Homeಅಂಕಣಗಳುಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

ಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

- Advertisement -
- Advertisement -

ಮೊನ್ನೆ ಬೆಂಗಳೂರಿನಲ್ಲಿ ಒಂದು ಅಪರೂಪದ ಸಂಜೆಯನ್ನು ಅರುಂಧತಿ ನಾಗ್‌ರವರು ಏರ್ಪಡಿಸಿದ್ದರು. ಅಂದಿನ ಕಾರ್ಯಕ್ರಮದಲ್ಲಿ, ಅವರ ಕನಸಿನ ’ರಂಗಶಂಕರ’ಕ್ಕಾಗಿ ಕಾರ್ಪೊರೆಟ್ ಕಂಪನಿಗಳಿಂದ ಹಣವನ್ನು ಸಂಗ್ರಹಿಸುವ ಉದ್ದೇಶ ಅವರದ್ದಾಗಿದ್ದರೂ, ಕೆಲವು ಸ್ನೇಹಿತರನ್ನೂ ಆಹ್ವಾನಿಸಿದ್ದರು.

ಕಳೆದ ಹಲವಾರು ವರ್ಷಗಳಿಂದ ಅರು (ಅರುಂಧತಿ ನಾಗ್) ಈ ರಂಗಮಂದಿರಕ್ಕಾಗಿ ಏನೆಲ್ಲಾ ಸರ್ಕಸ್ ನಡೆಸಿದ್ದಾರೆ ಎಂಬುದು ನನಗೆ ಗೊತ್ತು. ಕನಸುಗಾರರಾಗಿದ್ದ ಶಂಕರ್ ನಾಗ್ ಬದುಕಿದ್ದಿದ್ದರೆ ಆತ ತನ್ನ ಆಕಾಂಕ್ಷೆಗಳ ಬೆನ್ನೇರಿ ಇಷ್ಟೊತ್ತಿಗಾಗಲೇ ಪಾಪರ್ ಆಗಿರುತ್ತಿದ್ದರು ಎಂಬುದರ ಬಗ್ಗೆ ನನಗೆ ಸಂಶಯವಿಲ್ಲ. ಆದರೆ ಅರು ಮಾತ್ರ ಈ ’ರಂಗಶಂಕರ’ದ ಕನಸಿನಲ್ಲೇ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ. ಈ ರಂಗಮಂದಿರ ಆಕೆಯ ದಿವಂಗತ ಪತಿ ಶಂಕರ್ ನೆನಪಿಗೆ ಮಾತ್ರವಲ್ಲ, ಅದರಿಂದ ರಂಗಕ್ಷೇತ್ರಕ್ಕೆ ತನ್ನ ಅಲ್ಪಕಾಣಿಕೆಯನ್ನಾದರೂ ಸಲ್ಲಿಸಬೇಕು ಎಂಬ ಆಕಾಂಕ್ಷೆ ಅರು ಅವರದ್ದು.

ಈ ನಿಟ್ಟಿನಲ್ಲಿ ಅರು ಮೊನ್ನೆ ತನ್ನ ಸ್ನೇಹಿತರಾದ ಶಬನಾ ಅಜ್ಮಿ ಮತ್ತು ಜಾವೇದ್ ಆಖ್ತರ್ ಅವರನ್ನು ಆಹ್ವಾನಿಸಿದ್ದರು.

