ಜಾರ್ಖಂಡ್ ರಾಜ್ಯದ ವಿಧಾನಸಭೆಯ 81 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು ಕಾಂಗ್ರೆಸ್-ಜೆಎಂಎಎಂ-ಆರ್ಜೆಡಿ ಮೈತ್ರಿ ಕೂಟ ಸರಳ ಬಹುಮತದತ್ತ ಹೆಜ್ಜೆ ಇಟ್ಟಿದೆ. ಕಳೆದ ಬಾರಿ ಅಧಿಕಾರ ಹಿಡಿದಿದ್ದ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ.
ಜಾರ್ಖಂಡ್ ರಾಜ್ಯದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರೆಲ್ಲರೂ ಪ್ರಚಾರ ನಡೆಸಿದ್ದರೂ ಕಳೆದ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ.
ಬಿಜೆಪಿಯ ನಾಯಕರು ರಾಷ್ಟ್ರೀಯ ಪೌರತ್ವ ನೋಂದಣಿ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯತೆ, ಕಾಶ್ಮೀರ ಮೊದಲಾದ ರಾಷ್ಟ್ರೀಯ ವಿಷಯಗಳನ್ನು ಚುನಾವಣಾ ಸಮಯದಲ್ಲಿ ಉಲ್ಲೇಖಿಸಿ ಮತಯಾಚಿಸಿದ್ದರು. ಆದರೆ ರಾಷ್ಟ್ರೀಯ ವಿಷಯಗಳಿಗೆ ಮತದಾರ ಆಸಕ್ತಿ ವಹಿಸದೇ ಇರುವುದು ಈ ಚುನಾವಣೆಯ ಫಲಿತಾಂಶದಿಂದ ವ್ಯಕ್ತವಾಗಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳು ಅಷ್ಟಾಗಿ ಜನರಿಗೆ ಇಷ್ಟವಾಗಿಲ್ಲ. ಬದಲಿಗೆ ಸ್ಥಳೀಯ ವಿಷಯಗಳಿಗೆ ಮತದಾರರು ಹೆಚ್ಚಿನ ಆದ್ಯತೆ ನೀಡಿದಂತೆ ಕಂಡು ಬಂದಿದೆ. ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಬಿಜೆಪಿ ಯಾರೊಂದಿಗೂ ಮೈತ್ರಿ ಮಾಡಿಕೊಂಡಿಲ್ಲದಿರುವುದು ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ.
ಕಾಂಗ್ರೆಸ್-ಜೆಎಂಎಂ-ಆರ್ ಜೆಡಿ ಮೈತ್ರಿ ಕೂಡ ಸರಳ ಬಹುಮತ ಪಡೆಯುವತ್ತ ಹೆಜ್ಜೆ ಹಾಕಿದೆ. ನಾಲ್ಕನೇ ಸುತ್ತಿನ ಮತೆ ಎಣಿಕೆಯಲ್ಲಿಯೂ ಅದು ಮುನ್ನಡೆ ಸಾಧಿಸಿದೆ. ಪ್ರತಿಪಕ್ಷದಲ್ಲಿದ್ದ ಈ ಮೈತ್ರಿ ಕೂಟ ಅಧಿಕಾರಕ್ಕೆ ಏರುವ ಎಲ್ಲಾ ಲಕ್ಷಣಗಳು ಕಂಡುಬಂದಿದೆ. ಆದಿವಾಸಿಗಳು, ಅರಣ್ಯವಾಸಿಗಳ ಸ್ಥಳಾಂತರ, ಆಹಾರ ಭದ್ರತೆ ಕಾಯ್ದೆ ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು ಹಸಿವಿನಿಂದ ಹಲವರು ಮೃತಪಟ್ಟಿದ್ದರು. ಈ ವಿಷಯವನ್ನು ಕಾಂಗ್ರೆಸ್-ಜೆಎಂಎಂ-ಆರ್ ಜೆಡಿ ಚುನಾವಣೆಯಲ್ಲಿ ಪ್ರಸ್ತಾಪಿಸಿದ್ದವು.
ಅಷ್ಟೇ ಅಲ್ಲ ಪಡಿತರ ಚೀಟಿ, ಪಿಂಚಣಿ ಮತ್ತು ಉದ್ಯೋಗ ಖಾತ್ರಿ ಯೋಜನೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಕಾರಣ ನೀಡಿದ ಸರ್ಕಾರ ಸುಮಾರು 11.64 ಲಕ್ಷ ಕಾರ್ಡುಗಳನ್ನು ರದ್ದುಪಡಿಸಿತ್ತು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಇದೊಂದು ಪ್ರಮಾದ ಎಂದು ಹೇಳಿದ್ದರು. ಈ ವಿಷಯವನ್ನು ಕೂಡ ಪ್ರತಿಪಕ್ಷಗಳು ಚುನಾವಣೆಯಲ್ಲಿ ಪ್ರಸ್ತಾಪಿಸಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವುದರಿಂದ ಜೆಎಂಎಂ ಮೈತ್ರಿ ಕೂಟ ಅಧಿಕಾರ ಹಿಡಿಯಲು ಸಾಧ್ಯವಾಗಿದೆ.
ಆದಿವಾಸಿಗಳು ಭೂಮಿಯ ಮಾಲಿಕತ್ವವನ್ನು ಹೊಂದಿದ್ದು ಅವರ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲು ಮುಂದಾಗಿತ್ತು. ಇದು ಆದಿವಾಸಿಗಳು ಮತ್ತು ಅರಣ್ಯವಾಸಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಆದಿವಾಸಿಗಳೇ ಹೆಚ್ಚು ಸಂಖ್ಯೆಯಲ್ಲಿರುವ ಜಾರ್ಖಂಡ್ ನಲ್ಲಿ ಅವರ ಅಸಮಾಧಾನ ಜೆಎಂಎಎಂ ಮೈತ್ರಿಕೂಟಕ್ಕೆ ವರವಾಗಿ ಪಡಿಣಮಿಸಿದೆ.
ಜಾರ್ಖಂಡ್ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆರ್ ಜೆಡಿ ಐದು ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ ಕೂಡ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ.