ಜಾತಿ ಆಧಾರಿತ ಹತ್ಯೆ ತಡೆಯಲು ಪ್ರತ್ಯೇಕ ಕಾಯಿದೆ ಜಾರಿಗೆ ಚೆನ್ನೈನಲ್ಲಿ ನಡೆದ ಸಮಾವೇಶವೊಂದರಲ್ಲಿ ದಲಿತ ವಿದ್ವಾಂಸರು ಒತ್ತಾಯಿಸಿದ್ದಾರೆ.
ಮಾನವ ಹಕ್ಕುಗಳ ಸಂಘಟನೆ ಪೀಪಲ್ಸ್ ವಾಚ್ನ ಆಶೀರ್ವತಮ್ ಸಮಾವೇಶದಲ್ಲಿ ಮಾತನಾಡಿದ್ದು, ಗರ್ಭಿಣಿ ದಲಿತ ಯುವತಿಯನ್ನು ಸವರ್ಣಿಯ ಜಾತಿಯ ಪುರುಷರ ಗುಂಪು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ದರು. ನಾವು ಮಾನವ ಹಕ್ಕುಗಳ ರಕ್ಷಕರಾಗಿ ಸಂತ್ರಸ್ತೆಯ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ಪೊಲೀಸ್ ಅಧಿಕಾರಿಗಳು ನಮ್ಮನ್ನು ತಡೆದಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ.
ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ನಲ್ಲಿ ‘ಕಾನೂನು ಅಡೆತಡೆಗಳು ಮತ್ತು ಮಧ್ಯಸ್ಥಿಕೆಗಳಲ್ಲಿನ ಸವಾಲುಗಳು’ ಕುರಿತು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಆಶೀರ್ವತಮ್, ಗರ್ಭಿಣಿ ದಲಿತ ಸಂತ್ರಸ್ತೆ ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ. ಸಂತ್ರಸ್ತೆ ಅನುಭವಿಸಿದ ಅಗ್ನಿಪರೀಕ್ಷೆಯನ್ನು ವಿವರಿಸಿದಾಗ ಸಭಾಂಗಣವೆಲ್ಲ ಮೌನವಾಗಿತ್ತು.
ಸಮಾವೇಶದಲ್ಲಿ ಜಾತಿ ಹತ್ಯೆ ಮತ್ತು ಯಾವ ರೀತಿ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಚರ್ಚಿಸಲಾಗಿದೆ. ಭಾಗವಹಿಸಿದವರೆಲ್ಲರೂ ತಮಿಳುನಾಡಿನಲ್ಲಿ ಜಾತಿ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾಯಿದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.
2016ರಲ್ಲಿ ಅರಿಯಲೂರಿನಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಯನ್ನು ಜಾತಿ ಹತ್ಯೆ ಮಾಡಿದ ಘಟನೆಯನ್ನು ಆಶೀರ್ವತಂ ಉಲ್ಲೇಖಿಸಿದ್ದಾರೆ. ಸಂತ್ರಸ್ತೆ ತಂದೆ ನಾಪತ್ತೆ ದೂರನ್ನು ದಾಖಲಿಸಲು ಪ್ರಯತ್ನಿಸಿದಾಗ ಕ್ರಮ ಕೈಗೊಳ್ಳಲು ವಿಫಲರಾದ ಅಧಿಕಾರಿಗಳು, ಪೋಷಕರಿಗೆ ತಮ್ಮ ಮಗಳನ್ನು ಸರಿಯಾಗಿ ಬೆಳೆಸುತ್ತಿಲ್ಲ ಎಂದು ನಿಂದಿಸಿದ್ದಾರೆ.
ಪೊಲೀಸರ ದುರ್ವರ್ತನೆಯಿಂದ ನಾವು ಹೋರಾಡಬೇಕಾಯಿತು, ಜಾತಿ ಹತ್ಯೆಗೆ ಪ್ರತ್ಯೇಕ ಕಾಯಿದೆ ಇಲ್ಲ, ಆದ್ದರಿಂದ ಪ್ರತಿ ಪ್ರಕರಣವನ್ನು CrPC 174 ಅಡಿಯಲ್ಲಿ ದಾಖಲಿಸಲಾಗುತ್ತದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ FIR ಮಾಡಿಸಲು ನಾವೆಲ್ಲರೂ ಸತತ ಪ್ರಯತ್ನವನ್ನು ಮಾಡಬೇಕಾಯ್ತು ಎಂದು ಹೇಳಿದ್ದಾರೆ.
ಜಾತಿ ವಿರೋಧಿ ಹೋರಾಟಗಾರ್ತಿ ಕೌಸಲ್ಯ ಅವರು 2016ರ ಕುಖ್ಯಾತ ಉಡುಮಲೈಪೆಟ್ಟೈ ಜಾತಿ ಹತ್ಯೆಯ ಘಟನೆಯನ್ನು ಉಲ್ಲೇಖಿಸಿ ತನ್ನ ತಂದೆ ಮತ್ತು ಇತರ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಯಾವ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ನಾನು ಪ್ರಬಲ ಜಾತಿಗೆ ಸೇರಿದವಳಾಗಿರುವುದರಿಂದ, ಈ ಪ್ರಕರಣವನ್ನು ಸೇಡಿನ ಹತ್ಯೆ ಎಂದು ಅರ್ಥೈಸಲಾಗುತ್ತದೆ ಆದರೆ ಜಾತಿ ಹತ್ಯೆಯಾಗಿಲ್ಲ ಎಂದು ಕೌಸಲ್ಯ ಹೇಳಿದರು ಮತ್ತು ಜಾತಿವಾದಿ ಮತಾಂಧರಿಂದ ನವಜೋಡಿಗಳನ್ನು ರಕ್ಷಿಸಲು ಪ್ರತ್ಯೇಕ ಕಾನೂನುಗಳ ಅಗತ್ಯವನ್ನು ಪುನರುಚ್ಚರಿಸಿದರು. 2016ರಲ್ಲಿ ಕೌಸಲ್ಯರ ಪತಿ ಶಂಕರ್ ಅವರನ್ನು ಕುಟುಂಬಸ್ಥರು ಬರ್ಬರವಾಗಿ ಹತ್ಯೆಗೈದಿದ್ದರು.
ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಹೇಗೆ ವಿಭಿನ್ನ ನಿಲುವುಗಳನ್ನು ತೆಗೆದುಕೊಂಡಿದೆ ಎಂಬುವುದನ್ನು ಕೌಶಲ್ಯ ಉಲ್ಲೇಖಿಸಿದ್ದು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರು ಶಂಕರ್ ಹತ್ಯೆಯನ್ನು ಜಾತಿ ಹತ್ಯೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದರು. ಅಂದಿನ ವಿರೋಧ ಪಕ್ಷವಾದ ಡಿಎಂಕೆ ಪ್ರಕರಣದುದ್ದಕ್ಕೂ ನನಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅದು ಅಧಿಕಾರಕ್ಕೆ ಬಂದ ನಂತರ, ಜಾತಿ ಹತ್ಯೆಗಳ ವಿರುದ್ಧದ ಪ್ರತ್ಯೇಕ ಕಾಯ್ದೆಯ ಬಗ್ಗೆ ಮೌನವಾಗಿದೆ ಎಂದು ಕೌಸಲ್ಯ ಹೇಳಿದರು, 2024 ರ ಸಾರ್ವತ್ರಿಕ ಚುನಾವಣೆಯ ಪ್ರಣಾಳಿಕೆಯಲ್ಲಿಯೂ ಸಹ ಡಿಎಂಕೆ ಈ ಕಾಯ್ದೆಯನ್ನು ನಮೂದಿಸಲು ವಿಫಲವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಲೋಕಸಭೆ ಚನಾವಣೆ: ಪ್ರತಿಪಕ್ಷಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ತಡೆಯಲು ಬಿಜೆಪಿಯಿಂದ ಪ್ರಯತ್ನ?