‘ನನಗೆ ಮಂತ್ರಿ ಮತ್ತು ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಯಿದ್ದು, ನಾನು ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಪಕ್ಷಕ್ಕೆ 150 ಸೀಟು ಬರುತ್ತದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಬುಧವಾರ ಹೇಳಿದ್ದಾರೆ. ರಾಜ್ಯದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಗೆ ಸೇರ್ಪಡೆ ಮಾಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ ಈ ಹೇಳಿಕೆಯನ್ನು ಅವರು ನೀಡಿದ್ದಾರೆ.
ಯತ್ನಾಲ್ ಅವರು ಯಡಿಯೂರಪ್ಪ ಅವರನ್ನು ನಿರಂತರವಾಗಿ ಟೀಕಿಸುತ್ತಲೆ ಬಂದಿದ್ದಾರೆ. ಇದೀಗ ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನಮಾನ ನೀಡಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಅವರಿಗೆ ಸ್ಥಾನಮಾನ ಸಿಕ್ಕಿರುವುದು ಕೇಳಿ ಸಂತೋಷ ಆಗಿದೆ, ಅಭಿನಂಧನೆಗಳು. ಇದರ ಬಗ್ಗೆ ಯಾವುದೇ ವಿವಾದಾತ್ಮಕ ಹೇಳಿಕೆಗಳು ಇಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಪಕ್ಷದ ಹೈಕಮಾಂಡ್ ಎಲ್ಲವೂ ಗಮನಿಸಿ ಸೂಕ್ತ ಕಾಲಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಬಹುಮತದ ಸರ್ಕಾರ ಬರುವಂತಾಗಲು ಏನು ಮಾಡಬೇಕು ಎಂಬುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂಬ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ.
“ಪಕ್ಷದ ಹೈಕಮಾಂಡ್ ನಿರ್ಣಯ ತೆಗೆದುಕೊಂಡಿದ್ದರೆ ಅದಕ್ಕೆ ನಾನು ತಲೆಬಾಗುತ್ತೇನೆ. ಹೈಕಮಾಂಡ್ ಬಹಳ ಮುಂದಾಲೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿರುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಉಡುಪಿ: ‘ಹಿಂದೂರಾಷ್ಟ್ರ’ ಎಂದಿರುವ ಪ್ಲೆಕ್ಸ್ಗೆ ಪೊಲೀಸ್ ಭದ್ರತೆ; ಸಾವರ್ಕರ್ ಫೋಟೋ ವೈಭವೀಕರಣ!
“ಪ್ರಧಾನಿ 75ನೇ ಸ್ವಾತಂತ್ಯ್ರೋತ್ಸವ ಆಚರಿಸುವ ವೇಳೆ ಮಾತನಾಡುತ್ತಾ, ‘ಭವಿಷ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ನಾನು ಅಂತ್ಯ ಹಾಡುತ್ತೇನೆ’ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅಂತಹ ಕಾಲ ಅಮೃತ ಮಹೋತ್ಸವದಿಂದ ಪ್ರಾರಂಭವಾಗುತ್ತದೆ. ನನಗೆ, ನನ್ನ ಮಕ್ಕಳಿಗೆ ಎಂಪಿ ಬೇಕು, ಎಮ್ಎಲ್ಎ ಬೇಕು, ಎಮ್ಎಲ್ಸಿ ಬೇಕು ಎನ್ನುವುದೆಲ್ಲಾ ಇನ್ನು ಮುಂದೆ ದೇಶದಲ್ಲಿ ನಡೆಯುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಬಿಜೆಪಿ ಚುನಾವಣೆ ಸಮಿತಿಯಲ್ಲಿ ಯಡಿಯೂರಪ್ಪ ಅವರು ಇದ್ದು, ಟಿಕೆಟ್ ಹಂಚಿಕೆಯಲ್ಲಿ ಅವರ ಅಭಿಪ್ರಾಯ ಕೂಡಾ ತೆಗೆದುಕೊಳ್ಳುತ್ತಾರೆ ಅಲ್ಲವೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಅವರು ಇದ್ದರೆ ಏನಾಯ್ತು? ಒಮ್ಮೊಮ್ಮೆ ಈ ಸಮಿತಿಯಲ್ಲಿ ಇರುವವರಿಗೂ ಟಿಕೆಟ್ ಸಿಗುವುದಿಲ್ಲ. ಅದಕ್ಕೆ ಏನು ಹೇಳುತ್ತೀರಿ? ಇದಕ್ಕೆ ಹಲವು ಉದಾಹರಣೆ ಇವೆ. ನಾನೂ ಕೂಡಾ ಕರ್ನಾಟಕದ ಚುನಾವಣಾ ಸಮಿತಿಯಲ್ಲಿ ಇದ್ದೆ, ನನಗೆ ಕೂಡಾ ಲೋಕಸಭಾ ಟಿಕೆಟ್ ಪಡೆಯಲು ಆಗಲಿಲ್ಲ” ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಲ್,“ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂತ ಸೇವಾಲಾಲ್ರ ಜನ್ಮಸ್ಥಳದಲ್ಲಿ ಆರ್ಎಸ್ಎಸ್ ಶಿಬಿರ ಆಯೋಜನೆ: ಬಂಜಾರ ಮುಖಂಡರ ಆಕ್ರೋಶ
“ಯಡಿಯೂಪ್ಪ ಅವರು ಜಡ್ಜ್ ಸೀಟಲ್ಲಿ ಕುಳಿತಿರುವುದರಿಂದ, ಕರ್ನಾಟಕದಲ್ಲಿ ಹೆಚ್ಚಿನ ಸೀಟು ಪಡೆಯಬೇಕೆಂದರೆ ನನಗೆ ಸೇರಿದಂತೆ ಎಲ್ಲರಿಗೂ ಟಿಕೆಟ್ ಕೊಡುವ ಅನಿವಾರ್ಯತೆ ಬರುತ್ತದೆ. ನನಗೆ ಟಿಕೆಟ್ ಸಿಗುವುದಿಲ್ಲ ಎಂದು ನೀವು ಭಾವಿಸಿದ್ದೀರಾ? ಆದರೆ, ಹಾಗೇನೂ ಆಗುವುದಿಲ್ಲ. ನನಗೆ ಟಿಕೆಟ್ ಸಿಕ್ಕಿ, ಮುಂದಿನ ಬಾರಿಯೂ ಶಾಸಕ ಆಗುತ್ತೇನೆ. ನನಗೆ ಸಚಿವನಾಗುವ ಎಲ್ಲಾ ಅರ್ಹತೆ ಇದೆ. ನಾನು ಸಿಎಂ ಅಭ್ಯರ್ಥಿಯಾದರೆ ಪಕ್ಷವೂ 150 ಸೀಟುಗಳನ್ನು ಪಡೆಯುತ್ತದೆ” ಎಂದು ಅವರು ಹೇಳಿದ್ದಾರೆ.
ತಿರುಕನ ಕನಸ್ಸು ಕಾಣುತ್ತಿದ್ದಾನೆ ಈ ಅಯ್ಯೋಗ್ಯ.