Homeಅಂಕಣಗಳುನರಮೇಧದ ನೆನಪಿಗೆ ಸುಣ್ಣ ಬಣ್ಣ ಬಳಿಯುತ್ತಿರುವುದೇಕೆ?

ನರಮೇಧದ ನೆನಪಿಗೆ ಸುಣ್ಣ ಬಣ್ಣ ಬಳಿಯುತ್ತಿರುವುದೇಕೆ?

- Advertisement -
- Advertisement -

2019ನೇ ಇಸವಿ ಜಲಿಯನ್‌ವಾಲಾಬಾಗ್ ನರಮೇಧದ ನೂರನೇ ವರ್ಷಕ್ಕೆ ಸಾಕ್ಷಿಯಾಗಿತ್ತು. ಜಲಿಯನ್‌ವಾಲಾಬಾಗ್ ನರಮೇಧ ಒಂದು ದಬ್ಬಾಳಿಕೆ ಸರ್ಕಾರ ಪ್ರಜೆಗಳ ಮೇಲೆ ನಡೆಸಬಹುದಾದ ದೌರ್ಜನ್ಯದ ನೂರಾರು ಕಥೆಗಳ ಸಂಕೇತ. ಈ ಕಾರಣದಿಂದಲೇ ಪಂಜಾಬಿನ ಅಮೃತಸರದಲ್ಲಿರುವ ಈ ಪ್ರದೇಶವನ್ನು, ಆ ಕಹಿ ನೆನಪಿನ ಭಾಗವಾಗಿಯೇ ಉಳಿಸಿಕೊಂಡು ಬರಲಾಗಿತ್ತು. ಆದರೆ ಈಗ ಏಕಾಏಕಿ ಆ ಪ್ರದೇಶದ ಚಹರೆಯನ್ನೇ ಬದಲಿಸಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ. ಇದಕ್ಕೆ ಮೊದಲು ಒಂಚೂರು ಇತಿಹಾಸದತ್ತ ಹೊರಳುನೋಟ ಬೀರುವುದು ಮುಖ್ಯವಾದೀತು.

ಮೊದಲನೇ ಮಹಾಯುದ್ಧದ ಅಂತ್ಯವಾಗುತ್ತಿದ್ದ ಸಮಯ. ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ದಿನೇ ದಿನೇ ಏರುತ್ತಿತ್ತು. ಅನಿಬೆಸಂಟ್ ಮುಂದಾಳತ್ವದ ಹೋಮ್‌ರೂಲ್ ಚಳವಳಿ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಸಮಯ. ವಿಶ್ವಯುದ್ಧದ ಸಮಯದಲ್ಲಿ ಬ್ರಿಟನ್ ತನ್ನ ಯುದ್ಧಕ್ಕೆ ಬೇಕಾದವರನ್ನ ಸೇರಿಸಿಕೊಳ್ಳಲು ಹಾಗೂ ಯುದ್ಧಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್‌ಅನ್ನು ಜಾರಿಗೆ ತಂದಿತ್ತು. ಇಂತಹ ಕರಾಳ ಕಾಯ್ದೆಗಳು ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಭಾರತದ ಜನರ ಮೇಲೆ ದಬ್ಬಾಳಿಕೆ ನಡೆಸಲು, ದೌರ್ಜನ್ಯವೆಸಗಲು ಫ್ರೀ ಹ್ಯಾಂಡ್ ನೀಡಿತ್ತು.

