Homeಚಳವಳಿನಾನು ರಾಜಿನಾಮೆ ನೀಡಿದ್ದು ಏಕೆಂದರೆ... : ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಸಂದರ್ಶನ

ನಾನು ರಾಜಿನಾಮೆ ನೀಡಿದ್ದು ಏಕೆಂದರೆ… : ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಸಂದರ್ಶನ

ಸರ್ಕಾರಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದ 500 ಆದಿವಾಸಿಗಳಿಗೆ ಒಂದು ದಿನ ಬಿಟ್ಟು ಮರುದಿನ ಕೆಲಸಕ್ಕೆ ಬರಲು ತಿಳಿಸಲಾಯಿತು. ಈ ಆರ್ಥಿಕತೆಯಲ್ಲಿ ನಾನು ಬದುಕಲು ಸಾಧ್ಯವಾಗುತ್ತದೆಯೆ ಎಂದು ನೀವು ನನ್ನನ್ನು ಕೇಳಿದ್ದೀರಿ; ಈ ಆರ್ಥಿಕತೆಯಲ್ಲಿ ಆ 500 ಬುಡಕಟ್ಟು ಜನಾಂಗದವರ ಬದುಕನ್ನು ಊಹಿಸಿ.

- Advertisement -
- Advertisement -

ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರು ಕೆಲದಿನಗಳ ಹಿಂದೆ ಕಾಶ್ಮೀರದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಉಲ್ಲೇಖಿಸಿ ದಾದ್ರಾ ಮತ್ತು ನಗರ ಹವೇಲಿ ಆಡಳಿತದ ವಿದ್ಯುತ್, ನಗರಾಭಿವೃದ್ಧಿ ಮತ್ತು ಕೃಷಿ ಇಲಾಖೆಗಳ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವರು ಕಳೆದ ವರ್ಷ ಕೇರಳದಲ್ಲಿ ಪ್ರವಾಹ ಪರಿಹಾರದ ಸಂದರ್ಭದಲ್ಲಿ ಅನಾಮಧೇಯವಾಗಿ ಕೆಲಸ ಮಾಡಿದ್ದರು.

ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೇ ಉಳಿಸಿಕೊಳ್ಳಲು ಬಯಸುತ್ತೇನೆ. ನಾನು ಇತರರಿಗೆ ಧ್ವನಿ ನೀಡಬಹುದೆಂಬ ನಂಬಿಕೆಯಿಂದ ಐಎಎಸ್ ಸೇವೆಗೆ ಸೇರಿಕೊಂಡೆ; ಆದರೆ, ಇಲ್ಲಿ ನನ್ನ ಸ್ವಂತ ಧ್ವನಿಯನ್ನು ಬಳಸಲು ಸಹ ನನಗೆ ಸಾಧ್ಯವಾಗುತ್ತಿಲ್ಲ. ನನ್ನ ರಾಜೀನಾಮೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮರಳಿ ನೀಡುತ್ತದೆ ಎಂದು ಕಣ್ಣನ್ ಹೇಳುತ್ತಾರೆ. ಕಣ್ಣನ್ ಗೋಪಿನಾಥನ್ ಅವರು ತಮ್ಮ ರಾಜೀನಾಮೆಯ ನಂತರ  ವೈರ್.ಇನ್ ನ್ಯೂಸ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನವನ್ನು ನಿಖಿಲ್ ಕೋಲ್ಪೆಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಪ್ರಶ್ನೆ: ನಿಮ್ಮ ಸಹೋದ್ಯೋಗಿಗಳು, ಹಿರಿಯರು ಮತ್ತು ಬ್ಯಾಚ್‌ಮೇಟ್‌ಗಳು ನಿಮ್ಮ ರಾಜೀನಾಮೆಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ?

ಕೆ.ಜಿ: ಈ ನಿರ್ಧಾರವು ನನ್ನ ಸಹೋದ್ಯೋಗಿಗಳನ್ನು ಆಶ್ಚರ್ಯಗೊಳಿಸಿದೆ. ಆದರೆ, ಅವರೆಲ್ಲರೂ ಬೆಂಬಲಿಸಿದ್ದಾರೆ. ಅವರಲ್ಲಿ ಕೆಲವರು ಸೇವೆಯು ಬಹಳಷ್ಟು ಕಲಿಕೆಯ ಅವಕಾಶಗಳನ್ನು ನೀಡುತ್ತದೆ, ಸೇವೆಗೆ ರಾಜೀನಾಮೆ ನೀಡುವುದಕ್ಕಿಂತ ವ್ಯವಸ್ಥೆಯಲ್ಲಿ ಇದ್ದುಕೊಂಡೇ ನಾನು ಕೊಡುಗೆ ನೀಡಬಲ್ಲೆ ಎಂದು ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾನು ಏನನ್ನು ಸಾಧಿಸಬಹುದು ಮತ್ತು ಈಗ ನಾನು ಮಾತನಾಡುವುದರ ಪ್ರಾಮುಖ್ಯತೆ ಏನು ಎಂಬುದರ ಬಗ್ಗೆ ಯೋಚನೆಯಲ್ಲಿದ್ದೇನೆ. ನನ್ನ ಸ್ವಂತ ಮಾನದಂಡಗಳು ಮತ್ತು ಭಾವನೆಗಳೊಂದಿಗೆ ನಾನು ತೂಗಿನೋಡಬೇಕು. ಆ ಯೋಚನೆಯಲ್ಲಿ ನಾನು ಬಹಿರಂಗವಾಗಿ ಮಾತನಾಡುವುದು ಹೆಚ್ಚು ಮುಖ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. 20 ವರ್ಷಗಳ ನಂತರ ನಾನು ಇದೇ ಅಭಿಪ್ರಾಯವನ್ನು ಹೊಂದಿರುತ್ತೇನೆ ಎಂದು ನಾನು ಹೇಳುತ್ತಿಲ್ಲ. ಆದರೆ, ಈಗ ಸೇವೆಯಲ್ಲಿ ಉಳಿಯುವುದಕ್ಕಿಂತ ಮಾತನಾಡುವುದು ಹೆಚ್ಚು ಮುಖ್ಯ ಎಂದು ನನಗೆ ಖಾತ್ರಿಯಿದೆ.

