ಕಾರ್ಕಳದಲ್ಲಿ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪಿ.ಎಸ್.ಐ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಅಲ್ಲೋಕಲ್ಲೋಲವನ್ನೆ ಸೃಷ್ಠಿಸಿತ್ತು. ಅಂಥದ್ದೇ ಭಯಾನಕ ಘಟನೆಯೊಂದು ಈಗ ಕಾರವಾರದಲ್ಲಿ ನಡೆದಿದೆ. ಶಾಸಕಿ ರೂಪಾಲಿ ನಾಯ್ಕ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿ ಬರೆಯುತ್ತಾರೆಂಬ ನೆಪದಿಂದ ಸ್ಥಳೀಯ ಕಾಂಗ್ರೆಸ್ ಜಾಲತಾಣದ ಮುಖ್ಯಸ್ಥನಾದ ಅಜಯ್ ಸಿಂಗ್ಲಿ ಮೇಲೆ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂತೋಷಕುಮಾರ್ ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಎಮ್.ಲ್.ಸಿ. ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೇಸಿಗರು ಪ್ರತಿಭಟನೆ ನಡೆಸಿದ್ದಾರೆ.
ಕಾರ್ಕಳದಲ್ಲಿ ಲಗೇಜ್ ರಿಕ್ಷಾ ಓಡಿಸಿ ಜಿವನ ನಡೆಸುತ್ತಿದ್ದ ರಾಧಾಕೃಷ್ಣ ನಾಯಕ್ ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾರದ ವಿರುದ್ಧ ಬರೆಯುತ್ತಿದ್ದರು. ಅವರ ಖಾತೆಯಿಂದ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಅದು ನಾನಲ್ಲ, ನನ್ನ ಹೆಸರಿನಲ್ಲಿ ಕಿಡಿಗೇಡಿಗಳು ಖಾತೆ ರಚಿಸಿದ್ದಾರೆ ಎಂದು ರಾಧಾಕೃಷ್ಣ ಸ್ಪಷ್ಟೀಕರಣ ನೀಡಿದರೂ ಸಹ ಪಿಎಸ್ಐ ಹೊಡೆದಿದ್ದಾರೆ ಎಂದು ಆರೋಪಿಸಿದ್ದರು.
ಕೆಲವು ದಿನಗಳ ಹಿಂದೆ ಕಾರವಾರ ನಗರ ಠಾಣೆಯಲ್ಲಿ ಶಾಸಕಿ ರೂಪಾಲಿ ನಾಯ್ಕಗೆ ಸಾಮಾಜಿಕ ಜಾಲತಾಣದಲ್ಲಿ ಅಪಮಾನ ಮಾಡಲಾಗಿದೆ ಎಂದು ದೂರೊಂದು ದಾಖಲಾಗಿತ್ತು. ಪೊಲೀಸರು ಕಾಂಗ್ರೆಸ್ ಕಾರ್ಯಕರ್ತ ಅಜಯ್ ಸಿಂಗ್ಲಿಯನ್ನು ಠಾಣೆಗೆ ಕರೆಸಿಕೊಂಡು ಪಿ.ಎಸ್.ಐ ಸಂತೋಷಕುಮಾರ್ ಆ ಹುಡುಗನನ್ನು ನಿರ್ದಯವಾಗಿ ಥಳಿಸಿದ್ದಾರೆಂದು ಹರಿಪ್ರಸಾದ್ ಆರೋಪಿಸಿದ್ದಾರೆ. ಆತ ಸರ್ಕಾರಿ ಕಾರ್ಯಕ್ರಮದ ಕುರಿತು ಟೀಕಿಸಿದ್ದಾನೆಯೆ ಹೊರತು ವ್ಯಕ್ತಿಗತವಾಗಿ ಯಾರನ್ನು ಅವಹೇಳನ ಮಾಡಿಲ್ಲ. ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದರು.
ಪೊಲೀಸ್ ಅಧಿಕಾರ ದುರ್ಬಳಕೆ ಮಾಡಿ ದೌರ್ಜನ್ಯ ನಡೆಸಲಾಗಿದೆ. ಯಾವುದೆ ಅಧಿಕಾರಿಯ ನಿಷ್ಟೆ ಸಂವಿಧಾನಕ್ಕೆ ಇರಬೇಕೆ ವಿನಃ ವ್ಯಕ್ತಿಗೆ ಇರಬಾರದು. ಅಸಹಾಯಕ ಹುಡುಗನ ಮೇಲೆ ಹಲ್ಲೆ ಮಾಡಿದ ಪೋಲಿಸ್ ಅಧಿಕಾರಿ ವಿರುದ್ಧ ಪೋಲಿಸ್ ಮಹಾನಿರ್ದೆಶಕರಿಗೆ ದೂರು ಕೊಡಲಾಗುವುದು. ಅಲ್ಲಿಯೂ ಸರಿಯಾದ ಉತ್ತರ ಸಿಗದಿದ್ದರೆ ಗೃಹ ಮಂತ್ರಿ ಬಳಿ ಹೋಗಲಾಗುವುದು ಎಂದು ಹರಿಪ್ರಸಾದ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬರೆಯುವರ ಮೇಲೆಯೂ ಕಂಪ್ಲೇಟ್ ಕೊಡಲಾಗಿದೆ; ಕ್ರಮ ಕೈಗೊಳ್ಳದಿದ್ದರೆ ಡಿಜಿಗೆ ದೂರು ನೀಡುತ್ತೇವೆಂದು ಹರಿಪ್ರಸಾದ್ ಹೇಳಿದ್ದಾರೆ.