ಮೊದಲ ಮಹಾಯುದ್ಧ ಅಂತ್ಯ ಕಾಣುತ್ತಿದ್ದರಿಂದ ಹಾಗು ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್ ಕೊನೆಗಾಣಬೇಕಿದ್ದರಿಂದ, ಬ್ರಿಟಿಷ್ ಸರ್ಕಾರ ಅದಕ್ಕೂ ಕರಾಳವಾದ ರೌಲತ್ ಕಾಯ್ದೆಯನ್ನು ಮಾರ್ಚ್ 1919ರಲ್ಲಿ ಜಾರಿ ಮಾಡುತ್ತದೆ. ದೇಶದ್ರೋಹವನ್ನು ನಿಗ್ರಹಿಸಲು ಜಾರಿ ಮಾಡಿದ ಈ ಕಾಯ್ದೆ ಎಷ್ಟು ಕಠೋರವಾಗಿತ್ತೆಂದರೆ, ಕ್ರಾಂತಿಕಾರಿಗಳು ಮತ್ತು ಅನಾರ್ಕಿಸ್ಟ್‌ಗಳು ಎಂದು ಯಾರನ್ನಾದರೂ ಗುರುತು ಮಾಡಿ, ಅವರು ಬ್ರಿಟಿಷ್ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ, ವಿಚಾರಣೆಯಿಲ್ಲದೆ ಬಂಧಿಸಿ ಜಾಮೀನಿಲ್ಲದೆ ಜೈಲಿನಲ್ಲಿ ಇಡಬಹುದಾಗಿತ್ತು. ಅವರ ಹಿಂದಿನ ಕೃತ್ಯಗಳ ಆಧಾರದ ಮೇಲೆ ಅಥವಾ ಅವರ ಹಿಂದಿನ ಸಹಚರ್ಯದ ಪ್ಯಾಟರ್ನ್‌ಗಳನ್ನು ಆಧರಿಸಿ ಶಿಕ್ಷೆ ನೀಡುವ ಅಧಿಕಾರ ಆ ಕಾನೂನಿನಲ್ಲಿ ಇತ್ತು. ರಿಲೇಟ್ ಮಾಡಿಕೊಳ್ಳುವುದಕ್ಕೆ ಅನುವಾಗಲು ಹೇಳಬಹುದಾದರೆ, ಇಂದು ನಮ್ಮ ದೇಶದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಸೆಡಿಶನ್, ಯುಎಪಿಎ ಅಂತಹ ಕರಾಳ ಕಾನೂನುಗಳ ಪೂರ್ವಜ ಅದಾಗಿತ್ತು. ರಾಜಕೀಯ ವಿರೋಧಿಗಳಾದ ಯಾರ ಮೇಲಾದರೂ ಆರೋಪ ಹೊರಿಸಿ ದಮನ ಮಾಡುವಂತಹ ಕಾನೂನು ಅದಾಗಿತ್ತು. ಒಂದು ಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆ ದಮನಕಾರಿಯಾಗಲು ಯಾವೆಲ್ಲಾ ಕಾನೂನು-ಕಾಯ್ದೆಗಳನ್ನು ತನ್ನ ಪ್ರಜೆಗಳ ಮೇಲೆಯೇ ಒಡ್ಡಬಹುದು ಎಂಬುದನ್ನು ರೌಲತ್ ಕಾಯ್ದೆ ಸದಾ ನೆನಪಿಸುತ್ತಿರುತ್ತದೆ.

ಈ ರೌಲತ್ ಕಾಯ್ದೆಯ ವಿರುದ್ಧ 1919ರ ಏಪ್ರಿಲ್‌ನಲ್ಲಿ ಭಾರತದ ಹಲವೆಡೆಗಳಲ್ಲಿ ಪ್ರತಿಭಟನೆಗಳಾಗುತ್ತವೆ. ಸತ್ಯಾಗ್ರಹದ ಮಾದರಿಯ ಈ ಪ್ರತಿಭಟನೆಗಳು ಸರ್ವೇಸಾಮಾನ್ಯವಾಗಿ ಶಾಂತಿಸ್ವರೂಪದವಾಗಿದ್ದವು. ಎಲ್ಲೋ ಕೆಲವೆಡೆ ಬ್ರಿಟಿಷ್ ಅಧಿಕಾರಿಗಳ ದಬ್ಬಾಳಿಕೆಯನ್ನು ವಿರೋಧಿಸಿ ನಡೆದ ವಿರಳ ಹಿಂಸಾತ್ಮಕ ಘಟನೆಗಳನ್ನು ಹೊರತುಪಡಿಸಿದರೆ ಅಂದಿನ ಸರ್ಕಾರದ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ಪ್ರತಿಭಟನೆಗಳು ಅವಾಗಿರಲಿಲ್ಲ ಎಂಬುದನ್ನು ಹಲವರು ದಾಖಲಿಸಿದ್ದಾರೆ. ಪಂಜಾಬ್‌ನಲ್ಲಿ ಇದೇ ಕಾರಣಕ್ಕೆ ಏಪ್ರಿಲ್ 10ರಂದು ಉದ್ವಿಗ್ನತೆ ಏರ್ಪಟ್ಟಿರುತ್ತದೆ. ಹಾಲ್ ಗೇಟ್ ಬ್ರಿಜ್ ಪ್ರದೇಶದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದವರ ಮೇಲೆ ಬ್ರಿಟಿಷ್ ಅಧಿಕಾರಿಗಳು ಗುಂಡು ಹಾರಿಸಿ ಹಲವರ ಸಾವಿಗೆ ಮತ್ತು ಗಾಯಗಳಿಗೆ ಕಾರಣರಾಗಿರುತ್ತಾರೆ.