ಜಾವೇದ್ ಅಖ್ತರ್‌ರವರ ಜಾತ್ಯತೀತ ನಿಲುವುಗಳ ಬಗ್ಗೆಯಾಗಲೀ, ಅವರ ಸಾಹಿತ್ಯಕ ಸಾಧನೆಗಳ ಬಗ್ಗೆಯಾಗಲೀ ಇಲ್ಲಿ ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಹಿಂದೂ ಮೂಲಭೂತವಾದ ಹೆಚ್ಚಾಗುತ್ತಿರುವ ಈಗಿನ ಸೂಕ್ಷ್ಮ ಸಂದರ್ಭದಲ್ಲಿ ಮುಸ್ಲಿಮ್ ಬುದ್ಧಿಜೀವಿಗಳು ಕೂಡಾ ಇಸ್ಲಾಂನ ಮೂಲಭೂತವಾದಿಗಳನ್ನು ಟೀಕಿಸಲು ಹಿಂಜರಿಯುತ್ತಿದ್ದಾರೆ. ಆದರೆ ಜಾವೇದ್ ಅಖ್ತರ್ ಮತ್ತು ಶಬನಾ ಅಜ್ಮಿ ತಾವು ನಿಷ್ಟಾವಂತ ಭಾರತೀಯ ಜಾತ್ಯತೀತವಾದಿಗಳು ಎಂಬುದನ್ನು ಮತ್ತೆ ಮತ್ತೆ ಹೇಳುವ ಧೈರ್ಯ ತೋರುತ್ತಿದ್ದಾರೆ. ಶಬನಾ ಅಜ್ಮಿ ಅವರು “ಇಮಾಮ್ ಭುಕಾರಿಯವರು ಆಫ್ಘಾನಿಸ್ತಾನದ ತಾಲಿಬಾನ್‌ಗೆ ಬೆಂಬಲ ನೀಡುವುದಿದ್ದರೆ ಭಾರತದ ಸರ್ಕಾರ ಅವರನ್ನು ಆಫ್ಘಾನಿಸ್ತಾನಕ್ಕೆ ಎತ್ತಿಹಾಕುವುದೇ ಒಳ್ಳೆಯದು” ಎಂದು ಹೇಳಿದ್ದಾರೆ, ಜಾವೇದ್ ಅಖ್ತರ್ ಅವರನ್ನು ಪಾಕಿಸ್ತಾನದ ಬರಹಗಾರರೊಬ್ಬರು “ನಿಮಗೆ ಭಾರತದಲ್ಲಿ ಮುಸ್ಲಿಂ ಲೇಖಕನಾಗಿ ಕಷ್ಟವಾಗಿಲ್ಲವೇ?” ಎಂದು ಕೇಳಿದಾಗ, “ನಾನು ಪಾಕಿಸ್ತಾನಿಯಾದ ನಿನ್ನನ್ನು ಮಾತನಾಡಿಸುವಾಗ ಭಾರತೀಯನಾಗಿ ಮಾತನಾಡುವೆ. ಆದರೆ ನನ್ನ ದೇಶದಲ್ಲಿ ಶಿವಸೇನೆಯ ಬಾಳಠಾಕ್ರೆಯೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಚರ್ಚಿಸುವಾಗ ಭಾರತೀಯ ಮುಸ್ಲಿಂನಾಗಿ ಮಾತನಾಡುವೆ. ನನ್ನಿಂದ ಭಾರತದ ವಿರುದ್ಧ ಯಾವುದೇ ಹೇಳಿಕೆ ನಿನಗೆ ಲಭಿಸುವುದಿಲ್ಲ.” ಎಂದೇ ಗುಡುಗಿದ್ದರು.

ಮೊನ್ನೆ ಜಾವೇದ್ ತಮ್ಮ ಉರ್ದು ಪದ್ಯಗಳ ಸಂಕಲನವಾದ ’ತರ್ಕಶ್‌’ನಿಂದ ಆಯ್ದ ಕವನಗಳನ್ನು ಓದಿದಾಗ, ಅವರ ಮಡದಿ ಶಬನಾ ಆ ಪದ್ಯಗಳ ಇಂಗ್ಲಿಷ್ ಅನುವಾದಗಳನ್ನು ಓದಿದರು. ಅವುಗಳಲ್ಲಿ ನನಗೆ ಬಹಳ ಇಷ್ಟವಾದ ಎರಡು ಪದ್ಯಗಳು ’ದಂಗೆಯ ಬಳಿಕ’ ಮತ್ತು ’ಪ್ರಾರ್ಥನೆ’. ಇವುಗಳನ್ನು ನಾನೇ ಅನುವಾದ ಮಾಡುವುದಕ್ಕಿಂತ, ಈ ಪದ್ಯಗಳನ್ನು ಈಗಾಗಲೇ ಕನ್ನಡಕ್ಕೆ ಅನುವಾದಿಸಿರುವ ಖ್ಯಾತ ಕವಿಯತ್ರಿ ಹಾ.ಮ.ಕನಕರವರನ್ನು ಮಾತನಾಡಿಸಿದೆ. ತಕ್ಷಣವೇ ಕನಕ ಆ ಎರಡು ಪದ್ಯಗಳ ಅನುವಾದಗಳನ್ನು ಈಮೇಲ್ ಮೂಲಕ ಕಳುಹಿಸಿದರು. ಅವುಗಳಲ್ಲಿ ಮೊದಲನೆಯದು ’ದಂಗೆಯ ಬಳಿಕ’.

