ನಿತೇಶ್ ಕುಮಾರ್ ನೇತೃತ್ವದ ಬಿಹಾರದ ಜೆಡಿಯು ಪಕ್ಷವು ಎನ್ಡಿಎ ಮೈತ್ರಿ ಭಾಗವಾಗಿದ್ದ ಅವಧಿಯಲ್ಲಿ ಚುನಾವಣಾ ಬಾಂಡ್ಗಳನ್ನು ಪಡೆದಿದ್ದು, ಮೈತ್ರಿಯಿಂದ ಹೊರಬಂದು ಸರಕಾರ ರಚಿಸಿದ್ದ ವೇಳೆ ಜೆಡಿಯು ದೇಣಿಗೆ ಪಡೆದಿಲ್ಲ ಎನ್ನುವುದು ಅಂಕಿ-ಅಂಶಗಳು ಬಯಲುಗೊಳಿಸಿದೆ.
2019ರ ಬಿಹಾರ ಲೋಕಸಭೆ ಚುನಾವಣೆಯ ವೇಳೆ ರಾಜಸ್ಥಾನ ಮೂಲದ ಶ್ರೀ ಸಿಮೆಂಟ್ ಲಿಮಿಟೆಡ್ ಮತ್ತು ಟೆಲಿಕಾಂ ದೈತ್ಯ ಭಾರ್ತಿ ಏರ್ಟೆಲ್ ಚುನಾವಣಾ ಬಾಂಡ್ಗಳ ಮೂಲಕ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ ಯುನೈಟೆಡ್ (ಜೆಡಿಯು) ಪಕ್ಷಕ್ಕೆ ದೇಣಿಗೆಗಳನ್ನು ನೀಡಿದೆ. ಭಾರತೀಯ ಚುನಾವಣಾ ಆಯೋಗಕ್ಕೆ ಜೆಡಿಯು ಪಕ್ಷ ಸಲ್ಲಿಸಿದ ಮಾಹಿತಿಯಲ್ಲಿ, ಜೆಡಿಯು 2019ರ ಏಪ್ರಿಲ್ 10ರಿಂದ – 2019ರ ಏಪ್ರಿಲ್ 26ರ ನಡುವೆ ಚುನಾವಣಾ ಬಾಂಡ್ಗಳ ಮೂಲಕ 13 ಕೋಟಿ ರೂ.ಮೌಲ್ಯದ ಚುನಾವಣಾ ಬಾಂಡ್ಗಳನ್ನು ಸ್ವೀಕರಿಸಿದೆ ಎಂದು ಘೋಷಿಸಿದ್ದು, ಶ್ರೀ ಸಿಮೆಂಟ್ ಮತ್ತು ಭಾರ್ತಿ ಏರ್ಟೆಲ್ನಿಂದ ಈ ನಿಧಿಯನ್ನು ಪಡೆದುಕೊಂಡಿದೆ ಎಂದು ಉಲ್ಲೇಖಿಸಿದೆ.
ಬಿಹಾರದಲ್ಲಿ 2019ರ ಲೋಕಸಭಾ ಚುನಾವಣೆಯನ್ನು ಏಪ್ರಿಲ್ 11 ಮತ್ತು ಮೇ 19ರ ನಡುವೆ ಏಳು ಹಂತಗಳಲ್ಲಿ ನಡೆಸಲಾಗಿದೆ. ಜೆಡಿಯು 2019ರಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ಡಿಎ ಭಾಗವಾಗಿ ಚುನಾವಣೆಗಳನ್ನು ಎದುರಿಸಿದೆ. ಆದರೆ 2022ರಲ್ಲಿ ಜೆಡಿಯು, ಎನ್ಡಿಎ ಮೈತ್ರಿಯಿಂದ ಹೊರಬಂದಿತ್ತು, ಮತ್ತೆ 2024ರ ಆರಂಭದಲ್ಲಿ ಎನ್ಡಿಎಗೆ ಮರಳಿತ್ತು.
ಜೆಡಿಯು ಪಕ್ಷಕ್ಕೆ ಶ್ರೀ ಸಿಮೆಂಟ್ ಲಿಮಿಟೆಡ್ ಎರಡು ಎಲೆಕ್ಟೋರಲ್ ಬಾಂಡ್ಗಳ ಮೂಲಕ 2 ಕೋಟಿ ರೂ. ದೇಣಿಗೆ ನೀಡಿದರೆ, ಭಾರ್ತಿ ಏರ್ಟೆಲ್ ಪಕ್ಷಕ್ಕೆ 1 ಕೋಟಿ ರೂ. ನೀಡಿದೆ. ಆದರೆ ಇನ್ನುಳಿದ 10 ಕೋಟಿ ರೂ.ಗಳನ್ನು ನೀಡಿರುವ ದಾನಿಗಳನ್ನು ಹೆಸರಿಸಲಾಗಿಲ್ಲ. ಈ ಎಲೆಕ್ಟೋರಲ್ ಬಾಂಡ್ಗಳನ್ನು ಯಾರು ದಾನ ಮಾಡಿದ್ದಾರೆ ಎಂಬುವುದು ತಮಗೆ ಸರಿಯಾಗಿ ತಿಳಿದಿಲ್ಲ ಎಂದು ಜೆಡಿಯು ಮಾಹಿತಿಯನ್ನು ನೀಡಿದೆ. 03.04.2019ರಂದು ಪಾಟ್ನಾದಲ್ಲಿರುವ ನಮ್ಮ ಕಚೇರಿಗೆ ಯಾರೋ ಬಂದು ಮುಚ್ಚಿದ ಲಕೋಟೆಯಲ್ಲಿ ದೇಣಿಗೆಯ್ನು ನೀಡಿದರು ಮತ್ತು ಅದನ್ನು ತೆರೆದಾಗ ನಮಗೆ ತಲಾ ಒಂದು ಕೋಟಿ ರೂಪಾಯಿಗಳ ಹತ್ತು ಎಲೆಕ್ಟೋರಲ್ ಬಾಂಡ್ಗಳನ್ನು ಒಳಗೊಂಡಿತ್ತು ಎಂದು ಪಕ್ಷವು ಚುನಾವಣಾ ಆಯೋಗಕ್ಕೆ ತಿಳಿಸಿದೆ. ಭಾರತ ಸರ್ಕಾರದ ಗೆಜೆಟ್ ಅಧಿಸೂಚನೆಯ ಪ್ರಕಾರ, ನಾವು ಪಾಟ್ನಾದ SBI ಮುಖ್ಯ ಶಾಖೆಯಲ್ಲಿ ಖಾತೆಯನ್ನು ತೆರೆದಿದ್ದೇವೆ ಮತ್ತು ಅದನ್ನು 10.04.2019ರಂದು ನಮ್ಮ ಪಕ್ಷದ ಖಾತೆಗೆ ಜಮೆ ಮಾಡಿದ್ದೇವೆ ಎಂದು ಜೆಡಿಯು ಹೇಳಿಕೊಂಡಿದೆ.
ಕಳೆದ ವಾರ ಏಪ್ರಿಲ್ 12, 2019ರಿಂದ ಜನವರಿ 11, 2024ರವರೆಗೆ ದಾನಿಗಳ ಪಟ್ಟಿಯನ್ನು ಪ್ರಕಟಿಸಿದ ಚುನಾವಣಾ ಆಯೋಗದ ದತ್ತಾಂಶವು ಶ್ರೀ ಸಿಮೆಂಟ್ಸ್ ಮೂರು ಹಂತಗಳಲ್ಲಿ 10.5 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ಗಳನ್ನು ಖರೀದಿಸಿದೆ ಎಂದು ಬಹಿರಂಗಪಡಿಸಿದೆ. ಮೇ 8, 2019ರಂದು 4.5 ಕೋಟಿ ರೂ. ಜನವರಿ 21, 2020ರಂದು 4 ಕೋಟಿ ರೂ. ತದನಂತರ ಅಕ್ಟೋಬರ್ 21, 2020ರಂದು 2ಕೋಟಿ ರೂ.ಮೌಲ್ಯದ ಬಾಂಡ್ ಖರೀದಿಸಿದೆ ಎನ್ನುವುದನ್ನು ಬಹಿರಂಗಪಡಿಸುತ್ತದೆ.
ಸುನಿಲ್ ಮಿತ್ತಲ್ ಅವರ ಭಾರ್ತಿ ಏರ್ಟೆಲ್ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಹತ್ತು ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಈಗಾಗಲೇ ಬಹಿರಂಗವಾಗಿದೆ. 2019 ಮತ್ತು 2024ರ ನಡುವೆ ಟೆಲಿಕಾಂ ಕಂಪನಿಯು ಹೆಚ್ಚಾಗಿ ಬಿಜೆಪಿ ನೇತೃತ್ವದ ಎನ್ಡಿಎ ಪಕ್ಷಗಳಿಗೆ ಚುನಾವಣಾ ಬಾಂಡ್ಗಳ ಮೂಲಕ 247 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ JDU ತನ್ನ ಮೊದಲ ಚುನಾವಣಾ ಬಾಂಡ್ಗಳನ್ನು ಸ್ವೀಕರಿಸಿದ ನಂತರ, ಅದು ಬಳಿಕ ಬಾಂಡ್ಗಳ ಮೂಲಕ ದೇಣಿಗೆಗಳನ್ನು 2020ರ ಅಕ್ಟೋಬರ್ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಸ್ವೀಕರಿಸಿದೆ.