ಸಂಸತ್ತಿನ ಭದ್ರತೆ ಉಲ್ಲಂಘಿಸಿ ಲೋಕಸಭೆಗೆ ನುಗ್ಗಿದ್ದವರಿಗೆ ಪ್ರವೇಶ ಪಾಸ್ ನೀಡಿದ್ದ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ದೇಶದ್ರೋಹಿಯೋ ಅಥವಾ ದೇಶಪ್ರೇಮಿಯೋ ಎಂಬುದನ್ನು, ಬೆಟ್ಟದ ಮೇಲಿರುವ ತಾಯಿ ಚಾಮುಂಡಿ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಜನರು ಅಂತಿಮವಾಗಿ ನಿರ್ಧರಿಸುತ್ತಾರೆ’ ಎಂದು ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ‘ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ನನ್ನ ವಿರುದ್ಧ ಮಾಡಲಾದ ‘ದೇಶದ್ರೋಹಿ’ ಆರೋಪಗಳ ಬಗ್ಗೆ ನಿರ್ಧರಿಸಲು ದೇವರು ಮತ್ತು ನನ್ನ ಬರಹಗಳನ್ನು 20 ವರ್ಷಗಳಿಂದ ಓದಿಕೊಂಡು ಬಂದಿರುವವರಿಗೆ ಬಿಡುತ್ತೇನೆ’ ಎಂದು ಹೇಳಿದರು.
‘ಪ್ರತಾಪಸಿಂಹ ದೇಶದ್ರೋಹಿಯೋ ಅಥವಾ ದೇಶಪ್ರೇಮಿಯೋ ಎನ್ನುವುದನ್ನು ಮೈಸೂರಿನ ಬೆಟ್ಟದ ಮೇಲೆ ಕುಳಿತಿರುವ ಮಾತೆ ಚಾಮುಂಡೇಶ್ವರಿ, ಬ್ರಹ್ಮಗಿರಿಯ ಮೇಲೆ ಕುಳಿತಿರುವ ಕಾವೇರಿ ಮಾತೆ, ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ಬರಹಗಳನ್ನು ಓದುತ್ತಿರುವ ಕರ್ನಾಟಕದಾದ್ಯಂತ ಇರುವ ನನ್ನ ಓದುಗರು ಮತ್ತು ಕಳೆದ ಒಂಬತ್ತೂವರೆ ವರ್ಷಗಳಿಂದ ನನ್ನ ಕೆಲಸ, ದೇಶ, ಧರ್ಮ ಮತ್ತು ರಾಷ್ಟ್ರೀಯತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನನ್ನ ನಡವಳಿಕೆಯನ್ನು ನೋಡಿದ ಮೈಸೂರು-ಕೊಡಗಿನ ಜನರು ಲೋಕಸಭೆ ಚುನಾವಣೆಯಲ್ಲಿ ಮತಗಳ ಮೂಲಕ ತಮ್ಮ ತೀರ್ಪು ನೀಡಲಿದ್ದಾರೆ’ ಎಂದು ಹೇಳಿದರು.
ಮೈಸೂರಿನಲ್ಲಿ ‘ದೇಶದ್ರೋಹಿ’ ಎಂದು ಹಾಕಲಾದ ಪೋಸ್ಟರ್ಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅಂತಿಮವಾಗಿ ಜನರು ತೀರ್ಪು ನೀಡಬೇಕಾಗಿದೆ, ಅವರು ನಾನು ಏನೆಂಬುದನ್ನು ನಿರ್ಧರಿಸುತ್ತಾರೆ; ನಾನು ಅದನ್ನು ಜನರ ನಿರ್ಧಾರಕ್ಕೆ ಬಿಡುತ್ತೇನೆ. ಅದನ್ನು ಬಿಟ್ಟು ಬೇರೆ ಏನು ಹೇಳುವುದಿಲ್ಲ’ ಎಂದರು.
ಘಟನೆಯ ಕುರಿತು ಪೊಲೀಸರು ನಿಮ್ಮ ಹೇಳಿಕೆ ದಾಖಲಿಸಿದ್ದಾರೆಯೇ ಎಂದು ಕೇಳಿದಾಗ, ‘ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ, ಈ ಬಗ್ಗೆ ಬೇರೆ ಏನನ್ನೂ ಹೇಳುವುದಿಲ್ಲ’ ಎಂದರು.
ಇದನ್ನೂ ಓದಿ; ಹಿಂದಿ ಭಾಷಿಕರು ತಮಿಳುನಾಡಿನಲ್ಲಿ ಶೌಚಾಲಯ ಸ್ವಚ್ಛಗೊಳಿಸುತ್ತಾರೆ; ವಿವಾದ ಸೃಷ್ಟಿಸಿದ ದಯಾನಿಧಿ ಮಾರನ್ ಹೇಳಿಕೆ