ಭಾನುವಾರ ಗಾಂಧಿ ಜಯಂತಿಯಂದು ಹಿಂದೂ ಮುನ್ನನಿ ಪಕ್ಷದ 8 ಕಾರ್ಯಕರ್ತರು ಕನ್ಯಾಕುಮಾರಿಯ ಚರ್ಚೊಂದಕ್ಕೆ ಅಕ್ರಮ ಪ್ರವೇಶ ಮಾಡಿ ಪ್ರಾರ್ಥನೆಗೆ ಅಡ್ಡಿಪಡಿಸಿದ್ದರು. ಘಟನೆ ನಡೆದು ಐದು ದಿನಗಳ ನಂತರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದುವರೆಗೆ ಒಬ್ಬರನ್ನು ಮಾತ್ರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ದುಷ್ಕರ್ಮಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಅಕ್ಟೋಬರ್ 2ರ ಭಾನುವಾರ ಹಿಂದೂ ಮುನ್ನನಿ ಕಾರ್ಯಕರ್ತರ ಗುಂಪು ತಮ್ಮ ಧ್ವಜವನ್ನು ಹಿಡಿದು ಕನ್ಯಾಕುಮಾರಿ ಜಿಲ್ಲೆಯ ಸುಚಿಂದ್ರಂನಲ್ಲಿರುವ ವೀರಬಾಗುಪತಿಯಲ್ಲಿರುವ ಲಂಡನ್ ಮಿಷನ್ ಚರ್ಚ್ಗೆ ಪ್ರವೇಶಿಸಿ ಭಾನುವಾರದ ಪ್ರಾರ್ಥನೆಗೆ ಅಡ್ಡಿಪಡಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಚರ್ಚ್ನಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ಜೇಬಾಸಿಂಗ್ ಅವರಿಗೆ ದುಷ್ಕರ್ಮಿಗಳ ಗುಂಪು ಕೊಲೆ ಬೆದರಿಕೆ ಹಾಕಿದೆ ಎನ್ನಲಾಗಿದೆ. ಈ ದುಷ್ಕರ್ಮಿಗಳ ಗುಂಪು ಪುತ್ಥಳಂ ಗ್ರಾಮದ ಬಳಿ ವೀರಬಾಗುಪತಿಯಲ್ಲಿ ನಿರ್ಮಾಣ ಮಾಡಲಾಗುವ ಪ್ರಾರ್ಥನಾ ಮಂದಿರ ವಿರೋಧ ವ್ಯಕ್ತಪಡಿಸಿದೆ.
ಇದನ್ನೂ ಓದಿ: ‘ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿ’ – ಗುಜರಾತ್ ಸರ್ಕಾರದ ವಿರುದ್ಧ ಬಿಜೆಪಿ ಹಿರಿಯ ನಾಯಕ ವಾಗ್ದಾಳಿ
ಹಿಂದೂ ಮುನ್ನನಿ ಕಾರ್ಯಕರ್ತರು ಚರ್ಚ್ಗೆ ನುಗ್ಗಿ ಭಕ್ತರಿಗೆ ಬೆದರಿಕೆ ಹಾಕಿ ದಾಳಿ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರಾಮದ ವೀರಬಾಗುಪತಿಯ ಸ್ಥಳೀಯರು ಲಂಡನ್ ಮಿಷನ್ ಚರ್ಚ್ನಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುವುದನ್ನು ಸ್ವಲ್ಪ ಸಮಯದಿಂದ ವಿರೋಧಿಸುತ್ತಿದ್ದಾರೆ ಎಂದು ದೂರುದಾರ ಜೇಬಸಿಂಗ್ ಅವರು ದಾಖಲಿಸಿದ ಎಫ್ಐಆರ್ನಲ್ಲಿ ಆರೋಪಿಸಿದ್ದಾರೆ.
“ಪ್ರತಿ ವಾರ, ನಾವು ನಮ್ಮ ಚರ್ಚ್ನಲ್ಲಿ ಬೆಳಿಗ್ಗೆ 8.30 ರಿಂದ 11 ರವರೆಗೆ ಪ್ರಾರ್ಥನಾ ಸಭೆಗಳನ್ನು ನಡೆಸುತ್ತೇವೆ. ಅಕ್ಟೋಬರ್ 2 ರಂದು, ಬೆಳಿಗ್ಗೆ 9 ಗಂಟೆಯ ಸುಮಾರಿಗೆ, ಗ್ರಾಮ ಮತ್ತು ಗ್ರಾಮದ ಹೊರಗಿನ ವ್ಯಕ್ತಿಗಳು ಮತ್ತು ಮಹಿಳೆಯರ ಗುಂಪು ಚರ್ಚ್ ಬಳಿ ಘೋಷಣೆಗಳನ್ನು ಕೂಗುತ್ತಾ ಜಮಾಯಿಸಿದರು. ಪ್ರಾರ್ಥನೆಗಳನ್ನು ಅಡ್ಡಿಪಡಿಸುವ ಸಲುವಾಗಿ ಬಲವಂತವಾಗಿ ಚರ್ಚ್ಗೆ ಪ್ರವೇಶಿಸಿದ್ದಾರೆ” ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
“ಉದ್ರಿಕ್ತರ ಗುಂಪು ಭಕ್ತರನ್ನು ನಿಂದಿಸಲು ಮತ್ತು ಕೊಲೆ ಬೆದರಿಕೆ ಹಾಕಿದೆ. ನಾವು ಚರ್ಚ್ನಲ್ಲಿ ನಮ್ಮ ಪ್ರಾರ್ಥನಾ ಸಭೆಗಳನ್ನು ನಡೆಸುವುದನ್ನು ಮುಂದುವರಿಸಿದರೆ ಎಲ್ಲರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ” ಎಂದು ದೂರಿನಲ್ಲಿ ಜೆಬಾಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ದಾಳಿ ಮಾಡಿದ ಬಿಜೆಪಿ ಕಾರ್ಯಕರ್ತರು
ದೂರಿನ ಆಧಾರದ ಮೇಲೆ, ಅಕ್ಟೋಬರ್ 2 ರಂದು ಸುಚೀಂದ್ರಂ ಪೊಲೀಸರು ಎಂಟು ಹಿಂದೂ ಮುನ್ನನಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಯಾಕುಮಾರಿ ಪೊಲೀಸರು ಸೋಮವಾರ 38 ವರ್ಷದ ಸುರೇಶ್ ಎಂಬಾತನನ್ನು ಬಂಧಿಸಿದ್ದಾರೆ. ಆದರೆ, ಎಫ್ಐಆರ್ನಲ್ಲಿ ಹೆಸರಿಸಲಾದ ಇತರ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.