ಉಪಚುನಾವಣೆಯ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಅದರಲ್ಲಿಯೂ ಒಮ್ಮೆಯೂ ಮಂಡ್ಯಜಿಲ್ಲೆಯ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಒಮ್ಮೆಯೂ ಕೂಡ ಬಿಜೆಪಿ ಅಭ್ಯರ್ಥಿ ಗೆಲ್ಲುವುದಿರಲಿ ಮುನ್ನಡೆ ಸಹ ಗಳಿಸಲು ಆಗಿರಲಿಲ್ಲ. ಅದು ಮೊದಲ ಬಾರಿಗೆ ಬ್ರೇಕ್ ಆಗಿದೆ.
ಜೆಡಿಎಸ್ನ ಭದ್ರ ಕೋಟೆ ಎಂದೇ ಭಾವಿಸಿರುವ ಕೆ.ಆರ್ ಪೇಟೆ ಕ್ಷೇತ್ರದ ಮತ ಎಣಿಕೆಯಲ್ಲಿ ಆರಂಭದಿಂದಲೂ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಈಗ ಮೊದಲ ಬಾರಿಗೆ ಬಿಜೆಪಿಯ ಅನರ್ಹ ಶಾಸಕ ನಾರಾಯಣ ಗೌಡರು 260 ಮತಗಳಿಂದ ಮುನ್ನಡೆ ಗಳಿಸುವ ಮೂಲಕ ದಾಖಲೆ ಗಳಿಸಿದ್ದಾರೆ.
ಇದಕ್ಕಾಗಿ ಬಿ.ಎಸ್ ಯಡಿಯೂರಪ್ಪ ಬಹಳಷ್ಟು ಬೆವರು ಹರಿಸಿದ್ದರು. ತಮ್ಮ ಮಗನನ್ನು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿಸಿದ್ದರು. ಅಲ್ಲದೇ 1000 ಕೋಟಿ ರೂ ಅನುದಾನ ಕೊಡುವುದಾಗಿ ನಾರಾಯಣಗೌಡರಿಗೆ ಭರವಸೆ ನೀಡಿದ್ದರು.
ಈ ಕ್ಷೇತ್ರದಲ್ಲಿ ಈ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ನಡುವೆ ಪೈಪೋಟಿ ಕಂಡುಬಂದರೆ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿದೆ.
ಇದೇ ರೀತಿಯಲ್ಲಿಯೂ ಸಹ ಚಿಕ್ಕಬಳ್ಳಾಪುರದಲ್ಲಿಯೂ ಮೊದಲ ಬಾರಿಗೆ ಅಸೆಂಬ್ಲಿ ಚುನಾವಣೆಯಲ್ಲಿ ಕಮಲ ಅರಳುವ ಸೂಚನೆ ನೀಡಿದೆ. ಬಿಜೆಪಿಯ ಅನರ್ಹ ಶಾಸಕ ಡಾ.ಕೆ ಸುಧಾಕರ್ 7ನೇ ಸುತ್ತಿನಲ್ಲಿಯೂ 11000 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇನ್ನು ಈ ಉಪಚುನಾವಣೆಯ ಮತ ಎಣಿಕೆಯಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಬಿಜೆಪಿ ಮುನ್ನಡೆ ಸಾಧಿಸಿರುವ ಕ್ಷೇತ್ರಗಳಲ್ಲಿ ಭಾರೀ ಅಂತರ ಕಾಯ್ದುಕೊಂಡರೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುನ್ನಡೆ ಗಳಿಸಿರುವ ಕ್ಷೇತ್ರಗಳಲ್ಲಿ ಅಂತರ ಕಡಿಮೆ ಇದೆ. ಹಾಗಾಗಿ ಇದು ಬಿಜೆಪಿ ಬಹುದೊಡ್ಡ ಪ್ರಾಬಲ್ಯ ಎಂದೇ ಹೇಳಬಹುದಾಗಿದೆ.