ಪೆಗಾಸಸ್ ಹಗರಣದಲ್ಲಿ ಒಕ್ಕೂಟ ಸರ್ಕಾರದ ಪಾತ್ರವಿದೆ ಎಂದು ಆರೋಪಿಸಿರುವ ಶಿವಸೇನೆ ಮತ್ತು ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿವೆ. ಇದು ವೈಯಕ್ತಿಕ ದಾಳಿಯಲ್ಲ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರೆ, ಹಗರಣದ ಬಗ್ಗೆ ಸುಮೋಟೋ ಕೇಸ್ ದಾಖಲಿಸಿ ಎಂದು ಸುಪ್ರೀಂ ಕೋರ್ಟ್ಗೆ ಶಿವಸೇನೆ ಆಗ್ರಹಿಸಿದೆ.
ಪೆಗಾಸಸ್ ಗೂಢಚರ್ಯೆಯು 1970 ರ ದಶಕದ ತುರ್ತು ಪರಿಸ್ಥಿತಿಗಿಂತ ಹೆಚ್ಚು ಗಂಭೀರ ವಿಚಾರವಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ. ಆಯ್ದ ಭಾರತೀಯರ ಮೇಲೆ ನಡೆದಿರುವ ಸೈಬರ್ ಆಟ್ಯಾಕ್, ಒಕ್ಕೂಟ ಸರ್ಕಾರದ ಅನುಮೋದನೆಯಿಲ್ಲದೆ ನಡೆಯಲಾರದು ಎಂದು ಒತ್ತಿ ಹೇಳಿದೆ.
ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ಒತ್ತಾಯಿಸುವಾಗ ಗೂಢಚರ್ಯೆಯ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ಶಿವಸೇನೆ ಪ್ರಶ್ನಿಸಿದೆ. ಈ ವಿಷಯದ ಬಗ್ಗೆ ಸುಮೋಟೊ ಕೇಸ್ ದಾಖಲಿಸಿಕೊಂಡು ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ಗೆ ಶಿವಸೇನಾ ಮನವಿ ಮಾಡಿದೆ.
ಶಿವಸೇನೆಯು ಈ ಹಿಂದೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿದೆ.
ಇದನ್ನೂ ಓದಿ: ಪೆಗಾಸಸ್ ಫೋನ್ ಹ್ಯಾಕ್ಗೆ ಒಳಗಾದವರು ಯಾರು ಯಾರು? ಪ್ರಮುಖ 30 ಜನರ ಪಟ್ಟಿ ಇಲ್ಲಿದೆ
ಪೆಗಾಸಸ್ ಸ್ಪೈವೇರ್ ಬಳಕೆಯ ಬಗ್ಗೆ ಮಾಧ್ಯಮ ವರದಿಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಆಶ್ಚರ್ಯಕರ ಎಂದು ಕರೆದಿರುವ ಶಿವಸೇನೆ, ದೇಶದ ಹೆಸರು ಕೆಡಿಸಲು ಯಾರು ಹೊರಟಿದ್ದಾರೆ ಎಂದು ಪ್ರಶ್ನೆ ಮಾಡಿದೆ.
ಇತ್ತ, ಪೆಗಾಸಸ್ ಹಗರಣದಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ವಿರುದ್ಧ ಎಲ್ಲರೂ ಒಗ್ಗೂಡಬೇಕೆಂದು ವಿರುದ್ಧ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ. “ಪ್ರಜಾಪ್ರಭುತ್ವವನ್ನು ರೂಪಿಸುವ ಮಾಧ್ಯಮ, ನ್ಯಾಯಾಂಗ ಮತ್ತು ಚುನಾವಣಾ ಆಯೋಗ ಮೂರನ್ನು ಪೆಗಾಸಸ್ ವಶಪಡಿಸಿಕೊಂಡಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿರುವ ದಾಳಿಯಲ್ಲಿ ಅವರು, “ಮೋದಿಜೀ, ನಾನು ನಿಮ್ಮ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಿಲ್ಲ. ಆದರೆ ನೀವು ಮತ್ತು ಬಹುಷಃ ಗೃಹ ಸಚಿವರು ವಿರೋಧ ಪಕ್ಷದ ನಾಯಕರ ವಿರುದ್ದದ ಏಜೆನ್ಸಿಗಳನ್ನು ನಿಯೋಜಿಸುತ್ತಿದ್ದೀರಿ. ಏಜೆನ್ಸಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ. ಬಂಗಾಳದ ಜನರು ನಿಮ್ಮನ್ನು ಬೆಂಬಲಿಸುವುದಿಲ್ಲ” ಎಂದಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಮತ್ತು ಟಿಎಂಸಿಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿರುವ ಅಭಿಷೇಕ್ ಬ್ಯಾನರ್ಜಿಯ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಟಿಎಂಸಿ, “ಫೋನ್ ಹ್ಯಾಕಿಂಗ್ ಹೊರತಾಗಿಯೂ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಲಿಲ್ಲ” ಎಂದು ವ್ಯಂಗ್ಯವಾಡಿತ್ತು.
ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಉರುಳಲು ಪೆಗಾಸಸ್ ಕಾರಣ? HDK, ಸಿದ್ದು ಆಪ್ತ ಸಹಾಯಕರು, ಜಿ.ಪರಮೇಶ್ವರ್ ಫೋನ್ ಹ್ಯಾಕ್!