ಪ್ರಶ್ನೆ: ಕುಸಿಯುತ್ತಿರುವ ಆರ್ಥಿಕತೆಯ ಪರಿಸ್ಥಿತಿಯಲ್ಲಿ ಸುರಕ್ಷಿತ ಸರ್ಕಾರಿ ಕೆಲಸವನ್ನು ಬಿಡುವುದು ಬಹಳ ಧೈರ್ಯಶಾಲಿ ಕ್ರಮ. ಇದರ ಬಗ್ಗೆ ನೀವು ಯೋಚಿಸಿದ್ದೀರಾ?

ಕೆ.ಜಿ: ನಾನು ಹೇಳಿದಂತೆ, ಯಾವ ಕೆಲಸವನ್ನಾದರೂ ಪಡೆಯುತ್ತೇನೆ ಎಂಬ ನಂಬಿಕೆಯಿದೆ. ನಮ್ಮ ಕುಟುಂಬದಲ್ಲಿ ನಾವು ಚರ್ಚಿಸುತ್ತಿದ್ದೇವೆ. ಎರಡೂ ಮಲಗುವ ಕೋಣೆಗಳಲ್ಲಿ ಎರಡು ಎಸಿಗಳನ್ನು ಹೊಂದುವ ಬದಲು, ನಾವು ಒಂದು ಎಸಿಯೊಂದಿಗೆ ಬದುಕಬೇಕಾಗಬಹುದು; ಅದು ಪರವಾಗಿಲ್ಲ. ನನ್ನ ಸಾಮರ್ಥ್ಯದ ಮೇಲೆ ನಾನು ಸೇವೆಯನ್ನು ಪ್ರವೇಶಿಸಿದೆ. ನಾನು ಆ ಸೇವೆಗೆ ಅರ್ಹನಾಗಿದ್ದೆ ಎಂದರೆ, ನನ್ನ ಜೀವನೋಪಾಯಕ್ಕಾಗಿ ಏನನ್ನಾದರೂ ಮಾಡಲು ಸಾಧ್ಯವಿದೆ ಎಂದು ನನಗೆ ಖಾತ್ರಿಯಿದೆ. ಸೇವೆಯು ದೌರ್ಬಲ್ಯಗಳ ಸರಪಳಿಯಾಗಬಾರದು. ನಾನು ಬಿಡಲು ಬಯಸಿದರೆ, ನಾನು ಏನನ್ನಾದರೂ ಹೇಳಲು ಬಯಸಿದರೆ, ನನಗೆ ಬಿಡುವ ಸ್ವಾತಂತ್ರ್ಯ ಅಥವಾ ಹೇಳುವ ಸ್ವಾತಂತ್ರ್ಯ ಇರಬೇಕು.

ಪ್ರಶ್ನೆ: ನೀವು ಹೇಳುವುದರಲ್ಲಿ ಅಂತರ್ಗತ ವಿರೋಧಾಭಾಸವಿದೆ. ವ್ಯವಸ್ಥೆಯಲ್ಲಿ ಮತ್ತು ಸೇವೆಯಲ್ಲಿ ಉಳಿಯುವ ಮೂಲಕವೇ ನೀವು ಮಾತನಾಡಲು ಬಯಸುವ ನಾಗರಿಕರಿಗಾಗಿ ಇನ್ನೂ ಹೆಚ್ಚಿನದನ್ನು ಮಾಡಬಹುದೆಂದು ನಿಮಗೆ ಅನಿಸುವುದಿಲ್ಲವೇ?

ಕೆ.ಜಿ: ವ್ಯವಸ್ಥೆಯಲ್ಲಿರುವುದರ ಮೂಲಕ ನಿಸ್ಸಂದೇಹವಾಗಿ ಒಬ್ಬರು ಬಹಳಷ್ಟು ಮಾಡಬಹುದು. ನಾಗರೀಕ ಸೇವೆಯಲ್ಲಿ ನೀವು ಮಾಡಬಹುದಾದ ಎರಡು ಕೆಲಸಗಳಿವೆ. ಒಂದು ಸರಿಯಾದ ಕೆಲಸವನ್ನು ಮಾಡುವುದು ಮತ್ತು ಇನ್ನೊಂದು ತಪ್ಪು ಕೆಲಸಗಳ ವಿರುದ್ಧ ನಿಲ್ಲುವುದು. ಸರಿಯಾದ ಕೆಲಸವನ್ನು ಮಾಡುವುದು ಸುಲಭ; ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸುವುದು, ಸರಕುಗಳ ವಿತರಣೆ, ವ್ಯವಸ್ಥಿತ ಸುಧಾರಣೆ, ಕೊನೆಯ ಗುರಿಯ ತನಕ ಸೇವೆಯನ್ನು ತಲುಪಿಸುವುದು. ಯಾರೂ ಈ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಎರಡನೆಯ ವಿಷಯವೆಂದರೆ ನೀವು ಒಪ್ಪದ ಯಾವುದಾದರ ವಿರುದ್ಧ ನಿಲ್ಲುವುದು. ವಿಶೇಷವಾಗಿ, ವ್ಯವಸ್ಥೆಯ ಹೊರಗೆ ಸಾಕಷ್ಟು ಧ್ವನಿ ಇಲ್ಲದಿದ್ದಾಗ, ಅದನ್ನು ವ್ಯವಸ್ಥೆಯೊಳಗಿಂದ ಮಾಡುವುದು ತುಂಬಾ ಕಷ್ಟ. ಉದಾಹರಣೆಗೆ ಇತ್ತೀಚೆಗೆ ದಾದ್ರಾ ಮತ್ತು ನಗರ ಹವೇಲಿಯಲ್ಲಿ, ಸರ್ಕಾರಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದ 500 ಆದಿವಾಸಿಗಳಿಗೆ ಒಂದು ದಿನ ಬಿಟ್ಟು ಮರುದಿನ ಕೆಲಸಕ್ಕೆ ಬರಲು ತಿಳಿಸಲಾಯಿತು. ಈ ಆರ್ಥಿಕತೆಯಲ್ಲಿ ನಾನು ಬದುಕಲು ಸಾಧ್ಯವಾಗುತ್ತದೆಯೆ ಎಂದು ನೀವು ನನ್ನನ್ನು ಕೇಳಿದ್ದೀರಿ; ಈ ಆರ್ಥಿಕತೆಯಲ್ಲಿ ಆ 500 ಬುಡಕಟ್ಟು ಜನಾಂಗದವರ ಬದುಕನ್ನು ಊಹಿಸಿ. ಈ ಕ್ರಮವನ್ನು ಪ್ರಶ್ನಿಸಲು ವ್ಯವಸ್ಥೆಯ ಹೊರಗೆ ಸಾಕಷ್ಟು ಧ್ವನಿ ಇಲ್ಲ. ಇದನ್ನು ಮಾಡಬೇಕಾಗಿದ್ದು ಮಾಧ್ಯಮ, ನಾಗರಿಕ ಸಮಾಜ, ವಿರೋಧ ಪಕ್ಷದ ಕೆಲಸ. ಆದ್ದರಿಂದ, ಇಡೀ ಪಾರಿಸರಿಕ ವ್ಯವಸ್ಥೆಯು ಇದಕ್ಕೆ ಸ್ಪಂದಿಸಬೇಕಾಗಿದೆ.

ಪ್ರಶ್ನೆ: ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ವೈಫಲ್ಯ ಎಂದೇಕೆ ನೀವು ಭಾವಿಸುತ್ತೀರಿ; ಬಹುಶಃ ಅದು ಜನರು ಹೋರಾಡಲು ಬಯಸುವ ವಿಷಯವೇ ಅಲ್ಲದಿರಬಹುದು. ಆದರೆ, ನಿಮ್ಮ ಮನಸ್ಸಿನಲ್ಲಿ ನೀವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲಾಗುತ್ತಿದೆ ಎಂದು ಭಾವಿಸಿರಬಹುದಲ್ಲವೆ?

ಕೆ.ಜಿ: ನಾನು ಉಲ್ಲೇಖಿಸಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ಸಂಬಂಧಿಸಿ ಯಾಕೆ ಪ್ರತಿಭಟನೆಯ ಧ್ವನಿಗಳು ಕೇಳಿಸುತ್ತಿಲ್ಲ? ಯಾರಾದರೂ ಎದ್ದುನಿಂತರೆ, ಆಡಳಿತವು ತಾನು ಹಿಂದೆ ಮಾಡಿರಬಹುದಾದ ಯಾವುದಾದರೂ ತಪ್ಪುಗಳನ್ನು ತಿಳಿದುಕೊಳ್ಳುತ್ತದೆ. ಉದಾಹರಣೆಗೆ ಕಟ್ಟಡ ನಿಯಮಗಳ ಉಲ್ಲಂಘನೆ ಅಥವಾ ವಸತಿ ಪ್ರದೇಶದಲ್ಲಿ ಅಂಗಡಿ ಇತ್ಯಾದಿ. ಆಡಳಿತವು ಅವರನ್ನು ಪರಿಣಾಮಕಾರಿಯಾಗಿ ಗುರಿಮಾಡುವುದು ಹೀಗೆಯೇ- ನೀವು ಹಿಡಿಯುವ ದಾರಿ (ಪ್ರತಿಭಟನೆ) ಇದೇ ಎಂದಾಗಿದ್ದಲ್ಲಿ, ಆಡಳಿತವು ನಿಮ್ಮ ವಿರುದ್ಧ ಮಾಡಲು ಸಾಧ್ಯವಿರುವಂತದ್ದು ಇದು (ದಮನ) ಎಂದು ತೋರಿಸುವುದು. ಇದು ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವಲ್ಲ? ಆಡಳಿತವು ಹಿಂದೆಯೇ ಇಂತಹಾ ತಪ್ಪುಗಳ ಬಗ್ಗೆ ಕ್ರಮ ಕೈಗೊಳ್ಳಬಹುದಿತ್ತು- ಆದರೆ, ಒಬ್ಬ ವ್ಯಕ್ತಿ ಧ್ವನಿ ಎತ್ತಿದಾಗ, ಆಡಳಿತವು ಈ ರೀತಿಯಾಗಿ ವರ್ತಿಸಿದರೆ, ಅದು ಭಿನ್ನಾಭಿಪ್ರಾಯದ ದಮನವಾಗುತ್ತದೆ. ನಾವು ಕೇಳಬೇಕಾಗಿರುವ ಪ್ರಶ್ನೆಯೆಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯವು ಒಂದು ಹೋರಾಟವಾಗುವ ಅಗತ್ಯವಿದೆಯೇ ಎಂಬುದು.

ಪ್ರಶ್ನೆ: ಯಾರು ಧ್ವನಿ ಎತ್ತುತ್ತಿದ್ದಾರೆ?