ಗಾಢ ನೀರವತೆ
ಸದ್ದಿಲ್ಲದೇ ಮನೆಗಳಿಂದ
ದಟ್ಟ ಹೊಗೆ ಕಪ್ಪಗೆ
ಮಲಿನ ಎದೆಯಿಂದ
ದೂರದೂರಕ್ಕೆ ಹರಡುತ್ತಾ
ಗಾಢ ನೀರವತೆ

ಶವದಂತೆ ಮಲಗಿರುವ ರಸ್ತೆ
ಮುಂದೆ ಗಾಡಿ
ಅಡಿಮೇಲಾಗಿ
ಗಾಲಿಗಳನ್ನು ಗಾಳಿಗೆ ಎತ್ತಿ
ನೋಡುತ್ತಿದೆ ಆಕಾಶದತ್ತ ಬೆಕ್ಕಸ ಬೆರಗಾಗಿ
ಆಗಿದ್ದನ್ನೆಲ್ಲ ನಂಬಲೇ ಆಗದಂತೆ
ಗಾಢ ನೀರವತೆ

ಧೂಳೀಪಟವಾದ ಅಂಗಡಿ
ಚೀತ್ಕಾರದ ನಂತರ
ತೆರೆದಂತೇ ಇರುವ ಬಾಯಿ
ಮುರಿದ ಕಿಟಕಿ ಸಂದಿನಿಂದ
ಚದುರಿರುವ
ಬಳೆಯ ಚೂರುಗಳನ್ನು
ದುಗುಡ ತುಂಬ ಆಸೆಯಿಂದ ನಿರುಕಿಸುತ್ತಿದೆ

ನಿನ್ನೆಯವರೆಗೆ ಈ ಚೂರುಗಳೇ ಆ ಬೊಚ್ಚು ಬಾಯ
ನೂರು ವರ್ಣದ ಹಲ್ಲುಗಳಾಗಿದ್ದವು
ಗಾಢ ನೀರವತೆ
ಗಾಢ ನೀರವತೆಯು ಹೀಗಂದಿತು
ಕೇಳು ಧೂಳಿಪಟವಾದ ಅಂಗಡಿಯೇ
ಹೊಗೆಯಾಡುತ್ತಿರುವ ಮನೆಯೇ
ಮುರಿದ ಗಾಡಿಯೇ
ನೀವೊಂದೇ ಅಲ್ಲ
ಇಲ್ಲಿ ಇನ್ನೂ ಇವೆ
ಮುರಿದುಹೋದಂತವು
ದುಃಖಿಸೋಣ ಅವುಗಳಿಗೆ

ಆದರೆ ಮೊದಲು ಇವರಿಗಾಗಿ ಅಳೋಣ
ಲೂಟಿ ಮಾಡಲು ಬಂದು
ತಾವೇ ಲೂಟಿಯಾದರಲ್ಲ
ಏನು ಲೂಟಿಯಾಯಿತು
ಎಂಬ ಅರಿವೂ ಇಲ್ಲ
ಅವರಿಗೆ
ಮಂದದೃಷ್ಟಿ
ಶತಶತಮಾನದ ಸಂಸ್ಕೃತಿ
ಆ ಬಡಪಾಯಿಗಳಿಗೆ ಕಾಣಲೇ ಇಲ್ಲ.

ಜಾವೇದ್ ಅವರು ಈ ಪದ್ಯವನ್ನು ಓದಿದ ನಂತರ, ಪ್ರೇಕ್ಷಕರಲ್ಲಿದ್ದ ಓರ್ವ ಮಹಿಳೆ “ಈ ಪದ್ಯವನ್ನು ನೀವು ಗುಜರಾತ್‌ನ ಕೋಮುಗಲಭೆಯ ನಂತರ ಬರದಿರಾ?” ಎಂದು ಕೇಳಿದರು. ವಿಷಾದ ತುಂಬಿದ್ದ ಜಾವೇದ್ ಅಖ್ತರ್‌ರವರ ಉತ್ತರ: “ಇಲ್ಲ, ಈ ಪದ್ಯವನ್ನು ನಾನು ಬರೆದದ್ದು 1992ರಲ್ಲಿ. ಆದರೇನಂತೆ, ನಮ್ಮ ದೇಶದಲ್ಲಿನ ಕೋಮುವಾದಿಗಳು ಈ ಪದ್ಯವನ್ನು ಇವತ್ತಿಗೂ ಪ್ರಸ್ತುತವಾಗಿರಿಸಿದ್ದಾರೆ.”

ನನಗೆ ಮೆಚ್ಚುಗೆಯಾದ ಜಾವೇದ್ ಅಖ್ತರ್‌ರವರ ಇನ್ನೊಂದು ಪದ್ಯ ’ಪಾರ್ಥನೆ’ಯ ಅನುವಾದ ಹೀಗಿದೆ:

ಆನಂತ ಆಕಾಶದ ಆಳ ಸಮುದ್ರಗಳಲ್ಲಿ
ದ್ವೀಪವೊಂದೆಲ್ಲಾದರೂ ಇದೆಯೆಂದಾದರೆ
ಉಸಿರಾಡುತ್ತಿದ್ದಾರೆಂದಾದರೆ ಯಾರಾದರೂ
ಯಾವುದೋ ಎದೆಬಡಿತ ಇದೆಯೆಂದಾದರೆ
ಎಲ್ಲಿ ಬುದ್ಧಿವಂತಿಕೆಯು ಅರಿವಿನ ಬಟ್ಟಲ ತುಟಿಗಿಟ್ಟಿರುವುದೋ
ಅಲ್ಲಿಯ ಮಂದಿ
ಆನಂತ ಆಕಾಶದ ಆಳ ಸಾಗರದಲ್ಲಿ
ಇಳಿಸಲಿದ್ದಾರೆ ತಮ್ಮಯ ನೌಕೆ
ದ್ವೀಪವೊಂದರ ಶೋಧದಲ್ಲಿ
ಯಾರೋ ಉಸಿರಾಡುತ್ತಿರುವಲ್ಲಿ
ಎದೆಬಡಿತವಿರುವಲ್ಲಿ
ನನ್ನ ಪ್ರಾರ್ಥನೆ ಇದು
ಆ ದ್ವೀಪದ ಜನರ ಮೈ ಬಣ್ಣ
ಭಿನ್ನವಿರಲಿ
ಈ ದ್ವೀಪದವರ ಎಲ್ಲಾ ಬಣ್ಣಗಳಿಗಿಂತ
ಮೈಮಾಟವೂ
ಮುಖ ಮೋರೆಯೂ ಭಿನ್ನವಿರಲಿ
ನನ್ನ ಪ್ರಾರ್ಥನೆ
ಇದ್ದರೆ ಅಲ್ಲಿಯೂ ಜಾತಿ
ಈ ದ್ವೀಪಕ್ಕಿಂತ ಭಿನ್ನವಿರಲಿ

ನನ್ನ ಪ್ರಾರ್ಥನೆ ಇದು
ಅನಂತ ಆಕಾಶದ ಆಳ ಸಮುದ್ರವನ್ನು ದಾಟಿ
ಒಂದು ದಿನ
ಆ ಅಪರಿಚಿತ ಕುಲದ
ಅಂತರಿಕ್ಷ ನೌಕೆಯಲ್ಲಿ
ಈ ದ್ವೀಪದವರೆಗೆ ಬಂದು
ಸತ್ಕರಿಸಿ ಅವರನ್ನು ನಾವು
ಬೆರಗಿನಿಂದ ನೋಡುವೆವು
ಅವರು ಬಳಿ ಬಂದು
ನಮಗೆ ಸನ್ನೆಯಲ್ಲಿ ತಿಳಿಸಲಿ
ಅವರಿಗಿಂತ ನಾವು ಎಷ್ಟು ಭಿನ್ನವೆಂದು
ಎಲ್ಲರೂ ನಾವು
ಒಂದೇ ಥರವೆಂದು

