ಸೋಮವಾರ ಜಾರ್ಖಂಡ್ನ ಛತ್ರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಹತ್ಯೆಯಾದವರಲ್ಲಿ ಮಾವೋವಾದಿ ವಿಶೇಷ ಪ್ರದೇಶ ಸಮಿತಿ ಸದಸ್ಯ ಗೌತಮ್ ಪಾಸ್ವಾನ್ ಮತ್ತು ಉಪ ವಲಯದ ಕಮಾಂಡರ್ಗಳಾದ ಅಮರ್ ಗ್ಂಜು, ನಂದು, ಸಂಜೀವ್ ಭುಯಾನ್ ಇದ್ದಾರೆ. ಒಬ್ಬರನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ತಿಳಿಸಿದೆ.
ವಿಶೇಷ ಪ್ರದೇಶ ಸಮಿತಿಗೆ ಅಧಿಕಾರಿಗಳು 25 ಲಕ್ಷ ರೂಪಾಯಿ ಇನಾಮು ಘೋಷಿಸಿದ್ದರೆ, ಉಪ ವಲಯ ಕಮಾಂಡರ್ಗಳಿಗೆ ತಲಾ 5 ಲಕ್ಷ ರೂಪಾಯಿ ಇನಾಮು ಇತ್ತು.
ಎರಡು AK-47, ಒಂದು INSAS ರೈಫಲ್ ಮತ್ತು ಎರಡು ಸಾಮಾನ್ಯ ರೈಫಲ್ಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ರಂಜನ್ ತಿಳಿಸಿದ್ದಾರೆ.
ಛತ್ರಾ ಜಿಲ್ಲೆಯ ಕಾಡಿನಲ್ಲಿ ಕೆಲವು ಮಾವೋವಾದಿ ಕಮಾಂಡರ್ಗಳು ಇದ್ದಾರೆ ಎಂದು ಭದ್ರತಾ ಪಡೆಗಳಿಗೆ ಸುಳಿವು ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದರ ಬೆನ್ನಲ್ಲೇ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಜಾರ್ಖಂಡ್ ಸಶಸ್ತ್ರ ಪೊಲೀಸರು ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ.
ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 160 ಕಿಮೀ ದೂರದಲ್ಲಿರುವ ಲಾವಾಲಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಛತ್ರಾ-ಪಾಲಮು ಗಡಿಯಲ್ಲಿ ಎನ್ಕೌಂಟರ್ ನಡೆದಿದೆ.
“ಛತ್ರಾ ಮತ್ತು ಗಯಾ (ಪಕ್ಕದ ಬಿಹಾರದ) ಪ್ರದೇಶಗಳನ್ನು ನಕ್ಸಲ್ ಅಂಶಗಳಿಂದ ಮುಕ್ತಗೊಳಿಸಲಾಗಿದೆ. ಇದು ಪೊಲೀಸರಿಗೆ ದೊಡ್ಡ ಸಾಧನೆಯಾಗಿದೆ. ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ಕಾರ್ಯಾಚರಣೆ ಮುಂದುವರೆದಿದೆ. ಇದೀಗ ಹುಡುಕಾಟ ನಡೆಯುತ್ತಿದೆ” ರಾಜ್ಯ ಡಿಜಿಪಿ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿರಿ: ‘ರಾತ್ರಿ ಹೊತ್ತು ರಸ್ತೆಯಲ್ಲಿ ಬ್ಯಾಟ್ ಹಿಡಿದು ತಿರುಗುವವರಿಗೆ ಪೊಲೀಸರ ಅನುಮತಿ ಇತ್ತೇ?: ಇದ್ರೀಶ್ ಹತ್ಯೆಗೆ ಎಚ್ಡಿಕೆ ಖಂಡನೆ
ಭದ್ರತಾ ಪಡೆಯಲ್ಲಿದ್ದವರಿಗೆ ಗಾಯಗಳಾಗಿವೆಯೇ ಎಂದು ಪ್ರಶ್ನಿಸಿದಾಗ, “ಯಾರೂ ಗಾಯಗೊಂಡಿಲ್ಲ, ಮಾವೋವಾದಿ ಬಣದ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ, ಆತನನ್ನು ಗ್ಯಾಂಗ್ ಸದಸ್ಯರು ಕರೆದೊಯ್ದಿದ್ದಾರೆಂದು ತೋರುತ್ತದೆ” ಎಂದು ಮಾಹಿತಿ ನೀಡಿದ್ದಾರೆ.
ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ ಮಾವೋವಾದಿಗಳ ಮೇಲೆ ರೈಡ್ ಮಾಡಲಾಯಿತು. ಜಂಟಿ ಕಾರ್ಯಾಚರಣೆಯಲ್ಲಿ ಪ್ರಮುಖ ಶಿಬಿರವನ್ನು ಧ್ವಂಸಗೊಳಿಸಲಾಗಿದೆ ಎಂದಿದ್ದಾರೆ.
ಗುಂಡಿನ ಚಕಮಕಿ ನಡೆದ ಪ್ರದೇಶಕ್ಕೆ ಸಮೀಪವಿರುವ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ ಎಂದು ಪಲಾಮು ಡಿಐಜಿ ರಾಜ್ಕುಮಾರ್ ಲಾಕ್ರಾ ಅವರು ಪಿಟಿಐಗೆ ತಿಳಿಸಿದ್ದಾರೆ.