Homeಮುಖಪುಟಬಡ - ಮಧ್ಯಮ ವರ್ಗವನ್ನು ಮತ್ತಷ್ಟು ಹಿಂಡಲಿರುವ ನ್ಯಾಷನಲ್ ಮಾನಿಟೈಸೇಶನ್ ಪೈಪ್‌ಲೈನ್ - NMP ಯೋಜನೆ

ಬಡ – ಮಧ್ಯಮ ವರ್ಗವನ್ನು ಮತ್ತಷ್ಟು ಹಿಂಡಲಿರುವ ನ್ಯಾಷನಲ್ ಮಾನಿಟೈಸೇಶನ್ ಪೈಪ್‌ಲೈನ್ – NMP ಯೋಜನೆ

- Advertisement -
- Advertisement -

ಎರಡು ಮೂರು ಶತಮಾನಗಳ ಹಿಂದೆ ರಾಜಮಹಾರಾಜರು ನಮ್ಮ ದೇಶವನ್ನು ಆಳುತ್ತಿದ್ದರು. ರಾಜನೊಬ್ಬ ನೇರವಾಗಿ ಆಳಲಾಗದ ದೂರದ ಪ್ರದೇಶಗಳಲ್ಲಿ ಪಾಳೇಗಾರರನ್ನು ನೇಮಿಸುತ್ತಿದ್ದ. ಭೂ ಉಳುಮೆ ಮಾಡುತ್ತಿದ್ದ ಪ್ರತಿ ರೈತರಿಂದ 100 ರೂ ಸಂಗ್ರಹಿಸಿಕೊಡು ಎಂದು ರಾಜ ಆದೇಶಿಸಿದರೆ, ಪಾಳೇಗಾರ 200 ರೂ ಸಂಗ್ರಹಿಸಿ ತಾನು 100 ಇಟ್ಟುಕೊಂಡು ಉಳಿದ 100 ರೂಗಳನ್ನು ರಾಜನಿಗೆ ಸಲ್ಲಿಸುತ್ತಿದ್ದ. ಸ್ವಾತಂತ್ರ್ಯ ಲಭಿಸಿ ಪ್ರಜಾಪ್ರಭುತ್ವ ಬಂದನಂತರವೂ ಈ ಪದ್ಧತಿ ಜಾರಿಯಲ್ಲಿದೆ. ಇದಕ್ಕೆ ಪ್ರಸಕ್ತ ಕೇಂದ್ರ ಸರ್ಕಾರ ನೀಡಿರುವ ಹೊಸ ಹೆಸರು ನ್ಯಾಷನಲ್ ಮಾನಿಟೈಸೆಶನ್ ಪೈಪ್‌ಲೈನ್ ಆಗಿದೆ ಮತ್ತು ಇದರಿಂದ ಜನರಿಗೆ ಒಳ್ಳೆಯದು ಆಗುತ್ತದೆ ಎಂದು ಅದು ವಾದಿಸುತ್ತಿದೆ!

’ನಷ್ಟದಲ್ಲಿರುವ ಸಂಸ್ಥೆಗಳನ್ನು ಸರ್ಕಾರ ಏಕೆ ನಡೆಸಬೇಕು? ಇದು ತೆರಿಗೆದಾರರ ಜೇಬಿಗೆ ಕತ್ತರಿ’ ಎಂಬ ನೆಪದಲ್ಲಿ ಲಾಭದಾಯಕವಾಗಿ ನಡೆಯುತ್ತಿದ್ದ ಹಲವಾರು ಬೃಹತ್ ಸಾರ್ವಜನಿಕ ಸಂಸ್ಥೆಗಳನ್ನು ಕೂಡ ಮೋದಿ ಸರ್ಕಾರವು ಖಾಸಗಿಯವರಿಗೆ ಈಗಾಗಲೇ ಮಾರಿಬಿಟ್ಟಿದೆ. (ಹಿಂದಿನ ಹಲವು ಸರ್ಕಾರಗಳ ಕೊಡುಗೆ ಇದಕ್ಕೆ ಇದ್ದರೂ, ಈಗಿನ ಸರ್ಕಾರದ ಏಕಪಕ್ಷೀಯ ನಿರ್ಧಾರಗಳು ಬೆಚ್ಚಿಬೀಳಿಸುವಂತಿವೆ) ಸಾರ್ವಜನಿಕ ಸಂಸ್ಥೆಗಳು ಅಂದರೆ, ಈ ದೇಶದ ಜನರು ಕಟ್ಟಿದ ತೆರಿಗೆ ದುಡ್ಡು ಬಳಸಿ ನಿರ್ಮಿಸಿದ ಸಂಸ್ಥೆಗಳು ಸುಲಭವಾಗಿ ಖಾಸಗಿಯವರ ಪಾಲಾಗಿವೆ ಮತ್ತು ಅವರು ಲಾಭ ಮಾಡುತ್ತಿದ್ದಾರೆ ಎಂಬುದನ್ನು ನಾವು ಮರೆಯಬಾರದು.

