Homeಮುಖಪುಟಬೆಲೆ ಕಟ್ಟಲಾಗದ ಗೃಹಿಣಿಯರ ಮನೆ ಕೆಲಸಕ್ಕೆ ಇನ್ನಾದರೂ ಸಿಗಬಹುದೇ ಮನ್ನಣೆ?

ಬೆಲೆ ಕಟ್ಟಲಾಗದ ಗೃಹಿಣಿಯರ ಮನೆ ಕೆಲಸಕ್ಕೆ ಇನ್ನಾದರೂ ಸಿಗಬಹುದೇ ಮನ್ನಣೆ?

- Advertisement -
- Advertisement -

ಸಂದರ್ಭ-1: “ನನ್ನ ಹೆಸರಿನಲ್ಲೇ ಒಂದು ಬ್ಯಾಂಕ್ ಅಕೌಂಟ್ ಇರುವಾಗ ಮತ್ತೆ ನಿನ್ನ ಹೆಸರಿನಲ್ಲೂ ಇನ್ನೊಂದು ಅಕೌಂಟ್ ಏಕೆ ಬೇಕು?”

ಸಂದರ್ಭ-2: “ನಿನ್ನ ದುಡ್ಡು ಅಂದರೆ ಅದ್ಯಾವುದು, ಹೇಗೆ ಬಂತು ನಿನ್ನ ಹತ್ತಿರ. ನಾನು ನಿನಗೆ ಕೊಟ್ಟಿದ್ದೇ ತಾನೇ ಮತ್ತೆ ಅದ್ಹೇಗೆ ನಿನ್ನ ದುಡ್ಡು ಆಗುವುದಕ್ಕೆ ಸಾಧ್ಯ?”

ಬಹುಶಃ ಭಾರತದ ಲಕ್ಷಾಂತರ ಮನೆಗಳಲ್ಲಿ ಗೃಹಿಣಿಯರು ತಮ್ಮ ಗಂಡಂದಿರಿಂದ ಕೇಳುತ್ತಲೇ ಬಂದಿರುವ ಮಾತುಗಳು ಇವು. ಹೌಸ್ ವೈಫ್, ಹೋಮ್‌ಮೇಕರ್, ಬ್ರೆಡ್‌ಮೇಕರ್ ಈ ಪದಗಳು ಕೇಳಲು ಅಥವಾ ಹೇಳಲು ಸ್ವಲ್ಪ ಆಕರ್ಷಕ ಎನಿಸಿದರೂ ಗೃಹಿಣಿಯಾದವಳು ಮಾಡುವ ಮನೆಕೆಲಸ ಮಾತ್ರ ಇತರರಿಗೆ ಅನಾಕರ್ಷಕ. ಅವಳ ಮನೆಕೆಲಸಕ್ಕೆ ಸೇವೆ ಎನ್ನುವುದರ ಹೊರತಾಗಿ ಬೇರೆ ಹೆಸರು ಇಲ್ಲ, ಹುದ್ದೆಯೂ ಇಲ್ಲ, ಪದನಾಮವೂ ಇಲ್ಲ. ಯಾವುದೇ ಸಂಬಳ ತೆಗೆದುಕೊಳ್ಳದೇ ನೀವು ಎಷ್ಟು ಕಾಲ ಕೆಲಸ ಮಾಡಬಲ್ಲಿರಿ ಎಂದು ಯಾರನ್ನಾದರೂ ಕೇಳಿದರೆ ಅವರ ಉತ್ತರ ಏನಿರಬಹುದು? ಊಹಿಸುವುದು ಅಸಾಧ್ಯವೇನಲ್ಲ, ಒಂದು ವಾರ ಮಾಡಿದರೆ ಹೆಚ್ಚು. ಈಗ ಗೃಹಿಣಿಯರು ಜೀವನಪರ್ಯಂತ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಮನೆಗೆಲಸವನ್ನು ಏನೆಂದು ಕರೆಯಬೇಕು? ಉಚಿತವಾಗಿ ದೊರೆಯುವುದಕ್ಕೆ ಬೆಲೆ ಇರುವುದಿಲ್ಲ ಎಂಬ ಮಾತಿನ ಅರ್ಥ ಇದೇ ಇರಬೇಕು!

