Homeಅಂಕಣಗಳುಕಲ್ಯಾಣ ಯೋಜನೆಗಳ ಬಗ್ಗೆ ಕುಹಕವಾಡುವ ಪ್ರತಿಷ್ಠಿತ ಪುಂಡರಿಗೆ ಏನೆನ್ನೋಣ?

ಕಲ್ಯಾಣ ಯೋಜನೆಗಳ ಬಗ್ಗೆ ಕುಹಕವಾಡುವ ಪ್ರತಿಷ್ಠಿತ ಪುಂಡರಿಗೆ ಏನೆನ್ನೋಣ?

- Advertisement -
- Advertisement -

ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿ ಸುಮಾರು 15 ದಿನಗಳಾಗುತ್ತಾ ಬಂದಿದೆ. ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಘೋಷಿಸಿದ ಮತ್ತು ಪ್ರಣಾಳಿಕೆಯಲ್ಲಿ ನಮೂದಿಸಿದ್ದ ಐದು ಮುಖ್ಯ ಭರವಸೆಗಳ ಬಗ್ಗೆ ಆಗಲೇ ಭಾರೀ ಟೀಕೆಯನ್ನು ಎದುರಿಸುತ್ತಿದೆ. ರೊಬಸ್ಟ್ ಆದಂತಹ ಪ್ರಜಾಪ್ರಭುತ್ವಕ್ಕೆ ಆಡಳಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ವಿರೋಧ ಪಕ್ಷಗಳು ಬಹಳ ಮುಖ್ಯ. ಆದರೆ ಆ ವಿರೋಧಗಳೇ ಜನವಿರೋಧಿ ಆಗಿದ್ದರೆ?

ಈ ನೆಲೆಯಲ್ಲಿ ಬರುತ್ತಿರುವ ವಿರೋಧವನ್ನು ಗಮನಿಸಿ; ಕಾಂಗ್ರೆಸ್ ಮಾಡಿದ ಚುನಾವಣಾ ಪ್ರಾಮಿಸ್‌ಗಳಾದ, ಕುಟುಂಬವೊಂದರ ಯಜಮಾನಿಗೆ ಪ್ರತಿ ತಿಂಗಳೂ 2000 ರೂ ಕೊಡುತ್ತೇವೆಂಬ ಭರವಸೆಯನ್ನು ಯಾವುದೇ ಷರತ್ತು ಅನ್ವಯಿಸದೆ ಅನುಷ್ಠಾನಕ್ಕೆ ತರಬೇಕು; ಎಲ್ಲಾ ಮನೆಗಳಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡಬೇಕು; ಎಲ್ಲಾ ಮಹಿಳೆಯರಿಗೆ ಎಲ್ಲ ಬಸ್ಸುಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು; ಹೀಗೆ ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ತನ್ನ ಭರವಸೆಗಳನ್ನು ಯಾವುದೇ ವಿಳಂಬವಿಲ್ಲದಂತೆ ಅನುಷ್ಠಾನಗೊಳಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒತ್ತಡ ಹಾಕುತ್ತಿವೆ. ಕಲ್ಯಾಣ ಯೋಜನೆಗಳು ಅಗತ್ಯ ಇರುವ ಎಲ್ಲ ಜನರಿಗೂ ಪರಿಣಾಮಕಾರಿಯಾಗಿ ತಲುಪಬೇಕು ಅನ್ನುವ ಯೋಚನೆಯೇನೋ ಸರಿ. ಆದರೆ ಈಗಾಗಲೇ ಒಂದು ಮಟ್ಟದ ಸ್ವಾವಲಂಬನೆ ಸಾಧಿಸಿಕೊಂಡಿರುವ ಕುಟುಂಬಗಳನ್ನು ಹೊರತುಪಡಿಸಿ, ಬಡ ಕುಟುಂಬಗಳಿಗೇ ಈ ಕಲ್ಯಾಣ ಯೋಜನೆಗಳನ್ನು ಮೊದಲು ಜಾರಿ ಮಾಡಬೇಕಿದೆ. ಅಸಮಾನತೆ ತೀವ್ರತಮವಾಗಿರುವ ಸಮಾಜದಲ್ಲಿ ಕಡುಬಡತನದ ಕುಟುಂಬಗಳಿಗೆ ಸರ್ಕಾರದ ಯೋಜನೆಗಳ ನೆರವು ಹೆಚ್ಚಿನ ಪ್ರಮಾಣದಲ್ಲಿ ಬೇಕಿರುತ್ತದೆ. ಬಜೆಟ್‌ನಲ್ಲಿ ಉಳಿತಾಯ ಸಾಧ್ಯವಾದರೆ ಮಧ್ಯಮ ವರ್ಗದವರಿಗೂ ಈ ಯೋಜನೆಗಳನ್ನು ವಿಸ್ತರಿಸಬೇಕು. ಇದಕ್ಕಾಗಿ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವುದನ್ನು ಸರ್ಕಾರ ಆದ್ಯತೆ ಮಾಡಿಕೊಳ್ಳಬೇಕು. ಈಗಾಗಲೇ ಬಿಪಿಎಲ್ ಕಾರ್ಡು ಹೊಂದಿರುವ ಬಡಕುಟುಂಬಗಳಿಗೆ ಈ ಯೋಜನೆಗಳನ್ನು ತಕ್ಷಣಕ್ಕೇ ಅನುಷ್ಠಾನಗೊಳಿಸಲು ಸುಲಭವಾಗಬಹುದು. ಅದಕ್ಕಾಗಿ ಒಂದು ಮಟ್ಟದ ಒತ್ತಡ ಹಾಕುವುದರಲ್ಲಿ ನ್ಯಾಯವಿದೆ. ಆದರೆ ಷರತ್ತು ಹಾಕಬೇಡಿ ಎಂದು ಕೂಗಿಕೊಳ್ಳುವುದು ಕೇವಲ ರಾಜಕೀಯಕ್ಕಾಗಿ ಮಾತ್ರ ವಿರೋಧ ಎಂದೆನಿಸಿಕೊಳ್ಳುತ್ತದೆ.

ನಿಜಕ್ಕೂ ವಿರೋಧ ಪಕ್ಷಗಳು ಮಾಡಬೇಕಿರುವುದು; ಬಿಪಿಎಲ್ ಪಡಿತರ ಚೀಟಿಗಳು ಸಿಕ್ಕಿರದ ಎಷ್ಟೋ ಜನಕ್ಕೆ ಅದು ಸಿಗುವಂತೆ ಮಾಡಬೇಕು. ಎಷ್ಟೋ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಸಿಕ್ಕುವ ಮಾನದಂಡವೇ ಗೊತ್ತಿರದೆ ಉಳಿದಿರುತ್ತಾರೆ. ಅಂತಹ ಕುಟುಂಬಗಳಿಗೆ ಅದು ಸಿಗುವಂತೆ ನೋಡಿಕೊಂಡು ಕಲ್ಯಾಣ ಕಾರ್ಯಕ್ರಮಗಳ ತಿಳಿವು ಮೂಡಿಸಬೇಕು. ಈ ಕಲ್ಯಾಣ ಯೋಜನೆಗಳು ಎಲ್ಲೂ ಸೋರಿಕೆಯಾಗದಂತೆ ಹದ್ದಿನ ಕಣ್ಣಿಟ್ಟು, ದುರುಪಯೋಗ ನಡೆಯುವ ಕಡೆ ವಿರೋಧಪಕ್ಷಗಳು ಕೆಂಡವಾಗಬೇಕು. ಯಾವುದೇ ಸಮಯದಲ್ಲಿ ಲಕ್ಷಾಂತರ ಬಿಪಿಎಲ್ ನೊಂದಣಿ ಅರ್ಜಿಗಳು ಪೆಂಡಿಂಗ್ ಹಂತದಲ್ಲಿರುತ್ತವೆ. ಅವುಗಳ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳುವುದಕ್ಕೆ ಒತ್ತಡ ಹಾಕಬೇಕು. ಇಂತಹ ಜವಾಬ್ದಾರಿಗಳನ್ನು ವಿರೋಧ ಪಕ್ಷಗಳು ಹೊತ್ತಿಕೊಂಡರೆ ಜನಸಾಮಾನ್ಯರಿಗೆ ನೆರವೂ ಅದೀತೂ, ಆ ಪಕ್ಷಗಳಿಗೆ ಮುಂದೆ ಜನಸಮೂಹದ ಬೆಂಬಲವೂ ದೊರೆತೀತು.