ಕೆ. ಜಿ: ನಾನು ಸೇವೆಯಲ್ಲಿರುವ ಹಿರಿಯ ಅಧಿಕಾರಿಯಾಗಿದ್ದೂ, ಈ ಆದಿವಾಸಿಗಳಿಗಾಗಿ ಏನನ್ನೂ ಮಾಡಲು ನನಗೆ ಸಾಧ್ಯವಾಗಲಿಲ್ಲ. ಈಗ ನನಗೊಂದು ವೇದಿಕೆ ಸಿಕ್ಕಿರುವುದರಿಂದ ನಾನು ಈ ಎಲ್ಲಾ ವಿಷಯಗಳ ಬಗ್ಗೆ ಹೇಳಬಹುದಾಗಿದೆ. ಅದಕ್ಕಾಗಿಯೇ ನಾನು ಹೇಳುತ್ತಿರುವುದು- ಸರಿಯಾದುದನ್ನು ಮಾಡುವುದು ಸುಲಭ; ಆದರೆ, ತಪ್ಪಿನ ವಿರುದ್ಧ ಎದ್ದುನಿಲ್ಲಲು ಪಾರಿಸರಿಕ ವ್ಯವಸ್ಥೆಯ ಬೆಂಬಲದ ಅಗತ್ಯವಿದೆ.

ಪ್ರಶ್ನೆ: ಸಮಾದಲ್ಲಿರುವ ಆದಿವಾಸಿಗಳು, ಕಡೆಗಣಿಸ್ಪಟ್ಟ ಸಮುದಾಯಗಳು, ದುರ್ಬಲ ಜನಸಮುದಾಯಗಳ ವಿಷಯಗಳು ಪತ್ರಿಕೆಗಳು ಮತ್ತು ಸುದ್ದಿ ಚಾನೆಲ್‌ಗಳಿಂದ ಹೆಚ್ಚು ಹೆಚ್ಚಾಗಿ ಹೊರದಬ್ಬಲ್ಪಡುತ್ತಿವೆ. ಇದು ಹೊಸದೇನಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಅಲ್ಲವೆಂದಾದರೆ, ಅದು (ಧ್ವನಿ ಎತ್ತಿದವರನ್ನು ಗುರಿ ಮಾಡುವುದು) ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವಲ್ಲ ಎಂದಾಗುತ್ತದೆ?

ಕೆ.ಜಿ: ಮಾಧ್ಯಮ ಮತ್ತು ನಾಗರಿಕ ಸಮಾಜ ತಮ್ಮ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ. ಅದಕ್ಕಾಗಿಯೇ ವ್ಯವಸ್ಥೆಯಿಂದ ಹೊರಗಿರುವ ಧ್ವನಿಗಳು ಮುಖ್ಯವಾಗುತ್ತವೆ. ಏಕೆಂದರೆ, ವ್ಯವಸ್ಥೆಯ ಒಳಗೆಯೇ ಸಾಕಷ್ಟು ಒಳ್ಳೆಯ ಜನರಿದ್ದಾರೆ. ಆದರೆ, ಬೇಡಿಕೆಗಳು ವ್ಯವಸ್ಥೆಯ ಹೊರಗಿನಿಂದ ಬರಬೇಕಾದ ಅಗತ್ಯವಿದೆ. ಒಬ್ಬ ಒಳ್ಳೆಯ ವ್ಯಕ್ತಿ ವ್ಯವಸ್ಥೆಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದಾದರೆ, ಅದಕ್ಕೆ ಕಾರಣ ಅವರು ಚಾರಿತ್ರ್ಯ ಮತ್ತು ಆತ್ಮಸಾಕ್ಷಿಯಲ್ಲಿ ಒಳ್ಳೆಯವರಾಗಿರುತ್ತಾರೆ. ಆದರೆ, ಬೇಡಿಕೆ ಆಧರಿತ ವ್ಯವಸ್ಥೆ ಚಾಲ್ತಿಯಲ್ಲಿದ್ದರೆ, ಒಳ್ಳೆಯ ಕೆಲಸ ಮಾಡುವುದು ವ್ಯವಸ್ಥೆ ಸಂಬಂಧಿಸಿದ ವಿಷಯವಾಗುತ್ತದೆ.

ಪ್ರಶ್ನೆ: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲಾಗುತ್ತಿದೆಯೇ ಅಥವಾ ಮಾಧ್ಯಮ ಅಥವಾ ನಾಗರಿಕ ಸಮಾಜವೇ ಮಾತನಾಡಬಾರದೆಂದು ನಿರ್ಧರಿಸಿದೆಯೇ?

ಕೆ.ಜಿ: ನಿರ್ದಿಷ್ಟ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲಾಗಿದೆ; ಅದನ್ನೇ ನಾನು ಕಾಶ್ಮೀರ ಮತ್ತು ವಿಧಿ 370 ಮತ್ತು 35 ‘ಎ’ಗಳ ರದ್ದತಿಯ ವಿಷಯದಲ್ಲಿ ಹೇಳಿರುವುದು. ಇಂತಹಾ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರಕಾರದ ಹಕ್ಕುಗಳ ಮಿತಿಯೊಳಗೆಯೇ ಇದೆ. ಆದರೆ, ಅದರ ನಂತರ ಸರಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ಕೂಡಾ ಯಾವುದೇ ನಾಗರಿಕರ ಮೂಲಭೂತ ಹಕ್ಕು ಕೂಡಾ ಹೌದು. ಆದರೆ, ನೀವದನ್ನು ದಮನಿಸಿದಾಗ… ನೀವದನ್ನು ನಿರ್ವಹಿಸಿದಂತೆ ಆಗುವುದಿಲ್ಲ… ಅದನ್ನು ಸಂಪೂರ್ಣವಾಗಿ ನಿಷೇಧಿಸಿದಂತಾಗುತ್ತದೆ. ಇದು ಅತ್ಯಂತ ನೇರವಾಗಿ ನಾಗರಿಕರ ಮೂಲಭೂತ ಹಕ್ಕುಗಳನ್ನು ದಮನಿಸಿದಂತೆ ಆಗಲಿಲ್ಲವೆ? ನಾನು ವ್ಯವಸ್ಥೆಯಿಂದ ಬಂದ ಮನುಷ್ಯ. ನಾನು ಪ್ರಶ್ನೆಗಳನ್ನು ಎತ್ತಬೇಕೆಂದು ಬಯಸುತ್ತೇನೆ; ಏಕೆಂದರೆ, ನಾನು ಯಾವತ್ತೂ ಎಚ್ಚರಿಕೆಯಿಂದ ಇರಬೇಕು ಮತ್ತು ಉದ್ದೇಶಿತವಾಗಿ ಅಥವಾ ಅನುದ್ದೇಶಿತವಾಗಿ ತಪ್ಪು ಮಾಡಬಾರದು. ನೀವು ಪ್ರಶ್ನೆ ಮಾಡದಿರುವ ಭಯವನ್ನು ಒಂದಲ್ಲ, ಎರಡಲ್ಲ, ಮೂರು ಸಲ ಹುಟ್ಟಿಸಿದಾಗ, ಅದು ಭಿನ್ನಾಭಿಪ್ರಾಯದ ಅವಕಾಶವನ್ನೇ ಕಡಿತಗಳಿಸುತ್ತದೆ. ಇದು ಬಹಳ ಕಾಲದಿಂದ ನಡೆಯುತ್ತಿದೆ. ಇದು ಯಾವ ಹಂತವನ್ನು ತಲಪಿದೆ ಎಂದರೆ, ಸರಕಾರದ ಪರವಾಗಿ ನೀವು ಹೇಳಲು ಸಾಧ್ಯವಿರುವುದು ಇದೊಂದನ್ನು ಮಾತ್ರ. ಇದು ವ್ಯವಸ್ಥಿತವಾಗಿ ನಡೆಯುತ್ತಿದೆ. ಭಿನ್ನಮತ ವ್ಯಕ್ತಪಡಿಸುವ ಹಕ್ಕನ್ನು ಮರಳಿ ಪಡೆಯಬೇಕಾಗಿದೆ.

ಪ್ರಶ್ನೆ: ತನ್ನೆಲ್ಲಾ ನಾಗರಿಕರಿಗೆ ಸರಕುಗಳು, ಸೇವೆಗಳನ್ನು ಒದಗಿಸಿ ಜನಕಲ್ಯಾಣ ಮಾಡಬಲ್ಲ ಸದೃಢ ಸರಕಾರವು ತನ್ನ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬೇಕಾದಲ್ಲಿ, ಅದಕ್ಕೆ ಭಿನ್ನಮತದ ತೊಡರುಗಾಲು ಹಾಕಬಾರದೆಂದು ಕೆಲವರು ವಾದಿಸುತ್ತಿದ್ದಾರೆ.

ಕೆ.ಜಿ: ಇದು ಜಾರುವ ಬಂಡೆಯಂತಹಾ ವಾದ. ಅಂದರೆ, ನಿಮಗೆ ಇನ್ನಷ್ಟು ಅಭಿವೃದ್ಧಿ ಬೇಕೆಂದರೆ, ಸರ್ವಾಧಿಕಾರ ಬೇಕು. ಇದನ್ನೇ ನೀವು ಹೇಳುತ್ತಿದ್ದೀರಾ?

ಪ್ರಶ್ನೆ: ನಿಮ್ಮನ್ನು ಕೇಳುತ್ತಿದ್ದೇನೆ.

ಕೆ.ಜಿ: ಇಲ್ಲ…ಇಲ್ಲ… ಖಂಡಿತಾ ಅಲ್ಲ‌. ನಾವೊಂದು ಪ್ರಜಾಪ್ರಭುತ್ವ. ಪಾಶ್ಚಾತ್ಯ ಪ್ರಜಾಪ್ರಭುತ್ವಗಳು ನಮ್ಮಿಂದ ಹಳೆಯವು; ನಮಗಿಂತ ಹೆಚ್ಚು ದೃಢವಾಗಿವೆ, ಕಾರ್ಯಸಾಧ್ಯ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದನ್ನು ಕಂಡುಕೊಂಡಿವೆ. ಇದು ವಿಶೇಷವಾಗಿ ನಮ್ಮಂತಹಾ ವಿವಿಧತೆಯ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹೆಚ್ಚಿನ ಚರ್ಚೆಯ ಮೂಲಕ ಮಾತ್ರ ಸಾಧ್ಯ. ಭಿನ್ನಮತವನ್ನು ದೇಶವನ್ನೇ ಪ್ರಶ್ನೆ ಮಾಡುವ ವಿಷಯವೆಂದು ನೋಡಬೇಕಾಗಿಲ್ಲ. ಅದು ಈ ದೇಶಕ್ಕೆ ಯಾವುದು ಒಳ್ಳೆಯದು ಎಂದು ಒಬ್ಬ ವ್ಯಕ್ತಿ ಯೋಚಿಸುವ ಬೇರೆಯೇ ದೃಷ್ಟಿಕೋನ ಮಾತ್ರ. ನಾನೂ ನನ್ನ ದೇಶದ ಒಳಿತನ್ನೇ ಬಯಸುತ್ತೇನೆ. ಆದರೆ, ನೀವದನ್ನು ಹೇಗೆ ಅನುಷ್ಟಾನಗೊಳಿಸಲು ಬಯಸುತ್ತೀರೋ ಅದಕ್ಕಿಂತ ಸ್ವಲ್ಪ ಭಿನ್ನವಾಗಿ ಮಾತ್ರ. ನೀವು ಯಾವುದೇ ಒಂದು ಸಮಸ್ಯೆಯನ್ನು ಪರಿಹರಿಸಲು ಯತ್ನಿಸುತ್ತಿದ್ದೀರಿ ಎಂದಾದರೆ ಐದು ಮಂದಿ ಕುಳಿತುಕೊಳ್ಳುವುದು, ಭಿನ್ನಮತ ವ್ಯಕ್ತಪಡಿಸುವುದು, ಚರ್ಚೆ ಮಾಡುವುದು ಒಳ್ಳೆಯದಲ್ಲವೆ? ಅಥವಾ ಒಬ್ಬನೇ ವ್ಯಕ್ತಿ ಈ ಕುರಿತು ನಿರ್ಧಾರ ಮಾಡಬೇಕೆಂದು ಬಯಸುತ್ತೀರಾ? ನಾವೆಲ್ಲರೂ ದೇಶದ ಒಳಿತಿನ ಬಗ್ಗೆಯೇ ಚಿಂತಿಸುತ್ತಿದ್ದೇವೆ ಅಲ್ಲವೇ?