ಯಾವುದೇ ಒಬ್ಬ ಗೃಹಿಣಿಯ ಕೆಲಸ, ಮನೆಗೆಲಸ ಎಷ್ಟೇ ಸಾರ್ಥಕತೆ ಪಡೆದಿದ್ದರೂ ಅರ್ಥಪೂರ್ಣ ಕೊಡುಗೆಯನ್ನು ಕುಟುಂಬಕ್ಕೆ ನೀಡುತ್ತಿದ್ದರೂ ಅದರಲ್ಲಿ ಏನೋ ಕೀಳರಿಮೆ ಅಥವಾ ಕೊರತೆ ಕಂಡುಬರುವ ಹಾಗೆ ನಮ್ಮ ಸಮಾಜ ಗೃಹಿಣಿಯರನ್ನು ನಡೆಸಿಕೊಳ್ಳುತ್ತದೆ. ನಿವೃತ್ತರಿಗೆ, ವೃದ್ಧರಿಗೆ, ವಿಧವೆಯರಿಗೆ, ನಿರುದ್ಯೋಗಿಗಳಿಗೆ, ಅಂಗವಿಕಲರಿಗೆ ಪಿಂಚಣಿ ಅಥವಾ ಮಾಸಿಕ ಭತ್ಯೆ ಇರುವಂತೆ ಮನೆಕೆಲಸ ಮಾಡುವ ಗೃಹಿಣಿಯರಿಗೂ ಮಾಸಿಕ ಭತ್ಯೆ ಬರುವುದು ಬೇಡವೇ, ವೇತನ ಬೇಡವೇ!

ಹೀಗೊಂದು ಚರ್ಚೆಯನ್ನು ಈಗ ಹುಟ್ಟುಹಾಕಿದ್ದು ಕಮಲಹಾಸನ್ ಅವರ ’ಮಕ್ಕಳ ನೀಧಿ ಮಯಮ್ ಎಂಬ ಪಕ್ಷದ ಚುನಾವಣಾ ಪ್ರಣಾಳಿಕೆ. ಮಕ್ಕಳಿಗೂ ಪಾಕೆಟ್ ಮನಿ ಕೊಡಲಾಗುತ್ತದೆ. ಆದರೆ ಗೃಹಿಣಿಗೆ? ಅಕ್ಕಿ ಬೇಳೆ ಡಬ್ಬದಲ್ಲಿ ಮುಚ್ಚಿಟ್ಟಿದ್ದು, ಗಂಡನ ಜೇಬಿನಿಂದ ತೆಗೆದುಕೊಂಡಿದ್ದು ಅಥವಾ ಖರ್ಚೆಲ್ಲಾ ಕಳೆದು ಉಳಿಸಿದ್ದು. ಇದನ್ನೂ ತನ್ನ ಅಗತ್ಯ, ಇಚ್ಛೆಗೆ ತಕ್ಕಂತೆ ಬಳಸುವ ಅವಕಾಶ ಆಕೆಗೆ ಇರುತ್ತದೆಯೇ?

ಒಬ್ಬ ಗೃಹಿಣಿಯ ಶ್ರಮ ಸೇವೆ ತ್ಯಾಗಗಳಿಗೆ ಬೆಲೆ ಕಟ್ಟಲಾಗದು, ಕಟ್ಟಬಾರದು ಎಂಬುದು ಒಂದು ವಾದವಾದರೆ ಆರ್ಥಿಕ ಸ್ವಾವಲಂಬನೆಗೆ ನಾಂದಿ ಹಾಡುವಲ್ಲಿ ಅಡಿಪಾಯ ಹಾಕುವಲ್ಲಿ ಈ ಯೋಜನೆ ಸಹಾಯಕ ಆಗುತ್ತದೆ ಎಂಬುದು ಮತ್ತೊಂದು ವಾದ.

ಗಂಡಸು ಮನೆಯಿಂದ ಹೊರಗೆ ದುಡಿಯುವ ಪರಿಕಲ್ಪನೆಯನ್ನು ಆದಿಮಾನವ ಕೃಷಿ ಆರಂಭಿಸಿದ ಕಾಲಕ್ಕೆ ಹೋಗಿ ನೋಡಿದರೆ, ಬಹುಶಃ ಆಗಿನಿಂದಲೂ ದುಡಿದು ತಂದು ಹಾಕುವುದು ಅವನು, ಮತ್ತು ತಂದು ಹಾಕಿದ್ದನ್ನು ಬೇಯಿಸುವುದು ಅವಳು ಎಂಬ ಕಾರ್ಯವಿಭಜನೆಯು ಕಾಲಚಕ್ರ ಉರುಳಿದಂತೆ ಗಂಡು ಯಜಮಾನನ ಸ್ಥಾನ ಪಡೆದುಕೊಳ್ಳುವಂತೆ ಮಾಡಿತು. ಅಷ್ಟೇ ಅಲ್ಲ ಲಿಂಗತಾರತಮ್ಯ ಎಲ್ಲಿ ಮೊಳೆಯಿತು ಎಂದು ಅದರ ಬೇರುಗಳನ್ನು ತಡಕುತ್ತಾ ಹೋದಾಗ ಎದುರಾಗುವ ಜೈವಿಕ ಭಿನ್ನತೆಯಷ್ಟೇ ಮೂಲಭೂತವಾಗಿ ಈ ‘ಸಂಪಾದನೆ’ ಎಂಬ ಆರ್ಥಿಕ ಅಂಶವೂ ಮುಖ್ಯವಾಗಿ ಕಾಣುತ್ತದೆ.

ಹೆಣ್ಣಿನ ಸೇವೆ-ತ್ಯಾಗಗಳನ್ನು ಬೆಲೆ ಕಟ್ಟಲು ಆಗದು ಎಂದು ಅಟ್ಟಕ್ಕೆ ಏರಿಸಿ, ಆಕೆಯನ್ನು ಪರಾವಲಂಬಿ ಜೀವಿಯಾಗಿ ಬದುಕುವಂತೆ ಪುರುಷಪ್ರಧಾನ ವ್ಯವಸ್ಥೆ ಮಾಡಿದೆ. ಇನ್ನು ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಸಂಪಾದನೆ ಇಲ್ಲದವರಿಗೆ ಅಧಿಕಾರವಿಲ್ಲ, ಅವರ ಮಾತಿಗೆ ಬೆಲೆಯೂ ಇಲ್ಲ! ಹಾಗಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಯಾವುದೇ ಪ್ರತಿಫಲಗಳಿಲ್ಲದೆ ದುಡಿಯುವ ಗೃಹಿಣಿಯ ಪಾತ್ರಕ್ಕೆ ಇರುವ ಬೆಲೆಯೆಷ್ಟು? ಈ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಅವರ ಸ್ತ್ರೀಪರವಾದ ಈ ಆಲೋಚನೆ ನಿಜಕ್ಕೂ ಸ್ವಾಗತಾರ್ಹವಾಗಿ ಕಾಣಿಸುತ್ತದೆ.

ಇದೇನು ಹೊಸ ಆಲೋಚನೆಯಲ್ಲ. 1972 ರಲ್ಲಿ ಸೆಲ್ಮಾ ಜೇಮ್ಸ್ ಅವರು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೂರನೇ ರಾಷ್ಟ್ರೀಯ ಮಹಿಳಾ ವಿಮೋಚನಾ ಸಮಾವೇಶದಲ್ಲಿ ಮನೆಕೆಲಸಕ್ಕಾಗಿ ವೇತನದ ಬೇಡಿಕೆಯನ್ನು ಮೊದಲು ಮಂಡಿಸಿದರು. ಅಮೆರಿಕದ ಬರಹಗಾರ್ತಿ ಮತ್ತು ದಿ ಇಂಟರ್ನ್ಯಾಷನಲ್ ವೇಜಸ್ ಫಾರ್ ಹೌಸ್ ವರ್ಕ್ ಅಭಿಯಾನದ ಪ್ರಚಾರಕಿ, ಸೆಲ್ಮಾ ಜೇಮ್ಸ್ ವೇತನ ಸೇರಿದಂತೆ ಸಮಾಜದಲ್ಲಿ ಮಹಿಳೆಯರ ಪಾತ್ರಕ್ಕೆ ಮಾನ್ಯತೆ ಪಡೆಯುವ ದೀರ್ಘ ಹೋರಾಟದಲ್ಲಿ ತೊಡಗಿದ್ದಾರೆ. ಅವರ ಪ್ರಕಾರ ಗೃಹಿಣಿಯರಿಗೆ ವೇತನ ನೀಡುವುದು ಬಡತನ ಮತ್ತು ಮನೆಯ ಒಳಹೊರಗಿನ ಅತಿಯಾದ ಕೆಲಸದ ಬಿಕ್ಕಟ್ಟಿಗೆ ಏಕೈಕ ಪರಿಹಾರವಾಗಿದೆ. “ಬಡತನ ಮತ್ತು ಆರ್ಥಿಕ ಅವಲಂಬನೆಯು ಗೃಹಿಣಿಯರನ್ನು ಮನೆಯಲ್ಲಿ ಮತ್ತು ಸಮಾಜದಲ್ಲಿ, ಸಾಮಾನ್ಯವಾಗಿ ಆರೈಕೆ ಮಾಡುವವರು ಮತ್ತು ಪುರುಷರ ಸೇವಕರಾಗಿ ಸಾಂಸ್ಥೀಕರಣಗೊಳಿಸಿದೆ” ಎಂಬುದು ಅವರ ಅಭಿಪ್ರಾಯ.

