ಕೆನಡಿಯನ್ನರ ಮೇಲಿನ ಕೆಲವು ವೀಸಾ ನಿರ್ಬಂಧಗಳನ್ನು ಭಾರತವು ಇತ್ತೀಚೆಗೆ ಸಡಿಲಗೊಳಿಸಿದೆ. ಈ ನಿರ್ಧಾರ ಅಚ್ಚರಿಯ ಬೆಳವಣಿಗೆಯಾಗಿದ್ದರೂ ಭಾರತ ಮತ್ತು ಕೆನಡಾ ನಡುವಿನ ಹಳಸಿದ ರಾಜತಾಂತ್ರಿಕ ಸಂಬಂಧಗಳನ್ನು ಸರಿಪಡಿಸುವುದು ದೀರ್ಘ ಪ್ರಕ್ರಿಯೆಯಾಗಬಹುದು ಎಂದು ಅಧಿಕಾರಿಗಳು ಮತ್ತು ತಜ್ಞರು ಹೇಳುತ್ತಾರೆ.
ಸಿಖ್ ಪ್ರತ್ಯೇಕವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಹಿಂದೆ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ತದನಂತರ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಾಂಧವ್ಯವು ಹದಗೆಟ್ಟಿತ್ತು.
ಕೆನಡಾ ಪ್ರಧಾನಿಯವರ ಆರೋಪದ ಬೆನ್ನಲ್ಲೇ ಟ್ರುಡೊ ಅವರ ಆರೋಪಗಳನ್ನು ಭಾರತವು ಅಸಂಬದ್ಧ ಮತ್ತು ಪ್ರಚೋದಿತ ಎಂದು ತಿರಸ್ಕರಿಸಿತ್ತು. ಈ ಮಧ್ಯೆ ಭಾರತದ ಅಧಿಕಾರಿಯನ್ನು ಕೆನಡಾ ಉಚ್ಚಾಟಿಸಿತ್ತು. ಇದರ ಬೆನ್ನಲ್ಲೇ ಭಾರತ ಕೂಡ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿದೆ. ಅಲ್ಲದೆ ದೇಶದಲ್ಲಿರುವ ತನ್ನ ರಾಜತಾಂತ್ರಿಕ ಸಿಬ್ಬಂದಿಯ ಗಾತ್ರವನ್ನು ಕಡಿತಗೊಳಿಸಲು ಸೂಚಿಸಿತ್ತು. ಅದರನುಸಾರ ಕೆನಡಾ ಈಗಾಗಲೇ 41 ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸು ಕರೆಸಿಕೊಂಡಿದೆ.
ಈ ಎಲ್ಲಾ ಬೆಳವಣಿಗೆಗೆಳ ತಿಂಗಳುಗಳ ಬಳಿಕ ವೀಸಾ ಸೇವೆಗಳನ್ನು ಭಾಗಶಃ ಮರುಸ್ಥಾಪಿಸಲು ಭಾರತವು ಇತ್ತೀಚೆಗೆ ನಿರ್ಧರಿಸಿದೆ. ವೀಸಾಗಳ ಮೇಲಿನ ಭಾರತದ ಸಡಿಲಿಕೆಯು ಸುಧಾರಿತ ಸಂಬಂಧಗಳ ಕೆಲವು ನಿರೀಕ್ಷೆಗಳನ್ನು ಹೆಚ್ಚಿಸಿದ್ದರೂ, ಇದು ಪ್ರಗತಿಯಾಗಿಲ್ಲ. ಏಕೆಂದರೆ ಎರಡೂ ದೇಶಗಳು ಸಂಬಂಧ ಉತ್ತಮಗೊಳಿಸಲು ಹೆಚ್ಚಿನ ಆಸಕ್ತಿ ತೋರಿಸಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಒಂದು ಕಡೆ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಕುರಿತು ಕೆನಡಾದ ತನಿಖೆ ಮುಂದುವರಿಯುತ್ತಿದೆ. ಇನ್ನೊಂದು ಕಡೆ ಭಾರತ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವಾಗ ಭಾರತ ಅಥವಾ ಕೆನಡಾ ಶೀಘ್ರದಲ್ಲೇ ರಾಜಿ ಮಾಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ವಾಷಿಂಗ್ಟನ್ನ ವಿಲ್ಸನ್ ಸೆಂಟರ್ನಲ್ಲಿರುವ ದಕ್ಷಿಣ ಏಷ್ಯಾ ಸಂಸ್ಥೆಯ ನಿರ್ದೇಶಕ ಮೈಕೆಲ್ ಕುಗೆಲ್ಮನ್, ಭಾರತ ಕೆನಡಾ ಸಂಬಂಧವು ಆಳವಾದ ಬಿಕ್ಕಟ್ಟಿನಲ್ಲಿದೆ, ಬಹುಶಃ ಇದು ಹಿಂದೆಂದಿಗಿಂತಲೂ ಕೆಟ್ಟದಾಗಿದೆ. ಬಿಕ್ಕಟ್ಟು ಹೆಚ್ಚಾಗಬಾರದು ಎಂಬ ಬಗ್ಗೆ ಎರಡು ದೇಶಕ್ಕೂ ಕಾಳಜಿ ಇರಬಹುದು. ಇದು ಸಮಸ್ಯೆ ಬಗೆಹರಿಸಲು ಪ್ರತ್ಸಾಹಕವಾಗಿದೆ ಎಂದು ಅರ್ಥವಲ್ಲ ಎಂದು ಹೇಳಿದ್ದಾರೆ.
2020ರಿಂದ 2022ರವರೆಗೆ ಕೆನಡಾದಲ್ಲಿ ಭಾರತದ ರಾಯಭಾರಿಯಾಗಿರುವ ಅಜಯ್ ಬಿಸಾರಿಯಾ, ಎರಡೂ ದೇಶಗಳ ಸಂಬಂಧವೂ ಉತ್ಕರ್ಷದ ಹಂತದಲ್ಲಿದೆ ಎಂದು ಹೇಳಿದ್ದಾರೆ.
ವೀಸಾ ನಿರ್ಬಂಧಗಳು ಕೆನಡಾದಲ್ಲಿ ವಾಸಿಸುವ ಅಥವಾ ಅಲ್ಲಿ ಅಧ್ಯಯನ ಮಾಡಲು ಯೋಜಿಸಿರುವ ಹತ್ತಾರು ಭಾರತೀಯರು ಮತ್ತು ಭಾರತೀಯ ಮೂಲದ ಜನರಿಗೆ ಅಡ್ಡಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಎರಡೂ ಸರ್ಕಾರಗಳು ವ್ಯಾಪಾರ ಸಂಬಂಧಗಳನ್ನು ಉಳಿಸಿಕೊಂಡಿದ್ದರೂ, ಮುಕ್ತ-ವ್ಯಾಪಾರ ಒಪ್ಪಂದದ ಚರ್ಚೆಗಳನ್ನು ವಿಳಂಬಗೊಳಿಸಿದೆ ಎನ್ನಲಾಗಿದೆ.
ಒಟ್ಟಾವಾದಲ್ಲಿನ ಭಾರತದ ಗುಪ್ತಚರ ಮುಖ್ಯಸ್ಥರನ್ನು ಕೆನಡಾ ಹೊರಹಾಕಿತ್ತು. ಕೆನಡಿಯನ್ನರಿಗೆ ವೀಸಾಗಳನ್ನು ಭಾರತ ನಿಲ್ಲಿಸಿತು. ಈ ಕ್ರಮವು ವಿಯೆನ್ನಾ ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಕೆನಡಾ ಹೇಳಿದೆ.
ಅ.25ರಂದು ನಾಲ್ಕು ವಿಭಾಗಗಳ ಅಡಿಯಲ್ಲಿ ವೀಸಾಗಳನ್ನು ನೀಡುವುದನ್ನು ಪುನರಾರಂಭಿಸುವುದಾಗಿ ಭಾರತ ಹೇಳಿದೆ. ಆದರೆ ಈ ಬೆಳವಣಿಗೆಯ ಮೂಲಕ ಹಳಸಿದ ಕೆನಡಾ ಮತ್ತು ಭಾರತದ ಸಂಬಂಧವನ್ನು ಸುಲಭವಾಗಿ ಸರಿಪಡಿಸುವುದು ಕಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ: ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಆರೋಪಿಗಿತ್ತು ಗೌರಿ ಲಂಕೇಶ್ ಹತ್ಯೆ ಆರೋಪಿ ಜೊತೆ ನಂಟು