ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಐದು ದಿನಗಳ ಕಾಲ ಪ್ರಚಾರ ಹಮ್ಮಿಕೊಂಡಿದ್ದು, ಮೊದಲ ದಿನವೇ ಕೆಲವು ಯುವಕರು ಸಿದ್ದರಾಮಯ್ಯನವರಿಗೆ ಜೈಕಾರ ಕೂಗಿ, ಬಿಜೆಪಿಗೆ ಧಿಕ್ಕಾರ ಎನ್ನುತ್ತಾ ಸೋಮಣ್ಣನವರಿಗೆ ಘೇರಾವ್ ಹಾಕಿರುವ ಘಟನೆ ಕ್ಷೇತ್ರದ ಭುಗತಹಳ್ಳಿಯಲ್ಲಿ ನಡೆದಿದೆ. ಈ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಚುನಾವಣಾ ಪ್ರಚಾರಕ್ಕೆ ಕೆಲವರು ಅಡ್ಡಿಪಡಿಸುತ್ತಿರುವುದು ವರದಿಯಾಗಿದೆ. ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ಇಲ್ಲವೇ ಬೇರೆಯವರು ಮಾಡಿದ್ದರೆ ಅದು ಸರಿ ಅಲ್ಲ. ಎಲ್ಲ ಅಭ್ಯರ್ಥಿಗಳಿಗೂ ಮುಕ್ತ ಪ್ರಚಾರಕ್ಕೆ ಅವಕಾಶ ಮಾಡಿಕೊಡಬೇಕು” ಎಂದಿದ್ದಾರೆ.
ವರುಣಾ ಕ್ಷೇತ್ರದಲ್ಲಿ @BJP4Karnataka ಅಭ್ಯರ್ಥಿ ವಿ.ಸೋಮಣ್ಣ ಅವರ ಚುನಾವಣಾ ಪ್ರಚಾರಕ್ಕೆ ಕೆಲವರು ಅಡ್ಡಿಪಡಿಸುತ್ತಿರುವುದು ವರದಿಯಾಗಿದೆ.
ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ಇಲ್ಲವೇ ಬೇರೆಯವರು ಮಾಡಿದ್ದರೆ ಅದು ಸರಿ ಅಲ್ಲ.
ಎಲ್ಲ ಅಭ್ಯರ್ಥಿಗಳಿಗೂ ಮುಕ್ತ ಪ್ರಚಾರಕ್ಕೆ ಅವಕಾಶ ಮಾಡಿಕೊಡಬೇಕು.1/2— Siddaramaiah (@siddaramaiah) April 23, 2023
”ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರಚಾರ ಮಾಡಲು ಅವಕಾಶ ಇದೆ. ಅದಕ್ಕೆ ಅಡ್ಡಿ ಪಡಿಸಬಾರದು. ಅಂತಿಮವಾಗಿ ಮತದಾರರು ತಮ್ಮ ಆಯ್ಕೆಯನ್ನು ತಾವೇ ನಿರ್ಧರಿಸುತ್ತಾರೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರಚಾರ ಮಾಡಲು ಅವಕಾಶ ಇದೆ. ಅದಕ್ಕೆ ಅಡ್ಡಿ ಪಡಿಸಬಾರದು.
ಅಂತಿಮವಾಗಿ ಮತದಾರರು ತಮ್ಮ ಆಯ್ಕೆಯನ್ನು ತಾವೇ ನಿರ್ಧರಿಸುತ್ತಾರೆ.
2/2— Siddaramaiah (@siddaramaiah) April 23, 2023
ಏನಿದು ಘಟನೆ:
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾಷಣ ಮಾಡುತ್ತಿದ್ದ ವೇಳೆ ಯುವಕನೋರ್ವ, ಸಚಿವ ಸೋಮಣ್ಣ ಅವರಿಗೆ ಪ್ರಶ್ನೆ ಕೇಳಿದ್ದಾನೆ. ಭಾಷಣ ಮುಗಿಯುವವರೆಗೂ ಕಾಯುವಂತೆ ಸೋಮಣ್ಣ ಸೂಚನೆ ನೀಡಿದ್ದರು. ಬಳಿಕ ಸೋಮಣ್ಣನವರ ಭಾಷಣ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆ ಕೂಗಲಾಗಿದೆ. ಮತ್ತೊಂದು ಯುವಕರ ಗುಂಪು ಬಿಜೆಪಿ ಮತ್ತು ಸೋಮಣ್ಣನವರ ಪರ ಘೋಷಣೆ ಕೂಗಿದೆ. ಹೀಗಾಗಿ ಭುಗತಹಳ್ಳಿಯಲ್ಲಿ ಪ್ರಚಾರವನ್ನು ಕೈಬಿಟ್ಟು ಸೋಮಣ್ಣನವರು ಬೇರೊಂದು ಗ್ರಾಮಕ್ಕೆ ತೆರಳಿದರು.
