Homeಅಂಕಣಗಳುಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

ಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

- Advertisement -
- Advertisement -

ಮೊನ್ನೆ ಬೆಂಗಳೂರಿನಲ್ಲಿ ಒಂದು ಅಪರೂಪದ ಸಂಜೆಯನ್ನು ಅರುಂಧತಿ ನಾಗ್‌ರವರು ಏರ್ಪಡಿಸಿದ್ದರು. ಅಂದಿನ ಕಾರ್ಯಕ್ರಮದಲ್ಲಿ, ಅವರ ಕನಸಿನ ’ರಂಗಶಂಕರ’ಕ್ಕಾಗಿ ಕಾರ್ಪೊರೆಟ್ ಕಂಪನಿಗಳಿಂದ ಹಣವನ್ನು ಸಂಗ್ರಹಿಸುವ ಉದ್ದೇಶ ಅವರದ್ದಾಗಿದ್ದರೂ, ಕೆಲವು ಸ್ನೇಹಿತರನ್ನೂ ಆಹ್ವಾನಿಸಿದ್ದರು.

ಕಳೆದ ಹಲವಾರು ವರ್ಷಗಳಿಂದ ಅರು (ಅರುಂಧತಿ ನಾಗ್) ಈ ರಂಗಮಂದಿರಕ್ಕಾಗಿ ಏನೆಲ್ಲಾ ಸರ್ಕಸ್ ನಡೆಸಿದ್ದಾರೆ ಎಂಬುದು ನನಗೆ ಗೊತ್ತು. ಕನಸುಗಾರರಾಗಿದ್ದ ಶಂಕರ್ ನಾಗ್ ಬದುಕಿದ್ದಿದ್ದರೆ ಆತ ತನ್ನ ಆಕಾಂಕ್ಷೆಗಳ ಬೆನ್ನೇರಿ ಇಷ್ಟೊತ್ತಿಗಾಗಲೇ ಪಾಪರ್ ಆಗಿರುತ್ತಿದ್ದರು ಎಂಬುದರ ಬಗ್ಗೆ ನನಗೆ ಸಂಶಯವಿಲ್ಲ. ಆದರೆ ಅರು ಮಾತ್ರ ಈ ’ರಂಗಶಂಕರ’ದ ಕನಸಿನಲ್ಲೇ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ. ಈ ರಂಗಮಂದಿರ ಆಕೆಯ ದಿವಂಗತ ಪತಿ ಶಂಕರ್ ನೆನಪಿಗೆ ಮಾತ್ರವಲ್ಲ, ಅದರಿಂದ ರಂಗಕ್ಷೇತ್ರಕ್ಕೆ ತನ್ನ ಅಲ್ಪಕಾಣಿಕೆಯನ್ನಾದರೂ ಸಲ್ಲಿಸಬೇಕು ಎಂಬ ಆಕಾಂಕ್ಷೆ ಅರು ಅವರದ್ದು.

ಈ ನಿಟ್ಟಿನಲ್ಲಿ ಅರು ಮೊನ್ನೆ ತನ್ನ ಸ್ನೇಹಿತರಾದ ಶಬನಾ ಅಜ್ಮಿ ಮತ್ತು ಜಾವೇದ್ ಆಖ್ತರ್ ಅವರನ್ನು ಆಹ್ವಾನಿಸಿದ್ದರು.

