ಗಾಝಾ ಮೇಲೆ ಯುದ್ಧ ಘೋಷಿಸಿ ಇಸ್ರೇಲ್ ನಡೆಸಿದ ದಾಳಿಯಿಂದ 20,258ಕ್ಕೂ ಅಧಿಕ ಪ್ಯಾಲೆಸ್ತೀನ್ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದಲ್ಲದೆ ಗಾಝಾದಲ್ಲಿ ಯುದ್ಧಪೀಡಿತ ಜನರಿಗೆ ನೆರವನ್ನು ನೀಡುತ್ತಿದ್ದ 136 ವಿಶ್ವಸಂಸ್ಥೆಯ ಸಿಬ್ಬಂದಿಗಳ ಹತ್ಯೆ ನಡೆದಿದೆ.
ಯುದ್ಧಪೀಡಿತ ಗಾಝಾದಲ್ಲಿ ಯುಎನ್ ನಿರಾಶ್ರಿತರ ಶಿಬಿರಗಳನ್ನು ನಡೆಸುತ್ತಿದೆ. ಜಬಾಲಿಯಾ ಮತ್ತು ಬುರೇಜ್ ಸೇರಿ ಹಲವೆಡೆ ಇರುವ ನಿರಾಶ್ರಿತರ ಶಿಬಿರಗಳಲ್ಲಿ ಲಕ್ಷಾಂತರ ಗಾಝಾ ಪಟ್ಟಿಯ ಜನ ಆಶ್ರಯವನ್ನು ಪಡೆದುಕೊಂಡಿದ್ದಾರೆ. ಯುಎನ್ ಅವರಿಗೆ ಆಹಾರ, ಔಷಧಿ ಸೇರಿ ಅಗತ್ಯ ನೆರವುಗಳನ್ನು ನೀಡುತ್ತಿದೆ. ಇಸ್ರೇಲ್ ಯದ್ಧದ ವೇಳೆ ಕಳೆದ 75 ದಿನಗಳಲ್ಲಿ 136 ವಿಶ್ವಸಂಸ್ಥೆಯ ಸಿಬ್ಬಂದಿಗಳ ಹತ್ಯೆ ನಡೆಸಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಹೇಳಿಕೆಯನ್ನು ನೀಡಿದ್ದು, ಯುಎನ್ ಇತಿಹಾಸದಲ್ಲಿ ನಾವು ಎಂದಿಗೂ ಈ ರೀತಿ ಘಟನೆ ನೋಡಿರಲಿಲ್ಲ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ನಾನು ಹತ್ಯೆಯಾದ ಸಿಬ್ಬಂದಿಗಳಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಗಾಝಾದಲ್ಲಿ ಸಾವಿರಾರು ಕಾರ್ಯಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಾಗರಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಗುಟೆರೆಸ್ ಹೇಳಿದ್ದಾರೆ.
ಇಸ್ರೇಲ್ ಆಕ್ರಮಣವನ್ನು ನಡೆಸುತ್ತಿರುವ ರೀತಿಯು ಗಾಝಾದೊಳಗೆ ಮಾನವೀಯ ನೆರವು ವಿತರಣೆಗೆ ಭಾರಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಗಾಝಾದಲ್ಲಿ ಪರಿಣಾಮಕಾರಿ ನೆರವು ಕಾರ್ಯಾಚರಣೆಗೆ ಭದ್ರತೆಯ ಅಗತ್ಯವಿದೆ ಎಂದು ಗುಟೆರೆಸ್ ಹೇಳಿದ್ದಾರೆ. ಯುಎನ್ ಭದ್ರತಾ ಮಂಡಳಿಯು ಗಾಝಾದಲ್ಲಿ ಸುಮಾರು 2 ಮಿಲಿಯನ್ ಜನರಿಗೆ ಹೆಚ್ಚಿನ ಸಹಾಯವನ್ನು ಕೋರುವ ನಿರ್ಣಯವನ್ನು ಅಂಗೀಕರಿಸಿದ ಗಂಟೆಗಳ ನಂತರ ಯುಎನ್ ಮುಖ್ಯಸ್ಥರು ಈ ರೀತಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಇಸ್ರೇಲ್ ಪಿಎಂ ಬೆಂಜಮಿನ್ ನೆತನ್ಯಾಹು ಅವರು ಗಾಝಾದಲ್ಲಿ ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಯ ಕುರಿತು ಮತ್ತೆ ಚರ್ಚೆ ನಡೆಸಿದ್ದಾರೆ ಎಂದು ಶ್ವೇತಭವನ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ನಿನ್ನೆ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಹಲವಾರು ದಿನಗಳ ನಂತರ ಗಾಝಾಕ್ಕೆ ಹೆಚ್ಚಿನ ನೆರವನ್ನು ನೀಡುವ ಕುರಿತು ನಿರ್ಣಯವನ್ನು ಅಂಗೀಕರಿಸಿದೆ. ಆದರೆ ಕದನ ವಿರಾಮದ ಬಗ್ಗೆ ಪ್ರಸ್ತಾಪಿಸಿಲ್ಲ. ಈ ಮೊದಲು ಯುಎನ್ ಹಲವು ಬಾರಿ ಕದನ ವಿರಾಮದ ಬಗ್ಗೆ ಪ್ರಸ್ತಾಪಿಸಿದ್ದವು ಅದರೆ ಅಮೆರಿಕ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿತ್ತು.
ಇಸ್ರೇಲ್ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯು ಹಿರಿಯ ಯುಎನ್ ನೆರವು ಸಿಬ್ಬಂದಿ ಸೇರಿದಂತೆ ಆತನ ಕುಟುಂಬದ 70ಕ್ಕೂ ಹೆಚ್ಚು ಸದಸ್ಯರ ಹತ್ಯೆ ನಡೆದಿದೆ ಎಂದು ಯುಎನ್ ತಿಳಿಸಿದೆ. 56 ವರ್ಷದ ಇಸ್ಸಾಮ್ ಅಲ್-ಮುಘ್ರಾಬಿ ಮತ್ತು ಅವರ ಪತ್ನಿ, ಐದು ಮಕ್ಕಳು ಮತ್ತು ಇತರ ಸಂಬಂಧಿಕರು ಗಾಝಾ ನಗರದ ಬಳಿ ಬಾಂಬ್ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ಯುಎನ್ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಸ್ಸಾಮ್ ಮತ್ತು ಅವರ ಕುಟುಂಬದ ಸದಸ್ಯರ ನಷ್ಟವು ನಮ್ಮೆಲ್ಲರ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಶಾಲೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಜಾತಿ ದೌರ್ಜನ್ಯ: ಅಧ್ಯಯನದಿಂದ ಬಯಲು