2007ರಲ್ಲಿ ಗೃಹಿಣಿಯರಿಗೆ ಸಂಬಳ ನೀಡಿದ ಮೊದಲ ದೇಶ ವೆನೆಜುವೆಲಾ. ಅಂದಿನ ಅಧ್ಯಕ್ಷ ಹ್ಯೂಗೋ ಚಾವೆಜ್ ಇದನ್ನು ಸಂವಿಧಾನದ 88ನೇ ಪರಿಚ್ಛೇದದ ಅಡಿಯಲ್ಲಿ ಘೋಷಿಸಿದರು. ಮೊದಲ ಹಂತದಲ್ಲಿ 100,000 ಮಹಿಳೆಯರಿಗೆ ಕನಿಷ್ಠ ವೇತನದ 80% ನೀಡಲಾಯಿತು, ಆ ಸಮಯದಲ್ಲಿ ಅದು ತಿಂಗಳಿಗೆ 180 ಡಾಲರ್‌ಗೆ ಸಮನಾಗಿತ್ತು. ಮುಂದಿನ ಹಂತದಲ್ಲಿ, ನಾಲ್ಕು ತಿಂಗಳ ನಂತರ ಇನ್ನೂ ಒಂದು ಲಕ್ಷ ಗೃಹಿಣಿಯರನ್ನು ಈ ಯೋಜನೆಯಲ್ಲಿ ಒಳಗೊಳ್ಳಲಾಯಿತು. ಅಧ್ಯಕ್ಷ ಹ್ಯೂಗೋ ಚಾವೆಜ್ ಅವರ ಈ ಕಾರ್ಯವನ್ನು ಅನೇಕ ಯುರೋಪಿಯನ್ ರಾಷ್ಟ್ರಗಳು ಇಂದು ಅನುಸರಿಸುತ್ತಿವೆ.

ಇನ್ನು ಭಾರತದ ವಿಚಾರಕ್ಕೆ ಬರುವುದಾದರೆ ಭಾರತದಲ್ಲಿ, ಯುಪಿಎ-2 ಸರ್ಕಾರದ ಅವಧಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದ ಕೃಷ್ಣ ತಿರಥ್ ಅವರು 2012ರಲ್ಲಿ ಗೃಹಿಣಿಯರ ಆರ್ಥಿಕ ಸ್ವಾವಲಂಬನೆಗಾಗಿ ತಮ್ಮ ಪತಿ ವೇತನದ ನಿರ್ದಿಷ್ಟ ಪ್ರಮಾಣವನ್ನು ಹೆಂಡತಿಯರಿಗೆ ನೀಡುವ ಕಾನೂನು ತರಲು ಒತ್ತಾಯಿಸಿದ್ದರು. ಈ ಸಂಬಂಧವಾಗಿ ಸಚಿವಾಲಯಗಳು ಸಮೀಕ್ಷೆಯನ್ನು ನಡೆಸಿ ಯೋಜನೆ ಜಾರಿಗೆ ಪೂರಕವಾದ ಅಂಕಿ ಅಂಶಗಳನ್ನು ಒದಗಿಸಿದ್ದವು.

ಪಾತ್ರೆ ತೊಳೆಯುವುದಕ್ಕೊ, ಮನೆ ಸ್ವಚ್ಛ ಮಾಡುವುದಕ್ಕೊ, ಹೊರಗಿನಿಂದ ಯಾರನ್ನೇ ಕರೆಸಿ ಕೆಲಸ ಮಾಡಿಸಿದರೂ, ಅವರಿಗೆ ಹಣ ತೆರಲೇಬೇಕು. ಅವರ ಕೆಲಸ ತೃಪ್ತಿ ಕೊಡಲಿ, ಬಿಡಲಿ, ಹಣ ಕೊಡಬೇಕು. ಆದರೆ ಮನೆಯ ಎಲ್ಲರ ಇಷ್ಟಾನಿಷ್ಟಗಳನ್ನು ಸಂತೃಪ್ತಿಯಾಗುವಂತೆ ದುಡಿಯುವ ಮನೆಯ ಗೃಹಿಣಿಗೆ ಈ ಗೌರವ ಏಕಿರಬಾರದು ಎಂಬ ಚರ್ಚೆಗೆ ಸಮೀಕ್ಷೆ ಕಾರಣವಾಗಿತ್ತು.