ಈ ದೌರ್ಜನ್ಯ ಹಾಗೂ ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸಲು ಏಪ್ರಿಲ್ 13ರಂದು ಜಲಿಯನ್‌ವಾಲಾಬಾಗ್‌ನಲ್ಲಿ ಸುಮಾರು 2000ಕ್ಕೂ ಹೆಚ್ಚು ಸಾಮಾನ್ಯ ಜನ ಶಾಂತಿಯುತ ರೀತಿಯಲ್ಲಿ ನೆರೆದಿರುತ್ತಾರೆ. ಆಗ ಜನರಲ್ ಡೈಯರ್ ಏಕಾಏಕಿ ಶಸ್ತ್ರಸಜ್ಜಿತ ಪಡೆಯೊಂದಿಗೆ ಅಲ್ಲಿಗೆ ಬಂದು ನಿಶ್ಯಸ್ತ್ರರಾಗಿದ್ದ ಮತ್ತು ಶಾಂತಿಯುತ ಸಭೆ ನಡೆಸಿದ್ದ ಜನರ ಮೇಲೆ ಗುಂಡು ಹಾರಿಸಲು ಆದೇಶ ನೀಡುತ್ತಾನೆ. ಬಹಳ ಕಿರಿದಾಗಿದ್ದ ಪ್ರವೇಶ ಮಾರ್ಗದಿಂದ ತಪ್ಪಿಸಿಕೊಳ್ಳಲು ಕೂಡ ಅವಕಾಶ ನೀಡದೆ ಸಾವಿರಾರು ಜನರನ್ನು ಕೊಲ್ಲಲಾಗುತ್ತದೆ. ನಂತರ ಈ ಪ್ರಕರಣವನ್ನು ತನಿಖೆ ಮಾಡುವಂತೆ ನಾಟಕವಾಡಿ, ಬ್ರಿಟಿಷ್ ಸರ್ಕಾರದ ಮತ್ತು ಜನರಲ್ ಡೈಯರ್‌ನ ತಪ್ಪುಗಳನ್ನು ಮಾಫಿ ಮಾಡಲಾಗುತ್ತದೆ. ಭಾರತೀಯ ಜನರಿಗೆ ಆದ ಗಾಯಕ್ಕೆ ಉಪ್ಪು ಸವರಲಾಗುತ್ತದೆ. ತನಿಖೆ ಮಾಡಿದ ಹಂಟರ್ ಕಮಿಟಿ ಸೂಚಿಸಿದ ಮೃತಪಟ್ಟವರ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಜನರನ್ನು ಹತ್ಯೆ ಮಾಡಿದ್ದು ತಿಳಿದುಬರುತ್ತದೆ.

ಈ ದೌರ್ಜನ್ಯವನ್ನು ಅಂದು ಬಯಲಿಗೆಳೆದಿದ್ದು ಬ್ರಿಟಿಷ್ ಪ್ರಜೆ ಮತ್ತು ಪತ್ರಕರ್ತ ಬಿ.ಜಿ.ಹಾರ್ನಿಮನ್!

ಈ ಘಟನೆ ನಡೆದ ಮೇಲೆ ಇದನ್ನು ವರದಿ ಮಾಡದಂತೆ ಅಂದು ಪ್ರಚಲಿತವಾಗಿದ್ದ ಪ್ರೆಸ್ ಆಕ್ಟ್ ತಡೆ ಒಡ್ಡಿರುತ್ತದೆ. ಇಂತಹ ಸನ್ನಿವೇಶದಲ್ಲಿಯೂ ಅಂದು ಬಾಂಬೆ ಕ್ರಾನಿಕಲ್ ಪತ್ರಿಕೆಯ ಸಂಪಾದಕರಾಗಿದ್ದ ಬೆಂಜಮಿನ್ ಗಯ್ ಹಾರ್ನಿಮನ್, ಈ ನರಮೇಧವನ್ನು ಖಂಡಿಸಿ ವರದಿಯನ್ನು ಪ್ರಕಟಿಸಿತ್ತಾರೆ. ಇದರಿಂದ ಮುಂದೆ, ವರದಿ ಬರೆದ ವರದಿಗಾರನಿಗೆ ಎರಡು ವರ್ಷ ಶಿಕ್ಷೆಯಾಗುತ್ತದೆ. ಪತ್ರಿಕೆಯನ್ನು ನಿಲ್ಲಿಸಲಾಗುತ್ತದೆ. ಹಾರ್ನಿಮನ್ ಅವರನ್ನು ಬ್ರಿಟನ್‌ಗೆ ಗಡಿಪಾರು ಮಾಡಲಾಗುತ್ತದೆ.

ಹೀಗಿದ್ದೂ, ಹಾರ್ನಿಮನ್ ಅವರು ಈ ನರಮೇಧದ ಮತ್ತು ನಂತರ ನಡೆದ ಹಲವು ದಮನಿಸುವ ಘಟನೆಗಳ ಫೋಟೋಗಳನ್ನು ಕದ್ದು ಬ್ರಿಟನ್‌ಗೆ ತೆಗೆದುಕೊಂಡು ಹೋಗಿ, ಅಲ್ಲಿ ಈ ಘಟನೆಯ ಬಗ್ಗೆ ಡೈಲಿ ಹೆರಾಲ್ಡ್ ಪತ್ರಿಕೆಗೆ ಸುದೀರ್ಘ ವರದಿ ಮಾಡುತ್ತಾರೆ. 1920ರಲ್ಲಿ ’ಅಮೃತಸರ ಅಂಡ್ ಅವರ್ ಡ್ಯೂಟಿ ಟು ಇಂಡಿಯಾ’ ಎಂಬ ಪುಸ್ತಕ ಬರೆದು ಅದರಲ್ಲಿ ಬ್ರಿಟಿಷರ ದಮನಕಾರಿ ನೀತಿಗಳ ಬಗ್ಗೆ ವಿವರವಾಗಿ ಬರೆಯುವುದಲ್ಲದೆ, ಜಲಿಯನ್‌ವಾಲಾಬಾಗ್ ನರಮೇಧದ ಬಗ್ಗೆ ವಿವರಗಳನ್ನು ಕಟ್ಟಿಕೊಟ್ಟು ’ಡೈಯರಾರ್ಚಿ’ಯನ್ನು ಖಂಡಿಸುತ್ತಾರೆ. ಬ್ರಿಟಿಷ್ ಜನರ ಕರ್ತವ್ಯ ಏನು ಎಂಬದನ್ನೂ ನೆನಪಿಸುತ್ತಾರೆ.

