ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬವು ಭಾನುವಾರ ಶವವನ್ನು ದಹನ ಮಾಡಲು ನಿರಾಕರಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಮ್ಮನ್ನು ಭೇಟಿ ಮಾಡಿ, ಆರೋಪಿಯನ್ನು ಗಲ್ಲಿಗೇರಿಸಲಾಗುವುದು ಎಂದು ಭರವಸೆ ನೀಡುವವರೆಗೂ ಶವಸಂಸ್ಕಾರ ಮಾಡದಿರಲು ತೀರ್ಮಾನಿಸಿದೆ.
“ಸಿಎಂ ಯೋಗಿ ಆದಿತ್ಯನಾಥ್ರವರು ಬಾರದ ತನಕ, ನಾವು ನನ್ನ ತಂಗಿಯನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ. ನಾನು ವೈಯಕ್ತಿಕವಾಗಿ ಅವರೊಂದಿಗೆ ಮಾತನಾಡಲು ಬಯಸುತ್ತೇನೆ” ಎಂದು ಸಂತ್ರಸ್ತೆಯ ಸಹೋದರಿ ಪಟ್ಟು ಹಿಡಿದಿದ್ದಾರೆ.
ಸಂತ್ರಸ್ತೆಯ ಅಂತ್ಯ ಸಂಸ್ಕಾರದ ಕೊನೆಯ ವಿಧಿ ವಿಧಾನಗಳಿಗೆ ಜಿಲ್ಲಾಡಳಿತ ಸಿದ್ಧತೆಗಳನ್ನು ನಡೆಸುತ್ತಿರುವಾಗ, ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಖಾತರಿ ನೀಡದ ಹೊರತು ಸಂತ್ರಸ್ತೆಯನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಸಹೋದರಿ ಪ್ರತಿಪಾದಿಸಿದ್ದಾರೆ.
ಆರೋಪಿಗೆ ಮರಣದಂಡನೆಯನ್ನು ವಿಧಿಸಬೇಕೆಂದು ಪಟ್ಟು ಹಿಡಿದಾಗ “ಮರಣದಂಡನೆಯನ್ನು ನೀಡುವುದು ನ್ಯಾಯಾಲಯದ ಕೆಲಸ” ಎಂದು ಸಂತ್ರಸ್ತೆಯ ಸಹೋದರಿಗೆ ತಿಳಿಸಿದಾಗ, “ಯಾರು ನ್ಯಾಯಾಲಯವನ್ನು ಸುತ್ತುತ್ತಾರೆ?” ಎಂದು ಆಕೆ ಪ್ರಶ್ನಿಸಿದ್ದಾರೆ.
ಶನಿವಾರ ಸಂಜೆ ಭಾರೀ ಭದ್ರತಾ ರಕ್ಷಣೆಯ ನಡುವೆ ಸಂತ್ರಸ್ತೆಯ ಮೃತ ದೇಹವನ್ನು ಗ್ರಾಮಕ್ಕೆ ತರಲಾಗಿದೆ.
ಸಂತ್ರಸ್ತೆಯ ಸಾವನ್ನು “ಅತ್ಯಂತ ದುರದೃಷ್ಟಕರ” ಎಂದು ಹೇಳಿರುವ ಸಿಎಂ ಆದಿತ್ಯನಾಥ್ ಆರೋಪಿಗಳನ್ನು ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಸಂತ್ರಸ್ತೆಯ ತಂದೆ ಹೈದರಾಬಾದ್ ಎನ್ಕೌಂಟರ್ನಂತೆ ಆರೋಪಿಗಳನ್ನು ಕೊಲ್ಲಬೇಕೆಂದು ಒತ್ತಾಯಿಸಿದ್ದಾರೆ. “ನನ್ನ ಏಕೈಕ ಬೇಡಿಕೆಯೆಂದರೆ, ನನ್ನ ಮಗಳ ಕೊಲೆಗಾರರನ್ನು ಹೈದರಾಬಾದ್ನಲ್ಲಿ ನಡೆದಂತೆ ಎನ್ಕೌಂಟರ್ ಮಾಡಿ ಹೊಡೆದುರುಳಿಸಬೇಕು” ಎಂದು ಅವರು ಹೇಳಿದರು. “ಅವರು ಜೈಲಿನಿಂದ ಹೊರಗೆ ಬರಬಾರದು. ಅವರು ಸತ್ತರೆಂದು ನಾನು ಬಯಸುತ್ತೇನೆ … ಆಗ ಮಾತ್ರ ಅವಳ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅವರು (ಆರೋಪಿಗಳು) ಪ್ರಬಲ ವ್ಯಕ್ತಿಗಳು, ಅವರು ಜೈಲಿನಿಂದ ಹೊರಗಿದ್ದರೆ ನಾವು ಸುರಕ್ಷಿತವಾಗಿರುವುದಿಲ್ಲ. ಅವರು ನನ್ನ ಮಗಳನ್ನು ಕೊಂದರು, ಮತ್ತು ಅವರು ನಮ್ಮನ್ನೂ ಕೊಲ್ಲಬಹುದು. ಹಾಗಾಗಿ ಎನ್ಕೌಂಟರ್ನಲ್ಲಿ ಅವರನ್ನು ಕೊಲ್ಲಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.