ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಸ್ಟ್ರೆಚರ್ನಲ್ಲಿ ಹೊತ್ತುಕೊಂಡು 1300 ಕಿಲೋ ಮೀಟರ್ ದೂರದ ತಮ್ಮ ಮನೆಗೆ ಸಾಗುವ ವಲಸೆ ಕಾರ್ಮಿಕ ಕುಟುಂಬದ ಹೃದಯ ವಿದ್ರಾವಕ ದೃಶ್ಯವನ್ನು ಎನ್ಡಿಟಿವಿ ವರದಿ ಮಾಡಿದೆ.
ಹದಿನೇಳು ಮಂದಿಯ ಕುಟುಂಬವೊಂದು ಲೂಧಿಯಾನದಿಂದ 1300 ಕಿ.ಮೀ ದೂರದ ಮಧ್ಯಪ್ರದೇಶದ ಸಿಂಗ್ರೌಲಿಯ ತಮ್ಮ ಮನೆಗೆ ಆಹಾರ, ಹಣ ಹಾಗೂ ಕಾಲಿಗೆ ಚಪ್ಪಲಿ ಇಲ್ಲದೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ಮಧ್ಯೆ ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಹಾಯ ಪಡೆದರಾದರೂ, ಆ ಹೊತ್ತಿಗೆ 800 ಕಿ.ಮೀ.ಗಿಂತಲೂ ಹೆಚ್ಚು ನಡೆದಿದ್ದರು. ಅಲ್ಲಿಂದ ಅವರಿಗೆ ಪೊಲೀಸರು ಅವರಿಗೆ ಟ್ರಕ್ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದಿನಗೂಲಿ ಕಾರ್ಮಿಕರಾಗಿದ್ದ ಇವರು ಲೂಧಿಯಾನದಿಂದ ಕಳೆದ 15 ದಿನಗಳಿಂದ ನಡೆದುಕೊಂಡು ಹೋಗುತ್ತಿದ್ದಾರೆ.
ಬಾಲಕನ ಕುತ್ತಿಗೆ ಮುರಿದುಹೋಗಿ, ಕೈಕಾಲುಗಳನ್ನು ಸರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಬಾಲಕನ ಬಗ್ಗೆ ಕುಟುಂಬಿಕರು ಹೇಳುತ್ತಾರೆ. ಗಾಯಗೊಂಡ ಬಾಲಕನನ್ನು ಸ್ಟ್ರೆಚ್ಚರ್ ಮೇಲೆ ಮಲಗಿಸಿ ಹೊತ್ತುಕೊಂಡು ಅವರು ನಡೆಯುತ್ತಿದ್ದರು. ಹಲವಾರು ಮಕ್ಕಳನ್ನು ಒಳಗೊಂಡಿರುವ ಈ ಕುಟುಂಬವು ಪ್ರಯಾಣದ ಸಮಯದಲ್ಲಿ ತಿನ್ನಲು ಸಾಕಷ್ಟು ಆಹಾರ ಹೊಂದಿರಲಿಲ್ಲ ಎಂದು ತಿಳಿದುಬಂದಿದೆ.
#MigrantLivesMatter | Family of #MigrantWorker has been walking for last 15 days with an injured child. They started from Ludhiana and reached Kanpur today. Policemen spotted the family and helped them get a truck for the rest of the journey to Madhya Pradesh pic.twitter.com/C2RAXUvw8j
— NDTV (@ndtv) May 15, 2020
ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ದೇಶಾದ್ಯಂತ ಲಕ್ಷಾಂತರ ವಲಸೆ ಕಾರ್ಮಿಕರು ವಾರಗಟ್ಟಲೆ ಉದ್ಯೋಗ ಮತ್ತು ಹಣವಿಲ್ಲದೆ ಉಳಿದು ತಮ್ಮ ತವರು ರಾಜ್ಯಗಳಿಗೆ ಪ್ರಯಾಣಿಸುತ್ತಿದ್ದಾರೆ. ಈ ವಲಸೆ ಕಾರ್ಮಿಕರು ತಮ್ಮ ಕೆಲಸದ ಸ್ಥಳದಿಂದ ಕಾಲ್ನಡಿಗೆ, ಸೈಕಲ್ಗಳಲ್ಲಿ, ಟ್ರಕ್ಗಳಲ್ಲಿ ಸಾವಿರಾರು ಕಿ.ಮೀ ದೂರದಲ್ಲಿರುವ ರಾಜ್ಯಗಳಲ್ಲಿ ತಮ್ಮ ಹಳ್ಳಿಗಳಿಗೆ ಹೊಟಿದ್ದಾರೆ.
ಈ ಮಹಾವಲಸೆಯಲ್ಲಿ ಪ್ರಯಾಣದ ಮಧ್ಯೆ ರಸ್ತೆ ಅಪಘಾತ, ಹಸಿವು, ಬಳಲಿಕೆ ಹಾಗೂ ಅನಾರೋಗ್ಯದಿಂದ ಅನೇಕ ವಲಸೆ ಕಾರ್ಮಿಕರು ಮನೆಗೆ ತಲುಪುವ ಮೊದಲೆ ಪ್ರಾಣ ಕಳೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗೆ ವಿಶೇಷ ರೈಲುಗಳನ್ನು ಅನುಮತಿಸಿದೆಯಾದರೂ ವಲಸೆ ಕಾರ್ಮಿಕರು ಈಗಲೂ ರಸ್ತೆಯಲ್ಲಿ ನಡೆಯುತ್ತಿದ್ದಾರೆ. ಅನೇಕ ವಲಸೆ ಕಾರ್ಮಿಕರು ರೈಲು ಟಿಕೆಟ್ಗಳು ತುಂಬಾ ದುಬಾರಿ ಹಾಗೂ ಅದಕ್ಕೆ ಬೇಕಾದ ಕಾಗದಪತ್ರಗಳನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.
ಓದಿ: ಉತ್ತರ ಪ್ರದೇಶ: ಟ್ರಕ್ ಅಫಘಾತದಲ್ಲಿ 23 ವಲಸೆ ಕಾರ್ಮಿಕರು ಮೃತ
ವಿಡಿಯೋ ನೋಡಿ: ಮರೆಯಲೇ ಬಾರದ ಸುದ್ದಿ ಇವು. ಸದ್ದು…ಈ ಸುದ್ದಿಗಳೇನಾಗಿದೆ? 9 ನೇ ಸಂಚಿಕೆ