ನನ್ನ ಪ್ರಾರ್ಥನೆ
ಈ ದ್ವೀಪದಲ್ಲಿ ವಾಸಿಸುವವರೆಲ್ಲ
ಆ ಅಪರಿಚಿತ ಕುಲದವರು ಹೇಳಿದ್ದನ್ನು ಆಗ ನಂಬಲಿ

ಜಾವೇದ್ ಅಖ್ತರ್‌ರವರ ದುಃಖ ಯಾವುದರ ಬಗ್ಗೆ ಎಂದರೆ: ಇವತ್ತು ಉರ್ದು ಭಾಷೆಗೆ ಧರ್ಮದ ಲೇಪವನ್ನು ಹೆಚ್ಚಿರುವುದು. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ: “ಜಗತ್ತಿನ ಯಾವುದೇ ಭಾಷೆಗೆ ಧರ್ಮದ ನಂಟಿಲ್ಲ. ಆದರೆ, ಈ ಎರಡು ರಾಷ್ಟ್ರ ಎಂಬ ಪೆದ್ದ ಸಿದ್ಧಾಂತದಿಂದಾಗಿ ಉರ್ದು ಎಂದರೆ ಅದು ಮುಸ್ಲಿಂರ ಭಾಷೆ ಎಂದೇ ಪರಿಗಣಿಸಲಟ್ಟಿತು. ಯಾವುದೇ ಪ್ರದೇಶವನ್ನು ನೀವು ಎರಡು ದೇಶಗಳಾಗಿ ವಿಭಜಿಸಬಹುದು. ಆದರೆ ಭಾಷೆಯೊಂದನ್ನು ಹೇಗೆ ವಿಭಜಿಸುತ್ತೀರಿ?

ಒಬ್ಬರಿಗೆ ಕ್ರಿಯಾಪದಗಳನ್ನು, ಮತ್ತೊಬ್ಬರಿಗೆ ನಾಮಪದಗಳನ್ನು ಕೊಡುತ್ತೀರೇನು? ಅದಕ್ಕಿಂತ ಮುಖ್ಯವಾದ ಅಂಶ ಯಾವುದೆಂದರೆ, ಉರ್ದು ನಿಜವಾಗಲೂ ಜಾತ್ಯತೀತ ಭಾಷೆ. ಉರ್ದು ಸಾಹಿತ್ಯದ ಎಲ್ಲ ಮಹಾನ್ ಸಾಹಿತಿಗಳು ನಾಸ್ತಿಕರು ಮತ್ತು ಜಾತ್ಯತೀತವಾಗಿದ್ದವರು. ಕುರಾನ್ ಪ್ರಥಮವಾಗಿ ಉರ್ದುಗೆ ಅನುವಾದವಾಗಿದ್ದು ಕೇವಲ 1791ರಲ್ಲಿ. ಆಗ ಉರ್ದುವನ್ನು ಅಸಂಸ್ಕೃತರ (heathen) ಭಾಷೆ ಎಂದೇ ಮುಲ್ಲಾಗಳು ಅಭಿಪ್ರಾಯಪಟ್ಟಿದ್ದರು. ಕುರಾನ್‌ನನ್ನು ಅಸಂಸ್ಕೃತರ ಭಾಷೆಗೆ ಅನುವಾದಿಸಿದ್ದವನ ಬಗ್ಗೆ ಮುಲ್ಲಾಗಳಿಗೆ ಎಷ್ಟು ಆಕ್ರೋಶವಿತ್ತೆಂದರೆ, ಆತನ ವಿರುದ್ಧ ಫತ್ವಾವನ್ನೇ ಹೊರಡಿಸಿದ್ದರು. ಆದರೂ, ಸ್ವತಂತ್ರ ಭಾರತದಲ್ಲಿ ಉರ್ದು ಭಾಷೆಯನ್ನು ಕೋಮುವಾದಿಗಳ ಬಲಿಪೀಠದ ಮೇಲೆ ತ್ಯಾಗ ಮಾಡಲಾಯಿತು. ಇವತ್ತು ನಿಜವಾಗಲೂ ಹಿಂದೂಸ್ತಾನಿಯಾದವನು ಕೋಮುವಾದಿ ಆಗಿರಲು ಸಾಧ್ಯವಿಲ್ಲ. ಏಕೆಂದರೆ ಈ ಭೂಮಿ ಕೋಮುವಾದಿ ಅಲ್ಲ. ಆದರೂ ಉರ್ದು ಹೆಸರಲ್ಲಿ, ಮುಸ್ಲಿಂ ಧರ್ಮದ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ಗುಜರಾತ್‌ನ ನರೇಂದ್ರ ಮೋದಿ ಸರ್ಕಾರ ದ್ವೇಷ ಸಾಧಿಸುತ್ತಿದೆ. ಆದರೆ ಅವರು ನಿಜವಾಗಲೂ ವಿರೋಧಿಸುವುದು ಕೇವಲ ಅಲ್ಪಸಂಖ್ಯಾತರನ್ನಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು. ಅವರ ಆಕಾಂಕ್ಷೆ ಏನಿದ್ದರೂ ಸರ್ವಾಧಿಕಾರಿ ಸರ್ಕಾರವನ್ನು ಸ್ಥಾಪಿಸುವುದಾಗಿದೆ. ಆದರೆ ಭಾರತೀಯರು ಅದಕ್ಕೆ ಎಂದೂ ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು.

