ಕೆಜಿಎಫ್ ಚಾಪ್ಟರ್ -2 ಸಿನಿಮಾದ ಹಾಡಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಅವರ ವಿರುದ್ಧ ಎಂಆರ್ಟಿ ಸ್ಟುಡಿಯೋಸ್ ಸಲ್ಲಿಸಿದ ದೂರಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ಡಿಸೆಂಬರ್ 16ರಂದು ಮಧ್ಯಂತರ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರು ನ್ಯಾಯಾಲಯದ ಚಳಿಗಾಲದ ರಜೆಯ ಮುನ್ನಾದಿನದಂದು ತಡೆಯಾಜ್ಞೆ ನೀಡಿದರು. ಮುಂದಿನ ವಿಚಾರಣೆಯ ದಿನಾಂಕದವರೆಗೆ ಮಧ್ಯಂತರ ತಡೆ ಜಾರಿಯಲ್ಲಿರುತ್ತದೆ.
ಕಾಂಗ್ರೆಸ್ ನಾಯಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, “ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದ ವಿಡಿಯೋಗಳಲ್ಲಿ ಸಿನಿಮಾದ ಎರಡು ಮ್ಯೂಸಿಕ್ ಕ್ಲಿಪ್ ಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಯಾತ್ರೆ ಸಾಗದಿದ್ದರೂ ಎರಡು ದಿನ ಮೊದಲು ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ವಾಣಿಜ್ಯ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು” ಎಂದಿದ್ದಾರೆ.
ಆಪಾದಿತ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್ ಪಕ್ಷವು ಭರವಸೆ ನೀಡಿದ ನಂತರ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳನ್ನು ಸ್ಥಗಿತಗೊಳಿಸುವ ವಾಣಿಜ್ಯ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತು. ವಿಷಯವನ್ನು ತೆಗೆದುಹಾಕಲಾಗಿದ್ದರೂ, ಎಂಆರ್ಟಿ ಸ್ಟುಡಿಯೋ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ ಎಂದು ಪೊನ್ನಣ್ಣ ನ್ಯಾಯಾಲಯಕ್ಕೆ ತಿಳಿಸಿದರು.
ಈ ಸಮಸ್ಯೆಯು ಹಕ್ಕುಸ್ವಾಮ್ಯ ಉಲ್ಲಂಘನೆಗೆ ಸಂಬಂಧಿಸಿದೆ. ಆದರೆ ಕ್ರಿಮಿನಲ್ ದೂರು ದಾಖಲಿಸಲಾಗಿದೆ ಮತ್ತು ತಕ್ಷಣವೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಪೊನ್ನಣ್ಣ ವಾದಿಸಿದ್ದಾರೆ.
“ವೀಡಿಯೋ ಕೆಜಿಎಫ್ ಚಿತ್ರದದ್ದಲ್ಲ, ಆದರೆ ಯಾತ್ರೆಯ ದೃಶ್ಯಗಳೊಂದಿಗೆ ಜೋಡಣೆ ಮಾಡಲಾದ ಹಾಡಿನ ಒಂದು ಭಾಗ ಮಾತ್ರ ಕೆಜಿಎಫ್ಗೆ ಸಂಬಂಧಿಸಿದೆ” ಎಂದಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ), 403 (ಆಸ್ತಿಯ ಅಪ್ರಾಮಾಣಿಕ ದುರುಪಯೋಗ), 465 (ನಕಲಿ), ಆರ್/ಡಬ್ಲ್ಯೂ ಸೆಕ್ಷನ್ 34 (ಸಾಮಾನ್ಯ ಉದ್ದೇಶದಿಂದ ಅಪರಾಧ ಕೃತ್ಯ), ಹಕ್ಕುಸ್ವಾಮ್ಯ ಕಾಯಿದೆಯ ಸೆಕ್ಷನ್ 33 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸಂಪೂರ್ಣ ದೂರನ್ನು ನಿಜವೆಂದು ಒಪ್ಪಿಕೊಂಡರೂ ಕ್ರಿಮಿನಲ್ ದೂರು ದಾಖಲಿಸುವಂತಹ ಯಾವುದೇ ಅಪರಾಧ ಇಲ್ಲಿಲ್ಲ ಎಂದು ಪೊನ್ನಣ್ಣ ವಾದಿಸಿದ್ದಾರೆ.
ಎಂಆರ್ಟಿ ಸ್ಟುಡಿಯೋವನ್ನು ಪ್ರತಿನಿಧಿಸುವ ಹಿರಿಯ ವಕೀಲ ಶ್ಯಾಮಸುಂದರ್ ಎಂಎಸ್ ಪ್ರತಿಕ್ರಿಯಿಸಿ, ಆಕ್ಷೇಪಾರ್ಹ ವಿಷಯವನ್ನು ಕಾಂಗ್ರೆಸ್ ಪಕ್ಷದ ಖಾತೆಗಳಲ್ಲಿ ಇನ್ನೂ ತೆಗೆದುಹಾಕಲಾಗಿಲ್ಲ ಎಂದು ದೂರಿದ್ದಾರೆ.
ನ್ಯಾಯಾಲಯ ನಿಂದನೆಯು ಜೈಲು ಶಿಕ್ಷೆಗೆ ಅರ್ಹವಾಗಿದೆ. ಆದ್ದರಿಂದ ದೂರಿನಲ್ಲಿ ಐಪಿಸಿ ನ್ಯಾಯವ್ಯಾಪ್ತಿಯನ್ನು ತರುವುದು ಮಾನ್ಯವಾಗಿದೆ. ಯಾವುದೇ ಬಲವಂತದ ಕ್ರಮ ಕೈಗೊಂಡಿಲ್ಲ. ತನಿಖೆ ಆರಂಭಿಕ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಗಳು ನಿಜವೇ ಎಂಬುದನ್ನು ಪತ್ತೆ ಹಚ್ಚುವುದು ತನಿಖಾಧಿಕಾರಿಯ ಕರ್ತವ್ಯವಾಗಿತ್ತು ಎಂದಿದ್ದಾರೆ.
ಕ್ರಿಮಿನಲ್ ದೂರಿನ ವಿಚಾರಣೆಗೆ ತಡೆಯಾಜ್ಞೆ ನೀಡಿದ ನಂತರ, ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಮುಂದೂಡಿತು.