ಸದನದ ಕಲಾಪವಿಲ್ಲಿ ಯಾರಿಗೂ ಮುಖ್ಯವಾಗಿರಲೇ ಇಲ್ಲ. ಇವತ್ತು ಎಲ್ಲವೂ ಕೇಂದ್ರಿಕರಣಗೊಂಡಿದ್ದು ಸ್ಪೀಕರ್ ಕಚೇರಿಯ ಸುತ್ತ. ಇವತ್ತೇ ಮುಖ್ಯಮಂತ್ರಿ ವಿಶ್ವಾಸಮತ ಯಾಚಿಸಲೇಬೇಕು ಎಂದು ಹಠ ಹಿಡಿದಿದ್ದ ಬಿಜೆಪಿಗೆ ಕೊಂಚ ನಿರಾಶೆಯಾಗಿದ್ದಂತೂ ನಿಜ. ವಿಶ್ವಾಸ ಮತಯಾಚನೆ ಮೂರು ದಿನ ಮುಂದೆ ಹೋಗಿದ್ದು ಮೈತ್ರಿ ಬಣಕ್ಕೆ ಹೊಸ ವಿಶ್ವಾಸವನ್ನೇನೂ ತರದಿದ್ದರೂ, ನಾಳೆ (ಮಂಗಳವಾರ) ಸುಪ್ರಿಂಕೋರ್ಟಿನಲ್ಲಿ ‘ಹಿತಕರ’ ಬೆಳವಣಿಗೆಯಾದೀತೆಂಬ ಒಂದು ಸಣ್ಣ ಸಮಾಧಾನವಷ್ಟೇ. ಹೊಟೆಲ್ನಲ್ಲಿರುವ ಅತೃಪ್ತರಿಗೆ ‘ಐಷಾರಾಮಿ’ ಬಂಧನ ವಿಸ್ತರಣೆಯಾಗಿತಷ್ಟೇ.
ಶುಕ್ರವಾರ ಮುಖ್ಯಮಂತ್ರಿ ವಿಶ್ವಾಸಮತ ಯಾಚನೆಗೆ ತಾನು ತಯಾರು ಎಂದಾಗ ಯಾವ ವಿರೊಧವನ್ನು ಮಾಡದಿದ್ದ ಬಿಜೆಪಿ ಶನಿವಾರದ ಹೊತ್ತಿಗೆ, ‘ಬಹುಮತವೇ ಇಲ್ಲ, ಮಾನ ಮರ್ಯಾದೆ ರಾಜೀನಾಮೆ ಕೊಟ್ಟು ಹೋಗಲಿ’ ಎಂದೆಲ್ಲ ಹೊಸ ವರಸೆ ಶುರು ಮಾಡಿತ್ತು. ಹೇಗಾದರೂ ಮಾಡಿ ಕೆಲವು ಅತೃಪ್ತರನ್ನು ಮನವೊಲಿಸಿ ಗೆಲ್ಲುವ ಯೋಜನೆ ರೂಪಿಸಿದ್ದ ಮೈತ್ರಿಬಣಕ್ಕೆ ಆಸೆ ಹುಟ್ಟಿಸಿ ಕೆಲವರು ಕೈಕೊಟ್ಟ ಮೇಲೆ ದೊಡ್ಡ ನಿರಾಶೆಯಾಗಿತ್ತು. ರಾಜೀನಾಮೆ ವಾಪಸ್ ಪಡೆಯಲು ಒಪ್ಪಿದ್ದ ಹೊಸಕೋಟೆ ಶಾಸಕ, ಸಿದ್ದರಾಮಯ್ಯ ಆಪ್ತ ಎಂಟಿಬಿ ನಾಗರಾಜ್ ಕೂಡ ಮುಂಬೈ ಪಾಲಾಗಿದ್ದು, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ವಾಸ್ತವ್ಯವೇ ಪತ್ತೆಯಾಗದಿದ್ದುದು, ರಾಮಲಿಂಗಾರೆಡ್ಡಿ ಯಾವುದನ್ನೂ ಖಚಿತಗೊಳಿಸದಿದ್ದುದು-ಈ ಎಲ್ಲ ಬೆಳವಣಿಗೆಗಳ ನಂತರ ಕುಮಾರಸ್ವಾಮಿ ರಾಜಿನಾಮೆ ನೀಡುವುದೊಂದೇ ಬಾಕಿ ಎಂಬ ಭಾವ ಬಿಜೆಪಿ ಮತ್ತು ಮೈತ್ರಿಬಣ ಎರಡರಲ್ಲೂ ಆವರಿಸಿತ್ತು.
ಆದರೆ ಇಂದು ಸ್ಪೀಕರ್ ಕಚೇರಿಯಲ್ಲಿ ನಡೆದ ಚರ್ಚೆಗಳ ಪರಿಣಾಮವಾಗಿ ವಿಶ್ವಾಸಮತ ಯಾಚನೆ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ. ಇವತ್ತು ಅವಿಶ್ವಾಸ ನಿರ್ಣಯ ನಿಲುವಳಿ ಮಂಡಿಸುವ ಮಾತಾಡಿದ್ದ ಬಿಜೆಪಿಯೂ ಸ್ಪೀಕರ್ ನಿರ್ಣಯವನ್ನು ಸ್ವಾಗತಿಸಲೇ ಬೇಕಾಗಿ ಬಂದಿತು.
ನಾಳೆ ಸುಪ್ರಿಂಕೊರ್ಟಿನಲ್ಲಿ ಎಂಟಿಬಿ ನಾಗರಾಜ್ ಮತ್ತಿತರು ಸಲ್ಲಿಸಿರುವ ಅರ್ಜಿಯ ವಿಚಾರಣೆಯಿದೆ. ಸ್ಪೀಕರ್ ವಿರುದ್ಧ ಸಲ್ಲಿಸಿಕೆಯಾಗಿದ್ದ 10 ಶಾಸಕರ ಅರ್ಜಿಯ ವಿಚಾರಣೆಯೂ ಮುಂದುವರೆಯಲಿದೆ. ಹೀಗಾಗಿ ನಾಳೆ ರಾಜ್ಯ ರಾಜಕಾರಣದ ಮುಂದಿನ ಆಟ ದೆಹಲಿಯ ಅಂಗಳದಲ್ಲಿ ನಿರ್ಣಯವಾಗಲಿದೆ.
ಈ ಎಲ್ಲ ಜಂಜಾಟದಲ್ಲಿ ಸದನ ಕಲಾಪ ನಡೆಯದೇ ಹೋಗಿದೆ. ಕನಿಷ್ಠ ಪ್ರಶ್ನೋತ್ತರ ಕಲಾಪ, ಬೇಡಿಕೆಗಳ ಮೇಲಿನ ಚರ್ಚೆಗಳನ್ನಾದರೂ ನಡೆಸಬಹುದಿತ್ತು. ಆದರೆ ಯಾರಿಗೂ ಇದರಲ್ಲಿ ಆಸಕ್ತಿ ಇರದೇ ಇರುವುದರಿಂದ ಎಲ್ಲರ ಅಪೇಕ್ಷೆಗೆ ಅನುಗುಣವಾಗಿಯೇ ಕಲಾಪ ಮುಂದೂಡಲ್ಪಟ್ಟಿದೆ.
ವಿಶ್ವಾಸ ಮತವೋ, ಅವಿಶ್ವಾಸವೋ? ಜನರಿಗೆ ಮಾತ್ರ ರಾಜ್ಯ ರಾಜಕೀಯ ವ್ಯವಸ್ಥೆಯ ಮೇಲೆ ಮೇಲೆ ಸದ್ಯಕ್ಕೆ ಯಾವ ವಿಶ್ವಾಸವೂ ಉಳಿದಂತಿಲ್ಲ.