ಕೆಇಎ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಆರ್.ಡಿ.ಪಾಟೀಲನನ್ನು ಮಹಾರಾಷ್ಟ್ರದ ಅಕ್ಕಲಕೋಟ ಬಳಿ ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ತಲೆಮರೆಸಿಕೊಂಡಿದ್ದನು. ಶುಕ್ರವಾರ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಕಲಬುರಗಿಗೆ ಬರುತ್ತಿರುವ ವೇಳೆ ಪೊಲೀಸರು ಬಂಧಿಸಿದರು. ಆರೋಪಿ ಸಂಬಂಧಿಕರ ಮನೆಯಿಂದ ಕಲಬುರಗಿಯ ನ್ಯಾಯಾಲಯಕ್ಕೆ ಶರಣಾಗಲು ಬರುತ್ತಿದ್ದ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗಡಿಯಲ್ಲಿಯೇ ತೀವ್ರ ನಿಗಾ ಇಟ್ಟಿದ್ದರು.
ಇತ್ತೀಚೆಗೆ ಆರೋಪಿ ಆರ್.ಡಿ ಪಾಟೀಲ್ ಕಲಬುರಗಿಯ ವರ್ಧಾ ನಗರದಲ್ಲಿರುವ ಫ್ಲಾಟ್ ಒಂದರಲ್ಲಿ ಅಡಗಿಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿದ್ದರು. ಆದರೆ, ಪೊಲೀಸರು ಬರುತ್ತಿದ್ದಂತೆ ಆತ ಫ್ಲಾಟ್ ನ ಕಾಂಪೌಂಡ್ ಮೇಲಿಂದ ಹಾರಿ ಪರಾರಿಯಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಆನಂತರ ಕಲಬುರಗಿ ನಗರ ಪೊಲೀಸ್ ಕಮಿಷನರ್ ಚೇತನ್ ಆರ್. ಅವರು ಡಿಸಿಪಿ ಕನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ಐದು ತನಿಖಾ ತಂಡಗಳನ್ನು ರಚಿಸಿದ್ದರು. ಮತ್ತೊಂದೆಡೆ ಎಸ್ಪಿ ಅಡ್ಡರು ಶ್ರೀನಿವಾಸಲು ಅವರು ಡಿವೈಎಸ್ಪಿ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಿದ್ದರು. ಅಂತಿಮವಾಗಿ ಕಲಬುರಗಿಯ ಎಸಿಪಿ ಭೂತೇಗೌಡ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ ಎಂದು ಗೊತ್ತಾಗಿದೆ.
ಸಧ್ಯ ಬಂಧನವಾಗಿರುವ ಆರೋಪಿ ಆರ್.ಡಿ. ಪಾಟೀಲನನ್ನು ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ.
ಸಂಬಂಧಿಕರ ಮನೆಯಲ್ಲಿದ್ದ ಆರೋಪಿಯು ಅಲ್ಲಿಂದಲೇ ಕಲಬುರಗಿಯಲ್ಲಿರುವ ಕರ್ನಾಟಕ ಹೈಕೋರ್ಟ್ ಪೀಠಕ್ಕೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದನು. 10ರಂದು ಆತನ ಜಾಮೀನು ಅರ್ಜಿಯನ್ನು ವಿಚಾರಣೆಗೊಳಪಡಿಸಿದ್ದ ಪೀಠ, ವಿಚಾರಣೆಯನ್ನು ಮುಂದೂಡಿತ್ತು.
ಇದನ್ನೂ ಓದಿ: 545 ಪಿಎಸ್ಐ ನೇಮಕಾತಿ ಹಗರಣ: ಮರು ಪರೀಕ್ಷೆಗೆ ಹೈಕೋರ್ಟ್ ಆದೇಶ