PC : The Economic Times

ಈಗ ಮತ್ತೊಮ್ಮೆ ಸರ್ಕಾರ, ಇದುವರೆಗೂ ಉಪಯೋಗವಾಗಿಲ್ಲದ ಅಥವಾ ಹೆಚ್ಚು ಉಪಯೋಗಕ್ಕೆ ಬಂದಿಲ್ಲದ ಸರ್ಕಾರದ ಆಸ್ತಿಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಟ್ಟು, ಅವರಿಂದ ಮುಂದಿನ ನಾಲ್ಕು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ ಶುಲ್ಕ ಸಂಗ್ರಹಿಸುತ್ತೇವೆ ಎನ್ನುತ್ತಾ ’ಸರ್ಕಾರಿ ಆಸ್ತಿ ನಗದೀಕರಣ’ (ನ್ಯಾಷನಲ್ ಮಾನಿಟೈಸೆಶನ್ ಪೈಪ್‌ಲೈನ್ – NMP) ಎಂಬ ಯೋಜನೆಯನ್ನು ಘೋಷಿಸಿದೆ. ಆದರೆ ಅದು ಖಾಸಗಿಯವರಿಗೆ ನೀಡಲು ಮುಂದಾಗುತ್ತಿರುವುದು ನಷ್ಟದಲ್ಲಿರುವ ಸಂಸ್ಥೆಗಳಲ್ಲ ಬದಲಿಗೆ ಅತಿ ಹೆಚ್ಚು ಲಾಭದಲ್ಲಿರುವ ಸಂಸ್ಥೆಗಳಾಗಿರುವುದು ನಮ್ಮೆಲ್ಲರ ದುರಂತ.

ಖಾಸಗೀಕರಣ ಮತ್ತು NMP ಇವೆರೆಡೂ ಸಹ ಖಾಸಗಿ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವುದಕ್ಕಾಗಿ ಮಾಡಿರುವ ಯೋಜನೆಗಳು ಮತ್ತು ಇದರ ಹೊರೆ ಈ ದೇಶದ ಜನಸಾಮಾನ್ಯರ ಮೇಲೆ ಬೀಳುತ್ತದೆ ಎಂಬುದು ಯಾರಿಗಾದರೂ ಮೇಲ್ನೋಟಕ್ಕೇ ಅರ್ಥವಾಗುವಂತದ್ದು. ಆದರೆ ಈ ಯೋಜನೆ ಘೋಷಿಸುವ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ’ಇದರಿಂದ ಖಾಸಗಿಯವರಿಗೆ ಲಾಭವಾಗಲಿದೆ ಜೊತೆಗೆ ಸರ್ಕಾರಕ್ಕೂ ಲಾಭವಾಗಲಿದೆ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಲ್ಲಿ ಖಾಸಗಿಯವರಿಗೆ ಕೊಡುವುದರ ಬದಲು ಸರ್ಕಾರವೇ ನಿರ್ವಹಣೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ ಅಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಆದರೆ ಸರ್ಕಾರ ’ಹಿಂದೆ ಕಾಂಗ್ರೆಸ್ ಸಹ ಸರ್ಕಾರಿ ಆಸ್ತಿ ನಗದೀಕರಣ ಮಾಡಿತ್ತು’ ಎಂದು ಹೇಳುವ ಮೂಲಕ ನುಣುಚಿಕೊಳ್ಳುತ್ತಿದೆ.

ಲಾಭದಲ್ಲಿರುವ ಸಂಸ್ಥೆಗಳ ಮಾರಾಟ – ಜನರಿಗಾಗಲಿದೆ ನಷ್ಟ

NMP ಯೋಜನೆಯ ಭಾಗವಾಗಿ, ಸರ್ಕಾರ ಸುಸಜ್ಜಿತವಾಗಿ ನಿರ್ಮಿಸಿ, ಬಳಕೆಯಲ್ಲಿರುವ 26,700 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಬಿಟ್ಟುಕೊಡಲು ಹೊರಟಿದೆ. ಇದರಿಂದ 1.6 ಲಕ್ಷಕೋಟಿ ರೂಗಳ ಆದಾಯವನ್ನು ಸರ್ಕಾರ ನಿರೀಕ್ಷಿಸಿದೆ. ಆದರೆ ಈಗಾಗಲೇ ಈ ಹೆದ್ದಾರಿಗಳಿಂದ 2016ರಿಂದ 2019ರವರೆಗಿನ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಟೋಲ್ ರೂಪದಲ್ಲಿ 91,137 ಕೋಟಿ ರೂಗಳನ್ನು ಸಂಗ್ರಹಿಸಿದೆ. ಈಗ ಹೇಳಿ ಇದನ್ನು ನಷ್ಟದಲ್ಲಿದೆ ಎನ್ನಲು ಸಾಧ್ಯವೇ? ಒಂದು ವೇಳೆ ಖಾಸಗಿ ಕಂಪನಿ ಇನ್ನು ಹೆಚ್ಚಿನ ಲಾಭ ಮಾಡಲು ಹೊರಟರೆ ಅದು ಭಾರ ಟೋಲ್ ರೂಪದಲ್ಲಿ ಪ್ರತಿಯೊಬ್ಬ ಜನಸಾಮಾನ್ಯರ ಮೇಲೆ ಬೀಳುತ್ತದೆ. ಅಂದರೆ ಈಗಾಗಲೇ ಕಟ್ಟುತ್ತಿರುವ ಟೋಲ್ ಬಹಳ ಹೆಚ್ಚಾಗಿದೆ. ಅದರ ಮೂರು ಪಟ್ಟು ಟೋಲ್ ಕಟ್ಟಬೇಕಾದ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ!

ಇನ್ನು BSNL ಕಂಪನಿ ಹಲವು ವರ್ಷಗಳಿಂದ ನಷ್ಟದಲ್ಲಿದೆ. ಅದಕ್ಕೆ ಕೇಂದ್ರ ಸರ್ಕಾರವೇ ಕಾರಣ ಹೊರತು ಮತ್ಯಾರಲ್ಲ. ಈಗ NMP ಯೋಜನೆಯ ಭಾಗವಾಗಿ ನಷ್ಟದಲ್ಲಿರುವ BSNLಅನ್ನು ಇಡಿಯಾಗಿ ಖಾಸಗಿಯವರಿಗೆ ನೀಡುತ್ತಿಲ್ಲ. ಬದಲಿಗೆ 16,700 ಕಿ,ಮೀ ಉದ್ದದ ಆಪ್ಟಿಕಲ್ ಫೈಬರ್ ಕೇಬಲ್ ವೈರ್‌ಗಳನ್ನು ಮತ್ತು ಸುಮಾರು 17,000 BSNL, MTNL ಟವರ್‌ಗಳನ್ನು ಖಾಸಗಿಯವರಿಗೆ ಬಿಟ್ಟುಕೊಡಲಾಗುತ್ತಿದೆ. ನಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ಅನ್ನು ಮತ್ತೆ ಸುಸಜ್ಜಿತಗೊಳಿಸಲು ಯಾವ ಖಾಸಗಿಯವರು ಮುಂದೆ ಬರುತ್ತಿಲ್ಲ. ಆದರೆ ಅದರ ಟವರ್‌ಗಳನ್ನು ಮತ್ತು ಅದರ ವ್ಯಾಪಕ ನೆಟ್‌ವರ್ಕ್‌ಅನ್ನು ಬಳಸಿಕೊಳ್ಳಲು ನಾ ಮುಂದು ತಾ ಮುಂದು ಎನ್ನುತ್ತಿವೆ. ಅಂದರೆ ಇನ್ನು ಮುಂದೆ ನಮ್ಮೆಲ್ಲರ ಮೊಬೈಲ್ ಬಿಲ್ ಹೆಚ್ಚಾಗಲಿದೆ ಎಂಬುದನ್ನು ನಾವು ಊಹಿಸಿಕೊಳ್ಳುವುದಕ್ಕೆ ಕಷ್ಟವೇನಲ್ಲ.

150 ರೈಲುಗಳು, 400 ರೈಲು ನಿಲ್ದಾಣಗಳು ಖಾಸಗಿಯವರ ಕೈಗೆ ಹೋದಲ್ಲಿ ಪ್ರಯಾಣ ದರಗಳು ಗಗನಕ್ಕೇರುವುದಿಲ್ಲ ಎಂದು ನಿಮಗೆ ಅನಿಸುತ್ತದೆಯೇ? ವಿದ್ಯುತ್ ಟ್ರಾನ್ಸ್‌ಮಿಷನ್ ಲೈನ್‌ಗಳು, ಗ್ಯಾಸ್ ಪೈಪ್‌ಲೈನ್‌ಗಳು, ಪವರ್ ಗ್ರಿಡ್‌ಗಳು ನಗದೀಕರಣ ವ್ಯಾಪ್ತಿಗೆ ಬರಲಿವೆ. ಅಲ್ಲಿಗೆ ನಮ್ಮ ಕರೆಂಟ್ ಬಿಲ್, ಗ್ಯಾಸ್ ಬಿಲ್ ತುಟ್ಟಿಯಾಗುವುದು ಖಚಿತ. ಈಗ ಹೇಳಿ ಈ ಖಾಸಗಿಕರಣ ಯೋಜನೆಗಳು ಬೇಕೆ?

253ಕ್ಕೂ ಹೆಚ್ಚಿನ ಕೇಂದ್ರದ ಸ್ವತ್ತಿನಲ್ಲಿರುವ ಸರ್ಕಾರಿ ಸಂಸ್ಥೆಗಳಲ್ಲಿ ಸುಮಾರು 171 ಸಂಸ್ಥೆಗಳು ಲಾಭದಲ್ಲಿವೆ. ಅದರಲ್ಲಿ ಕೆಲವಂತೂ ವರ್ಷಕ್ಕೆ 10,000 ಕೋಟಿಗೂ ಹೆಚ್ಚಿನ ಲಾಭ ತರುತ್ತಿವೆ. ಸುಮಾರು 13 ಲಕ್ಷ ಜನರಿಗೆ ಉದ್ಯೋಗ ಕೊಟ್ಟಿವೆ. ವರ್ಷಕ್ಕೆ 18-20 ಲಕ್ಷ ಕೋಟಿ ವಹಿವಾಟು ನಡೆಸಿ 3 ಲಕ್ಷ ಕೋಟಿಗೂ ಅಧಿಕ ಆದಾಯ ತರುತ್ತಿವೆ. ಆದರೆ ಇವನ್ನು ಉಳಿಸಿ, ಬೆಳೆಸಬೇಕಾದ ಮೋದಿ ಸರ್ಕಾರ ತನ್ನ ಅದಕ್ಷತೆಯ ಕಾರಣಕ್ಕೆ, ಅವುಗಳನ್ನು ಮಾರಾಟ ಮಾಡಲು ಹೊರಟು ದೇಶದ ಪ್ರತಿಯೊಬ್ಬ ಪ್ರಜೆಯನ್ನು ಮತ್ತಷ್ಟು ಬಡತನಕ್ಕೆ ನೂಕುತ್ತಿದೆ.

PC : Gizbot

ನಮ್ಮ ದೇಶದ ಆರೋಗ್ಯ ವ್ಯವಸ್ಥೆ ಶೇ.70 ರಷ್ಟು ಖಾಸಗೀಯವರ ಹಿಡಿತದಲ್ಲಿದೆ. ಈ ಕಾರಣಕ್ಕಾಗಿಯೂ ಕೊರೊನಾ ಮೊದಲ ಅಲೆ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಪರದಾಡುವಂತಾಯ್ತು. ಹಲವು ಆಸ್ಪತ್ರೆಗಳು ಲಕ್ಷಗಳ ಲೆಕ್ಕದಲ್ಲಿ ಬಿಲ್ ಮಾಡಿ ಜನರ ಜೀವ ಹಿಂಡಿದವು. ಈಗ ಸರ್ಕಾರ ತರಲೊರಟಿರುವ ಈ ಯೋಜನೆಯಿಂದ ಜನಸಾಮಾನ್ಯರ ಅಗತ್ಯ ಸೇವೆಗಳ ಬೆಲೆ ಮೂರ್ನಾಲ್ಕು ಪಟ್ಟು ಹೆಚ್ಚಲಿದ್ದು ಬಡಜನರು, ಮಧ್ಯಮವರ್ಗದವರನ್ನು ಈ ಖಾಸಗಿಯವರು ಹಿಂಡಿ ಹಿಪ್ಪೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

