ಕರ್ನಾಟಕವು ತನ್ನ ಅಸ್ಪೃಶ್ಯತಾ ವಿರೋಧಿ ಕಾರ್ಯಕ್ರಮಕ್ಕೆ ಈ ದಲಿತ ಬಾಲಕನ ಹೆಸರಿಟ್ಟಿದೆ. ಆದರೆ, ಆದದ್ದೇನು? ಆ ಊರಿನ ಗ್ರಾಮಸ್ಥರು ಆ ಬಾಲಕನ ಕುಟುಂಬಕ್ಕೇ ಸಾಮಾಜಿಕ ಬಹಿಷ್ಕಾರ ಹಾಕಿ ಹೊರದಬ್ಬಿದ್ದಾರೆ!
2021ರ ಸೆ. 4 ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಸಮುದಾಯದ ವಿನಯ ಹೆಸರಿನ ಮಗುವೊಂದು ಆಕಸ್ಮಿಕವಾಗಿ ದೇವಸ್ಥಾನ ಪ್ರವೇಶಿಸಿದಕ್ಕೆ ಮಗುವಿನ ಕುಟುಂಬಕ್ಕೆ ಗ್ರಾಮಸ್ಥರು ದಂಡ ವಿಧಿಸಿದ್ದರು. ದೇವಸ್ಥಾನ ಶುದ್ಧಿಕರಿಸಿ ಅಸ್ಪೃಶ್ಯತೆ ಆಚರಿಸಿದ್ದರು. ಈ ಘಟನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕ ಸರಕಾರವು ತನ್ನ ಅಸ್ಪೃಶ್ಯತಾ ವಿರೋಧಿ ಯೋಜನೆಗೆ ಯಾವ ದಲಿತ ಹುಡುಗನ ಹೆಸರಿಟ್ಟಿತೋ, ಅದೇ ಹುಡುಗನ ಕುಟುಂಬವನ್ನೇ ಊರವರು ಸಾಮಾಜಿಕ ಬಹಿಷ್ಕಾರ ಹಾಕಿ ಹೊರದಬ್ಬಿದ ಘಟನೆಯೊಂದನ್ನು “ಇಂಡಿಯನ್ ಎಕ್ಸ್ಪ್ರೆಸ್” ವರದಿ ಮಾಡಿದೆ.
ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಸ್ಪೃಶ್ಯತೆಯ ಕುರಿತು ಅರಿವು ಮೂಡಿಸುವ “ವಿನಯ ಸಾಮರಸ್ಯ ಯೋಜನೆ”ಯನ್ನು ಬಸವರಾಜ ಬೊಮ್ಮಾಯಿ ಸರಕಾರ ಘೋಷಿಸಿದ್ದು, ಇದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾದ ಎಪ್ರಿಲ್ 14ರಂದು ಚಾಲನೆಗೊಳ್ಳಲಿದೆ.
ಮೂರು ವರ್ಷಗಳ ದಲಿತ ಮಗು ವಿನಯ, ಮಳೆಯಿಂದ ರಕ್ಷಣೆ ಪಡೆಯಲು ಆಕಸ್ಮಿಕವಾಗಿ ಕೊಪ್ಪಳ ಜಿಲ್ಲೆಯಲ್ಲಿ ಇದಕ್ಕಾಗಿ ಗ್ರಾಮದ ಮುಖಂಡರು ಅವನ ಕುಟುಂಬಕ್ಕೆ 25,000 ರೂ.ಗಳ ದಂಡ ವಿಧಿಸಿತ್ತು. ಮಾಧ್ಯಮಗಳಲ್ಲಿ ವರದಿಯಾದ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಗಳ ಬಂಧನವೂ ಆಗಿತ್ತು. ಆದರೆ ಆ ಕುಟುಂಬಕ್ಕೆ ನ್ಯಾಯ ಸಿಕ್ಕಿತೆ? ಇಲ್ಲ ಇದೀಗ ಅದು ಸಾಲದು ಎಂಬಂತೆ ಈ ಕುಟುಂಬವು ಇನ್ನೂ ಹೆಚ್ಚಿನ ದೌರ್ಜನ್ಯಕ್ಕೆ ಒಳಗಾಗಿದೆ.
ಈ ಘಟನೆಯ ನಂತರ ಮುಖ್ಯವಾಗಿ ಗಾಣಿಗ ಸಮುದಾಯದವರೇ ಇರುವ 1,500ರಷ್ಟು ಗ್ರಾಮಸ್ಥರು ಈ ದಲಿತ ಕುಟುಂಬಕ್ಕೆ ಎಂತಾ ಕಿರುಕುಳ ನೀಡಿದ್ದಾರೆಂದರೆ, ಆ ಕುಟುಂಬ ತನ್ನ ಕೃಷಿ ಜಮೀನನ್ನೂ, ಊರನ್ನೂ ಬಿಟ್ಟುಹೋಗಿದೆ.