PC : Scroll.in

ಹೀಗೆ ಗೃಹಿಣಿಯರಿಗೆ ಮಾಸಿಕ ಭತ್ಯೆ ಕೊಡುವುದರಿಂದ ಆರ್ಥಿಕ ಸ್ವಾವಲಂಬನೆ ಉಂಟಾಗುವುದೇ ಎಂದು ಅಥವಾ ಆರ್ಥಿಕ ಸ್ವಾತಂತ್ರ್ಯ ಲಭಿಸಿಬಿಡುವುದೇ ಎಂದು ಪ್ರಶ್ನೆ ಮೂಡಬಹುದು ಅಥವಾ ಅದನ್ನು ಗಂಡನೊ, ಮಕ್ಕಳೋ ಆಕೆಯಿಂದ ಕಸಿದುಕೊಂಡು ಬಳಸಿಕೊಳ್ಳಬಹುದಲ್ಲ ಎಂದು ಕೂಡ ವಾದಿಸಬಹುದು. ತನ್ನೆಲ್ಲಾ ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿ ತನ್ನದೇ ಆದ ಆರ್ಥಿಕ ಸ್ವಾವಲಂಬನೆಯ ಬಗ್ಗೆ ಆಲೋಚಿಸುವ ಮಧ್ಯಮ, ಕೆಳಮಧ್ಯಮ ವರ್ಗದ ಮಹಿಳೆಯರಿಗೆ ಇದೊಂದು ಭದ್ರ ಅಡಿಪಾಯ ಹಾಕಬಲ್ಲ ಆಲೋಚನೆ. ಈ ಯೋಜನೆ ಪ್ರತಿಯೊಬ್ಬ ಗಂಡನ ಮರ್ಜಿಯಲ್ಲೇ ಬದುಕುವ ಹೆಣ್ಣಿನಲ್ಲಿ ಆತ್ಮವಿಶ್ವಾಸ, ಸುರಕ್ಷಾಭಾವ ಮೂಡಿಸುವುದಾದರೆ ಏಕೆ ಬೇಡ ಎನ್ನಬೇಕು?

ಆದರೆ ಇದನ್ನು ನಿಗದಿಪಡಿಸುವುದು ಹೇಗೆ? ಅವಶ್ಯಕತೆ ಇರುವವರನ್ನು ಗುರುತಿಸುವುದು ಹೇಗೆ? ಶ್ರೀಮಂತ ಕುಟುಂಬಕ್ಕೆ ಸೇರಿದವರು ಅಥವಾ ಶ್ರೀಮಂತ ಗಂಡನನ್ನು ಉಳ್ಳವರು ಇದಕ್ಕೆ ಅರ್ಹರೇ ಎಂಬುದು ಚರ್ಚೆಯ ವಿಷಯವೇ ಆಗಿದೆ. ಆದರೆ ಇಂತಹ ತೊಡಕುಗಳನ್ನು ಎದುರಿಸಿರುವುದು ಇದೊಂದೇ ಯೋಜನೆಯಲ್ಲಿ ಅಲ್ಲ. ಪಡಿತರ ಚೀಟಿ ವಿತರಣೆ ಮತ್ತು ಮೀಸಲಾತಿ ನಿಗದಿಪಡಿಸುವಂತಹ ಸಂದರ್ಭಗಳಲ್ಲಿಯೂ ಇಂತಹುದೇ ಸನ್ನಿವೇಶಗಳನ್ನು ಎದುರಿಸಿದ್ದೇವೆ. ಹೀಗಾಗಿ ಚರ್ಚೆಯ ನಂತರ ಜಾರಿಗೊಳಿಸುವುದು ಉತ್ತಮ.

ಈ ವಿಚಾರವನ್ನು ಕೇವಲ ಚುನಾವಣಾ ಪ್ರಣಾಳಿಕೆಯ ಒಂದು ಭಾಗ ಅಥವಾ ಆ ಪಕ್ಷದ ಗಿಮಿಕ್ ಎಂದುಕೊಂಡು ಹಾಗೇ ಪಕ್ಕಕ್ಕೆ ಸರಿಸಿಬಿಟ್ಟರೆ ತಪ್ಪಾಗುತ್ತದೆ. ಎಂಟಪ್ರೈಸ್ ಎಕಾನಮಿ, ಎಂಟಪ್ರೈಸ್ ಪಾಲಿಟಿಕ್ಸ್‌ನ ದೃಷ್ಟಿಯಿಂದ ಇದನ್ನು ನೋಡಬೇಕು. ಜಪಾನ್, ಸಿಂಗಾಪುರ್ ಮುಂತಾದ ದೇಶಗಳಲ್ಲಿ ಇರುವ ಆರ್ಥಿಕ ಸಮೃದ್ಧಿಯ ಉದಾಹರಣೆಯನ್ನು ಕಮಲ್ ಹಾಸನ್ ಅವರೇ ಕೊಟ್ಟಿದ್ದಾರೆ.

ಈ ಯೋಜನೆ ಕೇವಲ ಮನೆಕೆಲಸ ಮಾಡುವ ಗೃಹಿಣಿಯರ ಶ್ರಮವನ್ನು ಗೌರವಿಸಿ ಬೆಲೆ ನೀಡುವ ಕೆಲಸವಷ್ಟೇ ಆಗದೆ, ಅವರು ಕೂಡ ಸಣ್ಣಪುಟ್ಟ ಉದ್ದಿಮೆಗಳನ್ನು ಪ್ರಾರಂಭಿಸಿ ಆರ್ಥಿಕ ಸ್ವಾವಲಂಬನೆಯನ್ನು ಪಡೆಯುವಲ್ಲಿ ಸಹಾಯಕವಾಗಬಹುದು. ಇದರ ಮುಂದಿನ ಹಂತದಲ್ಲಿ ಗೃಹಿಣಿಯರೂ ಸಣ್ಣಪುಟ್ಟ ವ್ಯಾಪಾರ ವಹಿವಾಟು ಆರಂಭಿಸಿದಾಗ ಮನೆಕೆಲಸವನ್ನು ಮನೆಯವರೆಲ್ಲರೂ ಸಮವಾಗಿ ಹಂಚಿಕೊಳ್ಳುವಂತಹ ಸಂದರ್ಭ ಭವಿಷ್ಯದಲ್ಲಿ ಸೃಷ್ಟಿಯಾದರೂ ಆಗಬಹುದು. ಆಗ ಖಂಡಿತ ಗೃಹಿಣಿಯರ ಸ್ಥಾನ ಮತ್ತು ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ.

ಭಾರತದ ಸಂವಿಧಾನದ ಆರ್ಟಿಕಲ್ 19(1)(ಜಿ) ಯಾವುದೇ ವೃತ್ತಿಯನ್ನು ನಡೆಸಲು ಅಥವಾ ಯಾವುದೇ ಉದ್ಯೋಗ, ವ್ಯಾಪಾರ ಅಥವಾ ವ್ಯವಹಾರವನ್ನು ನಡೆಸುವ ಹಕ್ಕನ್ನು ಎಲ್ಲಾ ನಾಗರಿಕರಿಗೆ ಒದಗಿಸುತ್ತದೆ. ಆರ್ಟಿಕಲ್ 19 (6), ನಾಗರಿಕರ ಈ ಹಕ್ಕಿನ ಮೇಲೆ ರಾಜ್ಯವು ವಿಧಿಸಬಹುದಾದ ನಿರ್ಬಂಧದ ಸ್ವರೂಪವನ್ನು ವಿವರಿಸುತ್ತದೆ.

ಭಾರತದ ಆರ್ಥಿಕತೆಯು ಬೆಳೆಯುತ್ತಿದೆ, ಹೆಚ್ಚುತ್ತಿರುವ ಜಿಡಿಪಿ ಮತ್ತು ದುಡಿಯುವ ವಯಸ್ಸಿನ ಜನಸಂಖ್ಯೆಯು 2050ರ ವೇಳೆಗೆ 800 ದಶಲಕ್ಷಕ್ಕೂ ಹೆಚ್ಚಿಗೆ ಏರುವ ನಿರೀಕ್ಷೆಯಿದೆ.

