ಆರೋಪಿಯೊಬ್ಬರ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ನಾಲ್ಕು ದಿನಗಳ ಹಸುಗೂಸನ್ನು ಬೂಟುಗಾಲಿನಿಂದ ತುಳಿದು ಸಾಯಿಸಿದ ಅಮಾನವೀಯ ಕೃತ್ಯ ಜಾರ್ಖಂಡ್ನ ಗಿರಿದಿಹ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಆರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ಅವರನ್ನು ಅಮಾನತು ಮಾಡಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶಿಶುವಿನ ದೇಹ ಛಿದ್ರವಾಗಿದೆ ಎಂದು ತೋರಿಸಿದೆ. ಆನಂತರ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕೋಶೋಡಿಂಗಿ ಗ್ರಾಮದ ಭೂಷಣ್ ಪಾಂಡೆ ಎನ್ನುವ ಆರೋಪಿಯ ಮನೆಯ ಮೇಲೆ ಬುಧವಾರ ಪೊಲೀಸ್ ತಂಡ ದಾಳಿ ನಡೆಸಿತು. ಈ ವೇಳೆ ಮತ್ತು ಕೋಣೆಯೊಂದರಲ್ಲಿ ಮಲಗಿದ್ದ ಹಸುಗೂಸನ್ನು ತುಳಿದು ಸಾಯಿಸಿದ್ದಾರೆಂದು ಆರೋಪಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ವಿಶ್ವ ಸಂತೋಷ ಸೂಚ್ಯಂಕದಲ್ಲಿ ಪಾಕ್, ಶ್ರೀಲಂಕಾಕ್ಕಿಂತ ಕೆಳಗೆ ಕುಸಿದ ಭಾರತ
ಮಗುವನ್ನು ತುಳಿದು ಸಾಯಿಸಿದ ಬಳಿಕ, ಈ ಘಟನೆಯನ್ನು ಬಹಿರಂಗಪಡಿಸದಂತೆ ಕುಟುಂಬಕ್ಕೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ಮಗುವಿನ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸರು ತಮ್ಮ ಮನೆಗೆ ದಾಳಿ ನಡೆಸಿ ಬಲವಂತವಾಗಿ ಬಾಗಿಲು ತೆರೆದು ಮನೆಯನ್ನು ಹುಡುಕುತ್ತಿದ್ದಾಗ ಮಗುವಿನ ಮೇಲೆ ಕಾಲಿಟ್ಟಿದ್ದಾರೆ ಎಂದು ಭೂಷಣ್ ಪಾಂಡೆ ಹೇಳಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆನಂತರ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬುಧವಾರ ತನಿಖೆಗೆ ಆದೇಶಿಸಿದ್ದರು.
ಪೊಲೀಸ್ ಅಧಿಕಾರಿಗಳ ವಿರುದ್ಧ ಐಪಿಸಿ 304 (ಕೊಲೆಗೆ ಸಮನಾಗಿರುವುದಿಲ್ಲ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಗಿರಿದಿಹ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರೇಣು ಹೇಳಿದ್ದಾರೆ.
”ಘಟನೆಗೆ ಸಂಬಂಧಿಸಿದ ಉಸ್ತುವಾರಿ ಅಧಿಕಾರಿ ಆ ಸ್ಥಳದಲ್ಲಿ ಇರಲಿಲ್ಲ… ಈ ಪ್ರಕರಣದ ತನಿಖೆ ಮುಂದುವರಿಯುತ್ತದೆ. ಅಗತ್ಯವಿದ್ದಲ್ಲಿ, ಎಫ್ಐಆರ್ಗೆ ಹೆಚ್ಚಿನ ಸೆಕ್ಷನ್ಗಳನ್ನು ಸೇರಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ರೇಣು ಹೇಳಿದರು.