ಜಾವೇದ್ ಅಖ್ತರ್‌ರವರ ಜಾತ್ಯತೀತ ನಿಲುವುಗಳ ಬಗ್ಗೆಯಾಗಲೀ, ಅವರ ಸಾಹಿತ್ಯಕ ಸಾಧನೆಗಳ ಬಗ್ಗೆಯಾಗಲೀ ಇಲ್ಲಿ ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಹಿಂದೂ ಮೂಲಭೂತವಾದ ಹೆಚ್ಚಾಗುತ್ತಿರುವ ಈಗಿನ ಸೂಕ್ಷ್ಮ ಸಂದರ್ಭದಲ್ಲಿ ಮುಸ್ಲಿಮ್ ಬುದ್ಧಿಜೀವಿಗಳು ಕೂಡಾ ಇಸ್ಲಾಂನ ಮೂಲಭೂತವಾದಿಗಳನ್ನು ಟೀಕಿಸಲು ಹಿಂಜರಿಯುತ್ತಿದ್ದಾರೆ. ಆದರೆ ಜಾವೇದ್ ಅಖ್ತರ್ ಮತ್ತು ಶಬನಾ ಅಜ್ಮಿ ತಾವು ನಿಷ್ಟಾವಂತ ಭಾರತೀಯ ಜಾತ್ಯತೀತವಾದಿಗಳು ಎಂಬುದನ್ನು ಮತ್ತೆ ಮತ್ತೆ ಹೇಳುವ ಧೈರ್ಯ ತೋರುತ್ತಿದ್ದಾರೆ. ಶಬನಾ ಅಜ್ಮಿ ಅವರು “ಇಮಾಮ್ ಭುಕಾರಿಯವರು ಆಫ್ಘಾನಿಸ್ತಾನದ ತಾಲಿಬಾನ್‌ಗೆ ಬೆಂಬಲ ನೀಡುವುದಿದ್ದರೆ ಭಾರತದ ಸರ್ಕಾರ ಅವರನ್ನು ಆಫ್ಘಾನಿಸ್ತಾನಕ್ಕೆ ಎತ್ತಿಹಾಕುವುದೇ ಒಳ್ಳೆಯದು” ಎಂದು ಹೇಳಿದ್ದಾರೆ, ಜಾವೇದ್ ಅಖ್ತರ್ ಅವರನ್ನು ಪಾಕಿಸ್ತಾನದ ಬರಹಗಾರರೊಬ್ಬರು “ನಿಮಗೆ ಭಾರತದಲ್ಲಿ ಮುಸ್ಲಿಂ ಲೇಖಕನಾಗಿ ಕಷ್ಟವಾಗಿಲ್ಲವೇ?” ಎಂದು ಕೇಳಿದಾಗ, “ನಾನು ಪಾಕಿಸ್ತಾನಿಯಾದ ನಿನ್ನನ್ನು ಮಾತನಾಡಿಸುವಾಗ ಭಾರತೀಯನಾಗಿ ಮಾತನಾಡುವೆ. ಆದರೆ ನನ್ನ ದೇಶದಲ್ಲಿ ಶಿವಸೇನೆಯ ಬಾಳಠಾಕ್ರೆಯೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಚರ್ಚಿಸುವಾಗ ಭಾರತೀಯ ಮುಸ್ಲಿಂನಾಗಿ ಮಾತನಾಡುವೆ. ನನ್ನಿಂದ ಭಾರತದ ವಿರುದ್ಧ ಯಾವುದೇ ಹೇಳಿಕೆ ನಿನಗೆ ಲಭಿಸುವುದಿಲ್ಲ.” ಎಂದೇ ಗುಡುಗಿದ್ದರು.

ಮೊನ್ನೆ ಜಾವೇದ್ ತಮ್ಮ ಉರ್ದು ಪದ್ಯಗಳ ಸಂಕಲನವಾದ ’ತರ್ಕಶ್‌’ನಿಂದ ಆಯ್ದ ಕವನಗಳನ್ನು ಓದಿದಾಗ, ಅವರ ಮಡದಿ ಶಬನಾ ಆ ಪದ್ಯಗಳ ಇಂಗ್ಲಿಷ್ ಅನುವಾದಗಳನ್ನು ಓದಿದರು. ಅವುಗಳಲ್ಲಿ ನನಗೆ ಬಹಳ ಇಷ್ಟವಾದ ಎರಡು ಪದ್ಯಗಳು ’ದಂಗೆಯ ಬಳಿಕ’ ಮತ್ತು ’ಪ್ರಾರ್ಥನೆ’. ಇವುಗಳನ್ನು ನಾನೇ ಅನುವಾದ ಮಾಡುವುದಕ್ಕಿಂತ, ಈ ಪದ್ಯಗಳನ್ನು ಈಗಾಗಲೇ ಕನ್ನಡಕ್ಕೆ ಅನುವಾದಿಸಿರುವ ಖ್ಯಾತ ಕವಿಯತ್ರಿ ಹಾ.ಮ.ಕನಕರವರನ್ನು ಮಾತನಾಡಿಸಿದೆ. ತಕ್ಷಣವೇ ಕನಕ ಆ ಎರಡು ಪದ್ಯಗಳ ಅನುವಾದಗಳನ್ನು ಈಮೇಲ್ ಮೂಲಕ ಕಳುಹಿಸಿದರು. ಅವುಗಳಲ್ಲಿ ಮೊದಲನೆಯದು ’ದಂಗೆಯ ಬಳಿಕ’.

ಗಾಢ ನೀರವತೆ
ಸದ್ದಿಲ್ಲದೇ ಮನೆಗಳಿಂದ
ದಟ್ಟ ಹೊಗೆ ಕಪ್ಪಗೆ
ಮಲಿನ ಎದೆಯಿಂದ
ದೂರದೂರಕ್ಕೆ ಹರಡುತ್ತಾ
ಗಾಢ ನೀರವತೆ

ಶವದಂತೆ ಮಲಗಿರುವ ರಸ್ತೆ
ಮುಂದೆ ಗಾಡಿ
ಅಡಿಮೇಲಾಗಿ
ಗಾಲಿಗಳನ್ನು ಗಾಳಿಗೆ ಎತ್ತಿ
ನೋಡುತ್ತಿದೆ ಆಕಾಶದತ್ತ ಬೆಕ್ಕಸ ಬೆರಗಾಗಿ
ಆಗಿದ್ದನ್ನೆಲ್ಲ ನಂಬಲೇ ಆಗದಂತೆ
ಗಾಢ ನೀರವತೆ

ಧೂಳೀಪಟವಾದ ಅಂಗಡಿ
ಚೀತ್ಕಾರದ ನಂತರ
ತೆರೆದಂತೇ ಇರುವ ಬಾಯಿ
ಮುರಿದ ಕಿಟಕಿ ಸಂದಿನಿಂದ
ಚದುರಿರುವ
ಬಳೆಯ ಚೂರುಗಳನ್ನು
ದುಗುಡ ತುಂಬ ಆಸೆಯಿಂದ ನಿರುಕಿಸುತ್ತಿದೆ

ನಿನ್ನೆಯವರೆಗೆ ಈ ಚೂರುಗಳೇ ಆ ಬೊಚ್ಚು ಬಾಯ
ನೂರು ವರ್ಣದ ಹಲ್ಲುಗಳಾಗಿದ್ದವು
ಗಾಢ ನೀರವತೆ
ಗಾಢ ನೀರವತೆಯು ಹೀಗಂದಿತು
ಕೇಳು ಧೂಳಿಪಟವಾದ ಅಂಗಡಿಯೇ
ಹೊಗೆಯಾಡುತ್ತಿರುವ ಮನೆಯೇ
ಮುರಿದ ಗಾಡಿಯೇ
ನೀವೊಂದೇ ಅಲ್ಲ
ಇಲ್ಲಿ ಇನ್ನೂ ಇವೆ
ಮುರಿದುಹೋದಂತವು
ದುಃಖಿಸೋಣ ಅವುಗಳಿಗೆ

ಆದರೆ ಮೊದಲು ಇವರಿಗಾಗಿ ಅಳೋಣ
ಲೂಟಿ ಮಾಡಲು ಬಂದು
ತಾವೇ ಲೂಟಿಯಾದರಲ್ಲ
ಏನು ಲೂಟಿಯಾಯಿತು
ಎಂಬ ಅರಿವೂ ಇಲ್ಲ
ಅವರಿಗೆ
ಮಂದದೃಷ್ಟಿ
ಶತಶತಮಾನದ ಸಂಸ್ಕೃತಿ
ಆ ಬಡಪಾಯಿಗಳಿಗೆ ಕಾಣಲೇ ಇಲ್ಲ.

ಜಾವೇದ್ ಅವರು ಈ ಪದ್ಯವನ್ನು ಓದಿದ ನಂತರ, ಪ್ರೇಕ್ಷಕರಲ್ಲಿದ್ದ ಓರ್ವ ಮಹಿಳೆ “ಈ ಪದ್ಯವನ್ನು ನೀವು ಗುಜರಾತ್‌ನ ಕೋಮುಗಲಭೆಯ ನಂತರ ಬರದಿರಾ?” ಎಂದು ಕೇಳಿದರು. ವಿಷಾದ ತುಂಬಿದ್ದ ಜಾವೇದ್ ಅಖ್ತರ್‌ರವರ ಉತ್ತರ: “ಇಲ್ಲ, ಈ ಪದ್ಯವನ್ನು ನಾನು ಬರೆದದ್ದು 1992ರಲ್ಲಿ. ಆದರೇನಂತೆ, ನಮ್ಮ ದೇಶದಲ್ಲಿನ ಕೋಮುವಾದಿಗಳು ಈ ಪದ್ಯವನ್ನು ಇವತ್ತಿಗೂ ಪ್ರಸ್ತುತವಾಗಿರಿಸಿದ್ದಾರೆ.”

ನನಗೆ ಮೆಚ್ಚುಗೆಯಾದ ಜಾವೇದ್ ಅಖ್ತರ್‌ರವರ ಇನ್ನೊಂದು ಪದ್ಯ ’ಪಾರ್ಥನೆ’ಯ ಅನುವಾದ ಹೀಗಿದೆ:

ಆನಂತ ಆಕಾಶದ ಆಳ ಸಮುದ್ರಗಳಲ್ಲಿ
ದ್ವೀಪವೊಂದೆಲ್ಲಾದರೂ ಇದೆಯೆಂದಾದರೆ
ಉಸಿರಾಡುತ್ತಿದ್ದಾರೆಂದಾದರೆ ಯಾರಾದರೂ
ಯಾವುದೋ ಎದೆಬಡಿತ ಇದೆಯೆಂದಾದರೆ
ಎಲ್ಲಿ ಬುದ್ಧಿವಂತಿಕೆಯು ಅರಿವಿನ ಬಟ್ಟಲ ತುಟಿಗಿಟ್ಟಿರುವುದೋ
ಅಲ್ಲಿಯ ಮಂದಿ
ಆನಂತ ಆಕಾಶದ ಆಳ ಸಾಗರದಲ್ಲಿ
ಇಳಿಸಲಿದ್ದಾರೆ ತಮ್ಮಯ ನೌಕೆ
ದ್ವೀಪವೊಂದರ ಶೋಧದಲ್ಲಿ
ಯಾರೋ ಉಸಿರಾಡುತ್ತಿರುವಲ್ಲಿ
ಎದೆಬಡಿತವಿರುವಲ್ಲಿ
ನನ್ನ ಪ್ರಾರ್ಥನೆ ಇದು
ಆ ದ್ವೀಪದ ಜನರ ಮೈ ಬಣ್ಣ
ಭಿನ್ನವಿರಲಿ
ಈ ದ್ವೀಪದವರ ಎಲ್ಲಾ ಬಣ್ಣಗಳಿಗಿಂತ
ಮೈಮಾಟವೂ
ಮುಖ ಮೋರೆಯೂ ಭಿನ್ನವಿರಲಿ
ನನ್ನ ಪ್ರಾರ್ಥನೆ
ಇದ್ದರೆ ಅಲ್ಲಿಯೂ ಜಾತಿ
ಈ ದ್ವೀಪಕ್ಕಿಂತ ಭಿನ್ನವಿರಲಿ

ನನ್ನ ಪ್ರಾರ್ಥನೆ ಇದು
ಅನಂತ ಆಕಾಶದ ಆಳ ಸಮುದ್ರವನ್ನು ದಾಟಿ
ಒಂದು ದಿನ
ಆ ಅಪರಿಚಿತ ಕುಲದ
ಅಂತರಿಕ್ಷ ನೌಕೆಯಲ್ಲಿ
ಈ ದ್ವೀಪದವರೆಗೆ ಬಂದು
ಸತ್ಕರಿಸಿ ಅವರನ್ನು ನಾವು
ಬೆರಗಿನಿಂದ ನೋಡುವೆವು
ಅವರು ಬಳಿ ಬಂದು
ನಮಗೆ ಸನ್ನೆಯಲ್ಲಿ ತಿಳಿಸಲಿ
ಅವರಿಗಿಂತ ನಾವು ಎಷ್ಟು ಭಿನ್ನವೆಂದು
ಎಲ್ಲರೂ ನಾವು
ಒಂದೇ ಥರವೆಂದು

ನನ್ನ ಪ್ರಾರ್ಥನೆ
ಈ ದ್ವೀಪದಲ್ಲಿ ವಾಸಿಸುವವರೆಲ್ಲ
ಆ ಅಪರಿಚಿತ ಕುಲದವರು ಹೇಳಿದ್ದನ್ನು ಆಗ ನಂಬಲಿ

ಜಾವೇದ್ ಅಖ್ತರ್‌ರವರ ದುಃಖ ಯಾವುದರ ಬಗ್ಗೆ ಎಂದರೆ: ಇವತ್ತು ಉರ್ದು ಭಾಷೆಗೆ ಧರ್ಮದ ಲೇಪವನ್ನು ಹೆಚ್ಚಿರುವುದು. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ: “ಜಗತ್ತಿನ ಯಾವುದೇ ಭಾಷೆಗೆ ಧರ್ಮದ ನಂಟಿಲ್ಲ. ಆದರೆ, ಈ ಎರಡು ರಾಷ್ಟ್ರ ಎಂಬ ಪೆದ್ದ ಸಿದ್ಧಾಂತದಿಂದಾಗಿ ಉರ್ದು ಎಂದರೆ ಅದು ಮುಸ್ಲಿಂರ ಭಾಷೆ ಎಂದೇ ಪರಿಗಣಿಸಲಟ್ಟಿತು. ಯಾವುದೇ ಪ್ರದೇಶವನ್ನು ನೀವು ಎರಡು ದೇಶಗಳಾಗಿ ವಿಭಜಿಸಬಹುದು. ಆದರೆ ಭಾಷೆಯೊಂದನ್ನು ಹೇಗೆ ವಿಭಜಿಸುತ್ತೀರಿ?