(ಇದು ಗೌರಿಯವ ಕಂಡಹಾಗೆ ಅಂಕಣವೊಂದರ ಮರುಪ್ರಕಟಣೆ)


ಇದನ್ನೂ ಓದಿ: ಗೌರಿ ಕಾರ್ನರ್: ಪಿ. ಸಾಯಿನಾಥ್‌ರೊಂದಿಗೆ ಮಾತುಕತೆ; ಸರ್ಕಾರ ತನ್ನ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಎಎಸ್ ಅಧಿಕಾರಿ ಮಾನನಷ್ಟ ಮೊಕದ್ದಮೆ ಪ್ರಕರಣ: ಎನ್‌ಟಿವಿ ಸಂಪಾದಕ, ಇಬ್ಬರು ಪತ್ರಕರ್ತರ ಬಂಧನ

ತೆಲಂಗಾಣ ಸರ್ಕಾರದ ರಸ್ತೆ ಮತ್ತು ಕಟ್ಟಡಗಳ ಸಚಿವ ಕೋಮತಿರೆಡ್ಡಿ ವೆಂಕಟ್ ರೆಡ್ಡಿ ಹಾಗೂ ಮಹಿಳಾ ಐಎಎಸ್ ಅಧಿಕಾರಿ ಅವರ ಕುರಿತು ವಿವಾದಾತ್ಮಕ ಸುದ್ದಿ ವರದಿಗೆ ಸಂಬಂಧಿಸಿದಂತೆ, ಹೈದರಾಬಾದ್ ಕೇಂದ್ರ ಅಪರಾಧ ಠಾಣೆ...

ಇರಾನ್: ಪ್ರತಿಭಟನಾಕಾರರ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವಿನ ಸಂಖ್ಯೆ 2571ಕ್ಕೆ ಏರಿಕೆ 

ಇರಾನ್‌ನಲ್ಲಿ ಪ್ರತಿಭಟನೆಗಳ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 2,571 ಕ್ಕೆ ಏರಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಬುಧವಾರ ತಿಳಿಸಿದ್ದಾರೆ. ಈ ಅಂಕಿ ಅಂಶವು ಅಮೆರಿಕ ಮೂಲದ ಮಾನವ ಹಕ್ಕುಗಳ...

ಕಾಂಗ್ರೆಸ್‌ ಮುಖಂಡನ ಗೂಂಡಾವರ್ತನೆ : ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ಪೌರಾಯುಕ್ತೆಗೆ ಧಮ್ಕಿ, ಅವಾಚ್ಯ ಶಬ್ದಗಳಿಂದ ನಿಂದನೆ

ಸಚಿವ ಝಮೀರ್ ಅಹ್ಮದ್ ಅವರ ಮಗ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತಗೌಡ ಅವರೊಂದಿಗೆ ಗೂಂಡಾವರ್ತನೆ...

ಹಿಂದಿ ಶೈಕ್ಷಣಿಕ ಪದ್ಧತಿ ಹೇರಿಕೆಯಿಂದ ಉತ್ತರದ ಜನರಿಂದ ದಕ್ಷಿಣಕ್ಕೆ ವಲಸೆ: ಮಾರನ್

ಇಂಗ್ಲಿಷ್ ಶಿಕ್ಷಣವನ್ನು ನಿರುತ್ಸಾಹಗೊಳಿಸುತ್ತಾ, ವಿದ್ಯಾರ್ಥಿಗಳು ಹಿಂದಿ ಮಾತ್ರ ಕಲಿಯಲು ಪ್ರೋತ್ಸಾಹಿಸುತ್ತಿದ್ದಾರೆ. ಉತ್ತರ ರಾಜ್ಯಗಳ ಈ ನೀತಿಗಳಿಂದ ಉದ್ಯೋಗ ಸಿಗದೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ...

ಚಿಕ್ಕಮಗಳೂರು| ದಲಿತರ ಜಮೀನಿಗೆ ನುಗ್ಗಿ ಬೆಳೆ ನಾಶ; ಪ್ರಬಲ ಜಾತಿ ಜನರಿಂದ ವಿನಾಕಾರಣ ತೊಂದರೆ

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಸತ್ತಿಹಳ್ಳಿ ಗ್ರಾಮದ ದಲಿತ ಸಮುದಾಯದ ರೈತರಿಗೆ ಅದೇ ಊರಿನ ಪ್ರಬಲ ಜಾತಿಗೆ ಸೇರಿದ ಜನರು ವಿನಾಕಾರಣ ತೊಂದರೆ ನಿಡುತ್ತಿದ್ದು, ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ್ದಾರೆ ಎಂಬ...

ಎಲ್‌ಡಿಎಫ್‌ನ ‘ಕೇರಳಂ’ ಮರುನಾಮಕರಣ ಕ್ರಮ ಬೆಂಬಲಿಸಿದ ರಾಜ್ಯ ಬಿಜೆಪಿ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಮನವಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇರಳ ಘಟಕವು, ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಸರ್ಕಾರದ 'ಕೇರಳಂ' ಮರುನಾಕರಣ ಪ್ರಸ್ತಾವನೆಯನ್ನು ಬೆಂಬಲಿಸಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ...

ರಾಯಚೂರು ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ತಡೆಗೆ ಸಂಚು ಆರೋಪ: ನಿಗದಿತ ದಿನಾಂಕದಂದು ಪರೀಕ್ಷೆ ನಡೆಸಲು ಒತ್ತಾಯ 

ಬೆಂಗಳೂರು: ರಾಯಚೂರು ಕೃಷಿ ವಿವಿಯಲ್ಲಿನ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಿಗದಿತ ದಿನಾಂಕಗಳಾದ ಜನವರಿ.17 ಮತ್ತು ಜನವರಿ.18ರಂದೇ ನಡೆಸಬೇಕು. ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು...

ಸಂಭಾಲ್ ಹಿಂಸಾಚಾರ ಪ್ರಕರಣ : ಹಿರಿಯ ಅಧಿಕಾರಿಗಳು ಸೇರಿ 12 ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

2024ರ ನವೆಂಬರ್‌ನಲ್ಲಿ ಶಾಹಿ ಜಾಮಾ ಮಸೀದಿ ಬಳಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾತ್ರವಿದೆ ಎಂಬ ಆರೋಪದ ಮೇಲೆ ಹಿರಿಯ ಅಧಿಕಾರಿಗಳು ಸೇರಿದಂತೆ 12 ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್...

ಪಿಎಂ ಕೇರ್ಸ್ ನಿಧಿಗೆ ಆರ್‌ಟಿಐ ಕಾಯ್ದೆಯಡಿ ಗೌಪ್ಯತೆಯ ಹಕ್ಕಿದೆ : ದೆಹಲಿ ಹೈಕೋರ್ಟ್

ಪಿಎಂ ಕೇರ್ಸ್ ನಿಧಿಯು ಕಾನೂನು ಅಥವಾ ಸರ್ಕಾರಿ ಘಟಕವಾಗಿದ್ದರೂ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಗೌಪ್ಯತೆಯ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ (ಜ.13) ಮೌಖಿಕವಾಗಿ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು...

ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾದ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗ

ಗಾಲ್ವಾನ್ ಘರ್ಷಣೆಯ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ನಿಯೋಗ ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿ ಮಾಡಿದೆ ಎಂದು ವರದಿಯಾಗಿದೆ. ಸೋಮವಾರ (ಜ.12) ನವದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ...