ಕೇರಳ-ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ 2017ರಲ್ಲಿ ಕಾಸರಗೋಡಿನಲ್ಲಿ ನಡೆದಿದ್ದ ಮಡಿಕೇರಿ ಮೂಲದ ರಿಯಾಝ್ ಮೌಲವಿ (27) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾಗಿದ್ದ ಆರೆಸ್ಸೆಸ್ನ ಮೂವರು ಕಾರ್ಯಕರ್ತರನ್ನು ವಿಚಾರಣಾ ನ್ಯಾಯಾಲಯವು ಖುಲಾಸೆಗೊಳಿಸಿದೆ. ಇದರ ಬೆನ್ನಲ್ಲಿ ರಿಯಾಝ್ ಮೌಲವಿ ಕುಟುಂಬ ನಿರಾಶೆಯನ್ನು ವ್ಯಕ್ತಪಡಿಸಿದೆ.
ಕಾಸರಗೋಡು ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಕೆ.ಬಾಲಕೃಷ್ಣನ್ ಅವರು ಆರೋಪಿಗಳಾದ ಅಖಿಲೇಶ್(34), ಜಿತಿನ್(28) ಮತ್ತು ಅಜೇಶ್(29) ಅವರನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿಗಳು ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.
ಕಾಸರಗೋಡಿನ ಹಳೆ ಸೂರ್ಲುವಿನಲ್ಲಿ ಮದ್ರಸದಲ್ಲಿ ಶಿಕ್ಷಕರಾಗಿ ಕೆಲಸ ಮೊಹಮ್ಮದ್ ರಿಯಾಝ್ ಮೌಲವಿ ಅವರನ್ನು ಮಾರ್ಚ್ 20, 2017ರಂದು ಮುಂಜಾನೆ ಮಸೀದಿಗೆ ನುಗ್ಗಿ ಕೊಚ್ಚಿ ಕೊಲೆಗೈಯ್ಯಲಾಗಿತ್ತು. ಕೃತ್ಯ ನಡೆದು ಮೂರು ದಿನಗಳಲ್ಲೇ ಆರೋಪಿಗಳನ್ನು ತನಿಖಾ ತಂಡ ಬಂಧಿಸಿತ್ತು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ಶುಕ್ಕೂರ್ ಈ ಕುರಿತು ಮಾತನಾಡಿದ್ದು, ಪ್ರಕರಣದಲ್ಲಿ ಬಲವಾದ ಸಾಕ್ಷ್ಯಾಧಾರಗಳಿವೆ. ಆರೋಪಿಗಳಲ್ಲಿ ಒಬ್ಬನ ಬಟ್ಟೆಯಲ್ಲಿ ಮೌಲವಿ ಅವರ ರಕ್ತದ ಕಲೆ ಪತ್ತೆಯಾಗಿದೆ. ಆರೋಪಿಗಳು ಬಳಸಿದ್ದ ಚಾಕುವಿನಲ್ಲಿಯೂ ಮೌಲವಿಯ ಬಟ್ಟೆಯ ತುಂಡು ಪತ್ತೆಯಾಗಿದೆ. ನಾವು ಎಲ್ಲಾ ಸಾಕ್ಷ್ಯಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.
ತೀರ್ಪಿನ ಬೆನ್ನಲ್ಲಿ ರಿಯಾಝ್ ಮೌಲವಿ ಅವರ ಪತ್ನಿ ಸೈದಾ ಅವರು ಪ್ರತಿಕ್ರಿಯಿಸಿದ್ದು, ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇತ್ತು. ಆರೋಪಿಗಳಿಗೆ ಕಠಿಣ ಶಿಕ್ಷೆ ಲಭಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ನೋಟ್ ಬ್ಯಾನ್ ಮಾಡಿದ ರೀತಿ ಸರಿಯಿಲ್ಲ: ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ ಜಸ್ಟಿಸ್ ನಾಗರತ್ನ