ಬಿಜೆಪಿ ಆಡಳಿತದಲ್ಲಿ ಗಲಭೆಗಳು ನಡೆಯುವುದಿಲ್ಲ ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ “ಮತ್ತೊಂದು ಜುಮ್ಲಾ” ಎಂದು ಬಣ್ಣಿಸಿದ್ದಾರೆ. ಸೋಮವಾರ ಈ ಬಗ್ಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಅಡಿಯಲ್ಲಿರುವ ಕೆಲವು ರಾಜ್ಯಗಳಲ್ಲಿ ಕೋಮು ಹಿಂಸಾಚಾರ ನಡೆಯುತ್ತಿರುವ ಘಟನೆಗಳನ್ನು ಉಲ್ಲೇಖಿಸಿದ್ದಾರೆ.
ಬಿಹಾರದ ನವಾಡಾ ಜಿಲ್ಲೆಯ ಹಿಸುವಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು 2024ರಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿ, 40ರಲ್ಲಿ 40 ಸ್ಥಾನಗಳನ್ನು (ಬಿಹಾರದಲ್ಲಿ) ನೀಡಬೇಕು ಮತ್ತು 2025ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನದೇ ಆದ ಸರ್ಕಾರ ರಚಿಸಲು ಸಹಾಯ ಮಾಡಲಿ ಎಂದು ಹೇಳಿದರು. ಗಲಭೆಕೋರರನ್ನು ತಲೆಕೆಳಗಾಗಿ ನೇತುಹಾಕುವ ಮೂಲಕ (‘ಉಲ್ಟಾ ಲಟ್ಕಾ ಕರ್’) ಅವರನ್ನು ಸರಿ ಮಾಡುವ ಕೆಲಸವನ್ನು ಬಿಜೆಪಿ ಮಾಡಲಿದೆ. ನಮ್ಮ ಆಡಳಿತದಲ್ಲಿ ಗಲಭೆಗಳು ನಡೆಯುವುದಿಲ್ಲ” ಎಂದರು.
ಇದನ್ನೂ ಓದಿ: ಗೋಡ್ಸೆ ಆರಾಧನೆ, ಹಿಂದೂ ರಾಷ್ಟ್ರಕ್ಕೆ ಕರೆ; ವಿವಾದಿತ ಶಾಸಕ ರಾಜಾಸಿಂಗ್ ವಿರುದ್ಧ ಸರಣಿ ಪ್ರಕರಣ ದಾಖಲು
ಶಾ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಿಬಲ್, ”ಅಮಿತ್ ಶಾ ಅವರು ತಮ್ಮ ಆಡಳಿತದಲ್ಲಿ ಗಲಭೆಗಳು ನಡೆಯುವುದಿಲ್ಲ ಎಂದು ಹೇಳಿದರು, ಇದು ಮತ್ತೊಂದು ಜುಮ್ಲಾ (ವಾಕ್ಚಾತುರ್ಯ)” ಎಂದು ಹೇಳಿದರು.
”2014-2020 ರ ನಡುವೆ 5415 ಕೋಮು ಗಲಭೆಗಳು ವರದಿಯಾಗಿವೆ (NCRB ಡೇಟಾ). 2019ರಲ್ಲೇ – 25 ಕೋಮು ಗಲಭೆಗಳು UP(9), ಮಹಾರಾಷ್ಟ್ರ (4), MP(2). ಅತಿ ಹೆಚ್ಚು ಕೋಮುಗಲಭೆ ಪ್ರಕರಣಗಳು ಹರಿಯಾಣ(2021) ಗುಜರಾತ್, ಮಧ್ಯಪ್ರದೇಶ (ಏಪ್ರಿಲ್ 2022)” ಎಂದು ಸಿಬಲ್ ಮಾಹಿತಿ ಹೇಳಿದರು.
”ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ರಾಮನವಮಿ ಮೆರವಣಿಗೆ ವೇಳೆ ನಡೆದ ಕೋಮು ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿಯವರು ಏಕೆ “ಮೌನ”ವಾಗಿದ್ದಾರೆ ಎಂದು ಭಾನುವಾರ ಸಿಬಲ್ ಪ್ರಶ್ನಿಸಿದರು ಮತ್ತು ಈ ಹಿಂಸಾಚಾರಕ್ಕೆ “2024 ಸಾರ್ವತ್ರಿಕ ಚುನಾವಣೆಗಳು ಕಾರಣವಾಗದಿರಲಿ” ಎಂದು ಅವರು ಹೇಳಿದರು.