ಬಿ.ಜಿ.ಹಾರ್ನಿಮನ್

ಇದೇ ಪುಸ್ತಕದಲ್ಲಿ ನರಮೇಧದ ನಂತರ ಹಂಟರ್ ಕಮಿಟಿಯ ಮುಂದೆ ವಿಚಾರಣೆಯಲ್ಲಿ ಭಾಗವಹಿಸುವ ಜನರಲ್ ಡೈಯರ್ ಮಾತುಗಳನ್ನು ಲೇಖಕ ಹಾರ್ನಿಮನ್ ದಾಖಲಿಸುತ್ತಾರೆ. “ಸಾಧ್ಯವಿತ್ತು, ಗುಂಡು ಹಾರಿಸದೆ ಗುಂಪನ್ನು ಚದುರಿಸಬಹುದಿತ್ತು. ಆದರೆ ಅವರು ಹಿಂದಿರುಗಿ ಬಂದು, ನನ್ನನ್ನು ನೋಡಿ ನಕ್ಕು ನಾನು ಮೂರ್ಖನಂತೆ ಕಾಣುವಂತೆ ಮಾಡುತ್ತಿದ್ದರು” ಎಂದಿದ್ದನಂತೆ ಆತ. ಯಾವುದೇ ಸರ್ಕಾರದಲ್ಲಿ ಅಧಿಕಾರಿಗಳ-ಆಳುವವರ ದರ್ಪವನ್ನು ಸದಾ ನೆನಪಿಸುವ ಮತ್ತು ಎಚ್ಚರಿಸುವ ಘಟನೆ ಜನರಲ್ ಡೈಯರ್ ನಡೆಸಿದ ಜಲಿಯನ್‌ವಾಲಾಬಾಗ್ ಹತ್ಯಾಕಾಂಡ.

ಪ್ರತಿಭಟಿಸಿ ನೈಟ್‌ಹುಡ್ ಹಿಂದಿರುಗಿಸಿದ್ದ ರಬೀಂದ್ರನಾಥ ಟ್ಯಾಗೋರ್

ಹಂಟರ್ ಕಮಿಟಿಯ ಎದುರು ಸುಮಾರು 500 ಜನರನ್ನು ಹತ್ಯೆ ಮಾಡಿದ್ದಾಗಿ ಹಾಗೂ ಅದರ ಮೂರು ಪಟ್ಟು ಜನರನ್ನು ಗಾಯಗೊಳಿಸಿದ್ದಾಗಿ ಜನರಲ್ ಡೈಯರ್ ಒಪ್ಪಿಕೊಳ್ಳುತ್ತಾನೆ. ಆದರೆ ಇದರ ಬಗ್ಗೆ ತನಿಖೆ ಮಾಡಿದ ಅನಧಿಕೃತ ಏಜೆನ್ಸಿಗಳು ಇದರ ಎಷ್ಟೋ ಪಟ್ಟು ಹೆಚ್ಚು ಜನರು ಹತ್ಯೆಯಾಗಿರುವ ಬಗ್ಗೆ ಅಧ್ಯಯನ ಮಾಡಿದ್ದನ್ನು ಹಾರ್ನಿಮನ್ ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಾರೆ.

ಈ ನರಮೇಧ ಅಂದಿನ ರಾಜಕೀಯ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾತ್ರ ಅಘಾತವನ್ನುಂಟುಮಾಡಲಿಲ್ಲ. ಬದಲಿಗೆ ಇಡೀ ದೇಶವೇ ಶೋಕದಲ್ಲಿ ಮುಳುಗುವಂತೆ ಮಾಡಿತ್ತು. ನೊಬೆಲ್ ಪ್ರಶಸ್ತಿ (ಸಾಹಿತ್ಯಕ್ಕೆ) ಪಡೆದ ಮೊದಲ ಭಾರತೀಯ ಎಂದು ಹೆಸರುವಾಸಿಯಾಗಿದ್ದ ಖ್ಯಾತ ಕವಿ ರಬೀಂದ್ರನಾಥ ಟ್ಯಾಗೋರ್, ಈ ನರಮೇಧವನ್ನು ಪ್ರತಿಭಟಿಸಿ, ಬ್ರಿಟಿಷ್ ಸರ್ಕಾರ ತಮಗೆ ನೀಡಿದ್ದ ’ನೈಟ್‌ಹುಡ್’ ಗೌರವವನ್ನು ಹಿಂದಿರುಗಿಸಿದ್ದು ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿಯುವ ನೆನಪು. ಇಂದಿಗೂ ವಿಶ್ವದಾದ್ಯಂತ ಸರ್ವಾಧಿಕಾರಿ ಧೋರಣೆಯ ಸರ್ಕಾರಗಳು ತನ್ನ ಪ್ರಜೆಗಳ ವಿರುದ್ಧವೇ ದಮನಕಾರಿ ನಡೆಗಳಿಗೆ ಮುಂದಾದಾಗ ಕಲಾವಿದರ, ಸಾಂಸ್ಕೃತಿಕ ವಕ್ತಾರರ ಜವಾಬ್ದಾರಿ ಏನಿರಬೇಕು ಎಂಬುದನ್ನು ಟ್ಯಾಗೋರ್ ಅವರ ಈ ನಡೆ ಎಚ್ಚರಿಸುತ್ತಿರುತ್ತದೆ.

