ನಾನು ದಾಸಯ್ಯ ಅಲ್ಲ, ಮೆಂಬರ್ ಆಫ್ ಪಾರ್ಲಿಮೆಂಟ್, ನಾನು ಪುರಾಣ ಹೇಳಲು ಬಂದಿಲ್ಲ, ನಾನು’ ನಮ್ಮಪ್ಪಗೆ …………… ಎಂದು ಸಂಸದ ಜಿ.ಎಸ್. ಬಸವರಾಜು ಪತ್ರಿಕಾಗೋಷ್ಠಿಯಲ್ಲಿ ತಾಳ್ಮೆಯನ್ನು ಕಳೆದುಕೊಂಡು ಮಾಧ್ಯಮದವರ ಮೇಲೆ ಸಿಡಿದೆದ್ದ ಪ್ರಕರಣ ಇಂದು ನಡೆಯಿತು.
ಇದೇ ವರ್ಷ ಜುಲೈ 7ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಸವರಾಜು ಅವರು 2018ರಲ್ಲಿ ತುಮಕೂರು ಜಿಲ್ಲೆಗೆ 23 ಟಿಎಂಸಿ ನೀರು ಹರಿಸಲಾಗಿದೆ ಎಂದು ಸರ್ಕಾರ ಮತ್ತು ಚೀಫ್ ಇಂಜಿನಿಯರ್ ಸುಳ್ಳು ಲೆಕ್ಕ ತೋರಿಸಿದ್ದಾರೆ. ಇವರ ವಿರುದ್ಧ ವಂಚನೆ ಮತ್ತು ದೇಶದ್ರೋಹದ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದರು.
ಇಂದು ಅದೇ ಪ್ರಶ್ನೆಯನ್ನು ಸಂಸದ ಬಸವರಾಜು ಅವರಿಗೆ ಪತ್ರಕರ್ತರು ಕೇಳಿದರು. ಇದಕ್ಕೆ ಸಂಬಂಧವಿಲ್ಲದ ಮಾಹಿತಿಯನ್ನು ನೀಡಲು ಹೊರಟರು. ಆದರೆ ಪತ್ರಕರ್ತರು ಪಟ್ಟು ಬಿಡದೇ ನೀವು ಹಿಂದೆ ಹೇಳಿದಂತೆ ಚೀಫ್ ಇಂಜಿನಿಯರ್ ವಿರುದ್ಧ ದೂರು ದಾಖಲಿಸುತ್ತೀರ ಅದನ್ನು ಸ್ಪಷ್ಟಪಡಿಸಿ ಎಂದು ಪ್ರಶ್ನಿಸಿದ್ದಾರೆ.
ಇದರಿಂದ ತಾಳ್ಮೆ ಕಳೆದುಕೊಂಡು ಕೆರಳಿದ ಸಂಸದ ಬಸವರಾಜು ಮಾಧ್ಯಮಗೋಷ್ಠಿಯಲ್ಲಿ ದಿಢೀರನೆ ಎದ್ದು ನಿಂತು ನಾನು ಪುರಾಣ ಹೇಳೋಕೆ ದಾಸಯ್ಯ ಅಲ್ಲ, ಮೆಂಬರ್ ಆಫ್ ಪಾರ್ಲಿಮೆಂಟ್ ಎಂದು ಮಾಧ್ಯಮದವರ ವಿರುದ್ದ ಸಿಡಿಮಿಡಿ ವ್ಯಕ್ತಪಡಿಸಿದರು.
ಮಧ್ಯ ಪ್ರವೇಶಿಸಿದ ಕೆಲ ಹಿರಿಯ ಪತ್ರಕರ್ತರು, ನಾವು ನೀವು ಹೇಳಿದಂತೆ ದೂರು ದಾಖಲಿಸುವ ಸುದ್ದಿ ಬರೆದಿದ್ದೇವೆ. ಈಗ ಕೇಳುತ್ತಿದ್ದೇವೆ. ಉತ್ತರ ಹೇಳಿ. ಅದಕ್ಕೇಕೆ ರೇಗುತ್ತೀರ ಎಂದು ಸಮಜಾಯಿಸಿ ನೀಡಿದರು.
ಇದರಿಂದ ದಿಶಾ ಸಮಿತಿಯ ಸದಸ್ಯ ಹಾಗೂ ಅಭಿವೃದ್ಧಿ ರೆವೆಲ್ಯೂಷನ್ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಪತ್ರಕರ್ತರೊಂದಿಗೆ ಏರುಧ್ವನಿಯಲ್ಲಿ ಜಗಳಕ್ಕೆ ಇಳಿದರು. ಕೊನೆಗೆ ಎಲ್ಲರು ಅಲ್ಲಿಂದ ಚದುರಿದರು.
ಈ ವೇಳೆ ಮಾತನಾಡಿದ ಸಂಸದ ಬಸವರಾಜು ಸ್ಮಾರ್ಟ್ ಸಿಟಿ ಸರಿದಾರಿಗೆ ತರಲು ದಿಟ್ಟ ಕ್ರಮ ಕೈಗೊಳ್ಳಲಾಗುವುದು. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು. ಸ್ಮಾರ್ಟ್ ಸಿಟಿ ಪ್ರಸ್ತಾಪ ತಯಾರಿಸುವಾಗ ಸುಳ್ಳು ಮಾಹಿತಿ ನೀಡಿದವರಿಗೂ ಬಿಸಿ ತಟ್ಟಲಿದೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆ ಯಾವ ಯಾವ ವ್ಯವಸ್ಥಾಪಕ ನಿರ್ದೇಶಕರ ಅವಧಿಯಲ್ಲಿ ಎಷ್ಟೆಷ್ಟು ನಡೆದಿವೆ. ಯಾವ ಸಭೆಯಲ್ಲಿ ಯಾವ ಯೋಜನೆಯ ಬಗ್ಗೆ ವಿವರವಾದ ಚರ್ಚೆ ನಡೆಸಲಾಗಿದೆ ಎಂಬ ಬಗ್ಗೆ ಯೋಜನೆವಾರು ಮಾಹಿತಿಯನ್ನು ಒಂದೇ ಕಡೆ ತರಲು ಸೂಚಿಸಿದ್ದೇನೆ ಎಂದರು.