ಮುಂಬರುವ 2024ರ ಚುನಾವಣೆಯಲ್ಲಿ ಎಲ್ಲರನ್ನೂ ಚಕಿತಗೊಳಿಸುವ ಫಲಿತಾಂಶ ಬರಲಿದೆ. ಏಕೆಂದರೆ ಮೋದಿ ಸರ್ಕಾರದ ವಿರುದ್ಧ ಅಗೋಚರ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕದ ವಾಷಿಂಗ್ಟನ್ನಲ್ಲಿ ನ್ಯಾಷನಲ್ ಪ್ರೆಸ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ವಿರೋಧ ಪಕ್ಷಗಳು ಒಂದಾಗುತ್ತಿವೆ. ತಳಮಟ್ಟದಲ್ಲಿ ಕಾರ್ಯಾಚರಣೆ ರೂಪಿಸಲಾಗುತ್ತಿದೆ. ವಿರೋಧ ಪಕ್ಷಗಳು ಒಂದಾದರೆ ಬಿಜೆಪಿ ಆರ್ಎಸ್ಎಸ್ ಮಣಿಸುವುದು ಕಷ್ಟವೇನಲ್ಲ” ಎಂದು ರಾಹುಲ್ ಹೇಳಿದ್ದಾರೆ.
ಬಿಜೆಪಿ ಸೋಲಿಸುವುದು ಕಷ್ಟ ಎಂದು ಬಹುತೇಕರು ಹೇಳುತ್ತಾರೆ. ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ಭಾರೀ ಅಂತರದಲ್ಲಿ ಬಿಜೆಪಿ ಸೋತಿದೆ. ಅಷ್ಟು ಮಾತ್ರವಲ್ಲದೇ ಮುಂಬರುವ ಮೂರು ನಾಲ್ಕು ರಾಜ್ಯಗಳ ಚುನಾವಣೆಗಳಲ್ಲಿಯೂ ಬಿಜೆಪಿ ಸೋಲಲಿದೆ. ಅವರ ಜನವಿರೋಧಿ ಆಡಳಿತಕ್ಕೆ ಜನ ಬೇಸೆತ್ತಿದ್ದಾರೆ. ಅದು 2024ರ ಚುನಾವಣೆಯಲ್ಲಿ ಪುನಾರಾವರ್ತನೆಯಾಗಲಿದೆ ಎಂದಿದ್ದಾರೆ.
ನಾವು ಇದೀಗ ವಿವರವಾದ ಸಭೆಯನ್ನು ನಡೆಸಿದ್ದೇವೆ ಮತ್ತು ನಮ್ಮ ಆಂತರಿಕ ಮೌಲ್ಯಮಾಪನವು ಕರ್ನಾಟಕದಲ್ಲಿ 136 ಸ್ಥಾನಗಳನ್ನು ಗಳಿಸಿದ ನಂತರ, ನಾವು ಈಗ ಮಧ್ಯಪ್ರದೇಶದಲ್ಲಿ 150 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಸೂಚಿಸುತ್ತದೆ” ಎಂದು ಹೇಳಿದ್ದರು.
ಭಾರತದ ಮಾಧ್ಯಮದವರಿಗೆ ಬಿಜೆಪಿ ಸೋಲಿಸುವುದು ಕಷ್ಟ ಅನಿಸಬಹುದು. ಆದರೆ ನಮಗಲ್ಲ. ಏಕೆಂದರೆ ನರೇಂದ್ರ ಮೋದಿಯವರಿಗೆ ದೇಶದ 60% ಜನ ಎಂದೂ ಮತ ಹಾಕಿಲ್ಲ. ಆದರೆ ಬಿಜೆಪಿ ಯಾವಾಗಲೂ ಜನ ನಮ್ಮ ಜೊತೆಗಿದ್ದಾರೆ ಎಂದು ಕೂಗಿ ಕೂಗಿ ಹೇಳುತ್ತಿದೆ. ಅದನ್ನೆ ಮಾಧ್ಯಮಗಳು ದೊಡ್ಡದಾಗಿ ತೋರಿಸುತ್ತಿವೆ. ಆದರೆ ವಾಸ್ತವ ಅದಲ್ಲ. ಜನ ನಿರುದ್ಯೋಗ, ಬೆಲೆ ಏರಿಕೆಯಿಂದ ಬಸವಳಿದಿದ್ದಾರೆ. ಅವರು ಪರ್ಯಾಯ ಬಯಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಒಂದು ಶಕ್ತಿಯಾಗಿ ರೂಪುಗೊಳ್ಳುತ್ತಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ; ಕರ್ನಾಟಕ ಚುನಾವಣಾ ಫಲಿತಾಂಶ, ಮಧ್ಯಪ್ರದೇಶದಲ್ಲೂ ಪುನರಾವರ್ತನೆ: 150 ಸ್ಥಾನ ಗೆಲ್ಲುತ್ತೇವೆ ಎಂದ ರಾಹುಲ್ ಗಾಂಧಿ