ಈ ಬೆಳವಣಿಗೆಯ ಹೊರತಾಗಿಯೂ, 2020ರಲ್ಲಿರುವಂತೆ 76.0% ಪುರುಷರಿಗೆ ಹೋಲಿಸಿದರೆ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ಕಾಲು ಭಾಗಕ್ಕಿಂತಲೂ ಕಡಿಮೆ ಅಂದರೆ 20.3% ರಷ್ಟು ಮಾತ್ರ ಕಾರ್ಮಿಕ ವರ್ಗದಲ್ಲಿ ಭಾಗವಹಿಸುತ್ತಾರೆ. ಪುರುಷರು ಒಂದು ದಿನಕ್ಕೆ 31 ನಿಮಿಷ ಮನೆಕೆಲಸ ಮಾಡಿದರೆ ಮಹಿಳೆಯರು ದಿನಕ್ಕೆ 297 ನಿಮಿಷ ಮನೆಕೆಲಸ ಮಾಡುತ್ತಾರೆ.

ಅಡ್ಡೇಟಿನ ಮೇಲೆ ಗುಡ್ಡೇಟು

ಈ ಪರಿಕಲ್ಪನೆಯ ಬಗ್ಗೆ ಚಾಲ್ತಿಯಲ್ಲಿರುವ ಮತ್ತೊಂದು ಅಡ್ಡ ಮಾತೆಂದರೆ ಮನೆಯಲ್ಲಿ ಕೆಲಸದವರನ್ನು ಇಟ್ಟುಕೊಂಡಿರುವ ಗೃಹಿಣಿಯರಿಗೂ ಅಂತಹ ಸ್ಥಿತಿವಂತರಿಗೂ ಈ ಮಾಸಿಕ ಭತ್ಯೆಯನ್ನು ಕೊಡಬೇಕೆ ಎಂಬುದು. ಈ ಪರಿಕಲ್ಪನೆಯನ್ನು ಬಹಳಷ್ಟು ಜನ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡದೆ ಇಂತಹ ತೀರ್ಮಾನಗಳಿಗೆ, ಅಭಿಪ್ರಾಯಗಳಿಗೆ ತಲುಪುತ್ತಿದ್ದಾರೆ. ಇಲ್ಲಿ ಗೃಹಿಣಿಯರಿಗೆ ಸಂಬಳ ಕೊಟ್ಟು ಅವರನ್ನು ಉದ್ಯೋಗಿ ಅಥವಾ ಎಂಪ್ಲಾಯಿಗಳಾಗಿ ನೋಡಬೇಕು ಎಂದಿಲ್ಲ. ಬಹಳಷ್ಟು ಮಧ್ಯಮವರ್ಗದ ಕುಟುಂಬಗಳಲ್ಲಿ ಈ ಗೃಹಿಣಿಯರು ತಮ್ಮ ಗಂಡನ ಮೇಲೆ, ಗಂಡನ ಸಂಪಾದನೆಯ ಮೇಲೆ ಸಂಪೂರ್ಣ ಅವಲಂಬಿತರಾಗಿರುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಅವಲಂಬಿತರಾಗಿಯೇ ಉಳಿದಿರುವಂತೆ ಮಾಡಿರಲಾಗುತ್ತದೆ, ನೋಡಿಕೊಳ್ಳಲಾಗುತ್ತದೆ ಮತ್ತು ಆ ಗಂಡಂದಿರು ಕೂಡ ತಾವು ಸಂಪಾದಿಸಿದ ಹಣವನ್ನು ತನಗೆ ಬೇಕಾದಂತೆ ಖರ್ಚುಮಾಡುವ ಸ್ವಾತಂತ್ರ್ಯ ತನಗಿದೆ ಎಂದೇ ಭಾವಿಸಿರುತ್ತಾನೆ. ಕುಡಿತ, ಹವ್ಯಾಸ, ಮೋಜು, ಜೂಜು ಇತ್ಯಾದಿಗಳಿಗೂ ವ್ಯರ್ಥವಾಗುತ್ತಿರುತ್ತದೆ. ಅದೇ ತನ್ನ ಹೆಂಡತಿ ಹಣ ಕೇಳಿದಾಗ ಮಾತ್ರ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಕೊಡಲೂ ಹಿಂದೆಮುಂದೆ ನೋಡುತ್ತಾನೆ ಅಥವಾ ಪ್ರತಿಯೊಂದಕ್ಕೂ ಲೆಕ್ಕ ಕೇಳುತ್ತಾನೆ. ಇದು ಮನೆಯ ಹೊರಗೆ ದುಡಿದು ಸಂಪಾದಿಸಿ ಇಡೀ ಸಂಬಳವನ್ನು ತಂದು ಗಂಡನ ಕೈಗೆ ಕೊಡುವ ಹೆಂಡತಿಯಂದಿರ ಸಂಕಟವೂ ಆಗಿದೆ. ಆದರೆ ಇವು ಈಗ ನಾವು ಚರ್ಚಿಸುತ್ತಿರುವ, ಚರ್ಚಿಸಬೇಕಾದ ವಿಚಾರದ ಪರಿಧಿಯೊಳಗೆ ಬರದಂತೆ ನೋಡಿಕೊಂಡರೆ ಉತ್ತಮ. ಅಥವಾ ಮನೆಯಲ್ಲಿಯೇ ಉಳಿದರೂ ಮಾಸಿಕ ಭತ್ಯೆ ಸಿಗುವುದಾದರೆ ಹೊರಗೆ ಏಕೆ ದುಡಿಯಬೇಕು ಎಂಬ ಲಕ್ಸುರಿ ಇರುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಿಚಾರವನ್ನು ಚರ್ಚಿಸುವುದಕ್ಕಿಂತ, ವ್ಯಂಗ್ಯ ಮಾಡುವುದಕ್ಕಿಂತ ಅಂತಹವರನ್ನು ಚರ್ಚೆಯ ಚೌಕಟ್ಟಿನ ಹೊರಗಿಟ್ಟು ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ ನಡೆಯಾಗುತ್ತದೆ. ಒಂದೋ ಎರಡೋ ರಾಜ್ಯಗಳಲ್ಲಿ ಇವು ಅನುಷ್ಠಾನಕ್ಕೆ ಬಂದರೂ ಅದರ ಯಶಸ್ಸು ಹಲವು ರಾಜ್ಯಗಳಿಗೆ ವಿಸ್ತರಿಸುವುದು ಅಸಂಭವವೇನಲ್ಲ.