ಈ ಜಾತಿ ತಾರತಮ್ಯ ಮತ್ತು ದೌರ್ಜನ್ಯದ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾದವರು ಜಾಮೀನಿನ ಮೇಲೆ ಹೊರಬಂದಿದ್ದು, ಈಗ ಗ್ರಾಮವನ್ನೇ ಆಳುತ್ತಿದ್ದಾರೆ ಎಂದು ವಿನಯನ ಕುಟುಂಬದವರು ಹೇಳುತ್ತಾರೆ..
ದಲಿತರು ಭಾಗವಹಿಸಬಹುದು ಎಂಬ ಭಯದಿಂದ ವರ್ಷ ವರ್ಷವೂ ನಡೆಯುವ ಊರ ಜಾತ್ರೆಯನ್ನೂ ರದ್ದುಗೊಳಿಸಲಾಗಿದೆ ಎಂದು ಅವರು ಹೇಳುತ್ತಾರೆ. ಆದರೆ, ಜಾತ್ರೆ ರದ್ದಾಗಿರುವ ಬಗ್ಗೆ ತಮಗೇನೂ ಮಾಹಿತಿಯಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳಿರುವುದಾಗಿ ವರದಿ ತಿಳಿಸುತ್ತದೆ.
“ಊರಲ್ಲಿ ನಡೆದ ಎಲ್ಲಾ ಕೆಟ್ಟದಕ್ಕೂ ನಮ್ಮ ಕುಟುಂಬವೇ ಕಾರಣ ಎಂದು ಊರವರು ದೂರುತ್ತಾರೆ. ಒಂದು ವೇಳೆ ಏನಾದರೂ ತುರ್ತಾದ ಉಪಕಾರ ಆಗಬೇಕಿದ್ದರೂ, ಅದು ಈ ಊರಿನಲ್ಲಿ ಸಿಗುವ ಸಾಧ್ಯತೆ ಇಲ್ಲ” ಎಂದವರು ಹೇಳುತ್ತಾರೆ. ಈ ಕುಟುಂಬವು ಈಗ ಚಂದ್ರಶೇಖರ ಅವರ ತಾಯಿಯ ಊರಾದ ಯಲಬುರ್ಗಾದಲ್ಲಿ ವಾಸಿಸುತ್ತಿದೆ.
ಚಂದ್ರಶೇಖರ ಅವರಿಗೆ ಸರಕಾರದಿಂದ ಒಂದು ಲಕ್ಷ ರೂ. ಪರಿಹಾರ ದೊರೆತಿದ್ದು, ಅವರೊಂದು ಕಾರು ತೊಳೆಯುವ ಅಂಗಡಿಯನ್ನು ಆರಂಭಿಸುವ ಯೋಚನೆ ಹೊಂದಿದ್ದಾರೆ. ಆದರೆ, ಮಿಯಾಪುರದಲ್ಲಿರುವ ತನ್ನ ಜಮೀನನ್ನು ರಕ್ಷಿಸಲು ಅಥವಾ ಬದಲಿ ಜಮೀನು ಪಡೆಯಲು ಸರಕಾರದೊಂದಿಗೆ ನಡೆಸಿದ ಪ್ರಯತ್ನ ಫಲ ನೀಡಿಲ್ಲ ಎಂದವರು ಹೇಳುತ್ತಾರೆ.
“ನಾನಿನ್ನು ಸರಕಾರಿ ಅಧಿಕಾರಿಗಳ ಮುಂದೆ ಕೈಯೊಡ್ಡಿ ಬೇಡಲು ಹೋಗುವುದಿಲ್ಲ. ನನಗಿದು ಈಗ ಸಾಕಾಗಿ ಹೋಗಿದೆ” ಎನ್ನುತ್ತಾರವರು.
“ಅವರಿಗೆ ಯಲಬುರ್ಗಾದಲ್ಲಿ ಜಮೀನು ದೊರಕಿಸಿ, ಮನೆ ಕಟ್ಟಲು ನೆರವಾಗುವ ಪ್ರಯತ್ನ ಮಾಡಲಾಗಿದೆ” ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.
ಈ ಪ್ರಕರಣದಲ್ಲಿ ಹೋರಾಟ ನಡೆಸಿದ್ದ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕರಿಯಪ್ಪ ಗುಡಿಮನಿಯವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಸರ್ಕಾರಕ್ಕೆ ಅಶ್ಪಶ್ಯತೆ ಆಚರಣೆ ತಡೆಗಟ್ಟುವ ನಿಜವಾದ ಕಾಳಜಿ ಇದ್ದಲ್ಲಿ, ರಾಜ್ಯದ ಸಮಸ್ತ ಜನರಲ್ಲಿ ಕಾನೂನು ಅರಿವು ಮೂಡಿಸಬೇಕಿದೆ. ಜಿಲ್ಲಾಡಳಿತ ಜಾತೀಯತೆ ಕ್ರೂರ ಆಚರಣೆ ಎಂಬುದಾಗಿ ಅರಿವು ಮೂಡಿಸಬೇಕು. ಜಾತಿ ದೌರ್ಜನ್ಯವೆಸಗಿದವರಿಗೆ ಕಠಿಣ ಶಿಕ್ಷೆ ಇದೆ ಎಂದು ದೊಡ್ಡ ದೊಡ್ಡ ಹೋರ್ಡಿಂಗ್ಗಳ ಮೂಲಕ, ಟಿವಿ-ಪತ್ರಿಕೆ ಜಾಹೀರಾತುಗಳ ಮೂಲಕ ಜನರಿಗೆ ಅರಿವು ಮತ್ತು ಎಚ್ಚರಿಕೆ ಮೂಡಿಸಬೇಕು” ಎಂದರು.
ಜಾತಿಯನ್ನು ಮನುಷ್ಯರು ಸೃಷ್ಟಿಸಿದ್ದಾರೆಯೆ ಹೊರತು ದೇವರಲ್ಲ. ಹಾಗಾಗಿ ದಲಿತ ದಮನಿತರ ಮೇಲೆ ದೌರ್ಜನ್ಯವೆಸಗುವುದು ಅಪರಾಧವಾಗಿದೆ ಎಂದು ಸವರ್ಣಿಯ ಸಮುದಾಯಗಳಿಗೆ ಮನವರಿಕೆ ಮಾಡಿಕೊಡಬೇಕಿದೆ. ಅದೇ ಸಂದರ್ಭದಲ್ಲಿ ದಲಿತ ದಮನಿತರು ಆರ್ಥಿಕವಾಗಿ-ಸಾಮಾಜಿಕವಾಗಿ ಮೇಲೆತ್ತಲು ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕು. ಅದೇ ಸಂದರ್ಭದಲ್ಲಿ ಸಮಾನತೆ-ಸಾಮರಸ್ಯದ ಕಾರ್ಯಕ್ರಮಗಳನ್ನು ಪ್ರಜ್ಞಾಪೂರ್ವಕವಾಗಿ ಏರ್ಪಡಿಸಬೇಕು. ಅದನ್ನು ಸರ್ಕಾರ ಜಾರಿಗೆ ತರುತ್ತಿರುವ ವಿನಯ ಸಾಮರಸ್ಯ ಯೋಜನೆಯನ್ನು ಪರಿಣಾಮಕಾರಿ ಜಾರಿಗೆ ತರಬೇಕು ಎಂದು ಕರಿಯಪ್ಪ ಗುಡಿಮನಿ ಒತ್ತಾಯಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ; ಕೊಪ್ಪಳದಲ್ಲಿ ದಲಿತ ಮಗು ದೇವಸ್ಥಾನ ಪ್ರವೇಶಿಸಿದಕ್ಕೆ ದಂಡ ಪ್ರಕರಣ: ದೂರು ದಾಖಲಿಸದಕ್ಕೆ ದಲಿತ ಸಂಘಟನೆಗಳ ಆಕ್ರೋಶ
ಅಯ್ಯೋ ….ನಮ್ಮೂರಲ್ಲಿ ದಲಿತರು ದೈವಕ್ಷೇತ್ರ ಪ್ರವೇಶ ಮಾಡ್ತಾರೆಂದು ಆ ಕ್ಷೇತ್ರವನ್ನೇ ಮುಚ್ಚಿದ್ದಾರೆ. ೨೦೧೮ ರಿಂದ ನಮ್ಮ ಗ್ರಾಮ ದೈವಸ್ಥಾನ ಮುಚ್ಚಲ್ಪಟ್ಟಿದೆ. ಇಲ್ಲಿಯವರೇನೂ ಎಲ್ಲಿಗೂ ಓಡಿಹೋಗಿಲ್ಲ. ನಿರಂತರ ಹೋರಾಟಗಳ ಮೂಲಕ ಮುಚ್ಚಿದವರ ನಿದ್ದೆಗೆಡಿಸುತಿದ್ದಾರೆ.