ಬಿಜೆಪಿಗೆ 10 ಕೋಟಿ ರೂಪಾಯಿ ಮೌಲ್ಯದ ಅವಧಿ ಮೀರಿದ ಚುನಾವಣಾ ಬಾಂಡ್ಗಳನ್ನು ನಗದೀಕರಣಕ್ಕೆ ಅನುಮತಿಸುವ ಸಲುವಾಗಿ, 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮುನ್ನಾದಿನದಂದು ಕೇಂದ್ರ ಸರ್ಕಾರ ಅಧಿಕೃತ ನಿಯಮಗಳನ್ನು ಉಲ್ಲಂಘಿಸಿದೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಮಾಡಿದೆ.
ಭಾರತೀಯ ಚುನಾವಣಾ ಆಯೋಗದ ಹೊಸ ಮಾಹಿತಿಯ ಪ್ರಕಾರ, ದಿವಂಗತ ಅರುಣ್ ಜೇಟ್ಲಿ ನೇತೃತ್ವದ ಹಣಕಾಸು ಸಚಿವಾಲಯವು ಎಸ್ಬಿಐಗೆ 10 ಕೋಟಿ ರೂಪಾಯಿಗಳ ಅವಧಿ ಮೀರಿದ ಚುನಾವಣಾ ಬಾಂಡ್ಗಳನ್ನು ಸ್ವೀಕರಿಸಲು ಒತ್ತಾಯಿಸಿದೆ ಎಂದು ವರದಿ ಉಲ್ಲೇಖಿಸಿದೆ.
2019ರ ಹಿಂದೆ ಪ್ರಕಟವಾದ ವರದಿಯಲ್ಲಿ, ಬಾಂಡ್ಗಳನ್ನು ನಗದೀಕರಣ ಮಾಡಲು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಿದ 15 ದಿನಗಳ ಅವಧಿ ಮುಗಿದ ಎರಡು ದಿನಗಳ ನಂತರ ಎಸ್ಬಿಐ ರಾಜಕೀಯ ಪಕ್ಷವೊಂದಕ್ಕೆ 10 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ಗಳನ್ನು ನಗದೀಕರಣ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ಉಲ್ಲೇಖಿಸಿದೆ. 2019ರಲ್ಲಿ SBIಗೆ ಸಚಿವಾಲಯದ ನಿರ್ದೇಶನದಿಂದ ಯಾವ ರಾಜಕೀಯ ಪಕ್ಷವು ಲಾಭ ಗಳಿಸಿದೆ ಎಂದು ತಿಳಿದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿಯು ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯ ಪ್ರಕಾರ, ಹಣಕಾಸು ಸಚಿವಾಲಯವು ನಿಯಮಗಳನ್ನು ಮೀರಿ ಕೇಸರಿ ಪಕ್ಷಕ್ಕೆ 10 ಕೋಟಿ ರೂ. ಮೌಲ್ಯದ ಅವಧಿ ಮೀರಿದ ಬಾಂಡ್ಗಳನ್ನು ನಗದೀಕರಣ ಮಾಡಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗೆ ಕಾನೂನುಬಾಹಿರ ಆದೇಶವನ್ನು ನೀಡಿದೆ ಎನ್ನುವುದನ್ನು ಬಯಲುಗೊಳಿಸಿದೆ.
ದಿ ರಿಪೋರ್ಟರ್ಸ್ ಕಲೆಕ್ಟಿವ್ ಪ್ರಕಾರ, ಇದು ಚುನಾವಣಾ ಬಾಂಡ್ಗಳ ಆದೇಶದ ಉಲ್ಲಂಘನೆಯಾಗಿದೆ. ಜನವರಿ 2018ರಲ್ಲಿ ಪ್ರಕಟಿಸಲಾದ ನಿಯಮಗಳ ಸ್ಪಷ್ಟ ಉಲ್ಲಂಘನೆಯನ್ನು ಮಾಡಿ ಬಿಜೆಪಿಗೆ ಅವಧಿ ಮೀರಿದ ಚುನಾವಣಾ ಬಾಂಡ್ ಪಡೆಯಲು ಅವಕಾಶವನ್ನು ಮಾಡಿಕೊಟ್ಟಿದೆ ಎನ್ನುವುದು ಬಯಲಾಗಿದೆ.
ಬಿಜೆಪಿ ಚುನಾವಣಾ ಬಾಂಡ್ ನಿಧಿಯ ಅತಿದೊಡ್ಡ ಫಲಾನುಭವಿಯಾಗಿದೆ. ಈ ಯೋಜನೆಯ ಮೂಲಕ ಪಕ್ಷವು 8,251.8 ಕೋಟಿ ರೂಪಾಯಿಗಳನ್ನು ಪಡೆದಿದ್ದು, ಒಟ್ಟು 16,518 ಕೋಟಿ ರೂಪಾಯಿ ಮೌಲ್ಯದ ಬಾಂಡ್ಗಳನ್ನು ಮಾರಾಟ ಮಾಡಲಾಗಿದೆ. ಇದರರ್ಥ ಮಾರಾಟವಾದ ಒಟ್ಟು ಬಾಂಡ್ಗಳಲ್ಲಿ ಬಿಜೆಪಿ 50% ದಷ್ಟು ದೇಣಿಗೆಯನ್ನು ಪಡೆದಿದೆ. ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದ ಅಗ್ರ ಪಕ್ಷಗಳ ಪಟ್ಟಿಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು, 1,952 ಕೋಟಿ ರೂ.ದೇಣಿಗೆಯನ್ನು ಪಡೆದಿದೆ. ತೃಣಮೂಲ ಕಾಂಗ್ರೆಸ್ 1,705 ಕೋಟಿ ರೂ.ದೇಣಿಗೆಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.