ಚೀನಾ ದೇಶವು ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿ, ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಮೂರನೇ ಸೆಟ್ ಹೆಸರುಗಳನ್ನು ಬಿಡುಗಡೆ ಮಾಡಿ ವಿವಾದ ಸೃಷ್ಟಿಸಿದೆ.
ಅರುಣಾಚಲ ಪ್ರದೇಶದ ಕೆಲವು ಭಾಗಗಳು ದಕ್ಷಿಣ ಟಿಬೆಟ್ನಲ್ಲಿವೆ ಎಂದು ಪ್ರತಿಪಾದಿಸಿ ಈ 11 ಸ್ಥಳಗಳೊಂದಿಗೆ ಚೀನಾ ನಕ್ಷೆಯನ್ನು ಬಿಡುಗಡೆ ಮಾಡಿದೆ, ಇದನ್ನು ಚೀನಾ, ‘ಝಂಗ್ನಾನ್ ಪ್ರದೇಶ’ ಎಂದು ಉಲ್ಲೇಖಿಸಿದೆ. ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಸಮೀಪವಿರುವ ಪಟ್ಟಣವನ್ನು ಸಹ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.
ಹೆಸರಿಸಲಾದ 11 ಸ್ಥಳಗಳಲ್ಲಿ ಐದು ಪರ್ವತ ಶಿಖರಗಳು, ಎರಡು ವಸತಿ ಪ್ರದೇಶಗಳು, ಎರಡು ಭೂ ಪ್ರದೇಶಗಳು ಮತ್ತು ಎರಡು ನದಿಗಳು ಸೇರಿವೆ. ಚೀನಾ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ಯತ್ನಿಸಿರುವ ಈ ಭೌಗೋಳಿಕ ಪ್ರದೇಶವನ್ನು ಮೊದಲಿನಿಂದಲೂ ಭಾರತ ನಿಯಂತ್ರಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ.
ಸ್ಥಳಗಳನ್ನು ಮರುಹೆಸರಿಸಲು ಪ್ರಯತ್ನಿಸುತ್ತಿರುವ ಚೀನಾವು ಅಂತಹ ಪಟ್ಟಿಯನ್ನು ಹೈಲೈಟ್ ಮಾಡಿದ್ದು, ಅವುಗಳನ್ನು ‘ಪ್ರಮಾಣೀಕೃತ ಭೌಗೋಳಿಕ ಹೆಸರುಗಳು’ ಎಂದು ಕರೆದುಕೊಂಡಿದೆ.
2017ರಲ್ಲಿ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಇದೇ ರೀತಿಯ ಆರು ಸ್ಥಳಗಳ ಪಟ್ಟಿಯನ್ನು ಹೊರತಂದಿತ್ತು; 2021ರಲ್ಲಿ ಮರುಹೆಸರಿಸಿದ 15 ಸ್ಥಳಗಳ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿತ್ತು.
ಇತ್ತೀಚಿನ ನಾಮಕರಣವನ್ನು ಏಪ್ರಿಲ್ 2 ರಂದು ಅಧಿಸೂಚನೆಯ ಮೂಲಕ ಮಾಡಲಾಗಿದೆ. “ಭೌಗೋಳಿಕ ಹೆಸರುಗಳ ನಿರ್ವಹಣೆಯ ರಾಜ್ಯ ಕೌನ್ಸಿಲ್ನ ಸಂಬಂಧಿತ ನಿಬಂಧನೆಗಳ ಪ್ರಕಾರ, [ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ] ಸಂಬಂಧಿತ ಇಲಾಖೆಗಳೊಂದಿಗೆ ಸೇರಿ ದಕ್ಷಿಣ ಟಿಬೆಟ್ನ ಕೆಲವು ಭೌಗೋಳಿಕ ಹೆಸರುಗಳನ್ನು ಪ್ರಮಾಣೀಕರಿಸಲಾಗಿದೆ. ದಕ್ಷಿಣ ಟಿಬೆಟ್ನಲ್ಲಿ (ಒಟ್ಟು 11) ಸಾರ್ವಜನಿಕ ಬಳಕೆಗಾಗಿ ಪೂರಕವಾಗಿ ಸ್ಥಳನಾಮಗಳ ಮೂರನೇ ಪಟ್ಟಿಯನ್ನು ಈಗ ಅಧಿಕೃತವಾಗಿ ಘೋಷಿಸಲಾಗಿದೆ” ಎಂದು ಅಧಿಸೂಚನೆ ತಿಳಿಸಿದೆ.
