ಗಾಝಾದಲ್ಲಿ ಮಾನವೀಯ ನೆರವು ಕಾರ್ಯಗಳಲ್ಲಿ ತೊಡಗಿದ್ದ ವರ್ಲ್ಡ್ ಸೆಂಟ್ರಲ್ ಕಿಚನ್ ಸಿಬ್ಬಂದಿಗಳ ಹತ್ಯೆ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬಿಡನ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹತ್ಯೆಯಾದವರಲ್ಲಿ ಓರ್ವ ಅಮೆರಿಕ ಪ್ರಜೆ ಕೂಡ ಸೇರಿದ್ದಾರೆ.
ವರ್ಲ್ಡ್ ಸೆಂಟ್ರಲ್ ಕಿಚನ್ ತನ್ನ 7 ಸಿಬ್ಬಂದಿಗಳ ಸಾವಿನ ನಂತರ ಗಾಝಾದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಅವರು ಯುದ್ಧದ ಮಧ್ಯದಲ್ಲಿ ಹಸಿದ ನಾಗರಿಕರಿಗೆ ಆಹಾರವನ್ನು ಒದಗಿಸುತ್ತಿದ್ದರು. ಅವರು ಧೈರ್ಯಶಾಲಿ ಮತ್ತು ನಿಸ್ವಾರ್ಥರಾಗಿದ್ದರು. ಅವರ ಸಾವು ಒಂದು ದುರಂತವಾಗಿದೆ ಎಂದು ಹೇಳಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, 2010ರಲ್ಲಿ ಸಂಸ್ಥೆಯನ್ನು ಸ್ಥಾಪಿಸಿದ್ದ ಬಾಣಸಿಗ ಜೋಸ್ ಆಂಡ್ರೆಸ್ ಅವರಿಗೆ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ.
ವರ್ಲ್ಡ್ ಸೆಂಟ್ರಲ್ ಕಿಚನ್ ಸಿಬ್ಬಂದಿಗಳ ಸಾವಿನ ಬಗ್ಗೆ ಅವರು ಆಘಾತವನ್ನು ವ್ಯಕ್ತಪಡಿಸಿದ್ದು, ಜಗತ್ತಿನಾದ್ಯಂತ ಹಸಿದ ಜನರಿಗೆ ಆಹಾರವನ್ನು ನೀಡಲು ಅವರ ಪಟ್ಟುಬಿಡದ ಮತ್ತು ವೀರೋಚಿತ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ನೆರವು ಕಾರ್ಯಕರ್ತರ ವಾಹನಗಳ ಮೇಲೆ ವೈಮಾನಿಕ ದಾಳಿ ಏಕೆ ನಡೆದಿದೆ ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸುವ ಬಗ್ಗೆ ಇಸ್ರೇಲ್ ವಾಗ್ದಾನ ಮಾಡಿದೆ. ಆ ತನಿಖೆಯು ತ್ವರಿತವಾಗಿರಬೇಕು, ಅದು ಹೊಣೆಗಾರಿಕೆಯನ್ನು ಹೊಂದಬೇಕು ಮತ್ತು ಅದರ ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಜೋ ಬಿಡೆನ್ ಆಗ್ರಹಿಸಿದ್ದಾರೆ.
ಡೀರ್ ಅಲ್-ಬಾಲಾಹ್ ಗೋದಾಮಿನಿಂದ ಹೊರಡುತ್ತಿದ್ದಾಗ ಕಿಚನ್ ಸಿಬ್ಬಂದಿಗಳ ವಾಹನದ ಮೇಲೆ ಮೈಮಾನಿಕ ದಾಳಿ ನಡೆಸಲಾಗಿದೆ. ಸಮುದ್ರದ ಮೂಲಕ ಗಾಝಾಕ್ಕೆ ತಂದ 100 ಟನ್ಗಳಿಗಿಂತ ಹೆಚ್ಚು ಮಾನವೀಯ ಆಹಾರದ ಸಾಮಾಗ್ರಿಗಳನ್ನು ಅವರು ರವಾನೆ ಮಾಡುವಾಗ ಘಟನೆ ನಡೆದಿತ್ತು. ಇಸ್ರೇಲ್ ಮಿಲಿಟರಿಯೊಂದಿಗೆ ನಾವು ಸಂಪರ್ಕದಲ್ಲಿದ್ದೆವು, ವರ್ಲ್ಡ್ ಸೆಂಟ್ರಲ್ ಕಿಚನ್ ಲೋಗೋವನ್ನು ಹೊಂದಿರುವ ಎರಡು ಕಾರುಗಳಲ್ಲಿ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು. ಕೊಲ್ಲಲ್ಪಟ್ಟವರಲ್ಲಿ ಯು.ಎಸ್ ಮತ್ತು ಕೆನಡಾದ ದ್ವಿ ಪೌರತ್ವ ಹೊಂದಿದ್ದ ಪ್ರಜೆ ಜೇಕಬ್ ಫ್ಲಿಕಿಂಗ್ರ್(33) ಸೇರಿದ್ದಾರೆ ಎಂದು ವರ್ಲ್ಡ್ ಸೆಂಟ್ರಲ್ ಕಿಚನ್ ಸಿಬ್ಬಂದಿಗಳು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವರ್ಲ್ಡ್ ಸೆಂಟ್ರಲ್ ಕಿಚನ್ ಸಿಬ್ಬಂದಿಗಳ ಹತ್ಯೆ ನಡೆದ ವೈಮಾನಿಕ ದಾಳಿಯು ಉದ್ದೇಶಪೂರ್ವಕವಲ್ಲ ಮತ್ತು ದುರಂತ ಎಂದು ಹೇಳಿದೆ.
ಶ್ವೇತಭವನದ ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ಬಿಡೆನ್ ಆಡಳಿತದ ವಕ್ತಾರ ಜಾನ್ ಕಿರ್ಬಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಸ್ರೇಲಿಗಳು ಮಾನವೀಯ ನೆರವು ನೀಡುತ್ತಿದ್ದವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸಿಬ್ಬಂದಿಗಳ ಸಾವುಗಳು ದೊಡ್ಡ ಸಮಸ್ಯೆಯ ಸಾಂಕೇತಿಕವಾಗಿದೆ ಮತ್ತು ಗಾಝಾದಲ್ಲಿ ಸಹಾಯ ವಿತರಣೆ ಏಕೆ ತುಂಬಾ ಸವಾಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಳೆದ ಅಕ್ಟೋಬರ್ 7 ರಂದು ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ 200ಕ್ಕೂ ಹೆಚ್ಚು ಮಾನವೀಯ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ ಎಂದು ಕಿರ್ಬಿ ಹೇಳಿದ್ದಾರೆ.
ಗಾಝಾದಲ್ಲಿ ಮಾನವೀಯ ನೆರವನ್ನು ವಿತರಿಸುವುದು ತುಂಬಾ ಕಷ್ಟಕರವಾಗಲು ಇದು ಒಂದು ಪ್ರಮುಖ ಕಾರಣವಾಗಿದೆ. ಏಕೆಂದರೆ ನಾಗರಿಕರಿಗೆ ಅಗತ್ಯವಿರುವ ಸಹಾಯವನ್ನು ತಲುಪಿಸಲು ಪ್ರಯತ್ನಿಸುತ್ತಿರುವ ಸಹಾಯ ಕಾರ್ಯಕರ್ತರನ್ನು ರಕ್ಷಿಸಲು ಇಸ್ರೇಲ್ ಕ್ರಮ ಕೈಗೊಂಡಿಲ್ಲ ಎಂದು ಬೈಡನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಇಸ್ರೇಲ್ ಅಮಾಯಕ ಗಾಝಾದ ನಾಗರಿಕರನ್ನು ರಕ್ಷಿಸಲು ಏನನ್ನೂ ಮಾಡಿಲ್ಲ. ನಾಗರಿಕ ಸಾವುನೋವುಗಳನ್ನು ತಪ್ಪಿಸಲು ಯುನೈಟೆಡ್ ಸ್ಟೇಟ್ಸ್ ಇಸ್ರೇಲ್ನ್ನು ಪದೇ ಪದೇ ಒತ್ತಾಯಿಸಿದೆ ಎಂದು ಹೇಳಿದ್ದಾರೆ.
ಗಾಝಾದಲ್ಲಿರುವ ಪ್ಯಾಲೆಸ್ತೀನ್ ನಾಗರಿಕರಿಗೆ ಲಭ್ಯವಿರುವ ಎಲ್ಲಾ ವಿಧಾನಗಳ ಮೂಲಕ ಮಾನವೀಯ ನೆರವು ನೀಡಲು ಯುನೈಟೆಡ್ ಸ್ಟೇಟ್ಸ್ ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುವುದನ್ನು ಮುಂದುವರಿಸುತ್ತದೆ ಎಂದು ಬಿಡೆನ್ ಹೇಳಿದ್ದಾರೆ. ಆ ನೆರವನ್ನು ಸುಗಮಗೊಳಿಸಲು ಹೆಚ್ಚಿನ ಕ್ರಮಕ್ಕೆ ಇಸ್ರೇಲ್ಗೆ ಒತ್ತಡ ಹೇರುವುದಾಗಿ ಬೈಡನ್ ಹೇಳಿದ್ದಾರೆ.
ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ ಎಂದು ಬೈಡನ್ ವಿರುದ್ಧ ಆಕ್ರೋಶ:
ಗಾಝಾ ವಿರುದ್ಧ ಇಸ್ರೇಲ್ ಅ.7ರಂದು ಯುದ್ಧ ಘೋಷಿಸಿದಾಗ ಅಮೆರಿಕ ಇಸ್ರೇಲ್ಗೆ ವ್ಯಾಪಕ ಬೆಂಬಲವನ್ನು ವ್ಯಕ್ತಪಡಿಸಿತ್ತು. ಇದರ ಜೊತೆಗೆ ಇಸ್ರೇಲ್ಗೆ ಅಮೆರಿಕ ಯುದ್ಧ ವಿಮಾನಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿತ್ತು. ಇದೀಗ ಬಾಣಸಿಗರ ಹತ್ಯೆ ಬಗ್ಗೆ ಬೈಡನ್ಗೆ ಅಮೆರಿಕನ್ನರು ತರಾಟೆಗೆ ತೆಗೆದುಕೊಂಡಿದ್ದು, ಇಸ್ರೇಲ್ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇದಲ್ಲದೆ ಘಟನೆ ಬಗ್ಗೆ ಉತ್ತರಿಸಲು ಬೈಡನ್ 24 ಗಂಟೆಗಳ ಕಾಲಾವಕಾಶವನ್ನು ತೆಗೆದುಕೊಂಡಿದ್ದಾರೆ ಎಂದು ಹಲವುರು ಎಕ್ಸ್ನಲ್ಲಿ ಬೈಡನ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನು ಓದಿ: ಪರಿಹಾರ ಬಿಡುಗಡೆ ಮಾಡದೆ ವಿಳಂಬ: ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರಕಾರ