ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೇಲಿಂದ ಮೇಲೆ ವಿವಾದಕ್ಕೀಡಾಗುವ ಹೇಳಿಕೆ ನೀಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ‘‘ರಾಜ್ಯದಲ್ಲಿ ಬಿಜೆಪಿ ಸೋತರೆ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳು ಬಂದ್ ಆಗಲಿವೆ” ಎಂದು ಹೇಳಿದ್ದಾರೆ.
ಹರಪ್ಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಜಿ. ಕರುಣಾಕರ ರೆಡ್ಡಿ ಪರ ರೋಡ್ ಶೋ ನಡೆಸಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ನಡ್ಡಾ, ”ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ಬೆಂಬಲಿಸಿ, ಸಿದ್ದರಾಮಯ್ಯ ಸರ್ಕಾರ ಬಂದರೆ ‘ಕಿಸಾನ್ ಸಮ್ಮಾನ್ ಯೋಜನೆ’ ಸೇರಿ ಹಲವು ಯೋಜನೆಗಳು ಬಂದ್ ಆಗಲಿವೆ” ಎಂದು ಹೇಳಿದ್ದಾರೆ.
”ಕೊಳವೆಬಾವಿ, ಅರ್ಕಾವತಿ ಡಿನೋಟಿಫಿಕೇಷನ್, ಪಿಎಫ್ಐ, ಮಲಪ್ರಭಾ ನಾಲಾ ಯೋಜನೆ, ಸ್ಟೀಲ್ ಫ್ಲೆ ಓವರ್ ಕಾಮಗಾರಿ ಹಗರಣಗಳು ಸಿದ್ದರಾಮಯ್ಯ ಅವರ ಅವಧಿಯಲ್ಲಿಯೇ ಆಗಿವೆ. ಅವರೀಗ ಬಿಜೆಪಿ ವಿರುದ್ಧ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ” ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
”ಬಿಜೆಪಿ ಸರ್ಕಾರ ದಲಿತರಿಗೆ ಒಳಮೀಸಲಾತಿ ಕೊಟ್ಟಿದೆ. ಪರಿಶಿಷ್ಟ ಪಂಗಡ, ಲಿಂಗಾಯತರು, ಒಕ್ಕಲಿಗರ ಮೀಸಲಾತಿ ಹೆಚ್ಚಳ ಮಾಡಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಗ ಹೆಚ್ಚಿಸಿರುವ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಇಂತಹವರಿಗೆ ಈ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕು” ಎಂದರು.
ಇದನ್ನೂ ಓದಿ: ಬಸವಣ್ಣನ ಆಶೀರ್ವಾದವಿರುವಾಗ ಕನ್ನಡಿಗರಿಗೆ ಮೋದಿ ಆಶೀರ್ವಾದ ಬೇಕಿಲ್ಲ: ನಡ್ಡಾ ಹೇಳಿಕೆಗೆ ಗುಡುಗಿದ ಪ್ರಿಯಾಂಕಾ ಗಾಂಧಿ
”ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಡಿ.ಕೆ.ಶಿವಕುಮಾರ ಅವರು ಭ್ರಷ್ಟಾಚಾರ ಮಾಡಿ ಬೇಲ್ ಮೇಲೆ ಹೊರಗಡೆ ಇದ್ದಾರೆ. ಅವರ ಮೇಲಿನ ಆರೋಪಗಳು ಸಾಬೀತಾದರೆ ಜೈಲಿಗೆ ಹೋಗುವುದು ಗ್ಯಾರಂಟಿ. ಕಾಂಗ್ರೆಸ್ ನವರು ತಾವು ಭ್ರಷ್ಟಾಚಾರ ಮಾಡಿ, ಮತ್ತೊಬ್ಬರ ಮೇಲೆ ಆರೋಪ ಮಾಡುವುದನ್ನು ಕೈಬಿಡಲಿ” ಎಂದು ಹೇಳಿದರು.
ಇತ್ತಿಚೆಗೆ ನಡ್ಡಾ ಅವರು, ”ರಾಜ್ಯದ ಜನತೆ ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು. ಹಾಗಾಗಿ ವಿಕಾಸಕ್ಕಾಗಿ ಬಿಜೆಪಿಗೆ ಮತ ಹಾಕಿ” ಎಂದು ಹೇಳಿಕೆ ನೀಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದರು. ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
”ಮೋದಿಯ ಆಶೀರ್ವಾದ ಬೇಕೆಂದರೆ ಬಿಜೆಪಿಗೆ ಮತ ಹಾಕಿ” ಇದು ಜೆ.ಪಿ ನಡ್ಡಾ ಅವರು ಕನ್ನಡಿಗರಿಗೆ ಹಾಕುತ್ತಿರುವ ಬೆದರಿಕೆ. ಬಿಜೆಪಿ ಸರ್ವಾಧಿಕಾರವನ್ನು ಜಾರಿಗೊಳಿಸುತ್ತಿರುವುದಕ್ಕೆ ಈ ಮಾತುಗಳೇ ನಿದರ್ಶನ. ಆಶೀರ್ವಾದ ಮಾಡಬೇಕಿರುವುದು ಜನರೇ ಹೊರತು, ಮೋದಿಯಲ್ಲ. ಒಕ್ಕೂಟ ವ್ಯವಸ್ಥೆ & ಪ್ರಜಾಪ್ರಭುತ್ವದ ಮೇಲೆ ಬಿಜೆಪಿಗೆ ಕಿಂಚಿತ್ ಗೌರವವಿಲ್ಲ ಎಂದು ಕಾಂಗ್ರೆಸ್ ಟೀಕಿಸಿತ್ತು.
ಜೆ.ಪಿ ನಡ್ಡಾ ಅವರ ಮೋದಿ ಆಶೀರ್ವಾದದ ಹೇಳಿಕೆಗೆ ತಿರುಗೇಟು ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ”ಬಸವಣ್ಣನ ಆಶೀರ್ವಾದವಿರುವಾಗ ಕನ್ನಡಿಗರಿಗೆ ಮೋದಿ ಆಶೀರ್ವಾದ ಬೇಕಿಲ್ಲ” ಎಂದು ಗುಡುಗಿದ್ದಾರೆ.