ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದಾಳಿ ನಡೆಸಿದ್ದಾರೆ. ಅವರು ಬುಲ್ಡೋಜರ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮತ್ತು ಭಿನ್ನಮತೀಯರ ವಿರುದ್ಧ ಬುಲ್ಡೋಜರ್ಗಳ ವಿವಾದಾತ್ಮಕ ಬಳಕೆಯನ್ನು ಟೀಕಿಸಿದ್ದಾರೆ.
ಬಿರ್ಭುಮ್ ಜಿಲ್ಲೆಯ ಸೂರಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, “ನಿನ್ನೆ ಯಾರೋ ಉತ್ತರ ಪ್ರದೇಶದಂತೆಯೇ ಇಲ್ಲಿಯೂ ಬುಲ್ಡೋಜರ್ಗಳನ್ನು ಬಳಸಲಾಗುವುದು ಎಂದು ಹೇಳಿದರು. ಅದರ ಅರ್ಥವೇನು? ನಾನು ಬುಲ್ಡೋಜರ್ ರಾಜಕೀಯವನ್ನು ನಂಬುವುದಿಲ್ಲ. ನಾನು ಪ್ರೀತಿಯ ತತ್ವವನ್ನು ನಂಬುತ್ತೇನೆ” ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ನ “ಗೂಂಡಾಗಿರಿ ಮತ್ತು ಮಾಫಿಯಾ ರಾಜ್” ಎಂದು ಬಣ್ಣಿಸಿರುವುದನ್ನು ಎದುರಿಸಲು ಪಶ್ಚಿಮ ಬಂಗಾಳದಲ್ಲಿ “ಉತ್ತರ ಪ್ರದೇಶ ಮಾದರಿ” ಅಗತ್ಯವಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ ಒಂದು ದಿನದ ನಂತರ ಅವರ ಹೇಳಿಕೆಗಳು ಬಂದಿವೆ.
ಭಾನುವಾರ, ಬಂಕುರಾ ಜಿಲ್ಲೆಯ ಸೋನಮುಖಿಯಲ್ಲಿ ಆದಿತ್ಯನಾಥ್ ಅವರು ಭಾಷಣ ಮಾಡಿದ ಪ್ರಚಾರ ರ್ಯಾಲಿಯಲ್ಲಿ ಬಿಜೆಪಿ ಧ್ವಜಗಳು ಮತ್ತು ಬೆಂಬಲಿಗರನ್ನು ಹೊತ್ತ ಬುಲ್ಡೋಜರ್ ಕಾಣಿಸಿಕೊಂಡಿದ್ದು, ನಡೆಯುತ್ತಿರುವ ಬಂಗಾಳ ಚುನಾವಣೆಯಲ್ಲಿ “ಬುಲ್ಡೋಜರ್ ರಾಜಕೀಯ”ದ ಸುತ್ತಲಿನ ರಾಜಕೀಯ ಚರ್ಚೆಯನ್ನು ತೀವ್ರಗೊಳಿಸಿದೆ.
ಸೋನಮುಖಿ ವಿಧಾನಸಭಾ ಕ್ಷೇತ್ರದ ಪತ್ರಸಾಯರ್ ಜಾನುವಾರು ಮಾರುಕಟ್ಟೆ ಮೈದಾನದ ವೇದಿಕೆಯ ಬಳಿ ಬುಲ್ಡೋಜರ್ ಅನ್ನು ಇರಿಸಲಾಗಿತ್ತು.
“ಬಂಗಾಳದ ಕಲೆ ಮತ್ತು ಸಂಸ್ಕೃತಿಗೆ ಹಾಗೂ ಅದರ ಹೆಣ್ಣುಮಕ್ಕಳು, ಸಹೋದರಿಯರು ಮತ್ತು ರಾಜ್ಯದ ಯುವಕರ ಭವಿಷ್ಯಕ್ಕೆ ಹಾನಿ ಮಾಡಲು ಪ್ರಯತ್ನಿಸುವ ಅಪರಾಧಿಗಳಿಗೆ ಯುಪಿಯ ಬುಲ್ಡೋಜರ್ ಸೂಕ್ತ ಉತ್ತರ ನೀಡುತ್ತದೆ” ಎಂದು ನಂದಕುಮಾರ್ನಲ್ಲಿ ನಡೆದ ರ್ಯಾಲಿಯಲ್ಲಿ ಆದಿತ್ಯನಾಥ್ ಹೇಳಿದ್ದನು.
“ನೆನಪಿಡಿ, ಯುಪಿಯ ಬುಲ್ಡೋಜರ್ ರಸ್ತೆಗಳನ್ನು ನಿರ್ಮಿಸಲು ಮಾತ್ರವಲ್ಲ, ಅದು ಮಾಫಿಯಾದೊಂದಿಗೆ ವ್ಯವಹರಿಸುತ್ತದೆ. ಡಬಲ್-ಎಂಜಿನ್ ಸರ್ಕಾರ ಇರುವ ರಾಜ್ಯದಲ್ಲಿ ಮಾತ್ರ ಬುಲ್ಡೋಜರ್ ಓಡಬಲ್ಲದು” ಎಂದು ಅವರು ಹೇಳಿದರು.
ಆದಿತ್ಯನಾಥ್ ಅವರನ್ನು ಅವರ ಬೆಂಬಲಿಗರು ಮತ್ತು ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳು “ಬುಲ್ಡೋಜರ್ ಬಾಬಾ” ಎಂದು ಕರೆಯುತ್ತಾರೆ.


