| ಅನಿಲ್ ಕುಮಾರ್ ಚಿಕ್ಕದಾಳವಟ್ಟ |
ದೇಶದ ರಾಜಕೀಯ ವಿದ್ಯಮಾನಗಳಲ್ಲಿ ಮಹತ್ತರವಾದ ಬದಲಾವಣೆಗಳು ಸಂಭವಿಸುವ ಸೂಚನೆಗಳು ಕಾಣಿಸುತ್ತಿವೆ. ಬಹಳಷ್ಟು ಚುನಾವಣಾ ವಿಶ್ಲೇಷಕರ ಪ್ರಕಾರ ಈ ಬಾರಿ ಯಾವುದೇ ರಾಜಕೀಯ ಪಕ್ಷ ಸ್ಪಷ್ಟವಾದ ಬಹುಮತ ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತೆ ಯಾವುದಾದರೂ ಒಕ್ಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಹೆಚ್ಚು. ಸಾಮಾನ್ಯವಾಗಿ ಯು.ಪಿ.ಎ ಅಥವಾ ಎನ್.ಡಿ.ಎ ಕೂಟ ಅಧಿಕಾರ ವಹಿಸಿಕೊಳ್ಳುವುದು ವಾಡಿಕೆ. ಆದರೆ ಈ ಬಾರಿ ಚುನಾವಣೆ ಮುಗಿಯುತ್ತ ಬಂದಂತೆ ಗೆಲುವು ಸೋಲಿನ ಲೆಕ್ಕಾಚಾರಗಳ ಮೂಲಕ ಯಾವ ಪಕ್ಷ ಯಾವ ಒಕ್ಕೂಟದ ಜೊತೆ ಹೋಗಲಿದೆ ಎಂಬುದನ್ನು ಊಹಿಸುವುದು ಕಷ್ಟಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆ.ಸಿ.ಆರ್) ಪ್ರಾದೇಶಿಕ ಪಕ್ಷಗಳ ಹೊಸ ಒಕ್ಕೂಟವೊಂದನ್ನು ರಚಿಸಲು ಅಖಾಡಕ್ಕಿಳಿದಿದ್ದಾರೆ. ಆ ಮೂಲಕ ರಾಜಕೀಯ ವಲಯದಲ್ಲಿ ಹೊಸ ಅಲೆಯೊಂದನ್ನು ಎಬ್ಬಿಸಿದ್ದಾರೆ.
ಕೇರಳ ಮತ್ತು ತಮಿಳುನಾಡು ದೇವಸ್ಥಾನಗಳ ಪ್ರವಾಸದ ಭಾಗವಾಗಿ ನಿನ್ನೆ ಮಧ್ಯಾಹ್ನ ಹೈದರಾಬಾದ್ನಿಂದ ಹೊರಟ ಕೆಸಿಆರ್ ಸಂಜೆ 6 ಗಂಟೆಗೆ ಸರಿಯಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ತನ್ನ ಕನಸಿನ ‘ಫೆಡರಲ್ ಫ್ರಂಟ್’ನ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳು ಒಂದಾಗಿ ಒಕ್ಕೂಟವೊಂದನ್ನು ರಚಿಸಿಕೊಂಡು ಸರ್ಕಾರವನ್ನು ನಡೆಸಿದರೆ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಹಿತಾಸಕ್ತಿಗಳನ್ನು ಹತ್ತಿಕ್ಕುವ ಧೋರಣೆಯನ್ನು ಕಡಿಮೆ ಮಾಡಬಹುದು ಎಂಬ ಚರ್ಚೆ ಹೊಸದಲ್ಲ.
ಕೆಸಿಆರ್ 2018ರ ತೆಲಂಗಾಣ ವಿಧಾನಸಭಾ ಚುನಾವಣೆಗೂ ಮುನ್ನ ಮೊದಲಬಾರಿಗೆ ಫೆಡರಲ್ ಫ್ರೆಂಟ್ ಎಂಬ ವಿಷಯವನ್ನು ಎತ್ತಿದ್ದರು. ಆ ಚುನಾವಣೆಯಲ್ಲಿ ನಾವು ಬಹುಮತ ಪಡೆಯಲಿದ್ದೇವೆ ಎಂದು ಕೆಸಿಆರ್ ದೃಢವಾಗಿ ಹೇಳುತ್ತಿದ್ದರೂ, ಎಲ್ಲಾ ಸಮೀಕ್ಷೆಗಳು ಟಿ.ಆರ್.ಎಸ್ ಪಕ್ಷದ ವಿರುದ್ದವೇ ಇದ್ದವು. ಹೀಗಿದ್ದೂ 3/2ರಷ್ಟು ಬಹುಮತದೊಂದಿಗೆ ಅವರು ಗೆದ್ದರು. ಆಗ ರಾಷ್ಟ್ರೀಯ ಮಾಧ್ಯಮಗಳು ಇದರ ಬಗ್ಗೆ ಗಮನ ಹರಿಸಿ ಮಾತನಾಡಿಸಲು ಆರಂಭಿಸಿದ್ದವು. ದೇಶದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳೇ ಮುಖ್ಯವಾಗಲಿವೆ. 2019ರ ಚುನಾವಣೆಯಲ್ಲಿ ಟಿ.ಆರ್.ಎಸ್ ಮುಂಚೂಣಿಯಲ್ಲಿ ನಿಂತು ಫೆಡರಲ್ ಫ್ರಂಟ್ ರಚನೆಯಾಗಲಿದೆ ಎಂಬರ್ಥದಲ್ಲಿ ಬಲವಾಗಿ ಹೇಳಿದ್ದರು. ಮತ್ತು ಬಿಜೆಪಿ ಯಾವುದೇ ಕಾರಣಕ್ಕೂ 150ಕ್ಕಿಂತ ಹೆಚ್ಚು ಸೀಟು ಗೆಲ್ಲುವುದಿಲ್ಲ, ಕಾಂಗ್ರೆಸ್ ಕೂಡ 100 ಸೀಟುಗಳ ಅಂತರದಲ್ಲಿ ನಿಲ್ಲಲಿದೆ ಎಂದಿದ್ದರು. ಈ ಬಾರಿ 17 ಲೋಕಸಭಾ ಸ್ಥಾನಗಳಲ್ಲಿ ಟಿಆರ್ ಎಸ್ 16 ಸೀಟುಗಳನ್ನು ಗೆಲ್ಲುವ ಉಮೇದಿನಲ್ಲಿದೆ. ಮತ್ತೊಂದು ಸ್ಥಾನ ಟಿಆರ್.ಎಸ್ನ ಮೈತ್ರಿ ಪಕ್ಷ ಎ.ಐ.ಎಮ್.ಐ.ಮ್ಗೆ ಬಿಟ್ಟುಕೊಡಲಾಗಿತ್ತು.
ತೆಲಂಗಾಣದ ಚುನಾವಣೆಯನ್ನು ಮುಗಿಸಿಕೊಂಡ ಕೆ.ಸಿ.ಆರ್ ಈಗ ಫೆಡರಲ್ ಫ್ರಂಟ್ಗಾಗಿ ಅಖಾಡಕ್ಕಿಳಿದು ಕೆಲಸ ಮಾಡುತ್ತಿದ್ದಾರೆ. ಕೇರಳದಿಂದ ತಮಿಳುನಾಡಿಗೆ ಹೊರಟು ಡಿ.ಎಮ್.ಕೆ ಪಕ್ಷದ ಅಧ್ಯಕ್ಷ ಎಮ್.ಕೆ.ಸ್ಟಾಲಿನ್ರನ್ನು ಮೇ 13ಕ್ಕೆ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಈಗಾಗಲೇ ಇದರ ಕುರಿತು ಕರ್ನಾಟಕ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೆಗೌಡ ಹಾಗೂ ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಕರೆಮಾಡಿ ಮಾತನಾಡಿದ್ದಾರೆ. ಕೂಡಲೇ ಅವರಿಬ್ಬರನ್ನೂ ಭೇಟಿಯಾಗಿ ಹೊಸ ಒಕ್ಕೂಟದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿ ಚರ್ಚಿಸಿದ ನಂತರ ಕೆ.ಸಿ.ಆರ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ‘ನಾವು ನಿಜವಾದ ಸಂಯುಕ್ತ ಒಕ್ಕೂಟವೊಂದನ್ನು ರಚಿಸಲು ಯತ್ನಿಸುತ್ತಿದ್ದೇವೆ. ಇದು ಸಮಾನ ಮನಸ್ಕ ರಾಜಕೀಯ ಪಕ್ಷಗಳ ಒಕ್ಕೂಟವಾಗಿದೆ ಇಂದು ಇದು ಪ್ರಾರಂಭ ಮಾತ್ರ’ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಬಹುದು. ಇದಾದ ನಂತರ ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ರನ್ನು ಭುವನೇಶ್ವರ್ನಲ್ಲಿ, ಸ್ಟಾಲಿನ್ರನ್ನು ಚೆನ್ನೈನ ಅವರ ಮನೆಯಲ್ಲಿಯೇ ಭೇಟಿಯಾಗಿ ಒಕ್ಕೂಟದ ಬಗ್ಗೆ ಚರ್ಚಿಸಿದ್ದರು. ಕೆ.ಸಿ.ಆರ್ ಈಗ ದೇಶದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ಮೂಲಕ ಕಿಂಗ್ ಮೇಕರ್ ಆಗಲು ಪ್ರಯತ್ನಿಸುತ್ತಿದ್ದಾರೆ. ಒಟ್ಟಾರೆಯಾಗಿ ಪ್ರಾದೇಶಿಕ ಪಕ್ಷಗಳ ಬಲವನ್ನು ತೋರಿಸಿ, ರಾಜಕಾರಣಕ್ಕೆ ಒಂದು ದಿಕ್ಕು ತೋರಿಸುವ ಯತ್ನ ನಡೆಯುತ್ತಿದೆ. ಫಲಿತಾಂಶ ಬಂದ ನಂತರದ ತೀರ್ಮಾನಗಳಿಗೆ ಕೆ.ಸಿ.ಆರ್ ಪ್ರಯತ್ನ ಪೂರಕವಾಗಲಿದೆಯಾ ಅಥವಾ ಇವರ ಪಕ್ಷವೇ ಒಂಟಿಯಾಗಲಿದೆಯಾ ಕಾದು ನೋಡಬೇಕಿದೆ.