ಈಗ ಪಂಜಾಬ್ ಸರ್ಕಾರ ಮಹಿಳೆಯರಿಗೆ ಏಪ್ರಿಲ್ ಒಂದನೇ ತಾರೀಖಿನಿಂದ ಸರ್ಕಾರಿ ಬಸ್ ಪ್ರಯಾಣ ಉಚಿತ ಎಂದು ಘೋಷಿಸಿದೆ. ಈ ಹಿಂದೆ 2019ರಲ್ಲಿ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು ಮಹಿಳೆಯರಿಗಾಗಿ ಇದೇ ರೀತಿಯ ಯೋಜನೆಯನ್ನು ಘೋಷಿಸಿತ್ತು.

ಸಾಂಪ್ರದಾಯಿಕ ಅರ್ಥಶಾಸ್ತ್ರದ ಪ್ರಕಾರ ಅವರು ಮಾಡುವ ಕೆಲಸಕ್ಕೆ ಯಾರಾದರೂ ಸಂಬಳ ಪಡೆಯದಿದ್ದರೆ, ಜಿಡಿಪಿ ಕಡಿಮೆಯಾಗುತ್ತದೆ ಏಕೆಂದರೆ ಆ ವ್ಯಕ್ತಿಯು “ಕೆಲಸ” ಮಾಡುತ್ತಿಲ್ಲ ಎಂದು ಅರ್ಥ ಬರುತ್ತದೆ. ಸಂಬಳವಿಲ್ಲದೆ ಕೆಲಸ ಮಾಡಲು ಜನ ಸಿದ್ಧರಿದ್ದಾರೆ ಎನ್ನುವುದಾದರೆ ಗೃಹಿಣಿಯರಿಗೆ ಸಂಬಳ ಕೊಡುವುದು ಬೇಕಾಗಿಲ್ಲ ಎಂಬ ಮಾತನ್ನೂ ಒಪ್ಪಬಹುದು.

ಕಾವ್ಯಶ್ರೀ. ಎಚ್

ಡಾ. ಕಾವ್ಯಶ್ರೀ. ಎಚ್
ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಕಾವ್ಯಶ್ರೀ ಅವರು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಬರಹಗಾರ್ತಿ. ಸ್ತ್ರೀವಾದಿ ಚಿಂತಕಿ ಚಿಮಮಾಂಡ ಅಡಿಚಿ ಅವರ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...