ನಿರರ್ಗಳವಾಗಿ ಹಿಂದಿ ಮಾತನಾಡಲು ಗೊತ್ತಿಲ್ಲದ ಕಾರಣ, ಕ್ರಿಮಿನಲ್ ಕಾನೂನುಗಳ ಹೆಸರು ಬದಲಾದರೂ, ನಾನು ಅವುಗಳನ್ನು ಐಪಿಸಿ, ಸಿಆರ್ಪಿಸಿ ಎಂಬ ಮೂಲ ಹೆಸರಿನಿಂದಲೇ ಕರೆಯುತ್ತೇನೆ ಎಂದು ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರು ಹೇಳಿದ್ದಾರೆ.
ಸಿಆರ್ಪಿಸಿಯ ಸೆಕ್ಷನ್ 460 ಮತ್ತು 473 ರ ಅಡಿಯಲ್ಲಿ ಕಾಗ್ನಿಜೆನ್ಸ್ ಮತ್ತು ಮಿತಿಯ ಅವಧಿಗಳ ವಿಸ್ತರಣೆಗೆ ಸಂಬಂಧಿಸಿದ ಪ್ರಕರಣವನ್ನು ಮಂಗಳವಾರ ವಿಚಾರಣೆ ನಡೆಸುತ್ತಿದ್ದಾಗ ನ್ಯಾಯಮೂರ್ತಿ ವೆಂಕಟೇಶ್ ಅವರು ಈ ಹೇಳಿಕೆ ನೀಡಿದ್ದಾರೆ.
ಪ್ರಕರಣವನ್ನು ವಾದಿಸುವಾಗ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎ ದಾಮೋದರನ್ ಅವರು ‘ಹೊಸ ಕ್ರಿಮಿನಲ್ ಕಾಯ್ದೆಯ’ ಒಂದು ನಿಬಂಧನೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆದರೆ ಸಿಆರ್ಪಿಸಿಯನ್ನು ಬದಲಿಸುವ ಹೊಸ ಹೆಸರು ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ’ ಪದಗಳನ್ನು ಉಚ್ಚರಿಸಲು ಹೆಣಗಾಡಿದರು.
ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ವೆಂಕಟೇಶ್, ದಾಮೋದರನ್ ಅವರು ಹೊಸ ಕಾಯ್ದೆಯ ಹಿಂದಿ ಹೆಸರು ಉಚ್ಚರಿಸಲು ಬಾರದ ಕಾರಣ ಜಾಣತನದಿಂದ ‘ಹೊಸ ಕಾಯ್ದೆ’ ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ನಾನೂ ಕೂಡ ಹಿಂದಿ ಬಾರದ ಕಾರಣ ಕ್ರಿಮಿನಲ್ ಕಾನೂನುಗಳನ್ನು ಹಳೆಯ ಹೆಸರಿನಿಂದಲೇ ಕರೆಯುತ್ತೇನೆ ಎಂದರು.
ಮೂರು ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ (ಎರಡನೆಯ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ (ಎರಡನೆಯ)ವನ್ನು ಇತ್ತೀಚೆಗೆ ಸರ್ಕಾರ ಹೊಸದಾಗಿ ಜಾರಿಗೊಳಿಸಿದೆ.
ಈ ಮೂರು ಕಾನೂನುಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ- 1860, ಕ್ರಿಮಿನಲ್ ಪ್ರೊಸೀಜರ್ ಆಕ್ಟ್- 1898, ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್-1872 ಅನ್ನು ಬದಲಾಯಿಸಿದೆ.
ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸದ ದಿನ ‘ಸಂಭ್ರಮಾಚರಣೆ’ ಮಾಡಿದ್ದ IAS ಅಧಿಕಾರಿಗಳು: ವಿವಾದ ಸೃಷ್ಟಿಸಿದ ಹಿರಿಯ ಅಧಿಕಾರಿಯ ಪೋಸ್ಟ್…