ಅಂದಿನ ಭಾರತದ ವೈಸರಾಯ್ ಲಾರ್ಡ್ ಚೆಲ್ಮ್ಸ್‌ಫರ್ಡ್‌ಗೆ ಪತ್ರ ಬರೆದಿದ್ದ ಟ್ಯಾಗೋರ್ ಅವರು “ಜಲಿಯನ್‌ವಾಲಾಬಾಗ್ ದುರಂತ, ಭಾರತದಲ್ಲಿ ಬ್ರಿಟಿಷ್ ಸರ್ಕಾರದ ಪ್ರಜೆಗಳಾಗಿ ನಮ್ಮ ಅಸಹಾಯಕತೆಯನ್ನು ನಮ್ಮ ಮನಸ್ಸುಗಳಿಗೆ ಬಹಿರಂಗಗೊಳಿಸಿದೆ” ಎಂದದ್ದಲ್ಲದೆ ಈ ಘಟನೆ “ಇತ್ತೀಚಿನ ಮತ್ತು ಎಲ್ಲೋ ಅಜ್ಞಾತದಲ್ಲಿರುವ ಕೆಲವನ್ನು ಹೊರತುಪಡಿಸಿದರೆ, ನಾಗರಿಕ ಸರ್ಕಾರಗಳ ಇತಿಹಾಸದಲ್ಲಿಯೇ ಇಂತಹ ಇನ್ನೊಂದು ಘಟನೆ ನಡೆದಿರಲಿಲ್ಲ… ಉಸಿರು ಕಟ್ಟಿಸುವ ಮೌನದ ನಡುವೆ ಇದು ಭಾರತದ ಮೂಲೆ ಮೂಲೆಗೆ ತಲುಪುತ್ತಿದೆ” ಎಂದಿದ್ದರು.

ಈ ನೆನಪುಗಳು ಸದಾ ಜಾಗೃತವಾಗಿ ಏಕಿರಬೇಕು ಎಂಬುದಕ್ಕೆ ಹರ್ಯಾಣದಲ್ಲಿ ರೈತರ ಚಳವಳಿ ನಡೆಯುವಾಗ, ’ರೈತರ ಮೇಲೆ ಲಾಠಿ ಚಾರ್ಜ್ ಮಾಡಿ, ಬೇಕಿದ್ದರೆ ಬುರುಡೆ ಹೊಡೆಯಿರಿ’ ಎಂದು ಹೇಳಿಕೆ ಕೊಟ್ಟ ಐಎಎಸ್ ಅಧಿಕಾರಿಯ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ಇತ್ತೀಚೆಗೆ ಜಾಮೀನು ವಿಚಾರಣೆಗೆ ಬಂದ ದೆಹಲಿ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಪ್ರಕರಣವನ್ನು ನೋಡಿದರೆ ಇಂತಹ ’ವಸಾಹತುಶಾಹಿ ಕಾನೂನುಗಳ’ ವಾಸ್ತವವು ಬಿಚ್ಚಿಕೊಳ್ಳುತ್ತದೆ. ಯುಎಪಿಎ ಅಡಿಯಲ್ಲಿ ಬಂಧಿಸಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಹುತೇಕ ಸಿನಿಮೀಯವಾದವು, ಕಟ್ಟುಕಥೆಗಳು ಮತ್ತು ಮೀಡಿಯಾ ಟ್ರಯಲ್ ಇಂದ ಪ್ರೇರೇಪಿತವಾದವು ಎಂದು ಅವರ ಪರ ವಕೀಲ ಕೋರ್ಟ್‌ನಲ್ಲಿ ವಾದಿಸಿದ್ದರು. ಒಂದು ಪ್ರಭುತ್ವ ತನ್ನದೇ ಪ್ರಜೆಗಳ ಮೇಲೆ ಎಷ್ಟು ಕಠೋರವಾಗಬಲ್ಲದು ಎಂಬುದಕ್ಕೆ ಇತಿಹಾಸದಲ್ಲಿ ನಡೆದ ಹಲವು ಪ್ರಕರಣಗಳು ಎಚ್ಚರಿಸುತ್ತವೆ. ಆದುದರಿಂದ ಜಲಿಯನ್‌ವಾಲಾಬಾಗ್ ಘಟನೆಗಳು ನಡೆದ ಪ್ರದೇಶಗಳ ಚಹರೆಯನ್ನು ಆ ಸ್ಮೃತಿಗಳ ಜೊತೆಗೆ ಉಳಿಸಿಕೊಳ್ಳುವುದು ಮುಖ್ಯ.

ಆದರೆ ಇತ್ತೀಚೆಗೆ ಜಲಿಯನ್‌ವಾಲಾಬಾಗ್ ನರಮೇಧವನ್ನು ಮರೆಸುವಂತೆ ಆ ಪ್ರದೇಶವನ್ನು ಸುಂದರಗೊಳಿಸಿರುವ ವಿಡಿಯೋ ಅಂತರ್ಜಾಲದಲ್ಲಿ ಬಿಡುಗಡೆಯಾಗಿದೆ. ಯಾವ ಕಿರಿದಾದ ಪ್ರವೇಶದ ಹಾದಿಯಲ್ಲಿ ಜನರಲ್ ಡೈಯರ್ ನಡೆದು ಬಂದು ಗುಂಡಿನ ಸುರಿಮಳೆಗೈದನೋ, ಆ ಪ್ರದೇಶದ ಎರಡೂ ಬದಿಯ ಗೋಡೆಗಳಲ್ಲಿ ಸಂಬಂಧವಿಲ್ಲದ ಮ್ಯೂರಲ್ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ನೆಲಹಾಸನ್ನು ಹೊಳೆಯುವಂತೆ ಮಾಡಲಾಗಿದೆ. ಪ್ರವಾಸೋದ್ಯಮದ ಆಕರ್ಷಣೆಗೆ ಮಾಡಲಾಗಿರುವ ಈ ನವೀನೀಕರಣ, ಅಂದಿನ ದೌರ್ಜನ್ಯವನ್ನು ಮರೆಸುವ ಇರಾದೆ ಹೊಂದಿರಬಾರದಿತ್ತು. ಜರ್ಮನಿಯಂತಹ ದೇಶದಲ್ಲಿ ಹೋಲೋಕಾಸ್ಟ್ ದೌರ್ಜನ್ಯಗಳನ್ನು ನೆನಪಿಸುವಂತೆಯೇ ಅಲ್ಲಿನ ಸ್ಮಾರಕಗಳನ್ನು, ಪ್ರದೇಶಗಳನ್ನು ಉಳಿಸಿಕೊಳ್ಳಲಾಗಿದೆ. ಆ ಎಚ್ಚರ ನಮ್ಮ ದೇಶದಲ್ಲಿ ನಡೆದಿರುವ ಹತ್ಯಾಕಾಂಡಗಳು, ದೌರ್ಜನ್ಯಗಳ ಘಟನೆಗಳ ನೆನಪುಗಳ ಬಗ್ಗೆ ಇರಿಸಿಕೊಳ್ಳಬೇಕಿದೆ. ಅಂತಹ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು ಮುಂದಿನ ಪೀಳಿಗೆಯ ಎದೆಯಲ್ಲಿ ಮಾನವೀಯತೆಯ ಎಚ್ಚರವನ್ನು ಉಳಿಸುವಂತಹ ರೀತಿಯಲ್ಲಿ ಅಭಿವೃದ್ಧಿಗೊಂಡು ಉಳಿದುಕೊಳ್ಳಬೇಕಿದೆ.

– ಗುರುಪ್ರಸಾದ್ ಡಿ ಎನ್


ಇದನ್ನೂ ಓದಿ: ಬಡ – ಮಧ್ಯಮ ವರ್ಗವನ್ನು ಮತ್ತಷ್ಟು ಹಿಂಡಲಿರುವ ನ್ಯಾಷನಲ್ ಮಾನಿಟೈಸೇಶನ್ ಪೈಪ್‌ಲೈನ್ – NMP…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...