ಕೇಂದ್ರಾಡಳಿತ ಪ್ರದೇಶ ಹಾಗೂ ದೇಶದ ರಾಜಧಾನಿ ದೆಹಲಿಯ ವಿಧಾನಸಭೆ ಚುನಾವಣೆ ಪ್ರಚಾರದ ಕಾವು ಏರುತ್ತಿರುವ ನಡುವೆಯೇ ಆಮ್ ಆದ್ಮಿ ಪಕ್ಷ ಜನಪರ ಯೋಜನೆಗಳನ್ನೊಳಗೊಂಡ ಪ್ರಣಾಳಿಕೆಯನ್ನು ಇಂದು ಬಿಡುಗಡೆಗೊಳಿಸಿದೆ. ಸ್ವಚ್ಚತೆ, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕಸ ಗುಡಿಸುವುದು, ಚರಂಡಿ ಶುಚಿತ್ವ ಮೊದಲಾದ ಸ್ವಚ್ಛತಾ ಕೆಲಸ ನಿರ್ವಹಿಸುವ ಕಾರ್ಮಿಕರು ಆಕಸ್ಮಿಕವಾಗಿ ಮೃತಪಟ್ಟರೆ, ಅಂಥವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡುವ ಪ್ರಮುಖ ಭರವಸೆ ನೀಡಿದೆ.
ಇತ್ತೀಚೆಗೆ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆಗೂ ಪ್ರಣಾಳಿಕೆ ಆಧ್ಯತೆ ಕಲ್ಪಿಸಿದೆ. ಎಲ್ಲರಿಗೂ ಉಚಿತ ಕುಡಿಯುವ ನೀರು ಪೂರೈಕೆ, ಎಲ್ಲರಿಗೂ ಉಚಿತ ಶಿಕ್ಷಣ ನೀಡುವುದಾಗಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಭರವಸೆ ನೀಡಿದ್ದಾರೆ.
ಎರಡನೇ ಬಾರಿ ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ವಿತರಿಸುತ್ತಿರುವ ಪಡಿತರ ಧಾನ್ಯಗಳನ್ನು ಮನೆಮನೆ ಬಾಗಿಲಿಗೆ ಪೂರೈಸುತ್ತೇವೆ. ದೆಹಲಿಯಲ್ಲಿ 24×7 ನಿರಂತರವಾಗಿ ಅಂಗಡಿಗಳು, ರೆಸ್ಟೋರೆಂಟ್ಗಳು ತೆರೆಯಲು ಅವಕಾಶ ನೀಡುವುದಾಗಿ ಸಿಸೋಡಿಯಾ ತಿಳಿಸಿದರು.
ಮೆಟ್ರೋ ಯೋಜನೆಯನ್ನು ಮತ್ತಷ್ಟು ವಿಸ್ತರಣೆ ಮಾಡಲಾಗುವುದು. ಯಮುನಾ ದಂಡೆ ಅಭಿವೃದ್ಧಿಪಡಿಸುತ್ತೇವೆ. ಬೀದಿಬದಿಗಳನ್ನು ಮರುರಚನೆ ಮಾಡಲಾಗುವುದು. ಮಾರುಕಟ್ಟೆಗಳು ಹಗಲಿರುಳು ಕೆಲಸ ನಿರ್ವಹಿಸಲಿವೆ. ರೈಡ್ ರಾಜ್ ಇರುವುದಿಲ್ಲ. ವ್ಯಾಪಾರಿಗಳು ನೆಮ್ಮದಿಯಿಂದ ವ್ಯಾಪಾರ ಮಾಡುವಂತಹ ವಾತಾವರಣ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು..