಬಹಳ ದೊಡ್ಡದೇ ಆಯಿತು. ಒಬ್ಬರ ಅಂಕಣವನ್ನಷ್ಟೇ ಪ್ರಕಟಿಸಿದರೆ ದೊಡ್ಡ ನಷ್ಟ ಎನಿಸಿತು. ಈಗಲೇ ಪುಟಗಳನ್ನು ಹಿಗ್ಗಿಸುವ ಸಾಧ್ಯತೆಯೂ ಇಲ್ಲ. ಹಾಗಾಗಿ ಪ್ರತಿ ವಾರ ಒಬ್ಬೊಬ್ಬರಿಂದ ಬರೆಸಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಈ ಜಾಗದಲ್ಲಿ ಹೊಸ ಬರಹಗಾರ್ತಿಯರು ಬರೆಯಲಿದ್ದಾರೆ.                                                                                                                    – ಸಂ.

ಸತ್ಯ ನುಡಿಯುವವರನ್ನು, ಗಾಂಧಿ ನಡೆದು ತೋರಿಸಿದ ಅಹಿಂಸಾ ಮಾರ್ಗದಲ್ಲಿ ಹೋರಾಡುವವರನ್ನು ದೇಶದ್ರೋಹಿಗಳನ್ನಾಗಿಯೂ, ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸಿ ಹಿಂಸೆಯನ್ನೇ ಬಂಡವಾಳವಾಗಿಸಿಕೊಂಡವರನ್ನು ದೇಶಭಕ್ತರನ್ನಾಗಿಯೂ ಕಾಣುವ ಈ ದುರಂತ ದಿನಗಳಲ್ಲಿ ಬಾಲ್ಯದಲ್ಲಿ ನನ್ನ ಮನದಾಳದಲ್ಲಿ ಅಚ್ಚೊತ್ತಿದ ಗಾಂಧಿ ತಾತ ಕಾಡತೊಡಗಿದ್ದಾನೆ.

ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಗಾಂಧೀಜಿಯವರ ಹೆಸರು ಕೇಳದ ದಿನಗಳೇ ಇರಲಿಲ್ಲ. ಮಕ್ಕಳ ಹಾಡಿನ ಮೂಲಕವೋ, ಅಭಿನಯ ಗೀತೆಗಳ ಮೂಲಕವೋ ಒಂದಲ್ಲ ಒಂದು ರೀತಿಯಲ್ಲಿ ಬಾಪೂಜಿಯ ಹೆಸರು ಹೇಳುತ್ತಿದ್ದೆವು. ನಾನು ಗಾಂಧೀಜಿಯ ಕುರಿತಾಗಿ ಕಲಿತ ಮೊದಲ ಹಾಡು “ಗಾಂಧಿ ತಾತ ನನ್ನಜ್ಜ, ಬಗ್ಗಿ ಬಗ್ಗಿ ನಡೆದಿದ್ದ… ಖಾದಿ ಬಟ್ಟೆ ತೊಡುತ್ತಿದ್ದ…” ಈ ಹಾಡಿನಿಂದಾಗಿ ನಮಗಾಗಲೇ ಗಾಂಧಿ ನಮ್ಮವರೆಂಬ ಭಾವನೆ ಮನಸ್ಸಿನಲ್ಲಿ ಮೂಡಿತ್ತು. ನನ್ನ ನಾಲ್ಕರ ಹರೆಯದ ಪುಟ್ಟ ಮಗಳು ಶಹೀಮಳಿಗೂ ಇದೇ ಹಾಡನ್ನು ಹಾಡಿಸುತ್ತೇನೆ.

ಗಾಂಧಿ ಖಾದಿಬಟ್ಟೆಯನ್ನು ಯಾಕೆ ತೊಡುತ್ತಿದ್ದರು ಗೊತ್ತಾ? ಎಂದು ಟೀಚರ್ ಪ್ರಶ್ನೆಯನ್ನು ಕೇಳುತ್ತಿದ್ದರು. ಇಲ್ಲವೆಂದಾಗ, ಅವರು ಅದಕ್ಕೆ ಕೊಡುತ್ತಿದ್ದ ಉತ್ತರವು ಅಷ್ಟೇ ಪರಿಣಾಮಕಾರಿಯಾಗಿರುತ್ತಿತ್ತು. ಬೆಂಚಿನಲ್ಲಿ ನಮ್ಮ ಪಕ್ಕದಲ್ಲೇ ಕುಳಿತಿರುವ ಗೆಳತಿಯರನ್ನು ತೋರಿಸಿ, ಅವಳ ಬಟ್ಟೆಯನ್ನು ನೀನು ತೊಡಲು ಇಷ್ಟಪಡುತ್ತೀಯಾ? ತೊಡಬಾರದೆಂದಲ್ಲ, ಇಷ್ಟಪಡುತ್ತೀಯಾ? ಇಲ್ಲ ತಾನೇ? ಅದೇರೀತಿ ಗಾಂಧೀಜಿಯವರು ಬ್ರಿಟಿಷರು ತಯಾರಿಸಿದ ಬಟ್ಟೆಯನ್ನು ತೊಟ್ಟುಕೊಳ್ಳಲು ಇಷ್ಟಪಡದೇ, ತಾನೇ ಸ್ವತಃ ಚರಕದಿಂದ ನೂಲನ್ನು ನೇಯ್ದು ಹತ್ತಿ ಬಟ್ಟೆ ತಯಾರಿಸುತ್ತಿದ್ದರು ಹಾಗೂ ಇತರರಿಗೂ ಅದನ್ನೇ ಉಡಲು ಉತ್ತೇಜಿಸುತ್ತಿದ್ದರು ಎಂದಾಗ ನಾವು ಪುಳಕಗೊಳ್ಳುತ್ತಿದ್ದೆವು. ಇದು ಬ್ರಿಟಿಷರ ವಿರುದ್ಧದ ಹೋರಾಟ ಎಂಬುವುದನ್ನು ಅರ್ಥೈಸಿಕೊಳ್ಳುವಷ್ಟು ಪ್ರಬುದ್ಧತೆ ನಮಗಾಗ ಇರಲಿಲ್ಲ.

ಗಾಂಧೀಜಿಯ ಕುರಿತಾಗಿ ಹಲವಾರು ಹಾಡುಗಳಿದ್ದವು. ಅವರನ್ನು ನಾನು ಅರಿತದ್ದೇ ಹಾಡಿನ ಮೂಲಕ. ‘ಗಾಂಧೀ ತಾತನ ಆಶ್ರಮದಲ್ಲಿ ಇದ್ದವು ಮೂರು ಕೋತಿಗಳು, ನೀತಿಯ ಸಾರುವ ಕೋತಿಗಳು….’ ಈ ಹಾಡಿಗೆ ನಮ್ಮ ಟೀಚರು ತರಗತಿಯಲ್ಲಿ ಮೂವರನ್ನು ಕೋತಿಗಳನ್ನಾಗಿ ಮಾಡಿ ಕಣ್ಣು, ಕಿವಿ, ಬಾಯಿ ಮುಚ್ಚಿಕೊಳ್ಳಲು ಹೇಳುತ್ತಿದ್ದರು. ಉಳಿದವರೆಲ್ಲಾ ಸೇರಿ ಹಾಡುತ್ತಾ ಅಭಿನಯಿಸುತ್ತಿದ್ದೆವು. ತನ್ಮೂಲಕ ಕೆಟ್ಟದ್ದನ್ನು ಕೇಳಬಾರದು, ನೋಡಬಾರದು, ಆಡಬಾರದು ಎಂಬ ಗಾಂಧೀಜಿಯವರ ಬೋಧನೆಯನ್ನು ಕಲಿತೆವು.

‘ಪುಟ್ಟ ಕೌಮುದಿ, ಹಿಂದೂಸ್ತಾನಕ್ಕೆ ಹಿಂದಿರುಗಿದುದು’ ಎಂಬ ಪಾಠಗಳು ಬರಿಯ ಪಾಠವಾಗಿರದೆ ದೇಶಭಕ್ತನೆಂದರೆ ಗಾಂಧೀಜಿ, ಗಾಂಧೀಜಿಯೆಂದರೆ ದೇಶಭಕ್ತ ಎಂಬಷ್ಟು ಗಾಢವಾಗಿ ನಮ್ಮನ್ನಾವರಿಸಿತ್ತು. ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ಸಾಕು, ಅಂದಿನ ಸಮಾರಂಭಕ್ಕೆ ಅತಿಥಿಗಳಾಗಿ ಬರುತ್ತಿದ್ದ ಗಣ್ಯರ ಬಾಯಲ್ಲೂ ಗಾಂಧೀಜಿ. ಮಕ್ಕಳ ಭಾಷಣದಲ್ಲೂ ಗಾಂಧೀಜಿ. ದೇಶಭಕ್ತಿ ಗೀತೆಯಲ್ಲೂ ಗಾಂಧೀಜಿ.

‘ಇದು ಬಾಪೂಜೀ ಬೆಳಗಿದ ಭಾರತ…’
ಹಾಗೆಯೇ
ಕಾಥೇವಾಡದ ಪೋರಬಂದರಿನಲ್ಲಿ ಜನಿಸಿದರು….
ಮೋಹನದಾಸ ಕರಮಚಂದ ಗಾಂಧಿ ಎಂಬವರು….
ಈ ಹಾಡಿನ ಕೊನೆಯಲ್ಲಿ
ಜನವರಿ ತಿಂಗಳ 30 ರಂದು……
ಇಹವನು ತ್ಯಜಿಸಿದರು.

ನಾಥೂರಾಮನ ಗುಂಡಿಗೆ ಸಿಲುಕಿ ಜಾಗವ ಎದೆಯಲ್ಲಿ ಎಂಬ ಸಾಲುಗಳಿದ್ದವು. ನಮಗೆ ಅದಾಗಲೇ ಗೋಡ್ಸೆಯ ಬಗ್ಗೆ ಮನದಲ್ಲಿ ಅಸಹನೆ ಮೂಡಲಾರಂಭಿಸಿತ್ತು. ಆಶ್ಚರ್ಯವೆಂದರೆ ನಮಗೆ ಇದನ್ನೆಲ್ಲಾ ಕಲಿಸಿದ ಟೀಚರ್ ಬ್ರಾಹ್ಮಣರಾಗಿದ್ದರು. ಅವರು ಯಾವತ್ತೂ ನಮಗೆ ಗಾಂಧೀಜಿಯ ಚಿತ್ರಣವನ್ನು ಕೆಟ್ಟದಾಗಿ ಚಿತ್ರಿಸಿಕೊಡಲಿಲ್ಲ. ಅವರೆಂದರೆ ‘ಮಹಾತ್ಮ’ ಅದರಾಚೆಗೆ ಯಾವುದೇ ಅನ್ಯ ಕಲ್ಪನೆಗಳಿರಲಿಲ್ಲ.

ಆ ಸುಂದರ ದಿನಗಳನ್ನು ಕೇಸರೀಕರಣವು ಅದೆಷ್ಟು ಬೇಗ ಧ್ವಂಸಗೊಳಿಸಿತೆಂದರೆ ನಾ ಕಲಿತ ಹಾಡುಗಳು ಈಗ ಯಾರ ಬಾಯಲ್ಲೂ ಕೇಳಸಿಗುವುದಿಲ್ಲ. ಶಾಲೆಯಲ್ಲಿ ಶಿಕ್ಷಕರೂ ಕೂಡಾ ಗಾಂಧೀಜಿಯ ತತ್ವಾದರ್ಶಗಳನ್ನು ಬೋಧಿಸುವ ಗೋಜಿಗೇ ಹೋಗುವುದಿಲ್ಲ. ಈಗಿನ ಮಕ್ಕಳು ಗಾಂಧೀಜಿಯ ಬಗ್ಗೆ ಬಹಳ ತುಚ್ಛವಾಗಿ ಮಾತನಾಡುವಷ್ಟರಮಟ್ಟಿಗೆ ಅವರ ಮೆದುಳು ತೊಳೆಯಲಾಗುತ್ತಿದೆ.

2 ವರ್ಷಗಳ ಹಿಂದೆ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬ್ರಾಹ್ಮಣ ಹುಡುಗನೊಬ್ಬ ನನ್ನ ಬಳಿಗೆ ಟ್ಯೂಷನ್‍ಗಾಗಿ ಬರುತ್ತಿದ್ದ. ಪ್ರತಿಯೊಂದು ವಿಚಾರಗಳನ್ನು ಪ್ರಶ್ನಿಸುವ ಗುಣ ಆತನಲ್ಲಿತ್ತು. ಇದನ್ನು ಗಮನಿಸಿದ ನಾನು “ನೀನು ವಿಚಾರವಾದಿಯಾಗುತ್ತಿ” ಎಂದಾಗ ಥಟ್ಟನೆ “ವಿಚಾರವಾದಿಯಾಗುವುದಿಲ್ಲ” ಎಂದ. ಆತನ ಪ್ರತಿಕ್ರಿಯೆಗೆ ಅವಾಕ್ಕಾದೆ. ಆತನ ವಯಸ್ಸಿನಲ್ಲಿ ನನಗೆ ವಿಚಾರವಾದಿ ಅಂದ್ರೆ ಏನೆಂದು ತಿಳಿಯುವುದು ಬಿಡಿ, ಆ ಪದವೇ ಗೊತ್ತಿರಲಿಲ್ಲ. ವ್ಯವಸ್ಥಿತವಾಗಿ ಎಳೆ ಮನಸ್ಸಿನೊಳಗೆ ಇದನ್ನೆಲ್ಲಾ ತುಂಬಿಕೊಡಲಾಗುತ್ತದೆ.

ಹೀಗೆ ಒಂದು ದಿನ ಆತ ನನ್ನಲ್ಲಿ ಕೆಲವೊಂದು ಆಘಾತಕಾರಿ ವಿಷಯಗಳನ್ನು ಮಾತಾಡಿದ. “ಅಕ್ಕ, ಗಾಂಧೀಜಿ ಒಳ್ಳೆಯವರೇ, ಕೆಟ್ಟವರೇ?” “ಒಳ್ಳೆಯವರು” ಎಂದೆ. ಇಲ್ಲ, “ಕೆಟ್ಟವರು” ಎಂದ. ಆತ ಯಾತಕ್ಕಾಗಿ ಆ ರೀತಿ ಹೇಳುತ್ತಿದ್ದಾನೆಂದು ತಿಳಿಯಲು ಪ್ರಯತ್ನಿಸಿದೆ. ಚಿನ್ನ ಧರಿಸಬಾರದು ಎಂಬುದಾಗಿ ಗಾಂಧೀಜಿ ಹೇಳಿದ್ದಾರೆಂಬುದು ಆತನಿಂದ ನಾನು ಪಡೆದ ಉತ್ತರವಾಗಿತ್ತು. ನಾನು, ನೀನು ಚಿನ್ನ ಧರಿಸುತ್ತಿಲ್ಲವೇ? ಹಾಗಿದ್ದರೆ ಅವರ್ಯಾಕೆ ನಿನಗೆ ಕೆಟ್ಟವರಾಗಿ ಕಾಣುತ್ತಾರೆ ಎಂದೆ. ಅವರನ್ನೇ ಏಕೆ ರಾಷ್ಟ್ರಪಿತನೆನ್ನಬೇಕು, ಬೇರೆ ಯಾರೂ ಇಲ್ಲವೇ? ಆತ ಮರುಪ್ರಶ್ನೆ ಹಾಕಿದ. ನಿನ್ನ ಪ್ರಕಾರ ಯಾರಾಗಬೇಕಿತ್ತು ಎಂದಾಗ ಮೌನವಾದ. ಸ್ವಲ್ಪ ಹೊತ್ತು ಕಳೆದು “ಅವರು ಕೂಡಾ ಕೊಲೆ ಮಾಡಿದ್ದಾರೆ” ಎಂದ. ಇದನ್ನು ಕೇಳಿಸಿಕೊಂಡ ನನಗೆ ಸಿಟ್ಟು ತಡೆಯಲಾಗಲಿಲ್ಲ. ಗಾಂಧಿ ಕೊಲೆಗಾರನಲ್ಲ, ಗಾಂಧಿಯನ್ನು ಗುಂಡಿಕ್ಕಿ ಕೊಂದ ಗೋಡ್ಸೆ ಕೊಲೆಗಾರ. ಆತನೊಬ್ಬ ದೇಶದ್ರೋಹಿ. ನಿನ್ನ ಪ್ರಕಾರ ಆತ ರಾಷ್ಟ್ರಪಿತನಾಗಬೇಕಿತ್ತು ತಾನೇ? ಎಂದು ಖಾರವಾಗಿಯೇ ಕೇಳಿದೆ. ಅಲ್ಲಿಂದ ಮುಂದೆ ಆತನಿಗೆ ಒಂದೊಂದೇ ವಿಚಾರಗಳನ್ನು ಸಾವಧಾನವಾಗಿ ಮನವರಿಕೆ ಮಾಡುತ್ತಾ ಬಂದೆ. ಇದನ್ನರಿತ ಆತನ ಹೆತ್ತವರು ನನ್ನ ಬಳಿ ಟ್ಯೂಷನ್ ಕೊಡಿಸುವುದನ್ನು ನಿಲ್ಲಿಸಿಯೇ ಬಿಟ್ಟರು.

ಸತ್ಯವನ್ನು ಇಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಡುವುದು ಬಹುದೊಡ್ಡ ಸವಾಲೇ ಸರಿ. ಹಾಗಾಗಿ ಗಾಂಧೀಜಿಯವರ ಆತ್ಮಕಥೆಯಾದ ‘ನನ್ನ ಸತ್ಯಾನ್ವೇಷಣೆ’ಯನ್ನು ಎಲ್ಲಾ ಹೆತ್ತವರೂ ಓದಲೇಬೇಕು, ಮಕ್ಕಳಿಗೂ ಓದಿಸಬೇಕು. ಮಹಾತ್ಮ ಗಾಂಧಿಯ ಬಗ್ಗೆ ನೂರು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವರು ರಾಷ್ಟ್ರಪಿತನೆಂಬುದನ್ನು ಅಲ್ಲಗಳೆಯುವಂತೆಯೇ ಇಲ್ಲ. ಗಾಂಧಿಗೆ ಪರ್ಯಾಯವಾಗಿ ಇನ್ನೊಬ್ಬ ಗಾಂಧಿ ಹುಟ್ಟಲು ಸಾಧ್ಯವೇ ಇಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...