ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ವಜಾಗೊಳಿಸಿದೆ.
210 ಕೋಟಿ ತೆರಿಗೆ ಬೇಡಿಕೆಯ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಬ್ಯಾಂಕ್ ಖಾತೆಗಳ ಮೇಲಿನ ನಿರ್ಬಂಧಗಳ ವಿರುದ್ಧ ತಡೆ ಕೋರಿ ಕಾಂಗ್ರೆಸ್’ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ’ (ಐಟಿಎಟಿ) ಸಲ್ಲಿಸಿದ ಮನವಿ ತಿರಸ್ಕಾರಗೊಂಡಿದೆ.
2018-19ನೇ ಸಾಲಿನಲ್ಲಿ 210 ಕೋಟಿ ರೂ.ಆದಾಯ ತೆರಿಗೆ ಬಾಕಿ ಹಾಗೂ ದಂಡವನ್ನು ಪಾವತಿಸಿಲ್ಲ ಎಂದು ಕಾಂಗ್ರೆಸ್ ಪಕ್ಷದ ಕೆಲವು ಬ್ಯಾಂಕ್ ಖಾತೆಗಳಲ್ಲಿದ್ದ 115 ಕೋಟಿ ರೂ.ಗಳನ್ನು ಆದಾಯ ತೆರಿಗೆ ಇಲಾಖೆಯು ಕಳೆದ ವಾರ ಮುಟ್ಟುಗೋಲು ಹಾಕಿತ್ತು. ಕಾಂಗ್ರೆಸ್ ಪರ ಹಾಜರಾದ ಹಿರಿಯ ವಕೀಲ ವಿವೇಕ್ ಟಂಖಾ, ಆದೇಶವನ್ನು 10 ದಿನಗಳವರೆಗೆ ತಡೆಹಿಡಿಯಲು ವಿನಂತಿಸಿದ್ದಾರೆ.
ತೆರಿಗೆ ಬೇಡಿಕೆ ವಿವಾದಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಫೆಬ್ರವರಿ 16 ರಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ತನ್ನ ಕ್ರಮದ ಬಗ್ಗೆ ಐಟಿ ಇಲಾಖೆ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, ವರ್ಷಗಳಿಂದ ಆದಾಯ ತೆರಿಗೆ ಬಾಕಿ ಪಾವತಿಸದವರ ವಿರುದ್ಧದ ಸಾಮಾನ್ಯ ಪ್ರಕ್ರಿಯೆಯಾಗಿದೆ ಮತ್ತು ಐಟಿ ಇಲಾಖೆಯು ಇಂತಹ ಪ್ರಕರಣಗಳಲ್ಲಿ ಏನು ಮಾಡಲಿದೆಯೋ ಅದನ್ನು ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿದೆ.
ಈ ಹಿಂದೆ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಮಾತನಾಡಿ, ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣದಲ್ಲಿ ಅರ್ಜಿಯ ವಿಚಾರಣೆ ಬಾಕಿಯಿರುವಾಗಲೇ ಆದಾಯ ತೆರಿಗೆ ಇಲಾಖೆಯ ಕಾಂಗ್ರೆಸ್ ಪಕ್ಷದ ಮೂರು ಖಾತೆಗಳಿಂದ 65 ಕೋಟಿ ರೂ.ಗಳನ್ನು ವಿತ್ ಡ್ರಾ ಮಾಡಿದೆ ಎಂದು ಹೇಳಿಕೊಂಡಿದ್ದರು. ಬಿಜೆಪಿ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್, ಆದಾಯ ತೆರಿಗೆ ಇಲಾಖೆಯ ನಡೆಯು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ ಎಂದು ಆಪಾದಿಸಿದ್ದರು.
ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷವು 210 ಕೋಟಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ನಮ್ಮ ಖಾತೆಗಳಲ್ಲಿನ ಕ್ರೌಡ್ಫಂಡಿಂಗ್ ಹಣವನ್ನು ಸ್ಥಗಿತಗೊಳಿಸಲಾಗಿದೆ. ಚುನಾವಣೆಗೆ ಕೇವಲ 2 ವಾರಗಳ ಮೊದಲು ಪ್ರತಿಪಕ್ಷಗಳ ಖಾತೆಗಳನ್ನು ಸ್ಥಗಿತಗೊಳಿಸಿದರೆ ಅದು ಪ್ರಜಾಪ್ರಭುತ್ವವನ್ನು ಸ್ಥಗಿತಗೊಳಿಸಿದಂತೆ ಎಂದು ಮಾಕನ್ ಹೇಳಿದ್ದರು. ಸದ್ಯ ನಮ್ಮ ಬಳಿ ಖರ್ಚು ಮಾಡಲು, ವಿದ್ಯುತ್ ಬಿಲ್ ಪಾವತಿಸಲು, ನಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಯಾವುದೇ ಹಣವಿಲ್ಲ. ಭಾರತ್ ಜೋಡೋ ನ್ಯಾಯ ಯಾತ್ರೆ ಸೇರಿದಂತೆ ಎಲ್ಲಾ ರಾಜಕೀಯ ಚಟುವಟಿಕೆಗಳ ಮೇಲೆ ಇದು ಪರಿಣಾಮ ಬೀರಿದೆ. ಬ್ಯಾಂಕ್ ಖಾತೆಗಳ ಮುಟ್ಟುಗೋಲು ನಿನ್ನೆಯಷ್ಟೇ ತಿಳಿದು ಬಂತು. ಒಟ್ಟು ನಾಲ್ಕು ಖಾತೆಗಳು ಬಾಧಿತವಾಗಿವೆ ಎಂದು ಪಕ್ಷದ ವಕೀಲರಾದ ವಿವೇಕ್ ಹೇಳಿದ್ದರು.
ಇದನ್ನು ಓದಿ: ಗಾಂಧಿನಾ..ಗೋಡ್ಸೆನಾ? ಉತ್ತರಿಸಲು ಸಮಯ ಬೇಕು ಎಂದ ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ನ್ಯಾಯಾಧೀಶ!