Homeಅಂಕಣಗಳುಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

ಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

- Advertisement -
- Advertisement -

ಮೊನ್ನೆ ಬೆಂಗಳೂರಿನಲ್ಲಿ ಒಂದು ಅಪರೂಪದ ಸಂಜೆಯನ್ನು ಅರುಂಧತಿ ನಾಗ್‌ರವರು ಏರ್ಪಡಿಸಿದ್ದರು. ಅಂದಿನ ಕಾರ್ಯಕ್ರಮದಲ್ಲಿ, ಅವರ ಕನಸಿನ ’ರಂಗಶಂಕರ’ಕ್ಕಾಗಿ ಕಾರ್ಪೊರೆಟ್ ಕಂಪನಿಗಳಿಂದ ಹಣವನ್ನು ಸಂಗ್ರಹಿಸುವ ಉದ್ದೇಶ ಅವರದ್ದಾಗಿದ್ದರೂ, ಕೆಲವು ಸ್ನೇಹಿತರನ್ನೂ ಆಹ್ವಾನಿಸಿದ್ದರು.

ಕಳೆದ ಹಲವಾರು ವರ್ಷಗಳಿಂದ ಅರು (ಅರುಂಧತಿ ನಾಗ್) ಈ ರಂಗಮಂದಿರಕ್ಕಾಗಿ ಏನೆಲ್ಲಾ ಸರ್ಕಸ್ ನಡೆಸಿದ್ದಾರೆ ಎಂಬುದು ನನಗೆ ಗೊತ್ತು. ಕನಸುಗಾರರಾಗಿದ್ದ ಶಂಕರ್ ನಾಗ್ ಬದುಕಿದ್ದಿದ್ದರೆ ಆತ ತನ್ನ ಆಕಾಂಕ್ಷೆಗಳ ಬೆನ್ನೇರಿ ಇಷ್ಟೊತ್ತಿಗಾಗಲೇ ಪಾಪರ್ ಆಗಿರುತ್ತಿದ್ದರು ಎಂಬುದರ ಬಗ್ಗೆ ನನಗೆ ಸಂಶಯವಿಲ್ಲ. ಆದರೆ ಅರು ಮಾತ್ರ ಈ ’ರಂಗಶಂಕರ’ದ ಕನಸಿನಲ್ಲೇ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ. ಈ ರಂಗಮಂದಿರ ಆಕೆಯ ದಿವಂಗತ ಪತಿ ಶಂಕರ್ ನೆನಪಿಗೆ ಮಾತ್ರವಲ್ಲ, ಅದರಿಂದ ರಂಗಕ್ಷೇತ್ರಕ್ಕೆ ತನ್ನ ಅಲ್ಪಕಾಣಿಕೆಯನ್ನಾದರೂ ಸಲ್ಲಿಸಬೇಕು ಎಂಬ ಆಕಾಂಕ್ಷೆ ಅರು ಅವರದ್ದು.

ಈ ನಿಟ್ಟಿನಲ್ಲಿ ಅರು ಮೊನ್ನೆ ತನ್ನ ಸ್ನೇಹಿತರಾದ ಶಬನಾ ಅಜ್ಮಿ ಮತ್ತು ಜಾವೇದ್ ಆಖ್ತರ್ ಅವರನ್ನು ಆಹ್ವಾನಿಸಿದ್ದರು.

ಜಾವೇದ್ ಅಖ್ತರ್‌ರವರ ಜಾತ್ಯತೀತ ನಿಲುವುಗಳ ಬಗ್ಗೆಯಾಗಲೀ, ಅವರ ಸಾಹಿತ್ಯಕ ಸಾಧನೆಗಳ ಬಗ್ಗೆಯಾಗಲೀ ಇಲ್ಲಿ ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಹಿಂದೂ ಮೂಲಭೂತವಾದ ಹೆಚ್ಚಾಗುತ್ತಿರುವ ಈಗಿನ ಸೂಕ್ಷ್ಮ ಸಂದರ್ಭದಲ್ಲಿ ಮುಸ್ಲಿಮ್ ಬುದ್ಧಿಜೀವಿಗಳು ಕೂಡಾ ಇಸ್ಲಾಂನ ಮೂಲಭೂತವಾದಿಗಳನ್ನು ಟೀಕಿಸಲು ಹಿಂಜರಿಯುತ್ತಿದ್ದಾರೆ. ಆದರೆ ಜಾವೇದ್ ಅಖ್ತರ್ ಮತ್ತು ಶಬನಾ ಅಜ್ಮಿ ತಾವು ನಿಷ್ಟಾವಂತ ಭಾರತೀಯ ಜಾತ್ಯತೀತವಾದಿಗಳು ಎಂಬುದನ್ನು ಮತ್ತೆ ಮತ್ತೆ ಹೇಳುವ ಧೈರ್ಯ ತೋರುತ್ತಿದ್ದಾರೆ. ಶಬನಾ ಅಜ್ಮಿ ಅವರು “ಇಮಾಮ್ ಭುಕಾರಿಯವರು ಆಫ್ಘಾನಿಸ್ತಾನದ ತಾಲಿಬಾನ್‌ಗೆ ಬೆಂಬಲ ನೀಡುವುದಿದ್ದರೆ ಭಾರತದ ಸರ್ಕಾರ ಅವರನ್ನು ಆಫ್ಘಾನಿಸ್ತಾನಕ್ಕೆ ಎತ್ತಿಹಾಕುವುದೇ ಒಳ್ಳೆಯದು” ಎಂದು ಹೇಳಿದ್ದಾರೆ, ಜಾವೇದ್ ಅಖ್ತರ್ ಅವರನ್ನು ಪಾಕಿಸ್ತಾನದ ಬರಹಗಾರರೊಬ್ಬರು “ನಿಮಗೆ ಭಾರತದಲ್ಲಿ ಮುಸ್ಲಿಂ ಲೇಖಕನಾಗಿ ಕಷ್ಟವಾಗಿಲ್ಲವೇ?” ಎಂದು ಕೇಳಿದಾಗ, “ನಾನು ಪಾಕಿಸ್ತಾನಿಯಾದ ನಿನ್ನನ್ನು ಮಾತನಾಡಿಸುವಾಗ ಭಾರತೀಯನಾಗಿ ಮಾತನಾಡುವೆ. ಆದರೆ ನನ್ನ ದೇಶದಲ್ಲಿ ಶಿವಸೇನೆಯ ಬಾಳಠಾಕ್ರೆಯೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಚರ್ಚಿಸುವಾಗ ಭಾರತೀಯ ಮುಸ್ಲಿಂನಾಗಿ ಮಾತನಾಡುವೆ. ನನ್ನಿಂದ ಭಾರತದ ವಿರುದ್ಧ ಯಾವುದೇ ಹೇಳಿಕೆ ನಿನಗೆ ಲಭಿಸುವುದಿಲ್ಲ.” ಎಂದೇ ಗುಡುಗಿದ್ದರು.

ಮೊನ್ನೆ ಜಾವೇದ್ ತಮ್ಮ ಉರ್ದು ಪದ್ಯಗಳ ಸಂಕಲನವಾದ ’ತರ್ಕಶ್‌’ನಿಂದ ಆಯ್ದ ಕವನಗಳನ್ನು ಓದಿದಾಗ, ಅವರ ಮಡದಿ ಶಬನಾ ಆ ಪದ್ಯಗಳ ಇಂಗ್ಲಿಷ್ ಅನುವಾದಗಳನ್ನು ಓದಿದರು. ಅವುಗಳಲ್ಲಿ ನನಗೆ ಬಹಳ ಇಷ್ಟವಾದ ಎರಡು ಪದ್ಯಗಳು ’ದಂಗೆಯ ಬಳಿಕ’ ಮತ್ತು ’ಪ್ರಾರ್ಥನೆ’. ಇವುಗಳನ್ನು ನಾನೇ ಅನುವಾದ ಮಾಡುವುದಕ್ಕಿಂತ, ಈ ಪದ್ಯಗಳನ್ನು ಈಗಾಗಲೇ ಕನ್ನಡಕ್ಕೆ ಅನುವಾದಿಸಿರುವ ಖ್ಯಾತ ಕವಿಯತ್ರಿ ಹಾ.ಮ.ಕನಕರವರನ್ನು ಮಾತನಾಡಿಸಿದೆ. ತಕ್ಷಣವೇ ಕನಕ ಆ ಎರಡು ಪದ್ಯಗಳ ಅನುವಾದಗಳನ್ನು ಈಮೇಲ್ ಮೂಲಕ ಕಳುಹಿಸಿದರು. ಅವುಗಳಲ್ಲಿ ಮೊದಲನೆಯದು ’ದಂಗೆಯ ಬಳಿಕ’.

ಗಾಢ ನೀರವತೆ
ಸದ್ದಿಲ್ಲದೇ ಮನೆಗಳಿಂದ
ದಟ್ಟ ಹೊಗೆ ಕಪ್ಪಗೆ
ಮಲಿನ ಎದೆಯಿಂದ
ದೂರದೂರಕ್ಕೆ ಹರಡುತ್ತಾ
ಗಾಢ ನೀರವತೆ

ಶವದಂತೆ ಮಲಗಿರುವ ರಸ್ತೆ
ಮುಂದೆ ಗಾಡಿ
ಅಡಿಮೇಲಾಗಿ
ಗಾಲಿಗಳನ್ನು ಗಾಳಿಗೆ ಎತ್ತಿ
ನೋಡುತ್ತಿದೆ ಆಕಾಶದತ್ತ ಬೆಕ್ಕಸ ಬೆರಗಾಗಿ
ಆಗಿದ್ದನ್ನೆಲ್ಲ ನಂಬಲೇ ಆಗದಂತೆ
ಗಾಢ ನೀರವತೆ

ಧೂಳೀಪಟವಾದ ಅಂಗಡಿ
ಚೀತ್ಕಾರದ ನಂತರ
ತೆರೆದಂತೇ ಇರುವ ಬಾಯಿ
ಮುರಿದ ಕಿಟಕಿ ಸಂದಿನಿಂದ
ಚದುರಿರುವ
ಬಳೆಯ ಚೂರುಗಳನ್ನು
ದುಗುಡ ತುಂಬ ಆಸೆಯಿಂದ ನಿರುಕಿಸುತ್ತಿದೆ

ನಿನ್ನೆಯವರೆಗೆ ಈ ಚೂರುಗಳೇ ಆ ಬೊಚ್ಚು ಬಾಯ
ನೂರು ವರ್ಣದ ಹಲ್ಲುಗಳಾಗಿದ್ದವು
ಗಾಢ ನೀರವತೆ
ಗಾಢ ನೀರವತೆಯು ಹೀಗಂದಿತು
ಕೇಳು ಧೂಳಿಪಟವಾದ ಅಂಗಡಿಯೇ
ಹೊಗೆಯಾಡುತ್ತಿರುವ ಮನೆಯೇ
ಮುರಿದ ಗಾಡಿಯೇ
ನೀವೊಂದೇ ಅಲ್ಲ
ಇಲ್ಲಿ ಇನ್ನೂ ಇವೆ
ಮುರಿದುಹೋದಂತವು
ದುಃಖಿಸೋಣ ಅವುಗಳಿಗೆ

ಆದರೆ ಮೊದಲು ಇವರಿಗಾಗಿ ಅಳೋಣ
ಲೂಟಿ ಮಾಡಲು ಬಂದು
ತಾವೇ ಲೂಟಿಯಾದರಲ್ಲ
ಏನು ಲೂಟಿಯಾಯಿತು
ಎಂಬ ಅರಿವೂ ಇಲ್ಲ
ಅವರಿಗೆ
ಮಂದದೃಷ್ಟಿ
ಶತಶತಮಾನದ ಸಂಸ್ಕೃತಿ
ಆ ಬಡಪಾಯಿಗಳಿಗೆ ಕಾಣಲೇ ಇಲ್ಲ.

ಜಾವೇದ್ ಅವರು ಈ ಪದ್ಯವನ್ನು ಓದಿದ ನಂತರ, ಪ್ರೇಕ್ಷಕರಲ್ಲಿದ್ದ ಓರ್ವ ಮಹಿಳೆ “ಈ ಪದ್ಯವನ್ನು ನೀವು ಗುಜರಾತ್‌ನ ಕೋಮುಗಲಭೆಯ ನಂತರ ಬರದಿರಾ?” ಎಂದು ಕೇಳಿದರು. ವಿಷಾದ ತುಂಬಿದ್ದ ಜಾವೇದ್ ಅಖ್ತರ್‌ರವರ ಉತ್ತರ: “ಇಲ್ಲ, ಈ ಪದ್ಯವನ್ನು ನಾನು ಬರೆದದ್ದು 1992ರಲ್ಲಿ. ಆದರೇನಂತೆ, ನಮ್ಮ ದೇಶದಲ್ಲಿನ ಕೋಮುವಾದಿಗಳು ಈ ಪದ್ಯವನ್ನು ಇವತ್ತಿಗೂ ಪ್ರಸ್ತುತವಾಗಿರಿಸಿದ್ದಾರೆ.”

ನನಗೆ ಮೆಚ್ಚುಗೆಯಾದ ಜಾವೇದ್ ಅಖ್ತರ್‌ರವರ ಇನ್ನೊಂದು ಪದ್ಯ ’ಪಾರ್ಥನೆ’ಯ ಅನುವಾದ ಹೀಗಿದೆ:

ಆನಂತ ಆಕಾಶದ ಆಳ ಸಮುದ್ರಗಳಲ್ಲಿ
ದ್ವೀಪವೊಂದೆಲ್ಲಾದರೂ ಇದೆಯೆಂದಾದರೆ
ಉಸಿರಾಡುತ್ತಿದ್ದಾರೆಂದಾದರೆ ಯಾರಾದರೂ
ಯಾವುದೋ ಎದೆಬಡಿತ ಇದೆಯೆಂದಾದರೆ
ಎಲ್ಲಿ ಬುದ್ಧಿವಂತಿಕೆಯು ಅರಿವಿನ ಬಟ್ಟಲ ತುಟಿಗಿಟ್ಟಿರುವುದೋ
ಅಲ್ಲಿಯ ಮಂದಿ
ಆನಂತ ಆಕಾಶದ ಆಳ ಸಾಗರದಲ್ಲಿ
ಇಳಿಸಲಿದ್ದಾರೆ ತಮ್ಮಯ ನೌಕೆ
ದ್ವೀಪವೊಂದರ ಶೋಧದಲ್ಲಿ
ಯಾರೋ ಉಸಿರಾಡುತ್ತಿರುವಲ್ಲಿ
ಎದೆಬಡಿತವಿರುವಲ್ಲಿ
ನನ್ನ ಪ್ರಾರ್ಥನೆ ಇದು
ಆ ದ್ವೀಪದ ಜನರ ಮೈ ಬಣ್ಣ
ಭಿನ್ನವಿರಲಿ
ಈ ದ್ವೀಪದವರ ಎಲ್ಲಾ ಬಣ್ಣಗಳಿಗಿಂತ
ಮೈಮಾಟವೂ
ಮುಖ ಮೋರೆಯೂ ಭಿನ್ನವಿರಲಿ
ನನ್ನ ಪ್ರಾರ್ಥನೆ
ಇದ್ದರೆ ಅಲ್ಲಿಯೂ ಜಾತಿ
ಈ ದ್ವೀಪಕ್ಕಿಂತ ಭಿನ್ನವಿರಲಿ

ನನ್ನ ಪ್ರಾರ್ಥನೆ ಇದು
ಅನಂತ ಆಕಾಶದ ಆಳ ಸಮುದ್ರವನ್ನು ದಾಟಿ
ಒಂದು ದಿನ
ಆ ಅಪರಿಚಿತ ಕುಲದ
ಅಂತರಿಕ್ಷ ನೌಕೆಯಲ್ಲಿ
ಈ ದ್ವೀಪದವರೆಗೆ ಬಂದು
ಸತ್ಕರಿಸಿ ಅವರನ್ನು ನಾವು
ಬೆರಗಿನಿಂದ ನೋಡುವೆವು
ಅವರು ಬಳಿ ಬಂದು
ನಮಗೆ ಸನ್ನೆಯಲ್ಲಿ ತಿಳಿಸಲಿ
ಅವರಿಗಿಂತ ನಾವು ಎಷ್ಟು ಭಿನ್ನವೆಂದು
ಎಲ್ಲರೂ ನಾವು
ಒಂದೇ ಥರವೆಂದು

ನನ್ನ ಪ್ರಾರ್ಥನೆ
ಈ ದ್ವೀಪದಲ್ಲಿ ವಾಸಿಸುವವರೆಲ್ಲ
ಆ ಅಪರಿಚಿತ ಕುಲದವರು ಹೇಳಿದ್ದನ್ನು ಆಗ ನಂಬಲಿ

ಜಾವೇದ್ ಅಖ್ತರ್‌ರವರ ದುಃಖ ಯಾವುದರ ಬಗ್ಗೆ ಎಂದರೆ: ಇವತ್ತು ಉರ್ದು ಭಾಷೆಗೆ ಧರ್ಮದ ಲೇಪವನ್ನು ಹೆಚ್ಚಿರುವುದು. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ: “ಜಗತ್ತಿನ ಯಾವುದೇ ಭಾಷೆಗೆ ಧರ್ಮದ ನಂಟಿಲ್ಲ. ಆದರೆ, ಈ ಎರಡು ರಾಷ್ಟ್ರ ಎಂಬ ಪೆದ್ದ ಸಿದ್ಧಾಂತದಿಂದಾಗಿ ಉರ್ದು ಎಂದರೆ ಅದು ಮುಸ್ಲಿಂರ ಭಾಷೆ ಎಂದೇ ಪರಿಗಣಿಸಲಟ್ಟಿತು. ಯಾವುದೇ ಪ್ರದೇಶವನ್ನು ನೀವು ಎರಡು ದೇಶಗಳಾಗಿ ವಿಭಜಿಸಬಹುದು. ಆದರೆ ಭಾಷೆಯೊಂದನ್ನು ಹೇಗೆ ವಿಭಜಿಸುತ್ತೀರಿ?

ಒಬ್ಬರಿಗೆ ಕ್ರಿಯಾಪದಗಳನ್ನು, ಮತ್ತೊಬ್ಬರಿಗೆ ನಾಮಪದಗಳನ್ನು ಕೊಡುತ್ತೀರೇನು? ಅದಕ್ಕಿಂತ ಮುಖ್ಯವಾದ ಅಂಶ ಯಾವುದೆಂದರೆ, ಉರ್ದು ನಿಜವಾಗಲೂ ಜಾತ್ಯತೀತ ಭಾಷೆ. ಉರ್ದು ಸಾಹಿತ್ಯದ ಎಲ್ಲ ಮಹಾನ್ ಸಾಹಿತಿಗಳು ನಾಸ್ತಿಕರು ಮತ್ತು ಜಾತ್ಯತೀತವಾಗಿದ್ದವರು. ಕುರಾನ್ ಪ್ರಥಮವಾಗಿ ಉರ್ದುಗೆ ಅನುವಾದವಾಗಿದ್ದು ಕೇವಲ 1791ರಲ್ಲಿ. ಆಗ ಉರ್ದುವನ್ನು ಅಸಂಸ್ಕೃತರ (heathen) ಭಾಷೆ ಎಂದೇ ಮುಲ್ಲಾಗಳು ಅಭಿಪ್ರಾಯಪಟ್ಟಿದ್ದರು. ಕುರಾನ್‌ನನ್ನು ಅಸಂಸ್ಕೃತರ ಭಾಷೆಗೆ ಅನುವಾದಿಸಿದ್ದವನ ಬಗ್ಗೆ ಮುಲ್ಲಾಗಳಿಗೆ ಎಷ್ಟು ಆಕ್ರೋಶವಿತ್ತೆಂದರೆ, ಆತನ ವಿರುದ್ಧ ಫತ್ವಾವನ್ನೇ ಹೊರಡಿಸಿದ್ದರು. ಆದರೂ, ಸ್ವತಂತ್ರ ಭಾರತದಲ್ಲಿ ಉರ್ದು ಭಾಷೆಯನ್ನು ಕೋಮುವಾದಿಗಳ ಬಲಿಪೀಠದ ಮೇಲೆ ತ್ಯಾಗ ಮಾಡಲಾಯಿತು. ಇವತ್ತು ನಿಜವಾಗಲೂ ಹಿಂದೂಸ್ತಾನಿಯಾದವನು ಕೋಮುವಾದಿ ಆಗಿರಲು ಸಾಧ್ಯವಿಲ್ಲ. ಏಕೆಂದರೆ ಈ ಭೂಮಿ ಕೋಮುವಾದಿ ಅಲ್ಲ. ಆದರೂ ಉರ್ದು ಹೆಸರಲ್ಲಿ, ಮುಸ್ಲಿಂ ಧರ್ಮದ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ಗುಜರಾತ್‌ನ ನರೇಂದ್ರ ಮೋದಿ ಸರ್ಕಾರ ದ್ವೇಷ ಸಾಧಿಸುತ್ತಿದೆ. ಆದರೆ ಅವರು ನಿಜವಾಗಲೂ ವಿರೋಧಿಸುವುದು ಕೇವಲ ಅಲ್ಪಸಂಖ್ಯಾತರನ್ನಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು. ಅವರ ಆಕಾಂಕ್ಷೆ ಏನಿದ್ದರೂ ಸರ್ವಾಧಿಕಾರಿ ಸರ್ಕಾರವನ್ನು ಸ್ಥಾಪಿಸುವುದಾಗಿದೆ. ಆದರೆ ಭಾರತೀಯರು ಅದಕ್ಕೆ ಎಂದೂ ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು.

(ಇದು ಗೌರಿಯವ ಕಂಡಹಾಗೆ ಅಂಕಣವೊಂದರ ಮರುಪ್ರಕಟಣೆ)


ಇದನ್ನೂ ಓದಿ: ಗೌರಿ ಕಾರ್ನರ್: ಪಿ. ಸಾಯಿನಾಥ್‌ರೊಂದಿಗೆ ಮಾತುಕತೆ; ಸರ್ಕಾರ ತನ್ನ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...