ಪ್ರಶ್ನೆ: ನಾವೀಗ ಬದುಕುತ್ತಿರುವ ಕಾಲದಲ್ಲಿ ಭಿನ್ನಮತ ಎಂಬುದೇ ಒಂದು ಭಾರೀ ವಿಷಯ ಎಂದು ನೀವು ಭಾವಿಸುತ್ತಿದ್ದೀರಿ ಅಲ್ಲವೇ?

ಕೆ.ಜಿ: ಆ ‘ಭಾರೀ’ ವ್ಯಾಖ್ಯಾನ ಮಾಡಿದವರು ನಾವೇ. ಭಿನ್ನಮತ ವ್ಯಕ್ತಪಡಿಸುವ ನಮ್ಮ ಹಕ್ಕಿನ ಬಗ್ಗೆ ನಮಗೆ ದೃಢ ನಂಬಿಕೆ ಇದ್ದಿದ್ದರೆ, ಅದು ಭಾರೀ ವ್ಯಾಖ್ಯಾನವೋ ಅಲ್ಲವೋ ಎಂಬ ಬಗ್ಗೆ ಚಿಂತೆ ಮಾಡುವ ಅಗತ್ಯವೇ ನಮಗಿರುತ್ತಿರಲಿಲ್ಲ.

ಪ್ರಶ್ನೆ: ಹಾಗಾದರೆ, ನಿಮಗೆ ಭ್ರಮನಿರಸನ ಆಗಿರುವುದಾದರೂ ಏನು? ನಿಮ್ಮ ಸೇವೆ, ಸರಕಾರ, ರಾಜಕೀಯ ವರ್ಗ, ನಾಗರಿಕ ಸಮಾಜ, ನಾಗರಿಕರು, ಮಾಧ್ಯಮ ತಮ್ಮತಮ್ಮ ಕೆಲಸ ಮಾಡುತ್ತಿಲ್ಲವೇ? ನೀವು ಜನರಿಗೆ ಒಳ್ಳೆಯದನ್ನು ಮಾಡಬಹುದಾಗಿದ್ದ ಸಮಯದಲ್ಲೇ ಕೆಲಸ ಬಿಟ್ಟಿರಿ. ಆದುದರಿಂದ, ಒಂದು ಮಟ್ಟದವರೆಗಾದರೂ ನಿಮ್ಮಲ್ಲಿ ಭ್ರಮನಿರಸನ ಇರಲೇಬೇಕು ಅಲ್ಲವೇ?

ಕೆ.ಜಿ: ಇದು ಭ್ರಮನಿರಸನವಲ್ಲ; ಆದರೆ, ಇಂದು ಇದಕ್ಕಿಂತಲೂ ದೊಡ್ಡ ವಿಷಯ ಇದೆ ಎಂಬ ನಂಬಿಕೆಯಿದು. ಕಾಶ್ಮೀರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ನನ್ನ ನಂಬಿಕೆ ತಪ್ಪೆಂದು ನಾಳೆ ಸಾಬೀತಾಗಬಹುದು. ಅದು ಖಂಡಿತವಾಗಿಯೂ ದೊಡ್ಡ ವಿಷಯವಲ್ಲ; ಆದರೆ, ನಾನು ನನ್ನ ನಂಬಿಕೆಗಳ ಪರ ಎದ್ದುನಿಲ್ಲಲು ಬಯಸುತ್ತೇನೆ. ನಾವು ತಪ್ಪು ಮಾಡುವ ಭಯದಿಂದಲೇ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುತ್ತೇವೆ ಎಂಬ ವಾಸ್ತವದ ಬಗ್ಗೆ ನನಗೆ ಭ್ರಮನಿರಸನವಾಗಿದೆ. ಭಿನ್ನಮತ ವ್ಯಕ್ತಪಡಿಸುವುದೇ ಒಂದು ಋಣಾತ್ಮಕ ಅರ್ಥವನ್ನು ಪಡೆದುಕೊಂಡಿರುವುದರಿಂದ ನನಗೆ ಭ್ರಮನಿರಸನವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಮತ ಅತ್ಯಂತ ಮುಖ್ಯ. ಕಳೆದ ಕೆಲವು ದಿನಗಳಿಂದ ನಮ್ಮ ಕೆಲವು ನಿರ್ದಿಷ್ಟ ನಾಗರಿಕರಿಗೆ ಪ್ರತಿಕ್ರಿಯೆ ನೀಡುವ ಹಕ್ಕುಗಳನ್ನೇ ನಿರಾಕರಿಸಲಾಗಿದೆ; ಆದುದರಿಂದಲೇ, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯವನ್ನು ಈಗಿಂದೀಗಲೇ ಕೈಗೆತ್ತಿಕೊಳ್ಳುವ ಅಗತ್ಯವಿದೆ. ಸರಕಾರದ ನಿರ್ಧಾರ ಏನೇ ಆಗಿರಲಿ, ಅದಕ್ಕೆ ಪ್ರತಿಕ್ರಿಯಿಸುವ ಅವಕಾಶವನ್ನು ಒಂದು ಪ್ರಜಾಪ್ರಭುತ್ವದಲ್ಲಿ ನೀಡಲೇಬೇಕು. ನೀವಿದನ್ನು ಹಾಂಗ್‌ಕಾಂಗ್ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ನೋಡಿರಲೂಬಹುದು. ಸರಕಾರ ಒಂದು ನಿರ್ಧಾರ ತೆಗೆದುಕೊಂಡಿತು. ಜನರು ಅದನ್ನು ಒಪ್ಪಲಿಲ್ಲ. ಹಾಗಾಗಿ ಪ್ರತಿಭಟನೆ ನಡೆಯುತ್ತಿದೆ. ಆದರೆ, ಸರಕಾರವು ಇಡೀ ನಗರಕ್ಕೆ ಬೀಗಹಾಕಿ ಕುಳಿತಿಲ್ಲ.

ಪ್ರಶ್ನೆ: ನಿಮ್ಮ ಸಹೋದ್ಯೋಗಿಗಳಿಂದ ನೀವು ಪಡೆಯುತ್ತಿರುವ ಹಿಮ್ಮಾಹಿತಿ ಏನು? ಅವರು ನಿಮ್ಮ ರಾಜೀನಾಮೆಯನ್ನು  ಸ್ವೀಕರಿಸಲು ಸಿದ್ಧರಿದ್ದಾರೆಯೇ?

ಕೆ.ಜಿ: ವ್ಯವಸ್ಥೆಯಲ್ಲಿದ್ದುಕೊಂಡೇ ಸಾಕಷ್ಟು ಮಾಡಬಹುದು ಎಂಬ ವಿಷಯದಲ್ಲಿ ಸಾಕಷ್ಟು ದೃಢವಾಗಿದ್ದಾರೆ ಮತ್ತು ಅದನ್ನವರು ನನಗೆ ಮನವರಿಕೆ ಮಾಡಲು ಯತ್ನಿಸುತ್ತಿದ್ದರು. ಆದರೆ, ನಾನು ಈ ನಿರ್ಧಾರವನ್ನು ಮಾಡಿ ಆಗಿದೆ ಎಂದು ಅವರಿಗೆ ಅರ್ಥವಾದ ಮೇಲೆ ಅವರು ನನ್ನ ಜೊತೆ ವಾದವನ್ನೂ ಮಾಡಲೆತ್ನಿಸುತ್ತಿದ್ದಾರೆ.

ಪ್ರಶ್ನೆ: ಏಕೆಂದರೆ, ಇದರಿಂದ ಹಿಂದೆ ಸರಿಯುವಂತೆಯೇ ಇಲ್ಲ…

ಕೆ.ಜಿ: ಖಂಡಿತವಾಗಿ; ನಾನದನ್ನು ಅರ್ಥ ಮಾಡಿಕೊಂಡಿದ್ದೇನೆ. ನನಗೆ 33 ವರ್ಷ. ನಾನು ನನ್ನನ್ನು ಮರುಸ್ಥಾಪಿಸಲು ಸಿದ್ಧನಾಗಿದ್ದೇನೆ.

ಪ್ರಶ್ನೆ: ಇನ್ನೊಬ್ಬ ಶಾ ಫೈಸಲ್ ಹುಟ್ಟಿಕೊಳ್ಳುತ್ತಿದ್ದಾನೆ; ಒಳ್ಳೆಯದನ್ನು ಮಾಡಬಹುದಾದ ಸೇವೆಯನ್ನು ಬಿಟ್ಟು, ರಾಜಕೀಯ ಸೇರಲು ಬಯಸುತ್ತಿದ್ದಾನೆಯೇ?- ಈ ರೀತಿ ಹೇಳುವ ಜನರಿಗೆ ನೀವೇನು ಹೇಳಬಯಸುತ್ತೀರಿ? (ಶಾ ಫೈಸಲ್ ಕಾಶ್ಮೀರದಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ, ಈಗ ರಾಜಕೀಯಕ್ಕೆ ಸೇರಿ ಈಗ ಗೃಹಬಂಧನದಲ್ಲಿರುವ ಸರಕಾರಿ ಅಧಿಕಾರಿ)

ಕೆ.ಜಿ: ಶಾ ಫೈಸಲ್ ಐಎಎಸ್ ಅಧಿಕಾರಿಯಾದದ್ದು ಜನರ ಸೇವೆ ಮಾಡಲು. ಪ್ರಜಾಸತ್ತಾತ್ಮಕ ರಾಜಕೀಯದಿಂದ ತಮ್ಮಜನರಿಗೆ ಅದಕ್ಕಿಂತ ಹೆಚ್ಚಿನದ್ದನ್ನು ಮಾಡಬಹುದು ಎಂದು ಅವರು ಕಂಡುಕೊಂಡರು. ಆದುದರಿಂದ ಅವರು ಒಂದು ಆಯ್ಕೆ ಮಾಡಿದರು. ಅದು ಅವರ ಹಕ್ಕು ಕೂಡಾ. ಒಂದು ವೇಳೆ ಅವರು ವ್ಯಾಪಾರಿಯಾಗುತ್ತಿದ್ದರೆ ನೀವು ಇಂತದ್ದೇ ಪಕ್ಷಪಾತದ ಪ್ರಶ್ನೆ ಕೇಳುತ್ತಿದ್ದಿರಾ? ಅವರು ಶಿಕ್ಷಕರೋ, ಪ್ರಾಧ್ಯಾಪಕರೋ ಅಗುತ್ತಿದ್ದರೆ, ಅವರು ಸಂಶೋಧಕರಾಗುವ ಸಲುವಾಗಿ ಸೇವೆಯನ್ನು ಬಿಟ್ಟರು ಎಂದು ನೀವು ಹೇಳುತ್ತಿದ್ದಿರಾ? ನೀವಿಂತಹ ಪ್ರಶ್ನೆ ಕೇಳುತ್ತೀರಾ?

ನೀವೀಗ ಪ್ರಧಾನಮಂತ್ರಿ, ಪ್ರತಿಪಕ್ಷ ಸೇರಿದಂತೆ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿರುವ ಜನರನ್ನು ನೋಡಿದರೆ, ಅವರೆಲ್ಲರೂ ರಾಜಕಾರಣಿಗಳು. ಅವರು ಕೂಡಾ ಇಲ್ಲಿಗೆ ಬರಲು ಏನನ್ನಾದರೂ ಬಿಟ್ಟಿರುತ್ತಾರೆ. ನಾನೇನು ಮಾಡಬೇಕೆಂದು ನಾನಿನ್ನೂ ಯೋಚಿಸಿಲ್ಲ; ಆದರೆ, ಸೇರುವ ಪ್ರಶ್ನೆ ಬಂದಾಗ ರಾಜಕೀಯ ಅಷ್ಟು ಕೆಟ್ಟದ್ದೇನಲ್ಲ.

ನಿಮ್ಮ ಧ್ವನಿಯನ್ನು ಎತ್ತುವುದಷ್ಟೇ ಮುಖ್ಯವಲ್ಲ; ಬದಲಿ ಆಯ್ಕೆಯನ್ನೂ ಕೊಡಬೇಕು. ನಾನು ಜನರಿಗೆ ಯಾವುದಾದರೂ ಒಂದು ರೀತಿಯಲ್ಲಿ ಸಂಬಂಧಿಸಿದ ಕೆಲಸದಲ್ಲಿ ತೊಡಗಲು ಬಯಸುತ್ತೇನೆ. ನಾನು ಭಾರತದಾದ್ಯಂತ ಬದುಕಿದ್ದೇನೆ, ಕಲಿತಿದ್ದೇನೆ, ದುಡಿದಿದ್ದೇನೆ. ಎಲ್ಲೆಲ್ಲಾ ಒಳ್ಳೆಯ ಕೆಲಸ ಮಾಡಲು ಅವಕಾಶ ಸಿಗುತ್ತದೋ ಅಲ್ಲೆಲ್ಲಾ ಮಾಡುತ್ತೇನೆ. ನಾನು ಸರಕಾರಿ ಸೇವೆಯಲ್ಲಿ ಬಹಳಷ್ಟು ಗೌರವ ಮತ್ತು ತೃಪ್ತಿಯನ್ನು ಪಡೆದೆ. ಇನ್ನೂ ಕೂಡಾ ಜನರ ಸಂಪರ್ಕದಿಂದ ಇನ್ನಷ್ಟು ಸಂತೋಷವನ್ನು ಪಡೆಯುವ ನಿರೀಕ್ಷೆಯಿದೆ. ನನಗೆ ಸಾಧ್ಯವಾಗುವ ಯಾವುದೇ ರೀತಿಯಿಂದಲಾದರೂ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ.

ಪ್ರಶ್ನೆ: ನಿಮಗೆ ಆಡಳಿತ, ಸರಕಾರ, ಸಚಿವಾಲಯದಿಂದ ಯಾವುದೇ ರೀತಿಯ ಪ್ರತೀಕಾರದ ಭಯಾತಂಕಗಳಿವೆಯೆ?

ಕೆ.ಜಿ: ಇಲ್ಲ. ಯಾವುದೇ ಭಯವಿಲ್ಲ. ಭಾರತದಂತಹ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯಲ್ಲಿ ನಮಗೆ ಸ್ವಾತಂತ್ರ್ಯವಿದೆ. ಆದರೆ, ತುಂಬಾ ಕಟ್ಟುನಿಟ್ಟಿನ ಸೇವಾನಿಯಮಗಳಿವೆ. ಆದುದರಿಂದ ನಾನು ಯಾವುದೇ ಮುಕ್ತವಾದ ಹೇಳಿಕೆ ನೀಡಬೇಕೆಂದಾದರೆ, ವ್ಯವಸ್ಥೆಯಿಂದ ಹೊರಬರಬೇಕಾಗುತ್ತದೆ. ಅದಕ್ಕಾಗಿಯೇ ನಾನು ರಾಜೀನಾಮೆ ಸಲ್ಲಿಸಿದೆ. ನಾವೀಗ ಮಾತನಾಡುತ್ತಿರುವ ವಿಷಯಗಳನ್ನು ನಾನು ನಮ್ಮ ಒಳಗೆಯೇ ಪ್ರತೀದಿನ ಹೆಚ್ಚುಹೆಚ್ಚಾಗಿ ಚರ್ಚಿಸಲು ಬಯಸುತ್ತೇನೆ. ಯಾಕೆಂದರೆ, ಅಭಿವ್ಯಕ್ತಿಗೊಳಿಸಬೇಕಾದ ಅಗತ್ಯವಿರುವ ಜನಸಮುದಾಯಗಳು ನಮ್ಮಲ್ಲಿವೆ. ಮತ್ತು ಈ ಅಭಿವ್ಯಕ್ತಿಗಳು ಒಂದು ಪ್ರಜಾಪ್ರಭುತ್ವದಲ್ಲಿ ನ್ಯಾಯಬದ್ಧ ರೀತಿಯಲ್ಲಿ ಹೊರಹೊಮ್ಮಬೇಕು ಮತ್ತು ಆ ಅವಕಾಶವನ್ನು ಒದಗಿಸಬೇಕಾಗಿದೆ.

ಅನುವಾದ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸುದೀರ್ಘವಾದ ಕಗ್ಗತ್ತಲಿನ ನಂತರವೂ ಬೆಳಕು ಹರಿಯುತ್ತದೆ, ಎಂಬ ಮಾತಿಗೆ ಅನುಗುಣವಾಗಿ ಅಲ್ಲಲ್ಲಿ ಬೆಳಕಿನ ಕಿರಣಗಳು ಮೂಡುತ್ತಿವೆ.ಇದು ಸ್ವಾಗತಾರ್ಹ.

LEAVE A REPLY

Please enter your comment!
Please enter your name here

- Advertisment -

Must Read