ಕಲ್ಲಡ್ಕದ ಶ್ರೀರಾಮ ಶಾಲೆಯಲ್ಲಿ ಕ್ರೀಡಾ ವಾರ್ಷಿಕೋತ್ಸವದ ಅಂಗವಾಗಿ ಬಾಬರೀ ಮಸೀದಿ ಧ್ವಂಸದ ಅಣಕು ಪ್ರದರ್ಶನ ನಡೆಸಿದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ನಾಲ್ವರ ವಿರುದ್ಧ ಐಪಿಸಿಯ ಸೆಕ್ಷನ್ 295 ಎ ಮತ್ತು 298 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಈ ಶಾಲೆಯಲ್ಲಿ ಭಾನುವಾರ ಕ್ರೀಡಾ ವಾರ್ಷಿಕೋತ್ಸವದ ಅಂಗವಾಗಿ ಬಾಬರೀ ಮಸೀದಿ ಧ್ವಂಸದ ಅಣಕು ಪ್ರದರ್ಶನ ನಡೆದಿತ್ತು. ಉನ್ಮತ್ತ ರೀತಿಯಲ್ಲಿ ವಿದ್ಯಾರ್ಥಿಗಳು ಬಾಬ್ರಿ ಮಸೀದಿಯ ಪ್ರತಿಕೃತಿಯನ್ನು ಕೆಡಗಿ ಜೈ ಶ್ರೀರಾಮ್, ಜೈ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದರು. 1992 ರ ಬಾಬರಿ ಮಸೀದಿ ಉರುಳಿಸುವಿಕೆಯನ್ನು ಮರುರೂಪಿಸಿದ ವಿದ್ಯಾರ್ಥಿಗಳ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪಿಎಫ್ಐ ಸಂಘಟನೆಯ ಅಬೂಬಕ್ಕರ್ ಸಿದ್ದಿಕ್ ಎಂಬುವವರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹಾಗಾಗಿ ಶ್ರೀರಾಮ ವಿದ್ಯಾಕೇಂದ್ರ ಶಾಲೆಯ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ, ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು 298 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಬಳಸುವ ಪದಗಳು ಇತ್ಯಾದಿ) ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ಬಂಟ್ವಾಳದ ಕಲ್ಲಡ್ಕದ ಶ್ರೀ ರಾಮ ವಿದ್ಯಾಕೇಂದ್ರ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಪುದುಚೇರಿ ಗವರ್ನರ್ ಕಿರಣ್ ಬೇಡಿ ಸೇರಿದಂತೆ ಕರ್ನಾಟಕದ ಹಲವಾರು ಮಂತ್ರಿಗಳು ಭಾಗವಹಿಸಿದ್ದರು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಈ ಶಾಲೆಯು ಆರ್ಎಸ್ಎಸ್ ನಾಯಕ ಮತ್ತು ಸಂಘಟನೆಯ ದಕ್ಷಿಣ-ಮಧ್ಯ ವಲಯ ಕಾರ್ಯಕಾರಿ ಸಮಿತಿ ಸದಸ್ಯ ಕಲ್ಲಡ್ಕಾ ಪ್ರಭಾಕರ್ ಭಟ್ಗೆ ಸೇರಿದೆ.
ನಾನು ನಂಬಿರುವ ಐತಿಹಾಸಿಕ ಘಟನೆ ಆಧಾರಿತ ನಾಟಕವನ್ನು ಪ್ರದರ್ಶಿಸುವುದರಲ್ಲಿ ಏನೂ ತಪ್ಪಿಲ್ಲ ಎಂದು ಕಲ್ಲಡ್ಕ ಭಟ್ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಅದು ಮಸೀದಿ ಅಲ್ಲ. ಅದೊಂದು ಕೇವಲ ಕಟ್ಟಡವಾಗಿದೆ. ಇದು ನಾವು ಐತಿಹಾಸಿಕ ಘಟನೆಯನ್ನು ಮರುನಿರೂಪಿಸಿದ್ದೇವೆ. ನಾವು ಜಲಿಯನ್ ವಾಲಾ ಬಾಗ್ ಅನ್ನು ಸಹ ಚಿತ್ರಿಸಿದ್ದೇವೆ. ಆದರೆ ಯಾರಾದರೂ ಹೈಲೈಟ್ ಮಾಡಿದ್ದೀರಾ? ಈ ರೀತಿಯ ನೂರಾರು ನಿದರ್ಶನಗಳಿವೆ. ನಮ್ಮ ದೇಶದಲ್ಲಿ ಸಂಭವಿಸಿದ ಅನ್ಯಾಯಗಳನ್ನು ನಾವು ತೋರಿಸಬೇಕಾಗಿದೆ” ಎಂದು ಅವರು ಹೇಳಿದರು.
ಸದ್ಯ, ಈ ದೇಶದಲ್ಲಿ ಕಾನೂನು ಇನ್ನೂ ಉಸಿರಾಡುತ್ತಿದೆ. ಇದು ಸಮಾಧಾನಕರ ಸಂಗತಿ. ದೂರು ದಾಖಲಿಸಿದವರ ಧೈರ್ಯ ಮತ್ತು ಬಧ್ದತೆಯನ್ನು ಮೆಚ್ಚಬೇಕು.