ಮೋಹನ್‌ದಾಸ್ ಪೈ

ಕಲ್ಯಾಣ ಯೋಜನೆಗಳ ಬಗ್ಗೆ ಮತ್ತೊಂದು ರೀತಿಯ ಅಸಹ್ಯಕಾರಿ ವಿರೋಧ ಕೂಡ ಎದ್ದುಕಾಣುತ್ತದೆ. ಬಹುತೇಕ ಅರ್ಬನ್ ಎಲೈಟ್ ಆದ, ಸಂಘ ಪರಿವಾರದ ಜೊತೆಗೆ ನಿಕಟವಾಗಿ ಗುರುತಿಸಿಕೊಂಡ ಸೋ ಕಾಲ್ಡ್ ಮೇಲ್ಜಾತಿಯ ಜನರೇ ಈ ವಿರೋಧದ ಮುಂದಾಳುಗಳು. ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್‌ದಾಸ್ ಪೈ. ಇಂತಹವರಿಂದ ಉತ್ತೇಜನ ಪಡೆಯುವ ಹಲವು ಐಟಿ ಮಂದಿಯೂ ಇದ್ದಾರು. ಇವರು ಅವಲತ್ತುಕೊಳ್ಳುವುದೇನೆಂದರೆ, ’ನಾವು ಜಾಸ್ತಿ ತೆರಿಗೆ ಕಟ್ಟುತ್ತೇವೆ; ನಮ್ಮ ತೆರಿಗೆ ದೇಶದ ಅಭಿವೃದ್ಧಿಗೆ ಮಾತ್ರ. ಅದು ಉಚಿತ ಹಂಚಿಕೆಗೆ ಸಲ್ಲ’ ಎಂದು. ಈ ರೀತಿಯ ಒಂದು ಪೋಸ್ಟರ್‌ಅನ್ನು ಈ ಪೈ ಕೂಡ ಹಂಚಿಕೊಂಡಿದ್ದರು. ಸಾವಿರಾರು ಜನ ಅದನ್ನು ಫಾಲೋ ಮಾಡಿದರು. ಈ ’ಪ್ರತಿಷ್ಠಿತ’ ವರ್ಗ ಎಂದು ಕರೆದುಕೊಳ್ಳುವವರು, ’ಅರ್ಥಶಾಸ್ತ್ರ’ದ ಅಥವಾ ಆರ್ಥಿಕತೆಯ ಮೂಲ ಪರಿಕಲ್ಪನೆಯ ಬಗ್ಗೆಯೇ ಅರಿವಿರದ ಮೂಢರು ಅಥವಾ ಅದರ ಬಗ್ಗೆ ತಿಳಿದುಕೊಳ್ಳಲು ಮುಂದಾಗದ ಮೈಗಳ್ಳರು.

ಯಾವುದೇ ಸಮಯದಲ್ಲಿ ಇರುವ ಸೀಮಿತ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಹಂಚುವ ವಿಧಾನವೇ ಆರ್ಥಿಕತೆಯ ಜೀವಾಳ. ಅಂತಹ ವಿಧಾನವನ್ನು ಅಧ್ಯಯನ ಮಾಡುವುದೇ ಅರ್ಥಶಾಸ್ತ್ರ. ಬಂಡವಾಳವನ್ನು ಕೆಲವೇ ಕೆಲವರಲ್ಲಿ ಕ್ರೋಢೀಕರಿಸಿಕೊಳ್ಳುವ (ಅವರ ತೆರಿಗೆಯನ್ನು ಕಡಿತಗೊಳಿಸಿ) ಕ್ಯಾಪಿಟಲಿಸಂ ಅಥವಾ ಬಂಡವಾಳಶಾಹಿ ಅರ್ಥಶಾಸ್ತ್ರ ಕೂಡ, ಟ್ರಿಕಲ್ ಡೌನ್ ಎಫೆಕ್ಟ್‌ನಿಂದ ಅಥವಾ ಪಿರಾಮಿಡ್ ವಿನ್ಯಾಸದ ಆರ್ಥಿಕ ವ್ಯವಸ್ಥೆಯಲ್ಲಿ ನಡೆಯುವ ಹಲವು ವ್ಯವಹಾರ-ವಹಿವಾಟುಗಳಿಂದ ಸೋರುವ ಹಣಕಾಸು, ಪಿರಾಮಿಡ್‌ನ ಕೆಳಗಿರುವವರಿಗೂ ಸಂಪನ್ಮೂಲಗಳನ್ನು ಒದಗಿಸುತ್ತದೆ ಮತ್ತು ಇದು ಸಂಪನ್ಮೂಲ ಹಂಚಿಕೆಯ ಪರಿಣಾಮಕಾರಿ ವಿಧಾನ ಎಂದು ನಂಬುತ್ತದೆ. ಇದು ಭಾರತದಂತಹ ದೇಶಗಳಲ್ಲಿ ಮತ್ತು ವಿಶ್ವದ ಹಲವು ದೇಶಗಳಲ್ಲಿ ಅಸಮಾನತೆಯನ್ನು ಹೆಚ್ಚಿಸಿದೆ ಮತ್ತು ಈ ಆರ್ಥಿಕ ಮಾದರಿ ವಿಫಲವಾಗಿದೆ ಎಂಬುದು ಹಲವು ಅಧ್ಯಯನಗಳಿಂದ ಅರ್ಥಶಾಸ್ತ್ರಜ್ಞರು ಕಂಡುಕೊಂಡು ಹೇಳುತ್ತಿರುವ ವಿಷಯ. ಅದನ್ನು ಈಗ ಸದ್ಯಕ್ಕೆ ಪಕ್ಕಕ್ಕಿಟ್ಟು ಹೇಳುವುದಾದರೂ, ಈ ಕಲ್ಯಾಣ ಯೋಜನೆಗಳನ್ನು ವಿರೋಧಿಸುವ ವಾಟ್ಸ್‌ಆಪ್ ಅರ್ಥಶಾಸ್ತ್ರಜ್ಞರು ಸಂಪನ್ಮೂಲಗಳ ಹಂಚಿಕೆಯನ್ನೇ ನಿರಾಕರಿಸುತ್ತಾರೆ. ಒಟ್ಟಿನಲ್ಲಿ ತಾವು ಪ್ರತಿನಿಧಿಸುವ ರಾಜಕೀಯಕ್ಕಾಗಿ ತಮ್ಮ ಕಾಲನ್ನು ತಾವೇ ಕತ್ತರಿಸಿಕೊಂಡರೂ ಸರಿ, ಸ್ವಂತ ಚಿಂತನೆಯೇ ಇಲ್ಲದೆ ಇಂತಹ ಅಪದ್ಧಗಳನ್ನು ಅನುಕರಿಸುತ್ತಾರೆ. ಇದೇ ಮಾನದಂಡದಲ್ಲಿ, ಮುಂದೆಂದಾದರೂ, ಸಂಪನ್ಮೂಲಗಳ ಸಿಂಹಪಾಲನ್ನು ಹೊಂದಿರುವ 1% ಶ್ರೀಮಂತರು ಮತ್ತು ಕ್ರೋನಿ ಕ್ಯಾಪಿಟಲಸ್ಟ್‌ಗಳು ಈಗ ಕಲ್ಯಾಣ ಯೋಜನೆಗಳನ್ನು ವಿರೋಧಿಸುತ್ತಿರುವ ಮೇಲುಮಧ್ಯಮ ವರ್ಗಕ್ಕೆ ಸಿಗುತ್ತಿರುವ ಸಬ್ಸಿಡಿಗಳನ್ನು ನಿಲ್ಲಿಸುವಂತೆ ಕೂಡ ಸರ್ಕಾರಗಳಿಂದ ಒತ್ತಡ ಹೇರಬಲ್ಲರು. ಅದು ಈಗಾಗಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಬ್ಸಿಡಿಗಳು ಖೋತಾ ಆಗಿರುವುದರಲ್ಲಿ ಕಾಣಬಹುದು. ಮುಂದೆ ಸುಲಭ ಬಡ್ಡಿ ದರದಲ್ಲಿ ಹೌಸಿಂಗ್ ಲೋನ್ ಸಿಗದಂತೆ ನೋಡಿಕೊಳ್ಳಲು ಒತ್ತಡ ಹಾಕಬಹುದು. ನೌಕರರಿಗೆ ಸಿಗುವ ರಜೆಗಳನ್ನು ಕಡಿತಗೊಳಿಸಿ ವೇತನ ಹೆಚ್ಚಿಸದೆ ಹೆಚ್ಚು ಅವಧಿಯ ಕೆಲಸ ಮಾಡಿಸಿಕೊಳ್ಳುವ ಕಾನೂನುಗಳಿಗೆ ಒತ್ತಡ ತರಬಹುದು. ಈಗ ಸದ್ಯಕ್ಕೆ ಸ್ವಾವಲಂಬನೆ ಸಾಧಿಸಿರುವ ಮೇಲು ಮಧ್ಯಮ ವರ್ಗದವರು ಮಧ್ಯಮ ವರ್ಗಕ್ಕೆ ಅಥವಾ ಬಡತನಕ್ಕೆ ಕುಸಿಯುವುದಕ್ಕೆ ಹೆಚ್ಚಿನ ಎಫರ್ಟ್ ಏನೂ ಬೇಕಾಗುವುದಿಲ್ಲ. ಮಧ್ಯಮ ವರ್ಗದಿಂದ ಬಡತನಕ್ಕೆ ಕುಸಿಯುವುದಕ್ಕೆ ಕುಟುಂಬವೊಂದರ ಸದಸ್ಯ ಗಂಭೀರ ರೋಗವೊಂದಕ್ಕೆ ತುತ್ತಾದರೆ ಸಾಕೆಂಬ ಮಾತಿದೆ. ಕೊರೊನಾ ಸಮಯದಲ್ಲಿ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳು ಬಡತನಕ್ಕೆ ಜಾರಿದ್ದನ್ನು ಹಲವು ವರದಿಗಳು ದಾಖಲಿಸಿದ್ದವು. ಇಂತಹ ಕಾರಣಗಳಿಂದ 1% ಇರುವ ಶ್ರೀಮಂತ ಪ್ರತಿಷ್ಠಿತ ವರ್ಗದ ಕಲ್ಯಾಣ ಕಾರ್ಯಕ್ರಮಗಳ ವಿರೋಧಿ ಮಾತುಗಳನ್ನು ಮೇಲು ಮಧ್ಯಮ ಮತ್ತು ಮಧ್ಯಮ ವರ್ಗಗಳು ಅನುಕರಿಸಿ ಗಿಣಿರಾಮನಂತೆ ಪುನರುಚ್ಚರಿಸುತ್ತಿರುವುದು ದುರಂತದ ಕಥೆಯಾಗಿದೆ ಮತ್ತು ದುರುದ್ದೇಶದ ರಾಜಕಾರಣದಿಂದ ಕೂಡಿದೆ.

ಇದನ್ನೂ ಓದಿ: ಜೂ.1ರಿಂದ ಪ್ರತಿ ಮನೆಗೂ 100 ಯೂನಿಟ್ ವಿದ್ಯುತ್ ಉಚಿತ: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ

ಹೀಗೆ ಕಲ್ಯಾಣ ಯೋಜನೆಗಳನ್ನು ಬಿಟ್ಟಿ ಅಥವಾ ಫ್ರೀಬೀಸ್ ಎಂದು ಲೇವಡಿಯಾಡುವ ಇದೇ ಮಧ್ಯಮವರ್ಗ ತಮ್ಮ ಕುಟುಂಬದ 90ರ ದಶಕದ ಜೀವನನ್ನ ಒಮ್ಮೆ ನೆನಪಿಸಿಕೊಂಡರೂ ಇಂತಹ ದುರುದ್ದೇಶದ ಮಾತುಗಳಿಗೆ ಇಳಿಯಲಾರದು. ತಮ್ಮ ಒಂದು ಹಿಂದಿನ ಪೀಳಿಗೆ ಸಾಮಾನ್ಯವಾಗಿ ರೇಷನ್ ಕಾರ್ಡ್ ಹೊಂದಿದ ಮತ್ತು ಅಕ್ಕಿ, ಗೋಧಿ, ಸೀಮೆ ಎಣ್ಣೆ ಮುಂತಾದವಕ್ಕೆ ಪಡಿತರ ವ್ಯವಸ್ಥೆಯನ್ನು ಅವಲಂಬಿಸಿದ್ದ ಕುಟುಂಬವೇ ಆಗಿರುತ್ತದೆ. ನಂತರ ಆಗಿರುವ ಬೆಳವಣಿಗೆಗಳಿಂದ ತುಸು ಚಲನೆ ಸಾಧ್ಯವಾಗಿ ಒಂದಿಷ್ಟು ಸ್ವಾವಲಂಬನೆಯನ್ನು ಸಾಧಿಸಿರುವ ಕಾರಣಕ್ಕೆ, ಇನ್ನೂ ಬಡವರಾಗಿಯೇ ಉಳಿದಿರುವವರನ್ನು ಅವಮಾನಿಸುವ ಧೋರಣೆ ತಳೆಯುವುದು ದುರುಳತನವಾದೀತು. ಈ ವರ್ಗ ಈ ಚಲನೆಯನ್ನು ಸಾಧಿಸುವುದಕ್ಕೋಸ್ಕರವೇ ಒಂದು ದೊಡ್ಡ ವರ್ಗ ಇನ್ನೂ ಬಡತನ ರೇಖೆಯಿಂದ ಕೆಳಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳದೆ ಹೋದರೆ ಒಳಗಿನಿಂದಲೇ ಕೊಳೆತುಹೋಗುತ್ತರುವ ಸಮಾಜದ/ವರ್ಗದ ಲಕ್ಷಣ ಇದೆನಿಸುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಲ್ಯಾಣ ಯೋಜನೆಗಳ ವಿರುದ್ಧ ಯುದ್ಧ ಸಾರುವ ಬೆರಳೆಣಿಕೆಯಷ್ಟು ಪ್ರಿವಿಲೆಜ್ ಮಂದಿಯ ಮಾತಿಗೆ ಮರಳಾಗುವ ಮುನ್ನ ಐಎಚ್‌ಡಿಎಸ್ (ಇಂಡಿಯನ್ ಹ್ಯೂಮನ್ ಡೆವಲಪ್‌ಮೆಂಟ್ ಸರ್ವೇ) ಸಂಸ್ಥೆ ಬಿಡುಗಡೆ ಮಾಡಿದ್ದ ಕೆಲವು ಅಂಕಿಅಂಶಗಳನ್ನು ನೋಡೋಣ. 2011-12ರಲ್ಲಿ ಈ ಸಂಸ್ಥೆ ನೀಡಿದ ವರದಿ ಪ್ರಕಾರ ಇಡೀ ದೇಶದ ಕುಟುಂಬಗಳನ್ನು ಐದು ಸಮಾನ ವರ್ಗಗಳನ್ನಾಗಿ ವಿಂಗಡಿಸಿದರೆ, 20% ಜನ ಕಡುಬಡತನದ ಕುಟುಂಬಗಳು ವಾರ್ಷಿಕವಾಗಿ 1000 ರೂಪಾಯಿಯಿಂದ 33,000 ರೂಪಾಯಿ ವರಮಾನದಲ್ಲಿ ಬದುಕುತ್ತಾರೆ. 20% ಕುಟುಂಬಗಳ ವಾರ್ಷಿಕ ವರಮಾನ 33,001ರಿಂದ 55,640 ರೂಪಾಯಿಗಳು. ವಾರ್ಷಿಕವಾಗಿ 55,641ದಿಂದ 88,000 ರೂಪಾಯಿ ಗಳಸುವ ಕುಟುಂಬಗಳು ಮೂರನೇ 20% ವರ್ಗವಾದರೆ, 88,001ದಿಂದ 1.5 ಲಕ್ಷ ರೂಪಾಯಿ ವಾರ್ಷಿಕ ಗಳಿಕೆಯಿರುವ ಮತ್ತು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಗಿಂತಲೂ ಹೆಚ್ಚು ಗಳಿಸುವ ಕುಟುಂಬಗಳು ಉಳಿದ ಎರಡು ವರ್ಗಗಳಲ್ಲಿ ಬರುತ್ತವೆ. ಇನ್ನು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಗಿಂತಲೂ ಹೆಚ್ಚು ಗಳಿಸುವ 20%ನ ಶ್ರೀಮಂತ ವರ್ಗದಲ್ಲಿ, 8 ಲಕ್ಷಕ್ಕೂ ಹೆಚ್ಚು ಆದಾಯವಿರುವ ಒಟ್ಟು ಕುಟುಂಬಗಳ ಕೇವಲ 2% ಮಾತ್ರ! ಕರ್ನಾಟಕದಲ್ಲೂ ಈ ಅನುಪಾತ ಭಿನ್ನವಾಗೇನೂ ಇಲ್ಲ. ತಲಾವಾರು ಆದಾಯ ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ, ಬೆಂಗಳೂರು ಎಂಬ ಮಹಾನಗರಿಯ ಪಾತ್ರದಿಂದ ಮಾತ್ರ ಅದು ಆ ಹೆಚ್ಚಳ ಕಂಡಿದೆ. ಕೇಂದ್ರ ಸರ್ಕಾರದ ಯೋಜನಾ ಆಯೋಗ 2011-12ರಲ್ಲಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಐವರಲ್ಲಿ ಒಬ್ಬರು ಬಡತನದ ಕೆಳಗಿನ ರೇಖೆಯಲ್ಲಿದ್ದಾರೆ. ಅಂದರೆ ಸುಮಾರು 1.3 ಕೋಟಿ ಜನ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾರ್ಷಿಕವಾಗಿ 902ರಿಂದ 1098ರೂಪಾಯಿಗಳನ್ನು ಗಳಿಸಿ ಜೀವನ ದೂಕುತ್ತಿದ್ದಾರೆ. ವಾಸ್ತವ ಚಿತ್ರಣ ಹೀಗಿರುವಾಗ, ಈ ವರ್ಗಕ್ಕೆ ಸಹಾಯ ಮಾಡುವ ಕೆಲವು ಯೋಜನೆಗಳನ್ನು ಕಂಡು ಕರುಬುವವರಿಗೆ ಏನು ಹೇಳುವುದು?

(ಜೂನ್ 2ರಂದು ನಡೆದ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಮಾಡಿ ನಿರ್ಧಾರ ಘೋಷಿಸಿದೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...