– ಮುತ್ತುರಾಜು

ಇದೊಂದು ಅದಕ್ಷ, ಅಸಮರ್ಥ, ಅನನುಭವಿ ಸರ್ಕಾರ

ನಾವು ಮಾರಾಟ ಮಾಡುತ್ತಿಲ್ಲ, ಗುತ್ತಿಗೆಗೆ ಕೊಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. 60-90 ವರ್ಷಗಳಿಗೆ ಗುತ್ತಿಗೆ ಎಂದರೆ ಅದು ಖಾಸಗೀಕರಣ ಎಂತಲೇ ಅರ್ಥ. ಈಗಾಗಲೇ ಆದಾಯದಲ್ಲಿರುವ ಕಂಪನಿಗಳನ್ನು ಖಾಸಗಿಯವರಿಗೆ ಕೊಡುತ್ತಿರುವ ಸರ್ಕಾರ ಇದರಿಂದ ಆದಾಯ ಹೆಚ್ಚಾಗುತ್ತದೆ ಎಂದು ಹೇಳುತ್ತಿದೆ. ಉದಾಹರಣೆಗೆ ಈಗ 100 ರೂ ಆದಾಯ ಬರುತ್ತಿರುವ ಕಂಪನಿಯನ್ನು ಖಾಸಗಿಯವರಿಗೆ ಕೊಟ್ಟ ನಂತರ 200ರೂ ಆದಾಯ ಬಂದರೆ ಅದರಿಂದ ಸರ್ಕಾರಕ್ಕೆ ಸಿಗುವುದು ಕೇವಲ 100 ರೂ ಮಾತ್ರ ತಾನೇ? ಇನ್ನುಳಿದ 100 ರೂ ಖಾಸಗಿ ಕಂಪನಿ ಪಾಲಾಗುತ್ತದೆ. ನಂತರ ಖಾಸಗಿ ಕಂಪನಿಗಳು ಏಕಸ್ವಾಮ್ಯ ಸ್ಥಾಪಿಸಿ ದಿಢೀರ್ ಬೆಲೆ ಹೆಚ್ಚಳ ಮಾಡುತ್ತವೆ. ಸರ್ಕಾರ ಗುತ್ತಿಗೆ ನೀಡುತ್ತಿರುವ ಸಂಸ್ಥೆಗಳೆಲ್ಲವೂ ಅಗತ್ಯ ಸೇವೆಗಳಾಗ ಕಾರಣ ಸಾರ್ವಜನಿಕರು ದುಬಾರಿ ಬೆಲೆ ತೆರಲೇಬೇಕಾಗುತ್ತದೆ. ಈಗ ಹೇಳಿ ಇದು ಅಗತ್ಯವೇ?

ಈಗಿನ ಕೇಂದ್ರ ಸರ್ಕಾರಕ್ಕೆ ಯಾವ ಸಂಸ್ಥೆಯನ್ನು ಸಹ ಸಮರ್ಪಕವಾಗಿ ನಿರ್ವಹಿಸಲು ಬರುತ್ತಿಲ್ಲ. ಶಿಕ್ಷಣ, ಆರೋಗ್ಯ, ರಕ್ಷಣೆ, ಆರ್ಥಿಕತೆ ನೀವು ಯಾವುದೇ ವಿಷಯ ತೆಗೆದುಕೊಂಡರು ಅತ್ಯಂತ ಅದಕ್ಷ, ಅಸಮರ್ಥ ಸರ್ಕಾರ ಇದಾಗಿದೆ. ತಮ್ಮ ಅದಕ್ಷತೆ, ಅನನುಭವವನ್ನು ಮುಚ್ಚಿಕೊಳ್ಳಲು ಈ ಸರ್ಕಾರ ಅಹಂಕಾರ ತೋರಿಸುತ್ತಿದ್ದಾರೆ. ಇವರಿಗೆ ಮೇಲ್ಜಾತಿ ಮತ್ತು ಮೇಲ್ವರ್ಗದ ಭಾರೀ ಬೆಂಬಲ ಬಿಟ್ಟರೆ ನಮ್ಮ ದೇಶದ ಆಡಳಿತ ನಡೆಸಲು ಯಾವುದೇ ಯೋಗ್ಯತೆಯಿಲ್ಲ.

