15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದ್ದು ಸದ್ಯದ ವರದಿ ಪ್ರಕಾರ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದ್ದು ಕಾಂಗ್ರೆಸ್ಗೆ ಮುಖಭಂಗವಾಗಿದೆ. ಜೆಡಿಎಸ್ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಪಕ್ಷೇತರ ಅಭ್ಯರ್ಥಿಯ ಮೊಗದಲ್ಲಿ ಮಂದಹಾಸ ಬೀರಿದೆ.
ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ಯಶವಂತಪುರ ಮತ್ತು ಕೆ.ಆರ್ ಪೇಟೆಯಲ್ಲಿ ಜೆಡಿಎಸ್, ಶಿವಾಜಿನಗರ ಮತ್ತು ಹುಣಸೂರಿನಲ್ಲಿ ಕಾಂಗ್ರೆಸ್ ಮುನ್ನಡೆಯನ್ನು ಕಂಡರೆ ಉಳಿದ 10 ಕ್ಷೇತ್ರಗಳಲ್ಲಿಯೂ ಬಿಜೆಪಿಯ ಅನರ್ಹ ಶಾಸಕರು ಮುನ್ನಡೆ ಸಾಧಿಸುವ ಮೂಲಕ ಗೆಲುವಿನತ್ತ ಮುನ್ನಡೆದಿದ್ದಾರೆ.
ಅದರಲ್ಲಿಯೂ ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ 15000 ಸಾವಿರ ಮತಗಳ ಭಾರೀ ಅಂತರವನ್ನು ಕಾಯ್ದುಕೊಂಡಿದ್ದು ಬಹುತೇಕ ಗೆಲುವಿನ ಸನಿಹದಲ್ಲಿದ್ದಾರೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ಡಾ.ಕೆ ಸುಧಾಕರ್ ಕೂಡ ಗೆಲುವಿನತ್ತ ಹೆಜ್ಜೆ ಹಾಕಿದ್ದು ಅವರು ಕೂಡ 8000 ಮತಗಳ ಭಾರೀ ಅಂತರವನ್ನು ಹೊಂದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಫಲಿತಾಂಶದಿಂದ ನಿಟ್ಟುಸಿರು ಬಿಡುವಂತಾಗಿದ್ದು ಇನ್ನು ಮೂರುವರೆ ವರ್ಷಗಳ ಕಾಲ ಸುಭದ್ರವಾಗಿರುತ್ತದೆ ಎನ್ನಲಾಗುತ್ತಿದೆ. ಅದೇ ರೀತಿ ಇನ್ನು ಎಷ್ಟು ಕ್ಷೇತ್ರಗಳಲ್ಲಿ ಶಾಸಕರ ಕುದುರೆ ವ್ಯಾಪಾರ, ಆಪರೇಷನ್ ಕಮಲ, ಉಪಚುನಾವಣೆಗಳು ನಡೆಯುತ್ತವೆಯೋ ಗೊತ್ತಿಲ್ಲ. ಆದರೆ ಆ ಸಾಧ್ಯತೆಯೊಂದು ಇದ್ದೇ ಇದೆ.