ಇದನ್ನೂ ಓದಿ: ವರುಣಾ: ಸೋಮಣ್ಣನವರಿಗೆ ಘೇರಾವ್, ಸಿದ್ದರಾಮಯ್ಯನವರಿಗೆ ಜೈಕಾರ
ವರುಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋದವರಿಗೂ ಪ್ರತಿಭಟನೆಯ ಬಿಸಿ
ಈ ಹಿಂದೆ ಏಪ್ರಿಲ್ 18ರಂದು ಸಹ ಸೋಮಣ್ಣ ವರುಣಾ ಕ್ಷೇತ್ರದ ಲಲಿತಾದ್ರಿಪುರದಲ್ಲಿ ಪ್ರಚಾರಕ್ಕೆ ಬಂದಿದ್ದ ವೇಳೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಮತ ಕೇಳಲು ಬಂದಿದ್ದೀರಿ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದರು. ಮೈಸೂರು ಕೊಡಗು ಬಿಜೆಪಿ ಸಂಸದ ಸಂಸದ ಪ್ರತಾಪ್ ಸಿಂಹ ಅವರಿಗೂ ಪ್ರತಿಭಟನೆಯ ಬಿಸಿ ತಟ್ಟಿತ್ತು. ಯುವಕನೋರ್ವ ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು.
ಗುರುವಾರ ಸಂಸದ ಪ್ರತಾಪ್ ಸಿಂಹ್ ಅವರು ಕುಪ್ಯ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದರು. ಅವರ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ಪ್ರತಾಪ ಸಿಂಹ ಕಕ್ಕಾಬಿಕ್ಕಿಯಾಗಿ ನಿಂತಿರುವ ವಿಡಿಯೋ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
”ನಾವು ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎಂದು ಬಿಜೆಪಿಯವರು ಹೇಳಿದ್ದೀರಿ. ಸಂವಿಧಾನ ರಚಿಸಿದ ಅಂಬೇಡ್ಕರ್ ಅಭಿಮಾನಿಗಳಾದ ನಾವು ನಿಮ್ಮನ್ನು ಹೇಗೆ ಬೆಂಬಲಿಸುವುದು?” ಎಂದು ಗ್ರಾಮಸ್ಥರು ಕೇಳಿದ್ದರು.
”ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ನಿಮ್ಮದೇ ಸರ್ಕಾರವಿದ್ದಾಗ ರಸ್ತೆರಾಜ ಎಂದು ಬಿರುದು ಕೊಟ್ಟಿದ್ರಿ. ಈಗ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣವಾದ ಮೇಲೆ ಅವರ ವಿರುದ್ಧವೇ ಆರೋಪ ಮಾಡುತ್ತಿದ್ದೀರಿ ಇದು ಸರಿಯೇ?” ಎಂದು ಕೇಳಿ ತರಾಟೆಗೆ ತೆಗೆದುಕೊಂಡಿದ್ದರು.
”ಸಂಸದ ವಿ.ಶ್ರೀನಿವಾಸ ಪ್ರಸಾದ್ ಈವರೆಗೂ ನಮ್ಮೂರಿಗೆ ಬಂದೇ ಇಲ್ಲ” ಎಂದೂ ದೂರಿದ್ದರು.
ಪ್ರತಾಪ್ ಸಿಂಹ ಅವರು ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಹೇಳಿಕೆಗಳ ಬಗ್ಗೆಯೇ ಪ್ರಶ್ನೆ ಮಾಡಿದ ಗ್ರಾಮಸ್ಥರು, ”ಸಿದ್ದರಾಮಯ್ಯ ಮೈಸೂರಿಗೆ ನೀಡಿರುವ ಕೊಡುಗೆ ಏನು ಎಂದೆಲ್ಲಾ ಕೇಳಿದ್ದೀರಿ. ಅವರ ಪಕ್ಕ ಹೋಗಿ ಕುಳಿತುಕೊಳ್ಳಿ ಆಗ ಎಲ್ಲವೂ ನಿಮಗೆ ಗೊತ್ತಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
”ಅಕ್ಕಿ ಮೋದಿಯದು, ಚೀಲ ಸಿದ್ದರಾಮಯ್ಯ ಅವರದ್ದು ಎಂದು ಆರೋಪಿಸುತ್ತೀರಲ್ಲಾ ನೀವೇನು ಕೊಡುಗೆ ಕೊಟ್ಟಿದ್ದೀರಿ? ನಿಮ್ಮ ಸರ್ಕಾರದಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಕೊಡುತ್ತಿಲ್ಲವೇಕೆ? ಅಡುಗೆ ಅನಿಲ ಸಿಲಿಂಡರ್ ಬೆಲೆ ಇಷ್ಟೊಂದು ಜಾಸ್ತಿಯಾಗಿದೆಯಲ್ಲ ಏಕೆ?” ಎಂದು ಪ್ರಶ್ನಿಸಿದ್ದರು.