ತಾವು ನೈಜ ದಾರಿಯಲ್ಲಿ ನಡೆದು ಅಧಿಕಾರಕ್ಕೆ ಬಂದಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಆದುದರಿಂದಲೇ, ಉತ್ತಮ ಆಡಳಿತ ನಡೆಸಲು ಬರದೆ ಕೇವಲ ಸುಳ್ಳು, ಅಹಂಕಾರ, ಜಾಹೀರಾತುಗಳು, ಅಂಕಿ ಅಂಶಗಳ ತಿರುಚುವಿಕೆ, ಜನರನ್ನು ಧರ್ಮದ ಹೆಸರಿನಲ್ಲಿ ಎತ್ತಿಕಟ್ಟಿ ಅಧಿಕಾರ ನಡೆಸುತ್ತಿದ್ದಾರೆ. ಮಂದಿರ, ಮಸೀದಿ, ದನದ ಮಾಂಸ, ಲವ್ ಜಿಹಾದ್ ಇಂತದ್ದು ಮಾಡುವುದರಲ್ಲಿ ಪ್ರವೀಣರೇ ಹೊರತು ಉತ್ತಮ ಆಡಳಿತ ನಡೆಸಿದ ಅನುಭವ ಅವರಿಗಿಲ್ಲ. ಅದಕ್ಕಾಗಿ ಪ್ರಶ್ನಿಸಿದವರನ್ನೆಲ್ಲ ದೇಶದ್ರೋಹಿಗಳು ಎನ್ನುತ್ತಾರೆ. ಒಟ್ಟಿನಲ್ಲಿ ಇಡೀ ಆಡಳಿತ ವ್ಯವಸ್ಥೆಯನ್ನೇ ಇವರು ಕೊಳೆಸಿಬಿಟ್ಟಿದ್ದಾರೆ.

ಶಿಕ್ಷಣ, ಆರೋಗ್ಯವನ್ನು ಮುಂದುವರಿದ ದೇಶಗಳು ಮೂಲಭೂತ ಹಕ್ಕಾಗಿಸಿವೆ. ಇದನ್ನು ಬಿಟ್ಟು ಸಂಪೂರ್ಣ ಖಾಸಗಿಯವರಿಗೆ ವಹಿಸಿದ ಯಾವ ದೇಶವೂ ಉದ್ದಾರವಾಗಿಲ್ಲ ಎಂಬುದನ್ನು ನಾವು ಮರೆಯಬಾರದು. ಅಮೆರಿಕಾದಂತಹ ದೇಶದಲ್ಲಿ ಜನರು ಆರೋಗ್ಯದ ಮೇಲೆ ತಮ್ಮ ಆದಾಯದ ಶೇ.10ರಷ್ಟನ್ನು ಮಾತ್ರ ಖರ್ಚು ಮಾಡಿದರೆ ನಮ್ಮ ಭಾರತದಲ್ಲಿ ಶೇ.65ರಷ್ಟನ್ನು ಖರ್ಚು ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಇದಕ್ಕೆ ಖಾಸಗೀಕರಣವೇ ನೇರ ಕಾರಣ. ಇದು ಗೊತ್ತಿದ್ದರೂ ಸರ್ಕಾರ ತಮ್ಮ ಬಂಡವಾಳಶಾಹಿ ಸ್ನೇಹಿತರಿಗೆ ಮತ್ತು ಪಕ್ಷಕ್ಕೆ ದೇಣಿಗೆ ನೀಡುವವರಿಗೆ ಸಹಾಯ ಮಾಡಲು ಈ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ.

ಒಂದು ವೇಳೆ ಸರ್ಕಾರಕ್ಕೆ ಈ ಸಂಸ್ಥೆಗಳ ನಿರ್ವಹಣೆ ಅತಿ ಕಷ್ಟವಾದರೆ ಅಲ್ಲಿನ ಉದ್ಯೋಗಿಗಳಿಗೆ, ಕಾರ್ಮಿಕ ಸಂಘಗಳಿಗೆ ನಡೆಸಲು ಬಿಡಬಹುದಲ್ಲವೇ? ಅನುಭವವಿರುವ ಅವರು ನಡೆಸಿ ಲಾಭ ತಂದು ಸರ್ಕಾರದ ಬೊಕ್ಕಸ ತುಂಬಿಸುತ್ತಾರೆ. ಅದು ಬಿಟ್ಟು ಬಂಡವಾಳಶಾಹಿಗಳಿಗೆ ಏಕೆ ಕೊಡಬೇಕು? ಖಾಸಗಿಯವರು ಉತ್ಪಾದನಾ ವೆಚ್ಚ ಕಡಿತದ ಹೆಸರಿನಲ್ಲಿ ಮೊದಲು ಮಾಡುವುದು ಅಲ್ಲಿನ ಉದ್ಯೋಗಿಗಳ, ಕಾರ್ಮಿಕರ ಕಡಿತ ಅಲ್ಲವೇ? ಈಗಾಗಲೇ ನಿರುದ್ಯೋಗ ತಾಂಡವವಾಡುತ್ತಿರುವಾಗ ಇನ್ನಷ್ಟು ನಿರುದ್ಯೋಗಿಗಳನ್ನು ಪಡೆಯಬೇಕೆ?

ಡಾ. ಎಂ ಚಂದ್ರ ಪೂಜಾರಿ, ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕರು, ಹಂಪಿ ವಿವಿ

NMP ಎಂಬುದು ಸಂವಿಧಾನ ವಿರೋಧಿ ಕ್ರಮವಾಗಿದೆ

NMP ಎಂಬುದನ್ನು ರೂಪಿಸಿರುವ ಒಕ್ಕೂಟ ಸರ್ಕಾರದ ಹಣಕಾಸು ಸಚಿವರು ಮತ್ತು ಇಲಾಖೆಯ ಅಧಿಕಾರಿಗಳನ್ನು ’ಸಾರ್ವಜನಿಕ ಹಣಕಾಸು ಅನಕ್ಷರಸ್ಥರು’ ಎಂದು ಕರೆಯುತ್ತೇನೆ. ಸರ್ಕಾರವೊಂದು ಮರ್ಯಾದೆಯಿಂದ, ಗೌರವದಿಂದ ಆರ್ಥಿಕತೆಯನ್ನು ನಿರ್ವಹಿಸಬೇಕಾದರೆ ಅದು ತೆರಿಗೆಗಳಿಂದ ಮತ್ತು ಸಾಲಗಳಿಂದ ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಳ್ಳಬೇಕು. ಯಾರೂ ಕೂಡ ರಾಷ್ಟ್ರೀಯ ಆಸ್ತಿಯನ್ನು ಮಾರಾಟ ಮಾಡಿ, ಗುತ್ತಿಗೆ ನೀಡಿ ಸಂಪನ್ಮೂಲ ಸಂಗ್ರಹಿಸಿಕೊಳ್ಳುವುದಿಲ್ಲ.

NMP ಎಂಬುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಏಕೆಂದರೆ ಇದರಲ್ಲಿ ಸಂಗ್ರಹವಾಗುವ ಹಣವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಒಕ್ಕೂಟ ಸರ್ಕಾರದಿಂದ ಹಣದೋಚುವ ಕಾರ್ಯಕ್ರಮ ಇದಾಗಿದೆ. ಇದು ಪ್ರಸ್ತುತ ಒಕ್ಕೂಟ ಸರ್ಕಾರದ ಖಾಸಗೀಕರಣ ಮತ್ತು ಕಾರ್ಪೊರೆಟೀಕರಣದ ಆರಾಧನೆಯ ಕ್ರಮವಾಗಿದೆ.

ಡಾ.ಟಿ.ಆರ್ ಚಂದ್ರಶೇಖರ್, ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕರು, ಹಂಪಿ ವಿವಿ.


ಇದನ್ನೂ ಓದಿ: ಭಾರತ ಮಾರಾಟಕ್ಕಿದೆ: ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣದ ಕುರಿತು ಗಮನ ಸೆಳೆದ ಕಾರ್ಟೂನ್‌ಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....