ಇಸ್ರೇಲ್-ಹಮಾಸ್ ಯುದ್ಧದಲ್ಲಿ ಮೊದಲ ಭಾರತೀಯ ಪ್ರಜೆ ಬಲಿಯಾಗಿದ್ದಾರೆ, ಕೇರಳ ಮೂಲದ ವ್ಯಕ್ತಿಯೊಬ್ಬರು ಉತ್ತರ ಇಸ್ರೇಲ್ನ ಮಾರ್ಗಲಿಯೊಟ್ನಲ್ಲಿ ನಿನ್ನೆ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿಯು ಇಂದು ಬೆಳಿಗ್ಗೆ ಹೇಳಿಕೆಯಲ್ಲಿ, ಹೆಜ್ಬುಲ್ಲಾದ “ಹೇಡಿಗಳ” ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಕ್ಷಿಪಣಿ ದಾಳಿಯ ಸಮಯದಲ್ಲಿ ಮೂವರು ಹಣ್ಣಿನ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೆ ತಿಳಿಸಿದೆ. ಇಸ್ರೇಲ್ ರಾಯಭಾರ ಕಚೇರಿಯು ಮೃತರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದೆ. ‘ಇಸ್ರೇಲಿ ವೈದ್ಯಕೀಯ ಸಂಸ್ಥೆಗಳು ಸಂಪೂರ್ಣವಾಗಿ ಗಾಯಗೊಂಡವರ ಸೇವೆಯಲ್ಲಿವೆ, ಅವರು ನಮ್ಮ ಅತ್ಯುತ್ತಮ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಯೋತ್ಪಾದನೆಯಿಂದಾಗಿ ಗಾಯಗೊಂಡ ಅಥವಾ ಕೊಲ್ಲಲ್ಪಟ್ಟ ಎಲ್ಲಾ ಪ್ರಜೆಗಳು, ಇಸ್ರೇಲಿ ಅಥವಾ ವಿದೇಶಿಯರನ್ನು ಇಸ್ರೇಲ್ ಸಮಾನವಾಗಿ ಪರಿಗಣಿಸುತ್ತದೆ. ನಾವು ಮೃತರ ಕುಟುಂಬಗಳ ಬೆಂಬಲಕ್ಕೆ ಇರುತ್ತೇವೆ; ಅವರಿಗೆ ಸಹಾಯಹಸ್ತ ನೀಡುತ್ತವೆ’ ಎಂದು ಅದು ಹೇಳಿದೆ.
‘ನಾಗರಿಕ ಸಾವಿನಿಂದಾಗುವ ನಷ್ಟದ ಬಗ್ಗೆ ಚೆನ್ನಾಗಿ ತಿಳಿದಿರುವ ನಮ್ಮ ದೇಶಗಳು, ಗಾಯಗೊಂಡವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳುವ ಮತ್ತು ದುಃಖಿತರ ಕುಟುಂಬಕ್ಕೆ ಸಾಂತ್ವನದ ಭರವಸೆಯಲ್ಲಿ ಒಗ್ಗಟ್ಟಿನಿಂದ ನಿಂತಿವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕ್ಷಿಪಣಿಯನ್ನು ಲೆಬನಾನ್ನಿಂದ ಉಡಾಯಿಸಲಾಗಿದೆ ಎಂದು ತಿಳಿದುಬಂದಿದ್ದು, ಉತ್ತರ ಇಸ್ರೇಲ್ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಹಮಾಸ್ಗೆ ಬೆಂಬಲವಾಗಿ ಹೆಜ್ಬೊಲ್ಲಾದ ಶಿಯಾ ಬಣವು ರಾಕೆಟ್ ದಾಳಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.
ಇಸ್ರೇಲಿ ನಗರಗಳ ಮೇಲೆ ಅಕ್ಟೋಬರ್ 7ರ ದಾಳಿಯ ನಂತರ ಸುಮಾರು ಐದು ತಿಂಗಳ ಕಾಲ ಇಸ್ರೇಲ್-ಹಮಾಸ್ ಯುದ್ಧವು ಉಲ್ಬಣಗೊಂಡಿದೆ. ಟೆಲ್ ಅವಿವ್ನ ಕ್ರೂರ ಪ್ರತಿದಾಳಿಯು ಗಾಜಾ ಪಟ್ಟಿಯಲ್ಲಿ ಸಾವಿರಾರು ಸಾವುಗಳಿಗೆ ಕಾರಣವಾಗಿದೆ.
ಯುಎನ್ ಜನರಲ್ ಅಸೆಂಬ್ಲಿಯಲ್ಲಿ ನಡೆದ ಬ್ರೀಫಿಂಗ್ನಲ್ಲಿ, ಯುಎನ್ಗೆ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಮಾತನಾಡಿ, ‘ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷವು ನಾಗರಿಕರ ಜೀವಗಳನ್ನು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ದೊಡ್ಡ ಪ್ರಮಾಣದ ನಷ್ಟಕ್ಕೆ ಕಾರಣವಾಗಿದೆ’ ಎಂದು ಹೇಳಿದರು.
‘ಇದು ಸರಳವಾಗಿ ಸ್ವೀಕಾರಾರ್ಹವಲ್ಲ; ಸಂಘರ್ಷದಲ್ಲಿ ನಾಗರಿಕರ ಸಾವುಗಳನ್ನು ನಾವು ಬಲವಾಗಿ ಖಂಡಿಸಿದ್ದೇವೆ. ಭಾರತವು ಭಯೋತ್ಪಾದನೆಯ ವಿರುದ್ಧ ಅದರ ಎಲ್ಲ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ದೀರ್ಘಕಾಲದ, ರಾಜಿಯಾಗದ ಸ್ಥಾನವನ್ನು ಹೊಂದಿದೆ’ ಎಂದು ಅವರು ಹೇಳಿದರು.
‘ಇಸ್ರೇಲ್ನ ಭದ್ರತಾ ಅಗತ್ಯತೆಗಳಿಗೆ ಅನುಗುಣವಾಗಿ ಸುರಕ್ಷಿತ ಗಡಿಯೊಳಗೆ ಸ್ವತಂತ್ರ ದೇಶದಲ್ಲಿ ಪ್ಯಾಲೇಸ್ಟಿನಿಯನ್ ಜನರು ಮುಕ್ತವಾಗಿ ಬದುಕಲು ಸಾಧ್ಯವಾಗುವ ಎರಡು-ರಾಜ್ಯ ಪರಿಹಾರವನ್ನು ಬೆಂಬಲಿಸಲು ಭಾರತ ಬದ್ಧವಾಗಿದೆ’ ಎಂದು ಅವರು ಹೇಳಿದರು.
ಮೃತ ಭಾರತೀಯ ಯಾರು?
ಮೃತ ವ್ಯಕ್ತಿ ಕೇರಳದ ಕೊಲ್ಲಂನ ಪಟ್ನಿಬಿನ್ ಮ್ಯಾಕ್ಸ್ವೆಲ್ ಎಂದು ಗುರುತಿಸಲಾಗಿದೆ. ಇಬ್ಬರು ಗಾಯಾಳುಗಳಾದ ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಅವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮ್ಯಾಕ್ಸ್ವೆಲ್ ಅವರ ಪಾರ್ಥಿವ ಶರೀರವನ್ನು ಜಿವ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಮೆಲ್ವಿನ್ರನ್ನು ಉತ್ತರ ಇಸ್ರೇಲಿ ನಗರದ ಸಫೆದ್ನ ಝಿವ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರು.
ದಾಳಿಯಲ್ಲಿ ಓರ್ವ ವಿದೇಶಿ ಕಾರ್ಮಿಕ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಈ ಹಿಂದೆ ಎಂಡಿಎ ಹೇಳಿತ್ತು.
ಇದನ್ನೂ ಓದಿ; 5 ವರ್ಷದಲ್ಲಿ 22 ಸಾವಿರ ಚುನಾವಣಾ ಬಾಂಡ್ ಬಿಡುಗಡೆ : ಎಸ್ಬಿಐ