Homeಮುಖಪುಟಹುಬ್ಬಳ್ಳಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ : ಇನ್ಸಲ್ಟ್ ಉತ್ತರ ಕರ್ನಾಟಕ - ರಿಯಲ್ ಎಸ್ಟೇಟ್ ಧಮಾಕ..

ಹುಬ್ಬಳ್ಳಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ : ಇನ್ಸಲ್ಟ್ ಉತ್ತರ ಕರ್ನಾಟಕ – ರಿಯಲ್ ಎಸ್ಟೇಟ್ ಧಮಾಕ..

2010 ಜೂನ್ 4, 5ರಂದು ಬೆಂಗಳೂರಲ್ಲಿ ಒಂದು ಗ್ಲೋಬಲ್ ಇನ್ವೆಸ್ಟ್‌ ಮೀಟ್ ನಡೆದಿತ್ತು. ಆದರೆ ಅಭಿವೃದ್ದಿಯ ಬದಲು ರಾಜ್ಯದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲಾಗಿತ್ತು.. ಅದರ ಮುಂದಿನ ಭಾಗ ಇದು..

- Advertisement -
- Advertisement -

‘ಇನ್ವೆಸ್ಟ್ ಕರ್ನಾಟಕ’ ಎಂಬ 8 ತಾಸುಗಳ ಡ್ರಾಮಾ ಆಡುವ ಮೂಲಕ ‘ಇನ್ಸಲ್ಟ್ ಉತ್ತರ ಕರ್ನಾಟಕ’ ಎಂಬ ಅಪಹಾಸ್ಯವನ್ನು ಫೆ.14ರಂದು ಯಡಿಯೂರಪ್ಪ ಮತ್ತವರ ಬಳಗ ಹುಬ್ಬಳ್ಳಿಯಲ್ಲಿ ಮಾಡಿ ಹೋಗಿದೆ. ನೆರೆ ಸಂತ್ರಸ್ರರಿಗೆ ತಲೆ ಮೇಲೆ ನೆರಳು ಕೊಡಲಾಗದ ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಉದ್ಯಮಿಗಳಿಗೆ ಮೂಲಭೂತ ಸೌಕರ್ಯ ಒದಗಿಸುತ್ತಾರಂತೆ…!

ಇವರು ಹೀಗೆ ಹೇಳುವ ಹೊತ್ತಿನಲ್ಲಿ ವೇದಿಕೆ ಮೇಲಿದ್ದ ಗಣಿ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು, ತಿಂಗಳ ಹಿಂದಷ್ಟೇ ತಮ್ಮ ನರಗುಂದ ಕ್ಷೇತ್ರದ ನೆರೆಪೀಡಿತ ಗ್ರಾಮಗಳಲ್ಲಿ ಸಂಚರಿಸುವಾಗ, ಗ್ರಾಮಸ್ಥರು ಎಕ್ಕುಟ್ಟಿ ಹೋದ ರಸ್ತೆ ರಿಪೇರಿ ಮಾಡಿಸಿ ಎಂದಾಗ, ಎಲ್ಲಿಂದ ರೊಕ್ಕ ತರಲಿ? ಬೊಕ್ಕಸದಲ್ಲಿ ಪುಟ್ಟಿ ಮಣ್ಣಿಗೂ ದುಡ್ಡಿಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರದ ಹಣಕಾಸು ಸ್ಥಿತಿಯ ಅಧೋಗತಿಯನ್ನು ಸಾಂಕೇತಿಕವಾಗಿ ಹೇಳಿದ್ದರು.

 

ಅದಿರಲಿ, ಇಡೀ ಕಾರ್ಯಕ್ರಮ ಒಂದು ಪ್ರಹಸನದಂತೆ ಭಾಸವಾಗುತ್ತಿತ್ತು. ಭಾಷಣಕಾರರೆಲ್ಲ ಉತ್ತರ ಕರ್ನಾಟಕದ ಸಮಸ್ಯೆಗಳೇ ಬಗೆಹರಿದವು ಎಂಬಂತೆ ಮಾತಾಡುತ್ತಿದ್ದರು. ವೇದಿಕೆ ಹತ್ತಿದ ಉದ್ಯಮಿಗಳಂತೂ ಬಾಯಿ ತೆರೆದರೆ ಸಾವಿರ ಕೋಟಿ ರೂ. ಬಂಡವಾಳ ಹೂಡುತ್ತೇವೆ ಎನ್ನುತ್ತಿದ್ದುದು ಬಾಯಿಪಾಠದ ಸಾಲಿನಂತಿರುತ್ತಿತ್ತು.
ಎಲ್ಲಕ್ಕಿಂತ ಅಪಾಯಕಾರಿ ಸಂಗತಿ ಎಂದರೆ, ಬೆಂಗಳೂರು ಸುತ್ತಮುತ್ತ ಕೈಗಾರಿಕೆ ಹೆಸರಲ್ಲಿ ಭೂಮಿ ಹೊಡೆದವರು ಈಗ ಇಲ್ಲಿಗೂ ದಾಳಿ ಇಟ್ಟಿರುವುದು. ಮೂಲಭೂತ ಸೌಕರ್ಯಗಳಿಲ್ಲದೇ ಹೂಡಿಕೆ ಮಾಡಲು ಯಾವ ಉದ್ಯಮಿಯೂ ಮೂರ್ಖನಲ್ಲ. ಮೂಲಭೂತ ಸೌಕರ್ಯ ಕಲ್ಪಿಸಲು ಬಿಡಿ, ನೆರೆ ಸಂತ್ರಸ್ತರಿಗೆ ಕನಿಷ್ಠ ಸೌಲಭ್ಯ ಕೊಡಲೂ ಆಗದ ದುಸ್ಥಿತಿಯಲ್ಲಿ ಸರ್ಕಾರವಿದೆ.

ರಿಯಲ್‌ ಎಸ್ಟೇಟ್‌ ದಂಧೆ..

ಹಾಗಿದ್ದರೆ ಈ ಉದ್ಯಮಿಗಳು ಹೂಡಿಕೆ ಭರವಸೆ ನೀಡಿದ್ದು ಯಾವ ಆಧಾರದ ಮೇಲೆ? ಇಲ್ಲೇ ಶುರುವಾಗುತ್ತದೆ ರಿಯಲ್ ಎಸ್ಟೇಟ್ ದಂಧೆಯ ಕತೆ. ಈಗ ಸ್ವಲ್ಪ ಫ್ಲಾಶಬ್ಯಾಕ್‌ಗೆ ಹೋಗೋಣ. 2010 ಜೂನ್ 4, 5ರಂದು ಬೆಂಗಳೂರಲ್ಲಿ ಒಂದು ಗ್ಲೋಬಲ್ ಇನ್ವೆಸ್ಟರ್‍ಸ್‌ ಮೀಟ್ ನಡೆಯಿತು. ಹುಬ್ಬಳ್ಳಿಯಲ್ಲಿ ವೇದಿಕೆ ಮೇಲಿದ್ದ ಬಹುಪಾಲು ಮುಖಗಳೇ ಅವತ್ತು ಬೆಂಗಳೂರಿನ ವೇದಿಕೆ ಮೇಲಿದ್ದವು. ಆಗಲೂ ಯಡಿಯೂರಪ್ಪ ಮುಖ್ಯಮಂತ್ರಿ. ಆ ‘ಜಾತ್ರೆ’ಯಲ್ಲಿ ಸ್ಟೀಲ್ ಸೆಕ್ಟರ್ ಒಂದರಲ್ಲೇ 2 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದಗಳಾದವು. ಆಗ ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿಯ ಬ್ರಹ್ಮಣಿ ಸ್ಟೀಲ್ಸ್ ಕಂಪನಿ ಬಳ್ಳಾರಿ ಸಮೀಪ 36 ಸಾವಿರ ಕೋಟಿ ರೂ. ಬಂಡವಾಳ ಹೂಡಿ, 6 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆಯ ಫ್ಯಾಕ್ಟರಿ ಸ್ಥಾಪಿಸುವುದಾಗಿ ಒಡಂಬಡಿಕೆ ಮಾಡಿಕೊಂಡಿತು.

ಅದಕ್ಕಾಗಿ ರಿಯಾಯತಿ ದರದಲ್ಲಿ ಸುಮಾರು 1,500 ಎಕರೆ ಭೂಮಿಯನ್ನು ಸರ್ಕಾರದಿಂದ ಪಡೆಯಿತು. ಕೇವಲ ಎಂಟೇ ತಿಂಗಳಲ್ಲಿ, ಮುಂಬೈ ಮೂಲದ ಮಿಗ್ಲಾನಿ ಕುಟುಂಬದ ಉತ್ತಮ್ ಗಲ್ವಾ ಸ್ಟೀಲ್ಸ್ ಕಂಪನೆಗೆ ಮಾರಿಬಿಟ್ಟರು. ವಿಚಿತ್ರ ಎಂದರೆ, ಬ್ರಹ್ಮಣಿ ಎನ್ನುವ ಕಂಪನಿ ಅಸ್ತಿತ್ವದಲ್ಲೇ ಇರಲಿಲ್ಲ. ರೆಡ್ಡಿಗೆ ಸ್ಟೀಲ್ ಫ್ಯಾಕ್ಟರಿ ಮಾಡುವ ಉದ್ದೇಶವೂ ಇರಲಿಲ್ಲ. ಹಾಗಾದರೆ ಉತ್ತಮ್ ಗಲ್ವಾ ಕಂಪನಿಗೆ ಮಾರಿದ್ದೇನು? ಬಳ್ಳಾರಿ ಜಿಲ್ಲೆಯ ಫಲವತ್ತಾದ ಭೂಮಿಯನ್ನು, ನೆನಪಿರಲಿ ಸಾವಿರಾರು ಕೋಟಿಯ ಮಾರುಕಟ್ಟೆ ಬೆಲೆಗೆ!

2007ರಲ್ಲಿ ಆಂಧ್ರದಲ್ಲಿ ವೈಎಸ್‌ಆರ್ ಸರ್ಕಾರವಿದ್ದಾಗ ಅಲ್ಲೂ ಬ್ರಹ್ಮಣಿ ಹೆಸರಲ್ಲಿ ವೈಎಸ್‌ಆರ್ ಮತ್ತು ಜನಾರೆಡ್ಡಿ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದರು. ಅಲ್ಲಿ ಬ್ರಹ್ಮಣಿ ಸ್ಟೀಲ್ಸ್ ಹೆಸರಲ್ಲಿ 2 ಮಿಲಿಯನ್ ಟನ್ ಸ್ಟೀಲ್ ಫ್ಯಾಕ್ಟರಿಗೆ ಬಂಡವಾಳ ಹೂಡುವುದಾಗಿ, ಕಡಪಾ ಜಿಲ್ಲೆಯಲ್ಲಿ ಎಕರೆಗೆ ಕೇವಲ 18 ಸಾವಿರದಂತೆ, 10,760 ಎಕರೆ (ಒಟ್ಟು ಮೊತ್ತ ಕೇವಲ 19 ಕೋಟಿ ರೂ) ಮತ್ತು ಏರ್‌ಪೋರ್ಟ್ ಮಾಡುವುದಾಗಿ 78 ಕೋಟಿಗೆ 3,115 ಎಕರೆ ಭೂಮಿಯನ್ನು ಪಡೆದಿದ್ದರು.

ಈ ಭೂಮಿಯನ್ನೆಲ್ಲ ಆಕ್ಸಿಸ್ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಜನಾರ್ಧನ ರೆಡ್ಡಿ, 350 ಕೋಟಿ ರೂ ಸಾಲ ಎತ್ತಿದ್ದರು! ಮುಂದಿನ ಸರ್ಕಾರ ಈ ಒಪ್ಪಂದವನ್ನೇ ರದ್ದು ಮಾಡಿತು. ರೆಡ್ಡಿಯ ಈ ದಂಧೆ ಕುರಿತು 2012ರಲ್ಲಿ ಇಂಗ್ಲಿಷ್ ಪತ್ರಿಕೆಯೊಂದಿಗೆ ಮಾತಾಡಿದ್ದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಆತನಿಗೆ ಸ್ಟೀಲ್ ಫ್ಯಾಕ್ಟರಿ ಮಾಡುವ ಯಾವ ಉದೇಶವೂ ಇಲ್ಲ. ಸರ್ಕಾರದಿಂದ ತುಂಬ ಕಡಿಮೆ ಬೆಲೆಗೆ ಭೂಮಿ ಪಡೆಯುವುದು, ಅದನ್ನು 50-60 ಪಟ್ಟಿಗೆ ಮಾರಿಬಿಡುವುದೇ ಆತನ ‘ಮೊಡಸ್ ಅಪರೆಂಡಿ’ ಎಂದಿದ್ದರು.

ಹುಬ್ಬಳ್ಳಿಯಲ್ಲೂ ರಿಯಲ್ ಎಸ್ಟೇಟ್ ಧಮಾಕ?
ಸಚಿವ ಜಗದೀಶ ಶೆಟ್ಟರ್ ಸಹೋದರ ಎಂಎಲ್‌ಸಿ ಪ್ರದೀಪ ಶೆಟ್ಟರ್ ಹೇಳಿಕೇಳಿ ರಿಯಲ್‌ಎಸ್ಟೇಟ್ ವ್ಯವಹಾರದವರು. ಹಿಂದೆ ಹುಬ್ಬಳ್ಳಿಯ ಸುಪ್ರಸಿದ್ಧ ಜಿಮಖಾನಾ ಕ್ಲಬ್ ಮತ್ತು ಅದರ ಭೂಮಿಯನ್ನು ಎಗರಿಸಲು ಶೆಟ್ಟರ್, ಜೋಶಿ ಯತ್ನಿಸಿದ್ದರು. ಇದರ ವಿರುದ್ಧ ಎಸ್‌.ಆರ್ ಹಿರೇಮಠ ಕಾನೂನು ಹೋರಾಟ ಮಾಡಿದ್ದರು. ಪಾಟೀಲ ಪುಟ್ಟಪ್ಪ ಉಪವಾಸ ಕುಳಿತಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು.

ಹೀಗಾಗಿ ಕಳೆದ ಶುಕ್ರವಾರ ಹುಬ್ಬಳ್ಳಿಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕದಲ್ಲೂ ಭೂ ದರೋಡೆಯ ವಾಸನೆ ಹೊಡೆಯುತ್ತಿತ್ತು. ಹಾಗೆಯೇ ಸಮಸ್ಯೆಯಲ್ಲಿರುವ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶವಿತ್ತು. ಸಾರ್ವಜನಿಕವಾಗಿ ನಡೆಯಬೇಕಿದ್ದ ಈ ಕಾರ್ಯಕ್ರಮ ಡೆನಿಸನ್ಸ್ ಎಂಬ ಐಷಾರಾಮಿ ಹೊಟೆಲ್ ಒಳಗಡೆ ಕೇವಲ ವಿಐಪಿಗಳ ನಡುವೆ ಜರುಗಿತು.

ಎಲ್ಲಕ್ಕಿಂತ ಮುಖ್ಯವಾಗಿ ಪುಟ್ಟಿ ಮಣ್ಣಿಗೂ ರೊಕ್ಕ ಇಲ್ಲ ಎಂದು ನೆರೆಪೀಡಿತರನ್ನು ಅವಮಾನಿಸಿದ ಸರ್ಕಾರ ಎ.ಸಿ. ಹಾಲ್‌ನಲ್ಲಿ ಕುಳಿತು, ಉದ್ಯಮಿಗಳ ಬಾಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಎಂದು ಹೇಳಿಸುವ ಮೂಲಕ ಉತ್ತರ ಕರ್ನಾಟದ ಜನರನ್ನೇ ಅವಮಾನಿಸಿದೆ ಅಷ್ಟೇ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...