“ಚೀನಾ ನೀಡಿರುವ ಪ್ರಕಟಣೆಯ ಕುರಿತು ಪ್ರತಿಕ್ರಿಯೆ ಪಡೆಯಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಪಡೆದಿಲ್ಲ. ಆದರೆ ಹಿಂದೆ ಇದೇ ರೀತಿಯ ಮರುನಾಮಕರಣ ಮತ್ತು ಪ್ರಮಾಣೀಕರಣ ಪ್ರಯತ್ನಗಳು ನಡೆದಿರುವುದನ್ನು ಸಚಿವಾಲಯ ತಿರಸ್ಕರಿಸಿದೆ” ಎಂದು ‘ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
“ಅರುಣಾಚಲ ಪ್ರದೇಶವು ಎಂದಿಗೂ ಮತ್ತು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ. ಅರುಣಾಚಲ ಪ್ರದೇಶದ ಸ್ಥಳಗಳಿಗೆ ಹೊಸ ಹೆಸರುಗಳನ್ನು ನೀಡುವುದರಿಂದ ಈ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ವಕ್ತಾರ ಅರಿಂದಮ್ ಬಾಗ್ಚಿ 2021 ರಲ್ಲಿ ಹೇಳಿದ್ದರು.
2017 ಮತ್ತು 2021 ರಲ್ಲಿ ಚೀನಾದ ವಿದೇಶಾಂಗ ಸಚಿವಾಲಯವು ತನ್ನ ಪ್ರತಿಕ್ರಿಯೆಯನ್ನು ನೀಡಿತ್ತು. ‘“ಝಂಗ್ನಾನ್ ಪ್ರದೇಶ’ ಎಂದು ಕರೆಯಲ್ಪಡುವ ಪ್ರದೇಶ ಚೀನಾಕ್ಕೆ ಸೇರಿದೆ. ಇದು ಐತಿಹಾಸಿಕ ಮತ್ತು ಆಡಳಿತಾತ್ಮಕ ಆಧಾರ” ಎಂದಿತ್ತು.
ಇದನ್ನೂ ಓದಿರಿ: ಪೂರ್ವ ಲಡಾಖ್ನ ಎಲ್ಎಸಿನಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿದೆ: ವಿದೇಶಾಂಗ ಸಚಿವ ಜೈಶಂಕರ್
ಡೋಕ್ಲಾಮ್ನಲ್ಲಿ ಭಾರತ ಮತ್ತು ಚೀನಾದ ಸೈನಿಕರು ಮುಖಾಮುಖಿಯಾಗಿದ್ದರು. ಅದೇ ವರ್ಷದಲ್ಲಿ ಮೊದಲ ಪಟ್ಟಿಯ ಪ್ರಕಟಣೆ ಹೊರಬಿದ್ದಿದ್ದು ಗಮನಿಸಬೇಕಾದ ಸಂಗತಿ. ಆದರೆ ಎರಡನೇ ಪಟ್ಟಿ ಮತ್ತು ಇತ್ತೀಚಿನದು ಭಾರತೀಯ ಸೇನೆ ಹಾಗೂ ಪಿಎಲ್ಎ ಪಡೆಗಳ ನಡುವಿನ ಎಲ್ಎಸಿ ಬಿಕ್ಕಟ್ಟು ಪ್ರಾರಂಭವಾದ ನಂತರ ಹೊರಬಂದಿದೆ. ಹಲವಾರು ಸುತ್ತಿನ ಅಧಿಕೃತ ಮಾತುಕತೆಗಳು ಮತ್ತು ಮಿಲಿಟರಿ ಕಮಾಂಡರ್-ಮಟ್ಟದ ಮಾತುಕತೆಗಳ ಹೊರತಾಗಿಯೂ, ಗಡಿಗಳನ್ನು ಚೀನಾ ಉಲ್ಲಂಘಿಸಿರುವ ವರದಿಗಳಾಗಿವೆ.
ಚೀನಾ ಮತ್ತು ಭಾರತದ ನಡುವೆ ಉಂಟಾಗಿರುವ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ‘ಇಂಡಿಯಾ ಟುಡೇ’ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್, “ಪೂರ್ವ ಲಡಾಖ್ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ನಡುವಿನ ಪರಿಸ್ಥಿತಿಯು ಬಹಳ ಸೂಕ್ಷ್ಮವೂ, ಸಾಕಷ್ಟು ಅಪಾಯಕಾರಿಯೂ ಆಗಿ ಉಳಿದಿದೆ” ಎಂದಿದ್ದರು.
“ಎರಡೂ ದೇಶಗಳ ಮಿಲಿಟರಿ ಪಡೆಗಳು ಕೆಲವು ಭಾಗಗಳಲ್ಲಿ ಪರಸ್ಪರ ಹತ್ತಿರದಲ್ಲಿ ನಿಯೋಜಿಸಲ್ಪಟ್ಟಿವೆ. ಹೀಗಾಗಿ ಪರಿಸ್ಥಿತಿ ಸೂಕ್ಷ್ಮವೂ ಅಪಾಯಕಾರಿಯೂ ಆಗಿದೆ” ಎಂದು ತಿಳಿಸಿದ್ದರು.