ಮಾಜಿ ಸಚಿವ ಕಪಿಲ್ ಸಿಬಲ್ ತಾವು ಕಾಂಗ್ರೆಸ್ ತೊರೆದಿರುವುದಾಗಿ ಇಂದು ಘೋಷಿಸಿದ್ದಾರೆ. ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಇಂದು ರಾಜ್ಯಸಭಾ ಸದಸ್ಯತ್ವಕ್ಕೆ ನಾಮಪತ್ರ ಸಲ್ಲಿಸಿದ ನಂತರ ಈ ವಿಷಯ ಬಹಿರಂಗಪಡಿಸಿದ್ದಾರೆ.
“ನಾನು ಇನ್ನು ಮುಂದೆ ಕಾಂಗ್ರೆಸ್ ನಾಯಕನಲ್ಲ. ಮೇ 16 ರಂದೇ ಕಾಂಗ್ರೆಸ್ ತ್ಯಜಿಸಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದೇನೆ. ಸ್ವತಂತ್ರ ದನಿಗಳು ಮಾತನಾಡಿದರೆ ಜನರು ಅದನ್ನು ನಂಬುತ್ತಾರೆ ಎಂದು ಭಾವಿಸಿದ್ದೇನೆ” ಎಂದು ಸಿಬಲ್ ಹೇಳಿದ್ದಾರೆ.
ಕಪಿಲ್ ಸಿಬಲ್ ರವರು ಜಿ-23 ಎಂದು ಕರೆಯಲ್ಪಡುವ ಕಾಂಗ್ರೆಸ್ನಲ್ಲಿನ ಭಿನ್ನಮತಿಯರ ಗುಂಪಿನಲ್ಲಿದ್ದರು. ಅವರು ಪಕ್ಷದ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಒಂದು ವರ್ಷದ ಹಿಂದೆಯೇ ಪತ್ರ ಬರೆದಿದ್ದರು. ಪಕ್ಷದ ಕುರಿತು ಕಪಿಲ್ ಸಿಬಲ್ ಇತ್ತೀಚಿನ ದಿನಗಳಲ್ಲಿ ತೀವ್ರ ಟೀಕೆ ಮಾಡುತ್ತಿದ್ದರು.
ಕಪಿಲ್ ಸಿಬಲ್ರವರು ಇತ್ತೀಚೆಗೆ ಸಮಾಜವಾದಿ ಪಕ್ಷದ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ಪಕ್ಷದ ಶಾಸಕ ಅಜಂ ಖಾನ್ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದ್ದರು. ಆ ನಂತರ ಅಜಂ ಖಾನ್ ಮಧ್ಯಂತರ ಜಾಮೀನು ಪಡದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಸಮಾಜವಾದಿ ಪಕ್ಷವು ಕಪಿಲ್ ಸಿಬಲ್ರವರನ್ನು ಬೆಂಬಲಿಸಿಲು ತೀರ್ಮಾನಿಸಿದೆ.
ನಾವು ಮೊದಲ ಆಯ್ಕೆಯಾಗಿ ಕಪಿಲ್ ಸಿಬಲ್ ರವರನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ಇನ್ನು ಇಬ್ಬರೂ ಅಭ್ಯರ್ಥಿಗಳನ್ನು ನಂತರ ಕಣಕ್ಕಿಳಿಸುತ್ತೇವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಹಲವು ರಾಜ್ಯಸಭಾ ಸದಸ್ಯತ್ವಗಳಿಗೆ ಚುನಾವಣೆಯು ಮುಂದಿನ ತಿಂಗಳು ನಡೆಯಲಿದೆ.