ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ, ಸರ್ಕಾರ ವಾಟ್ಸಾಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮೆಸೇಜ್, ಪೋಸ್ಟ್ಗಳ ಮೇಲೆ ಕಣ್ಣಿಟ್ಟಿದೆ ಎಂಬ ಸಂದೇಶವೊಂದು ಹರಿದಾಡುತ್ತಿದೆ.
ಯಾರಾದರು ಸರ್ಕಾರ, ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳ ವಿರುದ್ದ ಸಂದೇಶಗಳನ್ನು ಹಂಚಿಕೊಂಡರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತೆ ಎಂದು ವೈರಲ್ ಸಂದೇಶದಲ್ಲಿ ಹೇಳಲಾಗಿದೆ.
ಫ್ಯಾಕ್ಟ್ಚೆಕ್: ವೈರಲ್ ಸಂದೇಶದ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ. ಇದಕ್ಕಾಗಿ ನಾವು ಚುನಾವಣಾ ನೀತಿ ಸಂಹಿತೆಯ ಮಾರ್ಗಸೂಚಿಗಳನ್ನು ಪರಿಶೀಲನೆ ಮಾಡಿದ್ದೇವೆ.
ಭಾರತೀಯ ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿಗಳ ಪಟ್ಟಿಯಲ್ಲಿ ಸಾಮಾನ್ಯ ಜನರ ಸಾಮಾಜಿಕ ಜಾಲತಾಣಗಳ ಮೆಸೇಜ್ಗೆ ಸಂಬಂಧಪಟ್ಟಂತೆ ಯಾವುದೇ ವಿಷಯವನ್ನು ಉಲ್ಲೇಖಿಸಿಲ್ಲ.
ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿಗಳು-ಇಲ್ಲಿ ಕ್ಲಿಕ್ ಮಾಡಿ
ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿಗಳ ಶೀರ್ಷಿಕೆಯಲ್ಲೇ ಇದು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಎಂದು ಹೇಳಲಾಗಿದೆ.
ಸಭೆ, ಮೆರವಣಿಗೆ, ಮತದಾನದ ದಿನಾಂಕ, ಮತಗಟ್ಟೆ, ಆಡಳಿತ ಪಕ್ಷ, ಚುನಾವಣಾ ಪ್ರಣಾಳಿಕೆಗೆ ಸಂಬಂಧಟ್ಟಂತೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ನಿಯಮಗಳು ಮಾರ್ಗಸೂಚಿಯಲ್ಲಿ ಒಳಗೊಂಡಿದೆ.
ಮಾರ್ಚ್ 16, 2024ರಂದು ‘ದಿ ಹಿಂದೂ’ ಪತ್ರಿಕೆ ವೆಬ್ಸೈಟ್ನಲ್ಲಿ ಪ್ರಕಟಿಸಿದ ವಿಶೇಷ ವರದಿಯಲ್ಲಿ ಚುನಾವಣಾ ನೀತಿ ಸಂಹಿತೆ ಶಾಸನಬದ್ಧ ದಾಖಲೆಯಲ್ಲ. ಅದು ಸಂಸತ್ತಿನಲ್ಲಿ ಅಂಗೀಕರಿಸಿದ ಕಾನೂನು ಅಲ್ಲ ಎಂದಿದೆ.
ಆದರೆ, ನೀತಿ ಸಂಹಿತೆ ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆಯ (ಪ್ರಸ್ತುತ, ಭಾರತೀಯ ನ್ಯಾಯ ಸಂಹಿತೆ) ಪ್ರಕಾರ ಕ್ರಮವಾಗಲಿದೆ.
ಮಾರ್ಚ್ 16ರಂದು ಚುನಾವಣಾ ದಿನಾಂಕ ಘೋಷಣೆ ಮಾಡುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣೆಯ ಸಂದರ್ಭ ತಪ್ಪು ಮಾಹಿತಿ ಹರಡುವುದನ್ನು ತಡೆಯಲು “ಮಿಥ್ ವರ್ಸಸ್ ರಿಯಾಲಿಟಿ” ಯೋಜನೆ ಪ್ರಾರಂಭಿಸುತ್ತೇವೆ ಎಂದಿದ್ದಾರೆ.
ಐಟಿ ಕಾಯ್ದೆಯ ಸೆಕ್ಷನ್ 69 ಮತ್ತು 79(3) ಅಡಿಯಲ್ಲಿ ಸುಳ್ಳು ಮಾಹಿತಿಯಿಂದ ಕೂಡಿದ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ತೆಗೆದು ಹಾಕಲು ವಿನಂತಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.
ನಮ್ಮ ಪರಿಶೀಲನೆಯಲ್ಲಿ ಚುನಾವಣೆ ಹಿನ್ನೆಲೆ ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರ ಕಣ್ಣಿಟ್ಟಿದೆ ಎಂಬ ವೈರಲ್ ಪೋಸ್ಟ್ ಸುಳ್ಳು ಎಂಬುವುದು ಖಚಿತವಾಗಿದೆ.
ಇದನ್ನೂ ಓದಿ : Fact Check: ತೆಲಂಗಾಣದಲ್ಲಿ ಐಸ್ಕ್ರೀಂಗೆ ವೀರ್ಯ ಬೆರೆಸಿದ್ದಾನೆ ಎನ್ನಲಾದ ಆರೋಪಿ ಮುಸ್ಲಿಂ ಅಲ್ಲ