ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ರಾಜ್ಯ ಸರಕಾರದ ನಡುವೆ ಸುದೀರ್ಘ ಕಾಲದಿಂದ ಜಟಾಪಟಿ ನಡೆಯುತ್ತಿದೆ. ಈ ಮಧ್ಯೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಮುಜುಗರ ಉಂಟಾಗುವ ಬೆಳವಣಿಗೆ ನಡೆದಿದ್ದು, ಅವರು ಕೇರಳ ವಿಶ್ವವಿದ್ಯಾಲಯದ ಸೆನೆಟ್ಗೆ ನಾಮನಿರ್ದೇಶನ ಮಾಡಿದ್ದ ವ್ಯಕ್ತಿಯನ್ನು ಕೊಲೆಯತ್ನ ಪ್ರಕರಣದಲ್ಲಿ ಕೇರಳ ಪೊಲೀಸರು ಬಂಧಿಸಿದ್ದಾರೆ.
ಸುಧಿ ಸದನ್ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಲಾದ ಇಬ್ಬರು ಆರೋಪಿಗಳಲ್ಲಿ ಓರ್ವನಾಗಿದ್ದಾನೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತನಾಗಿರುವ ಸುಧಿ, ರಾಜ್ಯಪಾಲರಿಂದ ಸೆನೆಟ್ಗೆ ನಾಮನಿರ್ದೇಶನಗೊಂಡ ನಾಲ್ವರು ವಿದ್ಯಾರ್ಥಿ ಪ್ರತಿನಿಧಿಗಳಲ್ಲಿ ಓರ್ವನಾಗಿದ್ದ. ಸುಧಿ ಬಂಧನದ ಬಳಿಕ ರಾಜ್ಯಪಾಲರು ಸುಧಿಯಿಂದ ದೂರವಾಗಿದ್ದು, ತನಗೆ ಸುಧಿಯನ್ನು ವೈಯಕ್ತಿಕವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ.
ಪಂದಳಂ ಎನ್ಎಸ್ಎಸ್ ಕಾಲೇಜಿನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಎಬಿವಿಪಿ ಕಾರ್ಯಕರ್ತರಾದ ಸುಧಿ ಮತ್ತು ವಿಷ್ಣು ಅವರನ್ನು ಪಂದಳಂ ಪೊಲೀಸರು ಬಂಧಿಸಿದ್ದಾರೆ. ಡಿ.21 ರಂದು ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಕಾಲೇಜಿನಲ್ಲಿ ಎಸ್ಎಫ್ಐ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ. ಇದರಲ್ಲಿ ವಿಕಲಾಂಗ ವ್ಯಕ್ತಿ ಸೇರಿದಂತೆ ಏಳು ಜನರಿಗೆ ಗಾಯಗಳಾಗಿವೆ.
ಈ ಪ್ರಕರಣದಲ್ಲಿ ಸುಧಿ ಮತ್ತು ವಿಷ್ಣು ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಸುದ್ದಿಗಾರರು ರಾಜ್ಯಪಾಲರನ್ನು ಪ್ರಶ್ನಿಸಿದಾಗ, ನನಗೆ ಸುಧಿ ಬಗ್ಗೆ ಬಗ್ಗೆ ವೈಯ್ಯಕ್ತಿಕ ಪರಿಚಯವಿಲ್ಲ. ನಾನು ಶಿಫಾರಸುಗಳನ್ನು ಸ್ವೀಕರಿಸಿದ್ದೇನೆ ಆದರೆ ಅವನ ಬಗ್ಗೆ ಪ್ರತ್ಯೇಕವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ. ಆದರೆ ಅವರು ಯಾರಿಂದ ಶಿಫಾರಸುಗಳನ್ನು ಸ್ವೀಕರಿಸಿದ್ದಾರೆ ಎಂಬುವುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಅವರು ನ.30 ರಂದು ಕೇರಳ ವಿವಿ ಸೆನೆಟ್ಗೆ 17 ಸದಸ್ಯರನ್ನು ನಾಮನಿರ್ದೇಶನ ಮಾಡಿದರು. ಅವರಲ್ಲಿ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಶ್ಯಾಮ್ ಲಾಲ್ ಮತ್ತು ಕವಿತಾ ಒಬಿ, ಶಾಲಾ ಶಿಕ್ಷಕರಾಗಿರುವ ಪಿ.ಎಸ್.ಗೋಪಕುಮಾರ್ ಮತ್ತು ಎಸ್.ಮಿನಿ ವೇಣುಗೋಪಾಲ್ ಮತ್ತು ವಿದ್ಯಾರ್ಥಿಗಳಾದ ಮಾಳವಿಕಾ ಉದಯನ್, ಸುಧಿ ಸದನ್, ಧ್ರುವಿನ್ ಎಸ್ಎಲ್, ಮತ್ತು ಅಭಿಷೇಕ್ ಡಿ ನಾಯರ್ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿತ್ತು.
ಇದನ್ನು ಓದಿ: ಗೋಧ್ರೋತ್ತರ ಗಲಭೆ: 131 ಸಾಕ್ಷಿಗಳ ಭದ್ರತೆ ವಾಪಸ್