ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟವು ರಾಜ್ಯ ಸರ್ಕಾರಿ ನೌಕರರ ಆರು ದಿನಗಳ ವೇತನ ಕಡಿತ ಮಾಡಲು ತೀರ್ಮಾನಿಸಿದೆ. ಕೋವಿಡ್-19 ಸಂಕಷ್ಟಕರ ಸ್ಥಿತಿಯಲ್ಲಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣದ ಅಗತ್ಯವಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದ ಎನ್ನಲಾಗಿದೆ.
ಪ್ರತಿ ತಿಂಗಳು ಆರು ದಿನಗಳ ಸಂಬಳ ಕಡಿತವನ್ನು ಮುಂದಿನ ಐದು ತಿಂಗಳ ಕಾಲ ಮುಂದುವರಿಸಲಿದ್ದು, ವೇತನ ಕಡಿತದ ಹಣವನ್ನು ಸರ್ಕಾರದ ಹಣಕಾಸು ಸ್ಥಿತಿ ಉತ್ತಮವಾದಾಗ ಹಂತಹಂತವಾಗಿ ನೌಕರರಿಗೆ ಹಿಂದಿರಿಗಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಕೇರಳ ರಾಜ್ಯದ ಹಣಕಾಸು ಇಲಾಖೆ ಸರ್ಕಾರಕ್ಕೆ ಸಲ್ಲಿಸಿರುವ ವೇತನ ಕಡಿತ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಸರ್ಕಾರಿ ನೌಕರರಿಗೆ ತಿಂಗಳೊಂದಕ್ಕೆ ಆರು ದಿನಗಳು ಸಂಬಳ ಕಡಿತವಾಗುತ್ತದೆ. ಅಂದರೆ ಐದು ತಿಂಗಳಲ್ಲಿ 30 ದಿನಗಳ (ಒಂದು ತಿಂಗಳ) ವೇತನ ಕಡಿತಗೊಳ್ಳಲಿದೆ.
ಬುಧವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ವೇತನ ಕಡಿತದ ತೀರ್ಮಾನವನ್ನು ಮುಖ್ಯಮಂತ್ರಿಗಳು ಇಂದು ಪ್ರಕಟಿಸುವ ನಿರೀಕ್ಷೆ ಇದೆ.
ಕೊರೊನ ಸೋಂಕು ಹರಡುವುದನ್ನು ಸಮರ್ಥವಾಗಿ ನಿಭಾಯಿಸಿರುವ ಕೇರಳ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಎಲ್ಲಾ ವರ್ಗದ ನೌಕರರ ವೇತನ ಕಡಿತ ಮಾಡಲು ತೀರ್ಮಾನಿಸಿದೆ. ಸಂಬಳ ಕಡಿತ ಮಾಡಬಾರದು ಎಂಬ ಒತ್ತಾಯದ ನಡುವೆಯೂ ಕೇರಳ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಕೊರೊನಾ ಕಾರಣಕ್ಕಾಗಿ ಸರ್ಕಾರಿ ನೌಕರರ ಸಂಬಳ ಕಡಿತ ಮಾಡಿವೆ.
ಇದನ್ನೂ ಓದಿ: ಕೊರೊನಾ ಹರಡದಿರಲು ಔಷಧಿ ಸಿಂಪಡಿಸುತ್ತಿದ್ದ ಪೌರಕಾರ್ಮಿಕ ಬಸವರಾಜು ನಿಧನ : ತೀವ್ರ ಸಂತಾಪ