ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ವಾರಾಂತ್ಯದ ಕರ್ಫ್ಯೂ ವಿಧಿಸಲು ಮಂಗಳವಾರ ನಿರ್ಧರಿಸಿದೆ. ಜೊತೆಗೆ ಈಗಾಗಲೇ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಅನ್ನು ಜನವರಿ 19 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ರಾಜ್ಯಾದ್ಯಂತ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರುತ್ತದೆ. ಈ ನಡುವೆಯೇ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡುವ ಆಲೋಚನೆ ಸರಕಾರದ ಮುಂದಿಲ್ಲ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
’ಕೊರೊನಾ ಸೋಂಕು ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾದರೂ ಬೆಳಗಾವಿ ಸೇರಿದಂತೆ ರಾಜ್ಯದ ಯಾವ ಕಡೆಗಳಲ್ಲೂ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡುವ ಆಲೋಚನೆ ಸರಕಾರದ ಮುಂದಿಲ್ಲ” ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬೆಳಗಾವಿಯಲ್ಲಿ ಹೇಳಿದ್ದಾರೆ.
`ಅಂತರರಾಜ್ಯ ಗಡಿಗಳಲ್ಲಿ ರಾಜ್ಯದೊಳಕ್ಕೆ ಬರುವವರನ್ನು ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ನಿಗಾ ವಹಿಸಲಾಗುವುದು. ಸೋಂಕಿತರು ಕಂಡುಬಂದರೆ ಅಂಥವರನ್ನು ಮಾತ್ರ ನಿಯಂತ್ರಿಸಲಾಗುವುದು. ಉಳಿದಂತೆ ಅಂತರರಾಜ್ಯ ಚಟುವಟಿಕೆ ಮತ್ತು ಓಡಾಟಗಳಿಗೆ ಮುಕ್ತ ಅವಕಾಶ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೂಲದ ಯುವಕನ ಬಂಧನ: ಏನಿದು ಬುಲ್ಲಿ ಬಾಯ್ ಪ್ರಕರಣ?
’15 ದಿನಗಳ ಮಟ್ಟಿಗೆ ಸರಕಾರವು ವಾರಾಂತ್ಯದ ಕರ್ಫ್ಯೂ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸಂಪೂರ್ಣ ಲಾಕ್ ಡೌನನ್ನು ತಡೆಯುವುದೇ ಇದರ ಹಿಂದಿನ ಸದುದ್ದೇಶವಾಗಿದೆ. ಕಚೇರಿಗಳು ಸೇರಿದಂತೆ ಪಬ್, ಬಾರ್, ಚಿತ್ರಮಂದಿರ ಇತ್ಯಾದಿಗಳಲ್ಲಿ ಸಾಮರ್ಥ್ಯದ ಶೇ.50 ರಷ್ಟು ಮಾತ್ರ ಜನ ಸೇರುವಂತೆ ಸೂಚಿಸಲಾಗಿದೆ’ ಎಂದರು.
’ಮುಖ್ಯವಾಗಿ ಬೆಂಗಳೂರಿನಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಚಿಂತನೆ ಈ ಮುಂಜಾಗ್ರತಾ ಕ್ರಮಗಳ ಹಿಂದೆಯಿದೆ. ಹೀಗಾಗಿಯೇ ಅಲ್ಲಿ ಎರಡು ವಾರಗಳ ಮಟ್ಟಿಗೆ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಇದರ ಜತೆಯಲ್ಲೇ 15 ರಿಂದ 18 ವರ್ಷದ ಯುವಜನತೆಗೂ ಲಸಿಕೆ ಹಾಕಲು ಆರಂಭಿಸಲಾಗಿದೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಪಡಬೇಕಾಗಿಲ್ಲ. ಹತ್ತು ದಿನಗಳ ನಂತರ ಮತ್ತೊಮ್ಮೆ ಸಮಾಲೋಚಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹಠಾತ್ ಏರಿಕೆಯಾಗಿರುವುದರಿಂದ ಮಂಗಳವಾರ ಸಂಜೆ ಸಭೆ ನಡೆಸಲಾಗಿತ್ತು. ಮಂಗಳವಾರದಂದು 2,479 ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಜನವರಿ 1 ರಿಂದ ಬೆಂಗಳೂರಿನಲ್ಲಿ ಪ್ರತಿದಿನ 1,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.