ಒಬ್ಬರಿಗೆ ಕ್ರಿಯಾಪದಗಳನ್ನು, ಮತ್ತೊಬ್ಬರಿಗೆ ನಾಮಪದಗಳನ್ನು ಕೊಡುತ್ತೀರೇನು? ಅದಕ್ಕಿಂತ ಮುಖ್ಯವಾದ ಅಂಶ ಯಾವುದೆಂದರೆ, ಉರ್ದು ನಿಜವಾಗಲೂ ಜಾತ್ಯತೀತ ಭಾಷೆ. ಉರ್ದು ಸಾಹಿತ್ಯದ ಎಲ್ಲ ಮಹಾನ್ ಸಾಹಿತಿಗಳು ನಾಸ್ತಿಕರು ಮತ್ತು ಜಾತ್ಯತೀತವಾಗಿದ್ದವರು. ಕುರಾನ್ ಪ್ರಥಮವಾಗಿ ಉರ್ದುಗೆ ಅನುವಾದವಾಗಿದ್ದು ಕೇವಲ 1791ರಲ್ಲಿ. ಆಗ ಉರ್ದುವನ್ನು ಅಸಂಸ್ಕೃತರ (heathen) ಭಾಷೆ ಎಂದೇ ಮುಲ್ಲಾಗಳು ಅಭಿಪ್ರಾಯಪಟ್ಟಿದ್ದರು. ಕುರಾನ್‌ನನ್ನು ಅಸಂಸ್ಕೃತರ ಭಾಷೆಗೆ ಅನುವಾದಿಸಿದ್ದವನ ಬಗ್ಗೆ ಮುಲ್ಲಾಗಳಿಗೆ ಎಷ್ಟು ಆಕ್ರೋಶವಿತ್ತೆಂದರೆ, ಆತನ ವಿರುದ್ಧ ಫತ್ವಾವನ್ನೇ ಹೊರಡಿಸಿದ್ದರು. ಆದರೂ, ಸ್ವತಂತ್ರ ಭಾರತದಲ್ಲಿ ಉರ್ದು ಭಾಷೆಯನ್ನು ಕೋಮುವಾದಿಗಳ ಬಲಿಪೀಠದ ಮೇಲೆ ತ್ಯಾಗ ಮಾಡಲಾಯಿತು. ಇವತ್ತು ನಿಜವಾಗಲೂ ಹಿಂದೂಸ್ತಾನಿಯಾದವನು ಕೋಮುವಾದಿ ಆಗಿರಲು ಸಾಧ್ಯವಿಲ್ಲ. ಏಕೆಂದರೆ ಈ ಭೂಮಿ ಕೋಮುವಾದಿ ಅಲ್ಲ. ಆದರೂ ಉರ್ದು ಹೆಸರಲ್ಲಿ, ಮುಸ್ಲಿಂ ಧರ್ಮದ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ಗುಜರಾತ್‌ನ ನರೇಂದ್ರ ಮೋದಿ ಸರ್ಕಾರ ದ್ವೇಷ ಸಾಧಿಸುತ್ತಿದೆ. ಆದರೆ ಅವರು ನಿಜವಾಗಲೂ ವಿರೋಧಿಸುವುದು ಕೇವಲ ಅಲ್ಪಸಂಖ್ಯಾತರನ್ನಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು. ಅವರ ಆಕಾಂಕ್ಷೆ ಏನಿದ್ದರೂ ಸರ್ವಾಧಿಕಾರಿ ಸರ್ಕಾರವನ್ನು ಸ್ಥಾಪಿಸುವುದಾಗಿದೆ. ಆದರೆ ಭಾರತೀಯರು ಅದಕ್ಕೆ ಎಂದೂ ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು.

(ಇದು ಗೌರಿಯವ ಕಂಡಹಾಗೆ ಅಂಕಣವೊಂದರ ಮರುಪ್ರಕಟಣೆ)


ಇದನ್ನೂ ಓದಿ: ಗೌರಿ ಕಾರ್ನರ್: ಪಿ. ಸಾಯಿನಾಥ್‌ರೊಂದಿಗೆ ಮಾತುಕತೆ; ಸರ್ಕಾರ ತನ್ನ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ...

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ...