ದೇಶದಲ್ಲೇ ಅತೀ ಹೆಚ್ಚು ತೆರಿಗೆ ಹಣ ಕಟ್ಟುವ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿಗೆ ಎಂಬ ಕೂಗು ಕಳೆದ ಹತ್ತು ವರ್ಷಗಳಿಂದಲೂ ಹೆಚ್ಚಾಗಿ ಕೇಳಿಬರುತ್ತಿದೆ. ಈ ವಿಷಯವಾಗಿ ಪ್ರತ್ಯೇಕ ದೇಶ ಅಥಾವ ಪ್ರತ್ಯೇಕ ದಕ್ಷಿಣ ಭಾರತದ ಕೂಗು ಸಹ ಆಗಾಗ ಕೇಳಿಬರುತ್ತದೆ. ಅನುದಾನ ಹಂಚಿಕೆ ತಾರತಮ್ಯದ ವಿಚಾರದಲ್ಲಿ ಸಂಸದ ಡಿ.ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಕೂಗು ಏಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಸಂಸತ್ತಿನಲ್ಲಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಬಜೆಟ್ಟಿನಲ್ಲಿ ಚುನಾವಣಾ ಪ್ರಚಾರದ ಹೇಳಿಕೆಗಳು ಮಾತ್ರ ಕಾಣುತ್ತಿವೆ. ಮಧ್ಯಂತರ ಬಜೆಟ್ ಎಂದು ಹೇಳಿ ನಾಮ ಫಲಕ ಮಾತ್ರ ಬದಲಿಸಿದ್ದಾರೆ. ಹೊಸಹೊಸ ಪದಗಳನ್ನು ಬಳಸಿ, ಒಂದಷ್ಟ ದೇಶಿಯ ಹೆಸರುಗಳ ಜತೆಗೆ ಸಂಸ್ಕೃತ ಉಪಯೋಗಿಸಿ, ಜನರನ್ನು ದಾರಿ ತಪ್ಪಿಸುವ ಲೇಖಾನುದಾನ ಕೊಟ್ಟಿದ್ದಾರೆ. ಈ ಬಜೆಟ್ಟಿಗೆ ಯಾವುದೇ ಅರ್ಥ ಇಲ್ಲ ಎಂದರು.
‘ಬೆಲೆ ಏರಿಕೆ ಬಗ್ಗೆ ಮತನಾಡಿಲ್ಲ, ಆರ್ಥಿಕ ಸಮೀಕ್ಷೆ ಇರಬೇಕಾಗಿತ್ತು. ಕಳೆದ ವರ್ಷದ ಬಜೆಟ್ ಅವಧಿ ಮುಗಿದಿದ್ದು, ಆರ್ಥಿಕ ಸಮೀಕ್ಷೆ ಜನರ ಮುಂದೆ ಇಟ್ಟಿದ್ದಿದ್ದರೆ ಇವರ ಸಾಧನೆ ಏನು ಎಂಬುದು ಜನರಿಗೆ ಗೊತ್ತಾಗುತ್ತಿತ್ತು. ಅದನ್ನು ಮುಚ್ಚಿಟ್ಟಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಚುನಾವಣೆ ಸಮೀಪ ಇರುವುದರಿಂದ ಒಂದಷ್ಟು ಭರವಸೆ ನೀಡಿದ್ದಾರೆ. ಲೇಖಾನುದಾನ ಎಂದು ಹೇಳುತ್ತಲೆ, ಆದಾಯ ತೆರಿಗೆ ಪಾವತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇದು ಚುನಾವಣೆಗಾಗಿಯೆ ತಯಾರಿಸಿದ ಬಜೆಟ್ಟಿನಂತೆ ಇದೆ’ ಎಂದರು.
ರಾಜ್ಯ ಸರ್ಕಾರಗಳಿಗೆ ಬಡ್ಡಿರಹಿತ ಸಾಲ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ದುಡ್ಡನ್ನು ನಮಗೆ ಕೊಟ್ಟರೆ ಸಾಕಾಗಿದೆ. ಜಿಎಸ್ಟಿ ಸಂಗ್ರಹ, ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಬರುವ ಕಸ್ಟಮ್ಸ್ ಮತ್ತು ಆದಾಯ ತೆರಿಗೆ ಪಾಲನ್ನು ನಮಗೆ ಕೊಡಬೇಕಾಗಿದೆ. ಆದರೆ, ದಕ್ಷಿಣ ಭಾರತಕ್ಕೆ ಈ ವಿಚಾರದಲ್ಲಿ ಬಹಳಷ್ಟು ಅನ್ಯಾಯ ಆಗುತ್ತಿದೆ. ನಮ್ಮ ಪಾಲು ನಮಗೆ ಸಿಗಬೇಕಾಗಿದೆ, ನಮ್ಮ ಅಭಿವೃದ್ಧಿ ಹಣ ಉತ್ತರ ಭಾರತಕ್ಕೆ ಹಂಚಿಕೆ ಮಾಡಲಾಗುತ್ತಿದೆ. ನಮಗೆ ಎಲ್ಲ ವಿಚಾರಗಳಲ್ಲಿ ಅನ್ಯಾಯ ಆಗುತ್ತಿದೆ. ಇದು ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡುವ ಅನಿವಾರ್ಯತೆಯನ್ನು ಹಿಂದಿ ರಾಜ್ಯಗಳು ನಮ್ಮ ಮೇಲೆ ಹೇರುತ್ತಿವೆ’ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.
‘ಇವತ್ತಿನ ಹಣಕಾಸಿನ ಹಂಚಿಕೆಯನ್ನು ಗಮನಿಸಿದರೆ, ದಕ್ಷಿಣ ರಾಜ್ಯಗಳ ಹಣವನ್ನು ಉತ್ತರ ಭಾರತಕ್ಕೆ ಹೆಚ್ಚು ನೀಡಿ, ನಮಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಿದ್ದಾರೆ. ನಮ್ಮ ಕನ್ನಡ ಫಲಕ ಹಾಕುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ; ಇದಕ್ಕೆಲ್ಲಾ ಕಾರಣ ಏನು’ ಎಂದು ಸುರೇಶ್ ಪ್ರಶ್ನಿಸಿದರು.
‘ನಮ್ಮಿಂದ ನಾಲ್ಕು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ತೆರಿಗೆ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ನಮಗೆ ಅವರು ಮರಳಿ ಕೊಡುತ್ತಿರುವುದು ಎಷ್ಟು? ಇದನ್ನು ಪ್ರಶ್ನೆ ಮಾಡಬೇಕಾಗುತ್ತದೆ. 16ನೇ ಹಣಕಾಸು ಆಯೋಗ ಪ್ರಾರಂಭ ಆಗುತ್ತಿದೆ. ಅದರಲ್ಲೂ ಸರಿಪಡಿಸದಿದ್ದರೆ, ದಕ್ಷಿಣ ಭಾರತದವರು ಧ್ವನಿ ಏರಿಸುವುದು ಅನಿವಾರ್ಯವಾಗಿದೆ’ ಎಂದರು.
ಇದನ್ನೂ ಓದಿ; ಚಂಡೀಗಢ ಮೇಯರ್ ಚುನಾವಣೆ: ತೀರ್ಪಿಗೆ ತಡೆ ನಿರಾಕರಿಸಿದ ಹೈಕೋರ್ಟ್, ಸುಪ್ರೀಂ ಕದ ತಟ್ಟಿದ ಎಎಪಿ ಕೌನ್ಸಿಲರ್